ಅಕ್ಷಯಪಾತ್ರೆ ಹಿಂದೂ ಧರ್ಮಶಾಸ್ತ್ರದ ಒಂದು ವಸ್ತು. ಅದು ಸೂರ್ಯನು ಯುಧಿಷ್ಠಿರನಿಗೆ ನೀಡಿದ ಒಂದು ಅದ್ಭುತ ಪಾತ್ರೆಯಾಗಿತ್ತು ಮತ್ತು ಪಾಂಡವರಿಗೆ ಪ್ರತಿದಿನ ಎಂದಿಗೂ ಮುಗಿಯದ ಆಹಾರದ ಸಂಗ್ರಹವನ್ನು ಹಿಡಿಯುತ್ತಿತ್ತು. ಪಾಂಡವರು ವನವಾಸದಲ್ಲಿದ್ದಾಗ, ಘಟನೆಗಳ ತಿರುವಿನಿಂದ ಚಕಿತಗೊಂಡ ಅನೇಕ ಗಣ್ಯವ್ಯಕ್ತಿಗಳು, ಋಷಿಗಳು, ರಾಜರು ಮತ್ತು ಮಂತ್ರಿಗಳು ಅವರನ್ನು ಭೇಟಿಯಾಗಲು ಬರುತ್ತಿದ್ದರು. ಅವರು ಪಾಂಡವರೊಡನೆ ವಿಷಯಗಳನ್ನು ಚರ್ಚಿಸಲು ಮತ್ತು ತಮ್ಮ ಬೆಂಬಲ ತೋರಿಸಲು ಬರುತ್ತಿದ್ದರು. ಈ ಅನೇಕ ಅತಿಥಿಗಳಿಗೆ ರೂಢಿಗತ ಆದರಾತಿಥ್ಯ ನೀಡುವುದು ದ್ರೌಪದಿಗೆ ಬಹಳ ಕಷ್ಟವೆನಿಸಿತು ಏಕೆಂದರೆ ಪಾಂಡವರು ವನವಾಸದಲ್ಲಿ ನಿರ್ಗತಿಕರಾಗಿದ್ದರು ಮತ್ತು ಅವರಿಗೆ ಏನೂ ಸಿಗುತ್ತಿರಲಿಲ್ಲ. ಒಂದು ದಿನ, ಕೃಷ್ಣನು ಪಾಂಡವರನ್ನು ಭೇಟಿಯಾಗಲು ತಕ್ಷಣ ಬಂದನು. ಅವನ ಜೊತೆ ಹಲವಾರು ಪುರುಷರ ಎಂದಿನ ಅನುಚರಪಂಕ್ತಿ ಇತ್ತು. ಪಾಂಡವರು ಕೃಷ್ಣನನ್ನು ಸಾಂಪ್ರದಾಯಿಕ ಸಮಾರಂಭದೊಂದಿಗೆ ಬರಮಾಡಿಕೊಂಡರು, ಮತ್ತು ಎಲ್ಲರೂ ಕುಳಿತು ಸಂತೋಷದಿಂದ ಮಾತಾಡಲು ಆರಂಭಿಸಿದರು. ಆದರೆ, ದ್ರೌಪದಿಯು ಕೃಷ್ಣನನ್ನು ಸ್ವಾಗತಿಸಲು ಮನೆಯ ಆಚೆ ಬರಲಿಲ್ಲ. ಬದಲಾಗಿ, ಅವಳು ಅಡುಗೆಮನೆಯಲ್ಲಿ ಕುಳಿತುಕೊಂಡು ಅಳುತ್ತಿದ್ದಳು. ಸ್ವಲ್ಪ ಸಮಯದ ನಂತರ, ಏನೋ ತಪ್ಪಾಗಿದೆ ಎಂದು ಕೃಷ್ಣನು ಗ್ರಹಿಸಿದನು. ಅವನು ನೀರು ಕುಡಿಯಬೇಕೆಂಬ ನೆಪ ಮಾಡಿ ಅಡುಗೆಮನೆಯನ್ನು ಪ್ರವೇಶಿಸಿ ಅವಳೊಡನೆ ಮಾತಾಡಿದನು. ಕಣ್ಣೀರು ಸುರಿಸುತ್ತಾ, ದ್ರೌಪದಿಯು ಕೃಷ್ಣನ ಎದುರು ತಲೆ ತಗ್ಗಿಸಿ ಅವನಿಗೆ ಆ ಬೆಳಿಗ್ಗೆ ಅನ್ನ ಬೇಯಿಸಿದ್ದ ಬರಿದಾದ ಪಾತ್ರೆಯನ್ನು ತೋರಿಸಿ, ಹೇಳಿದಳು "ಕೃಷ್ಣ, ನನ್ನ ಅಡುಗೆಮನೆಯಲ್ಲಿರುವುದು ಇಷ್ಟೇ." ಪಾತ್ರೆ ಬರಿದಾಗಿತ್ತು ಮತ್ತು ಮನೆಯಲ್ಲಿ ಅಕ್ಕಿ ಉಳಿದಿರಲಿಲ್ಲ. ಆದರೆ ಕೃಷ್ಣ ಅವಳಿಗೆ ಹೇಳಿದ: "ಧನ್ಯವಾದಗಳು ಸಹೋದರಿ, ನನಗೆ ಇಷ್ಟೇ ಬೇಕಾಗಿರುವುದು. ಜಾಗರೂಕಳಾಗಿ ನೋಡು." ದ್ರೌಪದಿ ನೋಡಿದಳು, ಮತ್ತು ಅವಳಿಗೆ ಪಾತ್ರೆಯಲ್ಲಿ ಅಂಟಿಕೊಂಡಿದ್ದ ಒಂದು ಅನ್ನದ ಕಾಳು ಕಾಣಿಸಿತು. ಕೃಷ್ಣನು ಹೇಳಿದನು "ದೇವರಿಗೆ ಪ್ರೀತಿ ಮತ್ತು ನಮ್ರತೆಯಿಂದ ಅರ್ಪಿಸಿದ ಅನ್ನದ ಒಂದೇ ಕಾಳು, ಸಂಪೂರ್ಣ ಬ್ರಹ್ಮಾಂಡಕ್ಕೆ ಉಣಿಸಿ ತೃಪ್ತಿಪಡಿಸುವ ಬೀಜವಾಗುತ್ತದೆ." ನಂತರ ಅವನು ಆ ಒಂದು ಅನ್ನದ ಕಾಳನ್ನು ತಿಂದನು, ಮತ್ತು ಆ ಸಮಯಕ್ಕೆ, ಆ ದಿನಕ್ಕೆ, ಸಂಪೂರ್ಣ ಬ್ರಹ್ಮಾಂಡಕ್ಕೆ ಹೊಟ್ಟೆ ತುಂಬಿ ತೃಪ್ತಿಯಾಯಿತು. ಆ ದಿನವನ್ನು ಪ್ರತಿ ವರ್ಷ ಅಕ್ಷಯ ತೃತೀಯಾ ಎಂದು ನೆನಪುಮಾಡಿಕೊಳ್ಳಲಾಗುತ್ತದೆ. == ಉಲ್ಲೇಖಗಳು ==