ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ಖ್ಯಾತ ನಟ  ಅಕ್ಷಯ್ ಕುಮಾರ್, ಇದೀಗ ಮತ್ತೊಂದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಮರಾಠಿ ಸಿನಿಮಾ ರಂಗಕ್ಕೆ ಹಾರಿದ್ದು, ಅಲ್ಲಿ ಛತ್ರಿಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಶಿವಾಜಿ ಮಹಾರಾಜ್ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. ಶಿವಾಜಿ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ‘ವೇಡಾತ್ ಮರಾಠೆ ವೀರ್ ದೌಡಲೆ ಸಾತ್’ ಎಂದು ಹೆಸರು ಇಡಲಾಗಿದೆ.  ಇತ್ತೀಚೆಗಷ್ಟೇ ರಿಲೀಸ್ ಆದ, ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡಲಿಲ್ಲ. ಈ ಹಿಂದಿನ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ಗೆಲ್ಲುವಲ್ಲಿ ವಿಫಲವಾದವು. ಈ ಕಾರಣದಿಂದಾಗಿಯೇ ಅವರು ಮರಾಠಿ ಸಿನಿಮಾ ರಂಗದತ್ತ ಹೊರಳಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಪ್ರಯತ್ನದಲ್ಲೇ ಅವರು ಮರಾಠ ಸಾಮ್ರಾಜ್ಯದ ದೊರೆ ಆಗಿದ್ದ ಛತ್ರಪತಿ ಶಿವಾಜಿ ಅವರ ಜೀವನವನ್ನು ಆಧರಿಸಿದ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು  ಈ ಸಿನಿಮಾವನ್ನು ಮಹೇಶ್ ಮಂಜರೇಕರ್ ನಿರ್ದೇಶನ ಮಾಡುತ್ತಿದ್ದು, ವಸೀಮ್ ಖುರೇಷಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತಿಚೆಗಷ್ಟೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮತ್ತೊಂದು ವಿಶೇಷ ಅಂದರೆ, ಇದೇ ಕಾರ್ಯಕ್ರಮದಲ್ಲಿ ಎಂ.ಎನ್.ಸಿ ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಭಾಗಿಯಾಗಿ, ಏಕನಾಥ್ ಶಿಂಧೆಗೆ ಮುಖಾಮುಖಿ ಆಗಿದ್ದಾರೆ.  ಸಿನಿಮಾ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ‘ಇಂತಹ ದೊಡ್ಡ ಪಾತ್ರ ನನಗೆ ಸಿಕ್ಕಿದ್ದು ಖುಷಿಯಾಗಿದೆ. ಇದು ನನ್ನ ಕನಸಿನ ಪಾತ್ರ ಕೂಡ ಆಗಿತ್ತು. ಇದೇ ಮೊದಲ ಬಾರಿಗೆ ನಿರ್ದೇಶಕ ಮಹೇಶ್ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ತೆರೆಯ ಮೇಲೆ ನನ್ನನ್ನು ನಾನು ನೋಡಲು ಉತ್ಸುಕನಾಗಿದ್ದೇನೆ; ಎಂದು ಅವರು ಹೇಳಿದ್ದಾರೆ. ನಿರ್ದೇಶಕರು ಈ ಚಿತ್ರಕ್ಕಾಗಿ ಸತತ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.

Sign in to your account
Username or Email Address


Password

 Remember Me


