ಉಂಡೆತರಾಯ ಭಾರತದ ಕರ್ನಾಟಕ ರಾಜ್ಯದ ಕುಂಚಿಟಿಗ ಸಮುದಾಯದ ಜನರ ಪೌರಾಣಿಕ ನಾಯಕ. ಇವನನ್ನು ಕುಂಚಿಟಿಗ ಜನರು ಇಂದಿಗೂ ದೇವಮಾನವ ಎಂದು ಜಲಧಿ ಬಪ್ಪರಾಯನೊಂದಿಗೆ ಪೂಜಿಸುತ್ತಾರೆ. == ದಂತಕಥೆ == ದಂತಕಥೆಯ ಪ್ರಕಾರ ಕುಂಚಿಟಿಗರು ಮಧ್ಯಯುಗದಲ್ಲಿ ದೆಹಲಿಯ ಬಳಿ ವಾಸಿಸುತ್ತಿದ್ದರು. ಉಂಡೆತರಾಯ ಅವರ ನಾಯಕ. ಸುಮಾರು 12 ನೇ ಶತಮಾನದಲ್ಲಿ ಸ್ಥಳೀಯ ಮುಸ್ಲಿಂ ನವಾಬನು ಅವರ ಮೇಲೆ ದೌರ್ಜನ್ಯವನ್ನು ಎಸಗುತ್ತಿದ್ದನು. ಒಮ್ಮೆ ಅವನು ಉಂಡೆತರಾಯನ ಹಿರಿಯ ಮಗಳನ್ನು ಎಳೆದುಕೊಂಡು ಹೋದನು ಮತ್ತು ಅವನ ಕಿರಿಯ ಮಗಳನ್ನೂ ಕರೆದುಕೊಂಡು ಹೋಗಲು ಬಯಸಿದನು. ಉಂಡೆತರಾಯನಿಗೆ ನವಾಬನೊಂದಿಗೆ ಹೋರಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಆತನು ತನ್ನ ಜನರ ಸುರಕ್ಷತೆಗಾಗಿ ಸ್ಥಳವನ್ನು ಬಿಟ್ಟು ದಕ್ಷಿಣಕ್ಕೆ ಅಂದರೆ ಕರ್ನಾಟಕದ ಇಂದಿನ ಜಿಲ್ಲೆಗಳಾದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಕರೆದೊಯ್ಯಲು ನಿರ್ಧರಿಸಿದನು. == ಕುರುಬ ಸಂರಕ್ಷಕ == ಹೀಗೆ ತಮ್ಮ ದಕ್ಷಿಣಕ್ಕೆ ಅವರು ಚಾರಣ ಮಾಡುತ್ತಿರುವಾಗ, ಉಂಡೆತರಾಯ ಮತ್ತು ಅವನ ಜನರು ಮೊದಲು ಕೃಷ್ಣಾ ನದಿಯನ್ನು ದಾಟಬೇಕಾಗಿತ್ತು. ಆಗ ಅವರು "ನಾಯಕ" ಮತ್ತು "ಡೊಂಬರ" ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಸಹಾಯವನ್ನು ಪಡೆದರು. ಅವರು ಮತ್ತಷ್ಟು ದಕ್ಷಿಣಕ್ಕೆ ತೆರಳಿದಂತೆ ತುಂಬಿ ಹರಿಯುತ್ತಿದ್ದ ತುಂಗಭದ್ರ ನದಿಯನ್ನು ದಾಟಲು ಸಹಾಯ ಮಾಡಿದ ಕುರುಬ ''ಜಲಧಿ ಬಪ್ಪರಾಯ''ನಿಗೆ ನೀಡಿದ ವಾಗ್ದಾನದಂತೆ ಸಮುದಾಯವು ಅವನ ಹೆಸರಿನಿಂದ ಕರೆಯಲ್ಪಟ್ಟಿತು. ಜಲಧಿ ಬಪ್ಪರಾಯನು ತಮ್ಮ ವೃತ್ತಿಯ ಪ್ರತೀಕವಾದ ಉಣ್ಣೆಯ ಹೊದಿಕೆಗಳನ್ನು ನೇಯಲು ಬಳಸುವ ಕುಂಚ(ಸೂಜಿ)ವನ್ನು ಕೈಯಲ್ಲಿ ಹಿಡಿದಿದ್ದನು. ಅವನ ಗೌರವಾರ್ಥವಾಗಿ ಉಂಡೆತರಾಯನು ತಮ್ಮ ಸಮುದಾಯಕ್ಕೆ ಕುಂಚಿಟಿಗ ಎಂದು ಹೆಸರಿಟ್ಟರು. ಅಂದರೆ ಕುಂಚವನ್ನು ಹಿಡಿದವನು. ನಂತರ ಉಂಡೆತರಾಯನು ತನ್ನ ಬದುಕಿ ಉಳಿದಿರುವ ಮತ್ತೊಬ್ಬ ಮಗಳನ್ನು ಜಲಧಿ ಬಪ್ಪರಾಯನಿಗೆ ಮದುವೆ ಮಾಡಿಕೊಟ್ಟು ಹೊಸ ಸಮುದಾಯದ ಆರಂಭಕ್ಕೆ ನಾಂದಿಯನ್ನು ಹಾಡಿದನು.