ಆನೇಕಲ್ (ಬೆಂಗಳೂರು): ಯೂಟ್ಯೂಬ್‍ನಲ್ಲಿ ಟ್ರೈನಿಂಗ್ ಪಡೆದು ಎಟಿಎಂ (ATM) ದರೋಡೆಗೆ ಇಳಿದಿದ್ದ ಖತರ್ನಾಕ್ ಗ್ಯಾಂಗ್‍ವೊಂದು ಖಾಕಿ ಬಲೆಗೆ ಬಿದ್ದಿದೆ. ರಾಜ್ಯ, ಹೊರರಾಜ್ಯಗಳಲ್ಲಿ ತಮ್ಮ ಕೈಚಳಕ ತೋರಿದ್ದ ಖದೀಮರಿಗೆ ಪೊಲೀಸರು ಜೈಲೂಟ ಬಡಿಸಿದ್ದಾರೆ.ಹೌದು. ಹೀಗೆ ಎಟಿಎಂ ಕೇಂದ್ರದ ಒಳಗೆ ಗ್ಯಾಸ್ ಕಟರ್ ಮೂಲಕ ಕಳ್ಳತನಕ್ಕೆ ಯತ್ನಿಸುತ್ತಿರುವ ಈ ಅಸಾಮಿಗಳು ಇದೀಗ ಆನೇಕಲ್ ಉಪವಿಭಾಗದ ಜಿಗಣಿ ಪೋಲೀಸರ ಅತಿಥಿಯಾಗಿದ್ದಾರೆ. ಬೇಗನೇ ಹಣ (Money) ಮಾಡುವ ಉದ್ದೇಶದಿಂದ ಎಟಿಎಂ ದೋಚಲು ಹೋಗಿ ಜೈಲಿಗೆ ಸೇರಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಜಿಗಣಿ ಪೊಲೀಸರು ಕಳ್ಳರನ್ನ ಪತ್ತೆಹಚ್ಚಿದ್ದಾರೆ. ಆರೋಪಿಗಳಾದ ಅಸ್ಸಾಂ ಮೂಲದ ಬಾಬುಲ್ ನೋನಿಯಾ, ಮಹ್ಮದ್ ಆಸೀಪ್ ಉದ್ದಿನ್, ತಪಸ್ ಬಿಸ್ವಾಸ್, ದಿಲ್ವಾರ್ ಹುಸೇನ್ ಲಷ್ಕರ್, ರೂಹುಲ್ ಅಮೀನ್ ಎಂಬವರನ್ನ ಬಂಧಿಸಿದ್ದಾರೆ.ಬಂಧಿತರು ಅಸ್ಸಾಂ ಮೂಲದವರಾಗಿದ್ದು ಕೆಲ ವರ್ಷಗಳ ಹಿಂದೆ ಅತ್ತಿಬೆಲೆ ಸಮೀಪದ ತಿರುಪಾಳ್ಯಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಅತೀ ಬೇಗನೆ ಹೆಚ್ಚು ಹಣ ಸಂಪಾದನೆ ಮಾಡುವ ಪ್ಲ್ಯಾನ್ ಮಾಡಿದ್ದ ಅಸಾಮಿಗಳು ಯೂಟ್ಯೂಬ್‍ನಲ್ಲಿ ಎಟಿಎಂ ಕಳ್ಳತನ ಮಾಡುವುದು ಹೇಗೆ ಎನ್ನುವ ಬಗ್ಗೆ ಟ್ರೈನಿಂಗ್ (Training) ಪಡೆದಿದ್ರು. ಮೊದಲಿಗೆ ಸಿಲಿಂಡರ್ ಒಂದನ್ನ ಕಳ್ಳತನ ಮಾಡಿಕೊಂಡು ಬಂದಿರುತ್ತಾರೆ. ತದನಂತರ ಗ್ಯಾಸ್ ಕಟರ್ ತೆಗೆದುಕೊಂಡು ಮನೆಯಲ್ಲಿ ಕಬ್ಬಿಣವನ್ನ ಕಟ್ ಮಾಡಿ ಟ್ರೈನಿಂಗ್ ಪಡೆದುಕೊಳ್ತಾರೆ.ಈ ಐವರ ತಂಡ ಆಟೋದಲ್ಲಿ ಕಳೆದ ತಿಂಗಳ 22ರಂದು ರಾತ್ರಿ ಶ್ರೀರಾಮಪುರದ ಎಟಿಎಂ ಕೇಂದ್ರಕ್ಕೆ ನುಗ್ಗಿ ಕಳ್ಳನಕ್ಕೆ ಮುಂದಾಗ್ತಾರೆ. ಈ ವೇಳೆ ಸೈರನ್ ಬಂದಾಗ ಸಿಲಿಂಡರ್, ಗ್ಯಾಸ್ ಕಟರ್‍ಗಳನ್ನ ಅಲ್ಲಿಯೇ ಬಿಟ್ಟು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಜಿಗಣಿ ಪೋಲೀಸ್ ಇನ್ಸ್ ಪೆಕ್ಟರ್ ಸುದರ್ಶನ್ ನೇತೃತ್ವದ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ರು. ಸುಮಾರು 250 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಅಸ್ಸಾಂ ಕಡೆ ಪರಾರಿಯಾಗಲು ಮುಂದಾಗಿದ್ದ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.ಒಟ್ಟಿನಲ್ಲಿ ಎಟಿಎಂ ಕಳ್ಳತನ ಮಾಡಲೆಂದು ಯೂಟ್ಯೂಬ್‍ನಲ್ಲಿ ಟ್ರೈನಿಂಗ್ ಪಡೆದು ಕಳ್ಳತನಕ್ಕೆ ಯತ್ನಿಸಿ ಪೋಲೀಸರ ಕೈಗೆ ಸಿಗದೆ ಪರಾರಿಯಾಗಲು ಮುಂದಾಗಿದ್ರು. ಮಾಡಿದ್ದುಡ್ಡೋ ಮಾರಾಯ ಎನ್ನುವಂತೆ ಈಗ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಜಿಗಣಿ ಪೋಲೀಸರ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
Sign in to your account
Username or Email Address


Password

 Remember Me


