ಅಂಬರೀಶ್ (ಮಳವಳ್ಳಿ ಹುಚ್ಚೇಗೌಡ ಅಮರನಾಥ್) (೨೯ ಮೇ ೧೯೫೨ - ೨೪ ನವೆಂಬರ್ ೨೦೧೮) ಭಾರತೀಯ ಚಲನಚಿತ್ರ ನಟ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು (೧೯೭೨) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಸ್ವತಃ ಪ್ರಮುಖ ಖಳನಟನಾಗಿ ಸ್ಥಾಪನೆಗೊಂಡ ನಂತರ, ಅನೇಕ ಸಿನೆಮಾಗಳಲ್ಲಿ ನಾಯಕನಟನಾಗಿ ನಟಿಸಿದರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬ ಉಪನಾಮವನ್ನು ಗಳಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ದಿಸಿ ಲೋಕಸಭೆ ಸದಸ್ಯ ಮತ್ತು ಶಾಸಕರಾಗಿದ್ದರು, ಅವರು ಮೇ ೨೦೧೩ ರಿಂದ ಜೂನ್ ೨೦೧೬ ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಅವರ ನಟನಾ ವೃತ್ತಿಜೀವನಕ್ಕಾಗಿ ಅನೇಕ ರಾಜ್ಯ ಸರ್ಕಾರ ಪ್ರಶಸ್ತಿಗಳನ್ನು ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಅಂಬರೀಶ್ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ೬೩ ನೇ ವಾರ್ಷಿಕ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.. == ಜನನ, ಬಾಲ್ಯ, ವೈಯಕ್ತಿಕ ಜೀವನ == ಇವರು ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ ೧೯೫೨ ಮೇ ೨೯ರಂದು ಜನಿಸಿದರು. ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ. ಖ್ಯಾತ ಪಿಟೀಲು ವಿದ್ವಾನ್ ಟಿ.ಚೌಡಯ್ಯ ಇವರ ಅಜ್ಜ. ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ ಸುಮಲತಾ. ಪುತ್ರನ ಹೆಸರು ಅಭಿಷೇಕ್ ಗೌಡ. == ಸಿನೆಮಾ ಜೀವನ == ಕನ್ನಡ ಚಲನಚಿತ್ರ ರಂಗಕ್ಕೆ ೧೯೭೩ರಲ್ಲಿ, ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಚಿತ್ರದ (ಜಲೀಲನ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತು. ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ 'ರೆಬೆಲ್ ಸ್ಟಾರ್' ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು. ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯ ಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಮೊದಲಾದ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. 'ಮಸಣದ ಹೂವು' ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದದ್ದು. 'ಹೃದಯ ಹಾಡಿತು' ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು. ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು!. ಜೋ ಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. == ರಾಜಕೀಯ ಜೀವನ == ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಇವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. ೧೯೯೪ ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮುಂದೆ ಅಂಬರೀಶ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ () ಗೆ ಸೇರಿದರು. ೧೯೯೬ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಅವರು ಎರಡು ವರ್ಷಗಳ ನಂತರ ಪಕ್ಷವನ್ನು ತ್ಯಜಿಸಿದರು. ಅಂಬರೀಶ್ ತರುವಾಯ ಜನತಾ ದಳಕ್ಕೆ ಸೇರಿಕೊಂಡರು ಮತ್ತು ಮಂಡ್ಯದಿಂದ ೧೯೯೮ ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿ ಲೋಕಸಭೆಗೆ ಆಯ್ಕೆಯಾದರು. ೧೪ ನೇ ಲೋಕಸಭೆಯಲ್ಲಿ, ಅವರು ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವರಾಗಿದ್ದರು. ಅನಂತರ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು (೨೦೦೨). ಮೇ ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸೋತರು. ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಅವರು, ಶ್ರೀ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. === ರಾಜಕೀಯ ವೃತ್ತಿಜೀವನ === ಸದಸ್ಯ, ೧೨ನೇ ಲೋಕಸಭೆ: ೧೯೯೮-೧೯೯೯ ಸದಸ್ಯ, ೧೩ನೇ ಲೋಕಸಭೆ: ೧೯೯೯-೨೦೦೪ ಸದಸ್ಯ, ೧೪ನೇ ಲೋಕಸಭೆ: ೨೦೦೪-೨೦೦೯ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ, ೨೪ ಅಕ್ಟೋಬರ್ ೨೦೦೬ ರಿಂದ ೨೦೦೮ ಸದಸ್ಯ, ಕರ್ನಾಟಕ ವಿಧಾನಸಭೆ: ೨೦೧೩-೨೦೧೮, ವಸತಿ ಸಚಿವ == ಚಲನಚಿತ್ರಗಳು == ಮುಖ್ಯ ಲೇಖನ:ಅಂಬರೀಶ್ ನಟನೆಯ ಚಲನಚಿತ್ರಗಳು == ಪ್ರಶಸ್ತಿ ಮತ್ತು ಮನ್ನಣೆಗಳು == ೧೯೮೨ ರಲ್ಲಿ 'ಅಂತ'ಗಾಗಿ ಅತ್ಯುತ್ತಮ ನಟನಿಗಾಗಿರುವ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸಣದ ಹೂವು' ಚಿತ್ರದಲ್ಲಿ "ಅತ್ಯುತ್ತಮ ಪೋಷಕ ನಟ" (೧೯೮೫-೮೬) ಕರ್ನಾಟಕ ರಾಜ್ಯ ಪ್ರಶಸ್ತಿ ರಾಜೇಂದ್ರ ಬಾಬು ನಿರ್ದೇಶನದ "ಒಲವಿನ ಉಡುಗೊರೆ " ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ. ೨೦೦೫ ರಲ್ಲಿ ಎನ್ ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಫಿಲ್ಮ್ ಫೇರ್ ಜೀವಮಾನ ಸಾಧನೆಯ ಪ್ರಶಸ್ತಿ - ದಕ್ಷಿಣ ೨೦೦೯. ಆಂಧ್ರ ಸರ್ಕಾರವು ನಂದಿ ಪ್ರಶಸ್ತಿಯನ್ನು ೨೦೦೯ರಲ್ಲಿ ನೀಡಿ ಗೌರವಿಸಿತು. ೯೦ ರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ತಿರಸ್ಕರಿಸಿದ ನಂತರ, ತಿರುವನಂತಪುರ ಟಿ.ಎನ್.ಬಾಲಕೃಷ್ಣ ಅವರಿಗೆ ನೀಡಲಾಯಿತು ಟಿವಿ ೯ ಸ್ಯಾಂಡಲ್ ವುಡ್ ಸ್ಟಾರ್ ಅವಾರ್ಡ್ಸ್ - ೨೦೧೨, ಜೀವಮಾನ ಸಾಧನೆಯ ಪ್ರಶಸ್ತಿ ಕರ್ನಾಟಕ ಸರ್ಕಾರ ಡಾ. ವಿಷ್ಣುವರ್ಧನ್ ಪ್ರಶಸ್ತಿ ೨೦೧೧ ರಲ್ಲಿ ೨೦೧೩ ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಜೀವಮಾನ ಸಾಧನೆ ಪ್ರಶಸ್ತಿ 2012 == ನಿಧನ == ಅಂಬರೀಶ್ ಅವರು ೨೪ ನವೆಂಬರ್ ೨೦೧೮ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ೬೬ ವರ್ಷ ವಯಸ್ಸಾಗಿತ್ತು. == ಉಲ್ಲೇಖಗಳು ==