ಹಿಂದೆ ಅಮೀನ್ ಎಂದು ಕರೆಯಲ್ಪಡುತ್ತಿದ್ದ ಅಭಿಮನ್ಯುಪುರ್ ಭಾರತದ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿರುವ ಒಂದು ಹಳ್ಳಿ. ಈ ಗ್ರಾಮವು ಕುರುಕ್ಷೇತ್ರ ನಗರದಿಂದ 8 ಕಿಲೋಮೀಟರ್ ದೂರದಲ್ಲಿದೆ. ಮಹಾಭಾರತ ಯುದ್ಧದಲ್ಲಿ ಅರ್ಜುನನ ಮಗ ಅಭಿಮನ್ಯು ನಿಧನನಾದ ಸ್ಥಳವಾಗಿ ಈ ಗ್ರಾಮವು ಪ್ರಸಿದ್ಧವಾಗಿದೆ. ಕೌರವರು ಮಾರಣಾಂತಿಕ "ಚಕ್ರವ್ಯೂಹ" ರಚನೆಯನ್ನು ಸಿದ್ಧಗೊಳಿಸಿ ಅಭಿಮನ್ಯುನನ್ನು ಸಿಕ್ಕಿಹಾಕಿಸಿ ಕೊಂದ ಸ್ಥಳ ಇದು. ಈ ಗ್ರಾಮವು ಕುರುಕ್ಷೇತ್ರದ 48 ಕೋಸ್ ಪರಿಕ್ರಮಾದ ಭಾಗವಾಗಿದೆ. ಈ ಗ್ರಾಮವು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ. == ಪ್ರಮುಖ ತಾಣಗಳು == ಅಭಿಮನ್ಯುಪುರ್ ಕೋಟೆ : ಇಲ್ಲಿ 10 ಮೀಟರ್ ಎತ್ತರದ ದಿಬ್ಬವಿದ್ದು, ಇದು ಒಂದು ಕಾಲದಲ್ಲಿ ಅಭಿಮನ್ಯುವಿಗೆ ಸೇರಿದ ಒಂದು ಕೋಟೆಯ ಅವಶೇಷಗಳು ಎಂದು ಹೇಳಲಾಗಿದೆ. ಅದಿತಿ ಕುಂಡ್ ಮತ್ತು ಅದಿತಿ ದೇವಸ್ಥಾನ: ಅಭಿಮನ್ಯುಪುರ್‌ನಲ್ಲಿ ಪವಿತ್ರವಾದ "ಕುಂಡ್" (ನೀರಿನ ಕೊಳ) ಇದೆ. ಇಲ್ಲಿ ಅದಿತಿ ದೇವಿಯು ಸೂರ್ಯ ದೇವನಿಗೆ ಜನ್ಮ ನೀಡಿದಳು ಎಂದು ಹೇಳಲಾಗುತ್ತದೆ. ಇಲ್ಲಿ ಒಂದು ಸಣ್ಣ ದೇವಾಲಯವೂ ಇದೆ. ಸೂರ್ಯ ಕುಂಡ್ ಮತ್ತು ಸೂರ್ಯ ದೇವಾಲಯ: ಅದಿತಿ ಕುಂಡ್‍ನ ಮತ್ತು ದೇವಾಲಯದ ಪಕ್ಕಕ್ಕೆ ಸೂರ್ಯನಿಗೆ ಮೀಸಲಾಗಿರುವ ಒಂದು ಸಣ್ಣ ಕೊಳ ಮತ್ತು ದೇವಸ್ಥಾನವಿದೆ. ಗ್ರಾಮಸ್ಥರು ಸಾಮಾನ್ಯವಾಗಿ ಸತ್ತವರ "ಅಸ್ಥಿ ಕಲಶ"ವನ್ನು (ಮೃತರ ಅವಶೇಷಗಳು) ಸೂರ್ಯ ಕುಂಡ್‍ನಲ್ಲಿ ಇರಿಸುತ್ತಾರೆ. ಯಾವುದೇ ಗರ್ಭಿಣಿ ಮಹಿಳೆಯು ಈ ಪವಿತ್ರ ಕುಂಡದಲ್ಲಿ ಸ್ನಾನ ಮಾಡಿ ಅದಿತಿ ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಅವಳಿಗೆ ಹುಟ್ಟುವ ಗಂಡು ಮಗು ಧೈರ್ಯಶಾಲಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. == ಉಲ್ಲೇಖಗಳು ==