ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ), (ಮೇ ೯ , ೧೯೦೮ - ಜುಲೈ ೮, ೧೯೭೧). ಕನ್ನಡ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು. ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡ ಪರ ಪ್ರಮುಖ ಹೋರಾಟಗಾರರು. ಇವರು ಕನ್ನಡ ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿದ್ದರು. == ಜನನ, ಜೀವನ == ಅನಕೃ ಹುಟ್ಟಿದ್ದು ಕೋಲಾರ, ಹಾಗು ಕುಟುಂಬದ ಮೂಲ ಹಾಸನ ಜಿಲ್ಲೆಯ ಅರಕಲಗೂಡು. ತಂದೆ ನರಸಿಂಗರಾಯರು ಮತ್ತು ತಾಯಿ ಅನ್ನಪೂರ್ಣಮ್ಮನವರು. ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು. ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರು. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿದರು. ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು. ಅನಕೃ ಅವರ ಚಳುವಳಿಯಿಂದ ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನಗೊಂಡಿತು. ಹೀಗೆ ಪ್ರದರ್ಶಿತವಾದ ಮೊದಲ ಚಿತ್ರ ೧೯೬೩ರಲ್ಲಿ ತೆರೆಕಂಡ ಜಿ.ವಿ.ಅಯ್ಯರ್ ನಿರ್ದೇಶನದ ಬಂಗಾರಿ. ವಿಶೇಷವೆಂದರೆ "ತುಂಬಿದ ಕೊಡ" ಚಿತ್ರದಲ್ಲಿ ಸಾಹಿತಿ ಅ.ನ.ಕೃ.ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಅಂದು ಸಂಗೀತಕ್ಕೆ ಸಂಬಂಧಪಟ್ಟ ಸಂಘಸಂಸ್ಥೆಗಳು ಕನ್ನಡ ಸಂಗೀತಗಾರರನ್ನು ನಿರ್ಲಕ್ಷಿಸಿ, ಮದರಾಸಿನಿಂದ ಗಾಯಕರನ್ನು ಕರೆಸಿ ಹಾಡಿಸುತ್ತಿದ್ದವು. ಅನಕೃ ಇದನ್ನು ವಿರೋಧಿಸಿದರು. ಒಮ್ಮೆ ಹೀಗೆ ಮದರಾಸಿನಿಂದ ಎಮ್ ಎಸ್ ಸುಬ್ಬುಲಕ್ಷ್ಮಿಯವರು ಹಾಡಲು ಬಂದಿದ್ದಾಗ ಅನಕೃ ಅವರಿಗೆ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿದರು. ಆಗ ಸುಬ್ಬುಲಕ್ಶ್ಮಿಯವರು ಚಳುವಳಿಯ ಉದ್ದೇಶವನ್ನು ಒಪ್ಪಿಕೊಂಡು, ತಮ್ಮ ಸಂಗೀತವನ್ನು ರದ್ದುಮಾಡಿ ಹಿಂತಿರುಗಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಒಂದು ಸಭೆಯಲ್ಲಿ ಅನಕೃ ಕುರಿತು ಹೇಳಿದ ಮಾತಿದು - "ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಂ ಕನ್ನಡಿಗರು, ಅನಕೃ ಅಚ್ಚ ಕನ್ನಡಿಗರು ". *ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ - ಈ ಮಾತು ಅನಕೃ ಅವರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ. == ಸಂಗೀತದಲ್ಲಿ ಕನ್ನಡಕ್ಕಾಗಿ ಹೋರಾಟ == ೧೯೪೧ರಲ್ಲೇ ಮೈಸೂರಿ¬ನಲ್ಲಿ ದಸರಾ ಸಂದರ್ಭದಲ್ಲಿ ನಡೆದ ಕನ್ನಡ¬ನಾಡಿನ ವಿದ್ವಾಂಸರ ಸಮ್ಮೇಳನದಲ್ಲಿ ತಮಿಳುನಾಡಿನ ನಿರ್ಣಯವನ್ನು ವಿರೋಧಿಸಿ, ಸಂಗೀತಕ್ಕೆ ಭಾಷೆ ಮುಖ್ಯವಲ್ಲ ಎಂದು ನಿರ್ಣಯ ಕೈಗೊಳ್ಳಲಾಯಿತು ! ಅಲ್ಲಿಗೆ ಕರ್ನಾಟಕ ಸಂಗೀತದಲ್ಲಿ ಕನ್ನಡಕ್ಕೆ ಸ್ವಲ್ಪವಾದರೂ ಸ್ಥಾನಮಾನ ಸಿಗುವ ವಿಚಾರ ಮೂಲೆ ಗುಂಪಾಯಿತು. ಆದರೆ ಅನಕೃ ಬಿಡಲಿಲ್ಲ. ಮೊದಲಿಗೆ ದಾಸರ ಪದಗಳನ್ನು, ಶಿವಶರಣರ ವಚನಗಳನ್ನು ಸಂಗೀತಕ್ಕೆ ಅಳವಡಿಸುವಂತೆ ವೀಣೆ ರಾಜಾರಾಯರು ಮತ್ತು ಇತರ ಗೆಳೆಯರನ್ನು ಹುರಿದುಂಬಿಸಿ ಅವುಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕ ರೂಪದಲ್ಲಿ ಪ್ರಕಟಿಸಲು (೧೯೪೨) ನೆರವಾದರು. ಇಷ್ಟಾದರೂ ಮುಂದಿನ ವರ್ಷಗಳಲ್ಲೂ ಸಂಗೀತ ಕಛೇರಿಗಳಲ್ಲಿ ಕನ್ನಡದ ಕೃತಿಗಳು ವೇದಿಕೆ ಹತ್ತಲಿಲ್ಲ. ೧೯೫೬ರಲ್ಲಿ ಕನ್ನಡನಾಡು ಉದಯವಾದರೂ ಸಂಗೀತ ಸೇರಿ ಎಲ್ಲ ರಂಗಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡಕ್ಕೆ ಮೌಲ್ಯ ಹೆಚ್ಚಲಿಲ್ಲ. ಕನ್ನಡ ಸಂಗೀತಗಾರರ ಸಹಕಾರವೇ ಇಲ್ಲದೆ, ಯಾವ ಸಾಂಸ್ಥಿಕ, ಸರ್ಕಾರಿ ಬೆಂಬಲವೂ ಇಲ್ಲದೆ ಅನಕೃ ಅವರು ಸಂಗೀತದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಬೇಕೇಬೇಕು ಎಂದು ಅರವತ್ತರ ದಶಕದಲ್ಲಿ ಹೋರಾಟ ಆರಂಭಿಸಿದರು. ಇದು ಅವರ ಪ್ರಕಾರ ‘ಕನ್ನಡ ಅಸ್ಮಿತೆ’ಯ ಪ್ರಶ್ನೆ. ಅನಕೃ ಅಂದಿನ ಕನ್ನಡ ಸಂಘಟನೆಗಳು ಸೇರಿಕೊಂಡಿದ್ದ ‘ಕರ್ನಾಟಕ ಸಂಯುಕ್ತ ರಂಗ’ ದ ಅಧ್ಯಕ್ಷರಾಗಿ ಅವರು ಇಡೀ ಸಂಗೀತ ಲೋಕ ಬೆಚ್ಚಿಬೀಳುವಂಥ ಪ್ರತಿಭಟನೆಯನ್ನು ರೂಪಿಸಿದರು. ೧೯೬೩ರಲ್ಲಿ ಬೆಂಗಳೂರಿನ ಶ್ರೀರಾಮಸೇವಾ ಮಂಡಲಿಯ ರಾಮೋತ್ಸವದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಸಂಗೀತ ಇತ್ತು. ಅನಕೃ, ವೀರಕೇಸರಿ, ಮ.ರಾಮಮೂರ್ತಿ ಅವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ವೇದಿಕೆಯನ್ನು ಮುತ್ತಿದರು. (ಆಗ ಅನಕೃ ಅವರ ಅಣ್ಣ ಅ.ನ.ರಾಮರಾವ್ ಅವರೇ ಉತ್ಸವ ಸಮಿತಿಯ ಕಾರ್ಯದರ್ಶಿ.) ಈ ದೊಡ್ಡ ಪ್ರತಿಭಟನೆಯೇ ಕನ್ನಡದ ಕೃತಿಗಳನ್ನು ಸಂಗೀತದ ವೇದಿಕೆಗೆ ತಂದಿತು. ಎಂ.ಎಸ್., ವಸಂತಕೋಕಿಲ, ಅವರ ಮಗಳು ಎಂ.ಎಲ್. ವಸಂತಕುಮಾರಿ ಮತ್ತು ಅನೇಕರು ಹಾಡಿದ ಕನ್ನಡದ ದೇವರನಾಮಗಳು ಮನೆಮನಗಳನ್ನು ಬೆಳಗಿದವು, ವಿಶ್ವಸಂಸ್ಥೆಯ ವೇದಿಕೆಯಲ್ಲೂ ಮೆರೆದವು. ಕರ್ನಾಟಕದ ಹಿಂದೂಸ್ತಾನಿ ವಿದ್ವಾಂಸರು ತಮ್ಮ ಕಛೇರಿಗಳಲ್ಲಿ ಮರಾಠಿ ಅಭಂಗಗಳನ್ನು, ರಂಗಗೀತೆಗಳನ್ನು ಹಾಡುತ್ತಿದ್ದರೇ ಹೊರತು ಕನ್ನಡದ ಸೊಲ್ಲೆತ್ತುತ್ತಿರಲಿಲ್ಲ. ಒಮ್ಮೆ ತಮ್ಮ ಗೆಳೆಯ ಮಲ್ಲಿಕಾರ್ಜುನ ಮನ್ಸೂರರಿಗೆ ಶಿವ¬ಶರಣರ ವಚನಗಳನ್ನು ಹಾಡುವಂತೆ ಅನಕೃ ಒತ್ತಾಯಿಸಿದಾಗ ಅವರು ‘ಏನು ಚ್ಯಾಷ್ಟಿ ಮಾಡ್ತೀರಾ’ ಎಂದು ನಕ್ಕರಂತೆ. ಖಂಡಿತಾ ಇಲ್ಲ ಎಂದ ಅನಕೃ ‘ವಚನದಲ್ಲಿ ನಾಮಾಮೃತ ತುಂಬಿ’ ಎಂಬ ವಚನವನ್ನು ತಾವೇ ಹಾಡಿ ತೋರಿಸಿದರಂತೆ. ಅದರಿಂದ ಪ್ರಭಾವಿತರಾದ ಮನ್ಸೂರರು ವಚನಗಳಿಗೆ ಪ್ರಾಶಸ್ತ್ಯ ಕೊಟ್ಟರು. ಹಿಂದೂಸ್ತಾನಿ ಸಂಗೀತದಲ್ಲಿ ವಚನ ಗಾಯನದ ಪರಂಪರೆಯೇ ಬೆಳೆಯಿತು. ರಾಜಯ್ಯಂಗಾರ್‌ ಹಾಡಿದ, ಅವರಿಗಿಂತ ಭಿನ್ನವಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ‘ಜಗದೋದ್ಧಾರನಾ ಆಡಿಸಿದಳೆ ಯಶೋದಾ’, ಮನ್ಸೂರರ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ ಮುಂತಾದ ಕನ್ನಡ ಹಾಡುಗಳು ಮಾನವ ಕಂಠದ ಅತ್ಯುನ್ನತ ಅಭಿವ್ಯಕ್ತಿಗಳಾಗಿ ಹೊಳೆಯುತ್ತಿವೆ. ಇಂದು ಕರ್ನಾಟಕ ಸಂಗೀತದ ಕಾರ್ಯಕ್ರಮ¬ಗಳಲ್ಲಿ ಏನಾದರೂ ಒಂದಿಷ್ಟಾದರೂ ಕನ್ನಡದ ಕೃತಿಗಳಿಗೆ ಪ್ರಾಮುಖ್ಯ ಸಿಕ್ಕಿದ್ದರೆ, ಹಲವಾರು ವಿದ್ವಾಂಸರು ಕನ್ನಡದಲ್ಲಿ ಕೃತಿಗಳನ್ನು ಸ್ವತಃ ರಚಿಸಿ ಹಾಡುತ್ತಿದ್ದರೆ, ಕನ್ನಡ ಸುಗಮ ಸಂಗೀತ ವಿಸ್ತಾರವಾಗಿ ಬೆಳೆದಿದ್ದರೆ, ಅದರ ಹಿಂದೆ ಅನಕೃ ಇದ್ದಾರೆ. == ಅನಕೃ ಸಾಹಿತ್ಯ == ಶಾಲಾ ದಿನಗಳಿಂದಲೂ ಸಾಹಿತ್ಯದ ಅಭಿರುಚಿ ಹೊಂದಿದ್ದರು. ನಟ ವರದಾಚಾರ್ಯರು ಒಡ್ಡಿದ ಸವಾಲಿಗೆ ಉತ್ತರವಾಗಿ ಒಂದೇ ರಾತ್ರಿಯಲ್ಲಿ ಮದುವೆಯೋ ಮನೆಹಾಳೋ ಎಂಬ ನಾಟಕ ರಚಿಸುವ ಮೂಲಕ ಸಾಹಿತ್ಯ ರಚನೆ ಆರಂಭಿಸಿದರು. ಅನಕೃ ಅವರಿಗೆ ಬರವಣಿಗೆಯೇ ಜೀವನೋಪಾಯವಾಗಿತ್ತು. ಅವರು ರಚಿಸಿರುವ ಸಾಹಿತ್ಯ ೮೦,೦೦೦ ಪುಟಗಳಿಗೂ ಅಧಿಕ. ಅದರಲ್ಲಿ ಕಾದಂಬರಿಗಳು ೧೧೦, ೧೫ ನಾಟಕಗಳು, ೮ ಕಥಾ ಸಂಕಲನಗಳು, ಕಲೆ,ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಇಪ್ಪತ್ತು ಪುಸ್ತಕಗಳು, ೮ ಜೀವನ ಚರಿತ್ರೆಗಳು, ೩ ಅನುವಾದ, ೧೨ ಸಂಪಾದಿತ ಕೃತಿಗಳು, ಅಲ್ಲದೆ ಪ್ರಬಂಧ,ಹರಟೆಗಳೂ ಸೇರಿವೆ. ೧೯೩೪-೧೯೬೪ ರ ಅವಧಿಯಲ್ಲಿ ೧೦೦ ಕಾದಂಬರಿಗಳನ್ನು ರಚಿಸಿರುವ , ಅನಕೃ ಅವರ ಮೊದಲನೆಯ ಕಾದಂಬರಿ ಜೀವನ ಯಾತ್ರೆ, ನೂರನೆಯ ಕಾದಂಬರಿ ಗರುಡ ಮಚ್ಚೆ. == ಕೃತಿಗಳು == === ಕಾದಂಬರಿಗಳು === === ಐತಿಹಾಸಿಕ ಕಾದಂಬರಿಗಳು === == ಸಾಹಿತ್ಯ ಮತ್ತು ಕಾಮಪ್ರಚೋದನೆ == ಕೈಹೊತ್ತಿಗೆಗಳ ಮಹಾಪೂರವಿದ್ದ ಐವತ್ತು-ಅರವತ್ತರ ದಶಕ ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಕಾಲ. ಕಾದಂಬರಿ ಸಾರ್ವಭೌಮ ಅನಕೃ `ನಗ್ನಸತ್ಯ', `ಶನಿಸಂತಾನ', `ಸಂಜೆಗತ್ತಲು' ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಲೋಕದಲ್ಲಿ ದೊಡ್ಡದೊಂದು ಬಿರುಗಾಳಿಯನ್ನೆಬ್ಬಿಸಿದರು. ಯಾವುದು `ಶ್ಲೀಲ', ಯಾವುದು `ಅಶ್ಲೀಲ' ಎಂಬುದರ ಬಗ್ಗೆ ಚರ್ಚೆ ನಡೆಯುವುದರ ಜೊತೆಗೆ ಸಾಹಿತ್ಯ ಕೃತಿಗಳ `ಸೆನ್ಸಾರ್ಶಿಪ್' ಮಾಡಬೇಕೆ, ಬೇಡವೆ? ಎಂದೂ ವಾದಸರಣಿಗಳು ಆರಂಭವಾದವು. `ಪ್ರಗತಿಶೀಲ' ಚಳವಳಿಯಲ್ಲಿ ಒಂದಾಗಿದ್ದ ಅನಕೃ ಹಾಗೂ ನಿರಂಜನ ಪರಸ್ಪರ ದೂರವಾದರು. ಪ್ರಜಾವಾಣಿಯ ಟಿ.ಎಸ್.ರಾಮಚಂದ್ರರಾವ್ ಅನಕೃ ವಿರುದ್ಧ ಪಾಳಯದಲ್ಲಿ ಗುರುತಿಸಿಕೊಂಡರು. ಅದೇ ಪತ್ರಿಕೆಯಲ್ಲಿದ್ದ ಕೆ.ಎಸ್.ರಾಮಕೃಷ್ಣಮೂರ್ತಿ ಅನಕೃ ಪರವಾಗಿ ನಿಂತು ಅವರ ಪುಸ್ತಕಗಳ ಪ್ರಕಟಣೆಗೆ ನಿಂತರು. ಬೀಚಿ, ನಾಡಿಗೇರ ಕೃಷ್ಣರಾವ್ ಅನಕೃ ಜತೆಗೂಡಿದರು. ಈ ಬಗ್ಗೆ ಮನನೊಂದು ಅನಕೃ ಬರೆದ ಸಂಶೋಧನಾತ್ಮಕ ಕೃತಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’. ನಿರಂಜನರ ಆಪ್ತಮಿತ್ರರಾಗಿದ್ದ ಹೆಚ್.ಆರ್.ನಾಗೇಶರಾವ್ ಅನಕೃ ಅವರ ಈ ಪುಸ್ತಕದ ಪರವಾಗಿ ತಾಯಿನಾಡು ಪತ್ರಿಕೆಯಲ್ಲಿ ಪುಸ್ತಕ ಪ್ರಿಯ ಹೆಸರಿನಲ್ಲಿ ಈ ವಿಮರ್ಶೆ ಬರೆದರು. ಸಾಹಿತ್ಯ ಮತ್ತು ಜೀವನ ಎಂಬ ಮಾಲೆಯ ನಾಲ್ಕನೆಯ ಪುಸ್ತಕವೆಂದು ಪರಿಗಣಿಸಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ಯನ್ನು ಪರಿಗಣಿಸುವುದಾದರೆ, ಇದೊಂದು ಶ್ರಮಸಾಧ್ಯವಾದ ಸಾಹಿತ್ಯ ಸಂಗ್ರಹವೆಂದೇ ಕರೆಯಬೇಕು. ಹಳೆಗನ್ನಡ-ಹೊಸಗನ್ನಡ ಸಾಹಿತ್ಯವನ್ನೆಲ್ಲಾ ಪರಿಶೋಧಿಸಿ ಶ್ರೀ ಅ.ನ.ಕೃಷ್ಣರಾಯರು ಕಾಮ ಪ್ರಚೋದನಾ ಪ್ರಸ್ತಾಪಗಳನ್ನೂ, ವರ್ಣನೆಗಳನ್ನೂ ಗದ್ಯ-ಪದ್ಯ-ನಾಟಕ-ಸಂಭಾಷಣೆಗಳಿಂದೆಲ್ಲಾ ಆಯ್ದು ಕೊಟ್ಟಿದ್ದಾರೆ. ಆರು ಪುಟಗಳ ತುಂಬಾ ಆಕ್ರಮಿಸಿರುವ ಪಟ್ಟಿಯಲ್ಲಿರುವ ಸುಮಾರು ೨೦೦ ಉಪಯುಕ್ತ ಇಂಗ್ಲಿಷ್, ಕನ್ನಡ, ತೆಲುಗು ಗ್ರಂಥಗಳನೆಲ್ಲಾ ಆಳವಾಗಿ ಪರಿಶೋಧಿಸಿ ಮಹಾ ವಿಚಾರವಂತರ ಅಭಿಪ್ರಾಯ ಸರಣಿಯನ್ನೆಲ್ಲಾ ಓದುಗರ ಮುಂದಿಟ್ಟು ವಿಮರ್ಶಿಸಿದ್ದಾರೆ. ಹಿಂದಿನವರು ಕಾಮ ಪ್ರಚೋದನೆ ಮಾಡಿಲ್ಲವೆ? ಇಂದಿನವರು ಮಾಡಿದಲ್ಲವೆ? ಮತಗಳು ಮಾಡಿಲ್ಲವೆ? ಸಾಹಿತ್ಯವು ಮಾಡಿಲ್ಲವೆ? ನಮ್ಮ ಸಮಾಜವೇ ಮಾಡಿಲ್ಲವೆ?’ ಮುಂತಾಗಿ ಎತ್ತಿ ತೋರಿಸಿ, ಆ ರೀತಿ ಮಾಡಲು ತಮಗೂ ಹಕ್ಕುಂಟೆಂಬುದನ್ನು ಸ್ಥಾಪಿಸಿದ್ದಾರೆ. == ಪ್ರಶಸ್ತಿ ಪುರಸ್ಕಾರಗಳು == ಮಣಿಪಾಲದಲ್ಲಿ ನಡೆದ ೪೩ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದ ಅನಕೃ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಸಚೇತನ ಎಂಬುದು ಅನಕೃ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ. ಶಾ.ಮಂ.ಕೃಷ್ಣರಾಯ , ಜಿ.ಎಸ್. ಅಮೂರ, ಸೇವಾನಮಿ ರಾಜಾಮಲ್ಲ ಮುಂತಾದ ಸಾಹಿತಿಗಳು ಅನಕೃ ಕುರಿತು ಗ್ರಂಥ ರಚಿಸಿ ಗೌರವ ಸಲ್ಲಿಸಿದ್ದಾರೆ. == ಸಾಹಿತಿ ನಿರಂಜನರ ಅಭಿಪ್ರಾಯ == "ಅನಕೃ ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ"ವೆಂದು ಹೆಸರಾಂತ ಸಾಹಿತಿ ಕಾದಂಬರಿಗಾರ ನಿರಂಜನ ಹೇಳಿದ್ದಾರೆ. == ಉಲ್ಲೇಖಗಳು == == ಅ ನ ಕೃ ಬಗ್ಗೆ ಹೆಚ್ಚಿನ ಓದು == ಪುಸ್ತಕ: ಅಮರಚೇತನ (ಅನಕೃ ವ್ಯಕ್ತಿ-ಅಭಿವ್ಯಕ್ತಿ), ಲೇಖಕ: ಶಾ.ಮಂ.ಕೃಷ್ಣರಾಯ, ಸಾಗರ್ ಪ್ರಕಾಶನ, ಬೆಂಗಳೂರು == ಇವುಗಳನ್ನೂ ನೋಡಿ == ತಾಯಿನಾಡು ಹೆಚ್.ಆರ್.ನಾಗೇಶರಾವ್ == ಹೊರಗಿನ ಸಂಪರ್ಕಗಳು == ಬರಹ.ಕಾಂ ತಾಣದಲ್ಲಿ ಅನಕೃ ಪುಟ (ಆಂಗ್ಲ) ಬರಹ.ಕಾಂ ತಾಣದಲ್ಲಿ ಅನಕೃ ಪುಟ (ಕನ್ನಡ) ಮುಂಬಯಿ ಮಹಾನಗರದಲ್ಲಿ ಕನ್ನಡಕ್ಕೆ ಅ.ನ.ಕೃ.ರವರ ಕೊಡುಗೆಯ ಬಗ್ಗೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯರವರಿಂದ ಉಪನ್ಯಾಸ, ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವಿತ್ತು. ಸ್ಥಳ : ಮೈಸೂರು ಅಸೋಸಿಯೇಷನ್, ಮುಂಬಯಿ, ೨೨, ಡಿಸೆಂಬರ್, ೨೦೧೮ ರಂದು