ಉತ್ತರಮೇರೂರು ತಮಿಳುನಾಡಿನ ಚೆಂಗಲ್ಪಟ್ಟ್‌ ಜಿಲ್ಲೆಯ ಒಂದು ಊರು.ಇದು ಪಲ್ಲವರ ಕಾಲದಲ್ಲಿ ಬ್ರಹ್ಮದೇಯ ಎಂದು ಕ್ರಿ.ಶ ೭೫೦ರ ಸುಮಾರಿಗೆ ಸ್ಥಾಪಿಸಲ್ಪಟ್ಟಿತ್ತು. ಪಲ್ಲವರ ನಂದಿವರ್ಮ ಶ್ರೀವೈಷ್ಣವ ಬ್ರಾಹ್ಮಣರಿಗೆ ಈ ಗ್ರಾಮವನ್ನು ದಾನರೂಪದಲ್ಲಿ ನೀಡಿದ್ದನೆಂದು ನಂಬಲಾಗಿದೆ. ೧೦ನೆಯ ಶತಮಾನದ ಒಂದು ಶಾಸನದಂತೆ ಈ ಗ್ರಾಮದ ಹೆಸರು ಉತ್ತರಮೇರೂರು ಚತುರ್ವೇದಿ ಮಂಗಳಂ ಎಂದಾಗಿತ್ತು. ಚೋಳರಾಜ್ಯದಲ್ಲಿ ಒಂದು ಅಗ್ರಹಾರವಾಗಿತ್ತು. 1ನೆಯ ಪರಾಂತಕನ ಆಳ್ವಿಕೆಯ 12 ಮತ್ತು 14ನೆಯ ವರ್ಷಗಳ (919 ಮತ್ತು 921) ಎರಡು ಶಾಸನಗಳು ಇಲ್ಲಿ ಸಿಕ್ಕಿವೆ. ಇವುಗಳಿಂದ ಆ ಕಾಲದ ಗ್ರಾಮಾಡಳಿತ ಪದ್ಧತಿ ಹೇಗಿತ್ತೆಂಬುದನ್ನು ಅರಿಯಬಹುದು. ಇಲ್ಲಿ ಒಟ್ಟು ೨೫ ಶಾಸನಗಳು ದೊರಕಿದ್ದು, ಅದರಲ್ಲಿ ಪಲ್ಲವರ ೪ ತಲೆಮಾರಿನ ರಾಜರ ಶಾಸನಗಳಿವೆ. ಒಂಭತ್ತನೆಯ ಶತಮಾನದ ಕೊನೆಗೆ ಈ ಪ್ರದೇಶವನ್ನು ಚೋಳರು ಆಕ್ರಮಿಸಿದ್ದು ಪರಾಂತಕ ಚೋಳ (907–950), ರಾಜರಾಜ ಚೋಳ (985–1014), ರಾಜೇಂದ್ರ ಚೋಳ (1012–1044) ಮತ್ತು ಕುಲೋತ್ತುಂಗ ಚೋಳ (1070–1120),ರು ದೇವಾಲಯಗಳಿಗೆ ನೀಡಿದ ದತ್ತಿಯ ವಿವರಗಳಿರುವ ಶಾಸನಗಳಿವೆ. == ಗ್ರಾಮಾಡಳಿ ಪದ್ಧತಿ == ಹನ್ನೆರಡು ಹಳ್ಳಿಗಳನ್ನೊಳಗೊಂಡ ಕೂಟವನ್ನು (ಕೂಟ್ರಂ) 30 ವಿಭಾಗಗಳಾಗಿ ವಿಂಗಡಿಸಿ ಅವುಗಳ ಆಡಳಿತವನ್ನು ಎಲ್ಲಾ ಗ್ರಾಮಸ್ಥರ ವಶಕ್ಕೂ ಒಪ್ಪಿಸಲಾಗಿತ್ತು. ಇದಕ್ಕಾಗಿ ಸಂವತ್ಸರ ವಾರಿಯಂ, ತೋಟ್ಟವಾರಿಯಂ, ಏರಿವಾರಿಯಂ, ಪೆನ್ವಾರಿಯಂ, ಪಂಚವಾರವಾರಿಯಂ (ಇತರ ಮೂಲಗಳಿಂದ ತಿಳಿದುಬರುವ ಪ್ರಕಾರ) ಕಳನಿವಾರಿಯಂ, ಕಣಕ್ಕುವಾರಿಯಂ ಮತ್ತು ತಡಿವಳಿವಾರಿಯಂ ಎಂಬ ನಾನಾ ಮಂಡಳಿಗಳಿದ್ದುವು. ಕುಡುಂಬವಾರಿಯಂ ಎಂಬ ಮತ್ತೊಂದು ಮಂಡಳಿಯ ವಿಚಾರವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಬ್ರಾಹ್ಮಣ ಮಹಾಸಭೆಯೊಂದು ಪ್ರತ್ಯೇಕವಾಗಿತ್ತು. ಇದಲ್ಲದೆ ಭೂಸ್ಥಿತಿವಂತರೂ ವಿದ್ಯಾವಂತರೂ ಶಾಸ್ತ್ರಜ್ಞಾನಿಗಳೂ ಆಡಳಿತ ಮಂಡಳಿಗಳಿಗೆ ಆಯ್ಕೆ ಹೊಂದಲು ಅರ್ಹತೆ ಹೊಂದಿದ್ದರು; ಆದರೆ ಅಪರಾಧಿಗಳೂ ಅವರ ಹತ್ತಿರದ ಸಂಬಂಧಿಗಳೂ ದಕ್ಷತೆಯಿಲ್ಲದವರೂ ದುರ್ನಡತೆ ಯವರೂ ಅನರ್ಹರು. ಚುನಾವಣೆಗೆ ಹಿಂದಿನ ಅವಧಿಯ ಮಂಡಳಿಯಲ್ಲಿದ್ದ ಸದಸ್ಯರು ಮಾರನೆಯ ಅವಧಿಯಲ್ಲಿ ಸ್ಪರ್ಧಿಸುವಂತಿರಲಿಲ್ಲ. ಎಲ್ಲ ಅಭ್ಯರ್ಥಿಗಳ ಹೆಸರುಗಳನ್ನೂ ಬರೆದ ಚೀಟಿಗಳನ್ನು ಮಡಕೆಯೊಂದರಲ್ಲಿ ಹಾಕಿ ಒಬ್ಬ ಬಾಲಕನಿಂದ ಎತ್ತಿಸುವುದೇ ಆಗಿನ ಆಯ್ಕೆ ಪದ್ಧತಿ. ಉತ್ತರಮೇರೂರಿನಲ್ಲಿದ್ದ ಕೆರೆಯ ಹೆಸರು ವೈರಮೇಘ ತಟಾಕ. ನೀರಾವರಿಗೆ ಇದು ಮುಖ್ಯ ಆಸರೆಯಾಗಿತ್ತು. == ಜನಸಂಖ್ಯೆ == ಈಗಿನ ಉತ್ತರಮಾರೂರು ೨೦೧೧ರ ಜನಸಂಖ್ಯೆಯಂತೆ ೨೫೧೪೬ ಜನರ ಒಂದು ಪಂಚಾಯತಿಯಾಗಿದೆ. == ದೇವಾಲಯಗಳು == ಈ ಹಳ್ಳಿಯು ಹಲವಾರು ದೇವಾಲಯಗಳನ್ನು ಹೊಂದಿದ್ದು, ಅವುಗಳು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿವೆ.ಅವುಗಳಲ್ಲಿ ಸುಂದರವರದ ಪೆರುಮಾಳ್ ದೇವಾಲಯ,ವೈಕುಂಠ ಪೆರುಮಾಳ್ ದೇವಾಲಯ,ಸುಬ್ರಹ್ಮಣ್ಯ ದೇವಾಲಯ ಮತ್ತು ಕೈಲಾಸನಾಥ ದೇವಾಲಯ ಮುಖ್ಯವಾದವುಗಳು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ( )