ಆರ್.ಕೆ.ಸೂರ್ಯನಾರಾಯಣ (ಜೂನ್ ೧೪, ೧೯೩೭ - ಡಿಸೆಂಬರ್ ೨೫, ೨೦೦೩) ವೀಣಾ ವಿದ್ವಾಂಸರಲ್ಲಿ ಪ್ರಮುಖವಾದ ಹೆಸರು. == ಜೀವನ == ಸಂಗೀತಕ್ಕೆ ಹೆಸರು ವಾಸಿಯಾದ ರುದ್ರಪಟ್ನಂ ಮನೆತನದಲ್ಲಿ ಸುಪ್ರಸಿದ್ಧ ವೈಣಿಕ ಆಸ್ಥಾನ ವಿದ್ವಾನ್‌ ಆರ್.ಎಸ್‌. ಕೇಶವವಮೂರ್ತಿಯವರ ಸುಪುತ್ರರಾಗಿ ಜೂನ್ ೧೪, ೧೯೩೭ರಲ್ಲಿ ಜನಿಸಿದ ಜನಿಸಿದ ಸೂರ್ಯನಾರಾಯಣರವರು, ತಂದೆಯವರ ಶಿಕ್ಷಣದಲ್ಲಿ ಉತ್ತಮ ವೈಣಿಕರಾಗಿ 1944ರಲ್ಲಿ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಸನ್ನಿಧಾನದಲ್ಲಿ ಮೊಟ್ಟಮೊದಲ ಕಛೇರಿ ನಡೆಸಿದರು. ಏಳು ವರ್ಷ ವಯಸ್ಸಿನಲ್ಲಿಯೇ ಮೂಡಿದ ಈ ಬಾಲಕನ ಅಸಾಧಾರಣ ಪ್ರತಿಭೆ ಮುಂದೆ ಕಾಲ ಸರಿದಂತೆ ಅರಳುತ್ತ ವೃದ್ಧಿಯಾಗುತ್ತ ನಡೆಯಿತು. ತಾಯಿ ವೆಂಕಟಲಕ್ಷಮ್ಮ.ನವರು. == ೨೪ ತಂತಿಗಳ ವೀಣೆ == ನೂತನ ಪ್ರಯೋಗಾತ್ಮಕ ದೃಷ್ಟಿ ಹೊಂದಿದ್ದ ಸೂರ್ಯನಾರಾಯಣರವರು 24 ತಂತಿಗಳುಳ್ಳ ವೀಣೆಯನ್ನು ಆವಿಷ್ಕರಿಸಿ, ದೇಶ-ವಿದೇಶಗಳಲ್ಲಿ ಅದರ ನಾದದ ತುಂಬು ತನವನ್ನು ಪ್ರಸರಿಸಿದ್ದರು. == ವಿಶ್ವ ಪ್ರಸಿದ್ಧಿ == ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ. ಆಕಾಶವಾಣಿ-ದೂರದರ್ಶನ ಕಾರ್ಯಕ್ರಮಗಳಲ್ಲಿ, ದೇಶದ ಎಲ್ಲಾ ಪ್ರತಿಷ್ಠಿತ ಸಂಘ-ಸಭೆ-ಸಂಸ್ಥೆಗಳಲ್ಲಿ ಇವರ ವೀಣಾವಾದನ ಝೇಂಕರಿಸಿದೆ. ವಿದೇಶಗಳಿಗೆ ಹಲವಾರು ಬಾರಿ ಪ್ರವಾಸ ಮಾಡಿದ್ದ ಶ್ರೀಯುತರು ರಾಜ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. == ಕಿರಿಯರಿಗೆ ಪ್ರೋತ್ಸಾಹ == ಕಿರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ರಾಜ್ಯ ಸಂಗೀತ-ನೃತ್ಯ-ತಾಳವಾದ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿಜೇತರಿಗೆ ಪ್ರಶಸ್ತಿ ಪತ್ರವಿತ್ತು ಸನ್ಮಾನಿಸುತ್ತಿದ್ದರು. == ಪ್ರಶಸ್ತಿ ಗೌರವಗಳು == ಅರ್. ಕೆ. ಸೂರ್ಯನಾರಾಯಣ ಅವರು ೧೯೮೮-೮೯ನೇ ಸಾಲಿನ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಗೂ’, ‘ರಾಜ್ಯೋತ್ಸವ ಪ್ರಶಸ್ತಿಗೂ’ ಭಾಜನರಾಗಿದ್ದರು. ನಾದಜ್ಯೋತಿ, ಕಲಾಪೂರ್ಣ, ವೀಣಾವಾದನ ಗಂಧರ್ವ, ವೀಣಾ ಚಕ್ರವರ್ತಿ ಮುಂತಾದ ಹಲವಾರು ಬಿರುದುಗಳು ಆರ್ ಕೆ ಸೂರ್ಯನಾರಾಯಣ ಅವರನ್ನು ಅಲಂಕರಿಸಿದ್ದವು. == ರಚನೆ == ಮೇಳ ರಾಗಮಾಲಿಕೆಯೂ ಸೇರಿದಂತೆ ಹಲವಾರು ಕೃತಿ ವರ್ಣ ಮುಂತಾದ ರಚನೆಗಳನ್ನು ಸೂರ್ಯನಾರಾಯಣರವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ್ದಾರೆ. == ಚಲನಚಿತ್ರಗಳಲ್ಲಿ == ಪ್ರಸಿದ್ಧ ಚಲನಚಿತ್ರಗಳಾದ ‘ಮಲಯಮಾರುತ’, ‘ರಾಮಾನುಜಾಚಾರ್ಯ’ ಮುಂತಾದ ಹಲವಾರು ಚಿತ್ರಗಳಲ್ಲಿ ಆರ್ ಕೆ ಸೂರ್ಯನಾರಾಯಣ ಅವರು ಸಂಗೀತಗಾರರ ಪಾತ್ರ ನಿರ್ವಹಿಸಿದ್ದರು. == ವಿದಾಯ == ಆರ್. ಕೆ. ಸೂರ್ಯನಾರಾಯಣ ಅವರು ಅಪಾರ ಶಿಷ್ಯ ವೃಂದವನ್ನು ಸಂಗೀತ ಕ್ಷೇತ್ರಕ್ಕಿತ್ತು, ೨೦೦೩ರ ಡಿಸೆಂಬರ್ ೨೫ರಂದು ಈ ಲೋಕದಿಂದ ಹೊರಗೆ ನಾದದೇವಿಯ ದೇಗುಲದ ದೀಪವಾಗಲು ತೆರಳಿದರು. == ಮಾಹಿತಿ ಕೃಪೆ == ಅಕಾಡೆಮಿ ಪ್ರಶಸ್ತಿ ಪುರಸ್ಕೃತರು == ಉಲ್ಲೇಖಗಳು ==