ಆಳೂರ ಗ್ರಾಮವುಆಳೂರ ತಾಂಡಾ-೨ ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ. ಹಾಳು ಮಣ್ಣಿನ ಊರು ಆಳೂರು ವಿಜಯಪುರ ಜಿಲ್ಲೆ ಇಂಡಿ (ತಾಲೂಕು ಕೇಂದ್ರ) ಯಿಂದ ಉತ್ತರಕ್ಕೆ ೧೦ ಕಿ.ಮೀ ಅಂತರದಲ್ಲಿರುವ ಆಳೂರು ಹಿಂದೆ ಅಳಜಾಪುರವೆಂದು ಕರೆಯಿಸಿಕೊಳ್ಳುತ್ತಿತ್ತು. ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಊರಲ್ಲಿನ ಎಲ್ಲಾ ಮನೆಗಳು ಬಿದ್ದು ಹೋಗಿದ್ದರಿಂದ ಊರು ಸಂಪೂರ್ಣವಾಗಿ ಹಾಳು ಬಿತ್ತು. ಜನರು ಸಮೀಪದ ಗುಡ್ಡವೊಂದರಲ್ಲಿ ನೆಲೆ ಕಂಡುಕೊಂಡರು. ಅಲ್ಲಿ ಸಣ್ಣದೊಂದು ಊರು ನಿರ್ಮಾಣಗೊಂಡು ಹಾಳು ಬಿದ್ದ ಊರು ಮರು ನಾಮಕರಣ ಪಡೆದು ಹಾಳೂರು ಎಂದಾಯಿತು. ಆ ಗುಡ್ಡ ಹಾಳು ಮಣ್ಣನ್ನು ಹೊಂದಿದ್ದರಿಂದ ತಯಾರಾದ ಮನೆಗಳೆಲ್ಲವೂ ಹಾಳು ಮಣ್ಣಿನಿಂದಲೇ ಕಟ್ಟಲ್ಪಟ್ಟವು. ತದನಂತರದಲ್ಲಿ ಸುಧಾರಣೆ ಹೊಂದಿದಂತೆ ಹಾಳೂರು, ಆಳೂರ ಆಗಿದೆ. ಸುಮಾರು ವರ್ಷಗಳ ಹಿಂದೆ ಈ ಊರು ಸ್ವರ್ಗಸಮವಾಗಿತ್ತು!. ರಾತ್ರಿವೇಳೆ ಓಣಿ, ಬೀದಿಗಳಲ್ಲಿ ಗಾಜಿನ ಪೆಟ್ಟಿಗೆಯೊಳಗೆ ದೀಪಗಳನ್ನು ಉರಿಸಲಾಗುತ್ತಿತ್ತು. ಆ ಮಂದ ಬೆಳಕಿನಲ್ಲಿಯೇ ಜನರ ಓಡಾಟ ಇತ್ತು. ಕೆಲವರು ಕಂದೀಲು ಹಿಡಿದುಕೊಂಡು ಇಲ್ಲವೆ ಬ್ಯಾಟರಿ ಬೆಳಕಿನಲ್ಲಿ ಅಲೆದಾಡುತ್ತಿದ್ದರು. ಅಕ್ಕ ಪಕ್ಕದ ಮನೆಗಳಿಂದ ಬೆಂಕಿ ಇಲ್ಲವೆ ಚಿಮಣಿ ಹೊತ್ತಿಸಿಕೊಂಡು ಬಂದು ಮನೆಗಳಲ್ಲಿ ಬೆಳಕು, ಒಲೆ ಉರಿಸಿಕೊಳ್ಳುತ್ತಿದ್ದರು. ಸಿದ್ಧಾರೂಢರ ಮಠ ಹಾಲು - ಹೈನಿಗೆ ಆಸರೆಯಾಗಿತ್ತು. ಗುಡ್ಡದ ತುದಿಯಲ್ಲಿ ಗೌಡರ ಮನೆ, ಅಲ್ಲಿಯೇ ದೊಡ್ಡದೊಂದು ಮಣ್ಣಿನ ಹುಡೆ, ಅದರ ಬಳಿ ತುಸು ಎತ್ತರದಲ್ಲಿ ಇನ್ನುಳಿದ ಓಣಿಗಳು, ಮನೆಗಳು ಇದ್ದವು. ನಿಂಬಾಳದವರು, ಚಿಕ್ಕಬೇನೂರ, ಸ್ವಾಮಿಗಳು, ದ್ಯಾಮಗೊಂಡ, ವಾಡಿ, ಜೈನ, ಮುಸ್ಲಿಂ, ಗಾಣಿಗೇರ, ಬಜಂತ್ರಿ, ಔಜಿ, ಪೂಜಾರಿ, ನಾಟಿಕಾರ, ಪಿಂಜಾರ, ತೆನ್ನೆಳ್ಳಿ, ಬಡಿಗೇರ, ಬೇನೂರ, ದೌಲಿ, ಹೊಸಗೌಡರು, ಹೂಗಾರ, ಬೇಡರ, ತಳವಾರ, ಸಮಗಾರ, ಹರಿಜನ, ಮಾದರ, ಕನ್ನೂರ, ಕುರುಬರ, ಕುಲಕರ್ಣಿ, ನಾವದಗೇರ, ದಶವಂತ ಮೊದಲಾದ ಓಣಿಗಳಿದ್ದು ಭಾವೈಕ್ಯ ಊರಲ್ಲಿತ್ತು. ಗೌಡರ ಮನೆ ಮುಂದೊಂದು ದೊಡ್ಡದಾದ ಒರಳು ಕಲ್ಲು ಇತ್ತು. ಹಬ್ಬ ಹರಿದಿನಗಳಲ್ಲಿ ಅಲ್ಲಿಗೆ ಹೆಣ್ಣುಮಕ್ಕಳು ಚಂದದ ಉಡುಗೆ ತೊಟ್ಟು ಬಂದು ಸರದಿ ಪ್ರಕಾರ ಹೋಳಿಗೆ ಮಾಡಲು ಹೂರಣ ಅರಿದುಕೊಂಡು ಹೋಗುತ್ತಿದ್ದರು. ಆ ವೇಳೆ ಅವರ ಹಾಡು, ಹರಟೆ, ಉಡುಗೆ ತೊಡುಗೆ ನೊಡಲು, ಕೇಳಲು ಮಜವೆನಿಸುತ್ತಿತ್ತು. ಅಂದಿನ ಹುಡೆ, ಅಗಸಿ, ಅಲ್ಲಿನ ವೀರಗಲ್ಲುಗಳು, ಶಾಸನಗಳು, ಊರ ಮಧ್ಯದಲ್ಲಿನ ಸೇದು ಭಾವಿ, ಬಸದಿ, ತೆರೆದ ಮಲ್ಲಿಕಾರ್ಜುನ ಗುಡಿ, ಕಲ್ಲು ಬಸವಣ್ಣ, ಕಲ್ಲಿನಲ್ಲಿ ಕೆತ್ತಿದ ನಾಗರ ಹಾವುಗಳು, ಜಟ್ಟಿಂಗರಾಯನ ಗುಡಿ, ಡೋಣಿಗಳು, ಬಸವಣ್ಣ ದೇವಸ್ಥಾನ, ಲಕ್ಷ್ಮೀ ಗುಡಿ, ಹನಮಪ್ಪನ ಗುಡಿ, ಮಸೀದಿ, ಸಿದ್ಧಾರೂಢರ ಮಠ, ಗವಿ, ಬುರಾಣ ದೇವರು, ಕಲ್ಲಿನ ಭಾವಿ, ಉಪ್ಪಿನ ಮೋಳಿ, ಮಣ್ಣಿನಿಂದ ಕಟ್ಟಿದ ಶಾಲೆ, ಊರ ಸುತ್ತಲಿನ ತೋಟಗಳಲ್ಲಿನ ಈಜಾಡುವ ಬಾವಿಗಳು, ಮಟ್ಟಿ ಹೊಡೆಯುವ ಹಾಡು, ಹರಿಯುವ ತೆರೆದ ಹಳ್ಳ, ಬೆಲ್ಲದ ಗಾಣಗಳು, ಹಂತೀ ಸಡಗರ, ದೊಡ್ಡ ಆಲದ ಮರದ ನೆರಳ ಹೀಗೆ ಬರೆಯುತ್ತಾ ಹೋದಂತೆ ಸವಿ ಸವಿ ನೆನಪಿನ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ. ಹೆಚ್ಚಿನ ವ್ಯಾಸಂಗ, ಉದ್ಯೋಗದ ನಿಮಿತ್ತ ಬೇರೆ ಊರು ಪಟ್ಟಣಗಳಿಗೆ ಹೋಗಿ ಬಂದು ಮಾಡುವಾಗ ವರುಷಗಳುರುಳಿದಂತೆ ನನ್ನೂರಿನ ಸಿರಿ ಕಣ್ಮರೆಯಾಗುತ್ತ ಸಾಗಿತು. ಗುಡ್ಡ ಕರಗುತ್ತ ಹೋಯಿತು.‌ ಮಣ್ಣಿನ ಮನೆಗಳು ಕಾಂಕ್ರೀಟ್ ಮನೆಗಳಾದವು. ಇತಿಹಾಸದ ಪುರಾವೆಗಳು ಕಾಣೆಯಾದವು, ಊರು ಬೆಳೆದು ಮಡ್ಡಿ ಮೇಲೆ ಜನ ವಸತಿಗಳು ತಲೆಯೆತ್ತಿ ಅಲ್ಲೊಂದು 'ಮಡ್ಡಿ ಊರು' ತಯಾರಾಗಿದೆ. ಈಗ ಹಳೆ ಊರಿಗಿಂತ ಮಡ್ಡಿ ಊರು ದೊಡ್ಡದಾಗಿ ಬೆಳೆಯುತ್ತಿದೆ. ಅಲ್ಲಿಯೇ ಸುಂದರ ಕಟ್ಟಡಗಳನ್ನು ಹೊಂದಿ ವಿಶಾಲ ಆವರಣದಲ್ಲಿ ಶಾಲೆ ಕಾಲೇಜು ಆರಂಭಗೊಂಡಿದ್ದರಿಂದ ಹಳೆಯ ಊರು ಕಳೆ ಕಳೆದುಕೊಂಡಿದೆ. ಒಂದು ಕಾಲದಲ್ಲಿ ಬಡತನವೇ ತುಂಬಿಕೊಂಡಿರುವ ಆಳೂರು ಇಂದು ಕೃಷ್ಣಾ ಬಲದಂಡೆ ಯೋಜನೆಯ ಫಲವಾಗಿ ಆಲಮಟ್ಟಿ ಆಣೆಕಟ್ಟಿನಿಂದ ನೀರು ಕಾಲುವೆಗಳಿಗೆ ಹರಿಬಿಡುತ್ತಿರುವುದರಿಂದ ಆ ನೀರು ಆಳೂರಿನ ಬಹುಪಾಲು ಜಮೀನುಗಳಿಗೆ ವರದಾನವಾಗಿದೆ. ಹೀಗಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುಂತಾಗಿ ರೈತಾಪಿ ಜನ ನೆಮ್ಮದಿಯ ಬದುಕು ಸಾಗಿಸುವಂತಾಗಿದೆ. ಪ್ರತಿ ವರ್ಷ ಛಟ್ಟಿ ಅಮವಾಸ್ಯೆ ತರುವಾಯ ನಂದೀ ಬಸವೇಶ್ವರ ಜಾತ್ರೆ ಅತ್ಯಂತ ವೈಭವದಿಂದ ಜರುಗುತ್ತಿದ್ದು, ಆ ವೇಳೆ ಪಲ್ಲಕ್ಕಿ ಮತ್ತು ನಂದೀಕೋಲು ಮೆರವಣಿಗೆ ನೋಡುವುದಕ್ಜೆ ಜನಸಾಗರವೇ ಹರಿದು ಬರುತ್ತದೆ. ಹಾಗೆಯೇ ಶ್ರೀ ಸಿದ್ಧಾರೂಢ ಮಠದ ಜಾತ್ರೆ, ಲಕ್ಮೀ ದೇವಿಯ ಥಂಡಿ, ದೇವಿ ಗುಡಿ ಜಾತ್ರೆ, ಹನುಮಂತ ದೇವರ ಮೊಸರು ಗಡಿಗೆ ಒಡೆಯುವ ಉತ್ಸವ ಹೀಗೆ ಹಲವಾರು ಸಾಂಸ್ಕೃತಿಕ ಅನನ್ಯತೆಗಳು ಈಗ ಆಧುನಿಕ ಸ್ಪರ್ಶವನ್ನು ಪಡೆದು ಅದ್ದೂರಿತನ ಪಡೆದುಕೊಂಡಿವೆ. ಹೀಗೆ ಏನೆಲ್ಲಾ ಬದಲಾವಣೆಯಾದರೂ ಅಂದಿನ ಹಿರಿಯರು, ಕಲೆ, ಸಂಪ್ರದಾಯ, ಭಾವೈಕ್ಯ, ಸಹಕಾರ, ಸಹಾಯ, ಅನುಕಂಪ, ಗೌರವ, ಗ್ರಾಮ ವೈಭವ ಮೊದಲಾದವುಗಳು ತೆರೆಮರೆಗೆ ಸರಿದು ಹೋಗುತ್ತಿರುವುದು ನೆನಪಾದರೆ ಕಣ್ಣು ತೇವಗೊಳ್ಳುತ್ತವೆ. ........................... * ಸೋಮಲಿಂಗ ಬೇಡರ ಆಳೂರ == ಭೌಗೋಳಿಕ == ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦" ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ. == ಹವಾಮಾನ == ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°-೪೨° ಡಿಗ್ರಿ ಸೆಲ್ಸಿಯಸ್ ಚಳಿಗಾಲ ಮತ್ತು ಮಳೆಗಾಲ - ೧೮°-೨೮° ಡಿಗ್ರಿ ಸೆಲ್ಸಿಯಸ್. ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ. == ಸಾಂಸ್ಕೃತಿಕ == ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. == ಕಲೆ ಮತ್ತು ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. == ಧರ್ಮ == ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. == ಭಾಷೆ == ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ. == ದೇವಾಲಯ == ಶ್ರೀ ಮಹಾಲಕ್ಷ್ಮಿ ದೇವಾಲಯ ಶ್ರೀ ದುರ್ಗಾದೇವಿ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶ್ರೀ ವೆಂಕಟೇಶ್ವರ ದೇವಾಲಯ ಶ್ರೀ ಪಾಂಡುರಂಗ ದೇವಾಲಯ ಶ್ರೀ ಹಣಮಂತ ದೇವಾಲಯ ಶ್ರೀ ಸೇವಾಲಾಲ ದೇವಾಲಯ ಆಳೂರ ಎಲ್.ಟಿ 2 == ಮಸೀದಿ == ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. == ನೀರಾವರಿ == ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಕೃಷಿ ಮತ್ತು ತೋಟಗಾರಿಕೆ == ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ. == ಆರ್ಥಿಕತೆ == ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. == ಉದ್ಯೋಗ == ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ. == ಬೆಳೆ == ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. == ಸಸ್ಯ == ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. == ಪ್ರಾಣಿ == ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. == ಹಬ್ಬ == ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. == ಶಿಕ್ಷಣ == ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. == ಸಾಕ್ಷರತೆ == ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ. == ರಾಜಕೀಯ == ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ವಿಜಯಪುರ ಕರ್ನಾಟಕ