ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ (Idgah Maidan) ಕೊನೆಗೂ ಟಿಪ್ಪು ಜಯಂತಿ (Tippu Jayanti) ಆಚರಣೆಯಾಗಿದೆ. ಶ್ರೀರಾಮ ಸೇನೆ ಮತ್ತು ತಮ್ಮ ಪಕ್ಷದ ಜಿಲ್ಲಾಧ್ಯಕ್ಷರ ತೀವ್ರ ವಿರೋಧದ ನಡುವೆಯೂ ಪಾಲಿಕೆಯಿಂದ ಅಧಿಕೃತ ಅನುಮತಿ ಪಡೆದ ಎಎಂಐಎಂ (AMIM) ಪಕ್ಷದ ಮುಖಂಡರು ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಯಂತೆ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ.ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹು-ಧಾ ಮಹಾನಗರ ಪಾಲಿಕೆ ಅಧಿಕೃತ ಘೋಷಣೆ ಹೊರಡಿಸುತ್ತಿದ್ದಂತೆ ಪರ ವಿರೋಧ ಚರ್ಚೆ ಆರಂಭವಾಗಿದ್ದವು. ಅನುಮತಿ ಕೇಳಿದ್ದ ಸ್ವತಃ ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷರೇ ಮೈದಾನದಲ್ಲಿ ಜಯಂತಿ ಬೇಡ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಶ್ರೀರಾಮಸೇನೆ ಮತ್ತು ವಿಪಕ್ಷ ಕಾಂಗ್ರೆಸ್ ಸಹ ಪಾಲಿಕೆ ನಿರ್ಣಯದ ವಿರುದ್ಧ ಕೆಂಡಾಮಂಡಲವಾಗಿದ್ದವು. ಹೀಗಾಗಿ ಇಂದು ಎಲ್ಲರ ಚಿತ್ತ ಈದ್ಗಾ ಮೈದಾನದತ್ತ ಎಂಬುವಂತಾಗಿತ್ತು.ಇಂದು ನಿರೀಕ್ಷೆಯಂತೆ ಎಐಎಂಐಎಂ ಪಕ್ಷದ ಮುಖಂಡ ವಿಜಯ್ ಗುಂಟ್ರಾಳ ಮತ್ತು ಇತರ ಸದಸ್ಯರು ಈದ್ಗಾ ಮೈದಾನದಲ್ಲಿ ಟಿಪ್ಪು ಭಾವ ಚಿತ್ರವಿಟ್ಟು, ಪುಷ್ಪಾಪರ್ಣೆ ಮಾಡಿ, ಟಿಪ್ಪು ಪರ ಜಯಘೋಷ ಹಾಕುವ ಮೂಲಕ ಜಯಂತಿ ಆಚರಣೆ ಮಾಡಿದರು. ಈ ಮೂಲಕ ಈದ್ಗಾ ಮೈದಾನ ಈಗ ಸಾರ್ವಜನಿಕವಾಗಿದ್ದು, ಪಾಲಿಕೆ ಅನುಮತಿ ಪಡೆದು ಯಾವ ಸಮುದಾಯವಾದರೂ ಮಹಾನಾಯಕರ ಜಯಂತಿ ಆಚರಣೆಗೆ ಮುಕ್ತವಾಗಿದೆ. ಇದನ್ನೂ ಓದಿ: ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ: ಮುತಾಲಿಕ್ಇಷ್ಟು ದಿನ ವಿವಾದದ ಕೇಂದ್ರ ಬಿಂದುವಾಗಿದ್ದ ಈದ್ಗಾ ಮೈದಾನ ಈಗ ಸಾರ್ವಜನಿಕವಾಗಿದೆ. ಕೇವಲ ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲಾ ಸಮುದಾಯಗಳ ಜಯಂತಿ ಆಚರಣೆಗೆ ಮುಕ್ತವಾಗಿದೆ. ಸರ್ವ ಧರ್ಮಗಳ ಹಿತಕ್ಕಾಗಿ ಪಾಲಿಕೆ ತೆಗೆದುಕೊಂಡ ಐತಿಹಾಸಿಕ ನಿರ್ಣಯ ಪರಿಣಾಮ ಇದಾಗಿದ್ದು, ಇನ್ನು ಮುಂದೆಯಾದರೂ ಈದ್ಗಾ ಮೈದಾನಕ್ಕಿರುವ ರಕ್ತಸಿಕ್ತ ಇತಿಹಾಸದ ಕಳಂಕ ದೂರವಾಗಿ, ಸರ್ವ ಜನಾಂಗದ ಶಾಂತಿಯ ತೋಟವಾಗಲಿ ಎನ್ನುವುದು ಹು-ಧಾ ಜನರ ಆಶಯ. ಇದನ್ನೂ ಓದಿ: ಪಕ್ಷಕ್ಕೆ ಡ್ಯಾಮೇಜ್‌ ತಡೆಯಲು ಹೇಳಿಕೆ ವಾಪಸ್‌ – ಸತೀಶ್‌ ಜಾರಕಿಹೊಳಿ
Sign in to your account
Username or Email Address


Password

 Remember Me


