ಉದಯವಾಣಿ ಹೆಚ್ಚು ಪ್ರಸಾರವಾಗುವ ಕನ್ನಡ ದಿನಪತ್ರಿಕೆಗಳಲ್ಲೊಂದು. ಇದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನವರಿಂದ ಪ್ರಕಟಗೊಳ್ಳುತ್ತದೆ. ಇದು ಮಣಿಪಾಲ, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿ ಮತ್ತು ಮುಂಬಯಿ ಗಳಿಂದ ಪ್ರಕಟಗೊಳ್ಳುತ್ತದೆ. == ಇತಿಹಾಸ == 1970 ಜನವರಿ 1ರಂದು ಪ್ರಾರಂಭವಾದ ಉದಯವಾಣಿ ರಾಜಧಾನಿ ಬಿಟ್ಟು ದೂರದಲ್ಲಿ ಸಮೃದ್ಧವಾಗಿ ಬೆಳೆದು ಬಂದ ಮುಖ್ಯವಾಹಿನಿಯ ಕನ್ನಡ ದಿನಪತ್ರಿಕೆ. ಅಂದಿನಿಂದ ಇಂದಿನವರೆಗೂ (2006) ಅದರ ಸಂಪಾದಕರು ಟಿ. ಸತೀಶ ಪೈ. ಅವರೇ ಪ್ರಕಾಶನ ಸಂಸ್ಥೆ ಮಣಿಪಾಲ ಪ್ರಿಂಟರ್ಸ್‌ ಅಂಡ್ ಪಬ್ಲಿಕೇಷನ್ಸ್‌ (ಈಗ ಮಣಿಪಾಲ ಮೀಡಿಯಾ ನೆಟ್ವರ್ಕ್) ಮಾಲೀಕರು ಕೂಡ. ಉದಯವಾಣಿ 1993ರಲ್ಲಿ ಬೆಂಗಳೂರಿನಲ್ಲಿ ರಾಜಧಾನಿ ಆವೃತ್ತಿ ಪ್ರಾರಂಭಿಸಿತು. ಮೊದಲ ಆರುವರ್ಷಗಳ ಕಾಲ ಈಶ್ವರ ದೈತೋಟ ಇದರ ಸ್ಥಾನಿಕ ಸಂಪಾದಕರಾಗಿದ್ದರು. ಈಗ ಡಾ. ಪುರ್ಣಿಮಾ ಸ್ಥಾನಿಕ ಸಂಪಾದಕರಾಗಿದ್ದಾರೆ. ಉದಯವಾಣಿ ಸೋದರಿ ಪ್ರಕಟಣೆಗಳಾಗಿ ತುಷಾರ (1973) ಮಾಸಪತ್ರಿಕೆ, ರೂಪತಾರಾ (1976) ಸಿನಿಮಾ ಮಾಸಿಕ, ತರಂಗ (1982) ವಾರಪತ್ರಿಕೆ ಹಾಗೂ ತುಂತುರು (1999) ಎಂಬ ಮಕ್ಕಳ ಪತ್ರಿಕೆಯನ್ನು ಕೂಡಾ ಓದುಗರಿಗೆ ಕೊಡುತ್ತದೆ. ಜೊತೆಗೆ ಉದಯವಾಣಿಯ ಇಂಟರ್ನೆಟ್ ಆವೃತ್ತಿಯೂ ಲಭ್ಯವಿದೆ ಹಾಗೂ ಮುಂಬಯಿ ಆವೃತ್ತಿಯನ್ನೂ (2000) ನಡೆಸುತ್ತಿದೆ. ಪ್ರತಿದಿನವೂ ಅಂಕಣಗಳನ್ನು ಪ್ರಾರಂಭಿಸಿದ್ದು ಈ ದೈನಿಕ. ದಿವಂಗತ ಕು.ಶಿ.ಹರಿದಾಸ ಭಟ್, ಪ್ರೊ ಸಿ.ಎನ್ ರಾಮಚಂದ್ರನ್ ಕೂಡಾ ಅಂಕಣ ಬರೆಯುತ್ತಿದ್ದವರಲ್ಲಿ ಸೇರಿದ್ದಾರೆ. ಸಂಸ್ಕೃತ ಪಾಂಡಿತ್ಯವುಳ್ಳ ಬನ್ನಂಜೆ ಸಹೋದರರಾದ ರಾಮಾಚಾರ್ ಹಾಗೂ ಗೋವಿಂದಾಚಾರ್ ಇದರ ಸಹ ಸಂಪಾದಕರಾಗಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಸವಲತ್ತುಗಳನ್ನು ಹೊಂದಿರುವ ಉದಯವಾಣಿ ಸಮೂಹದ ಪ್ರಕಟಣೆಗಳು ಅಚ್ಚುಕಟ್ಟಾದ ಸುಂದರ ಮುದ್ರಣಕ್ಕೆ ಅನೇಕ ಬಾರಿ ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿವೆ. == ಸಂಪಾದಕರು == ಉದಯವಾಣಿ ಪತ್ರಿಕೆಗೆ ರವಿಶಂಕರ್.ಕೆ.ಭಟ್ ಪ್ರಧಾನ ಸಂಪಾದಕರಾಗಿದ್ದಾರೆ. ಉದಯವಾಣಿಯ ಮಣಿಪಾಲ ಹಾಗೂ ಮುಂಬಯಿ ಆವೃತ್ತಿಗೆ ಅರವಿಂದ ನಾವಡ ಸಂಪಾದಕರು. ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ ಆವೃತ್ತಿಗೆ ವೆಂಕಟೇಶ್ ಪ್ರಭು ಸಂಪಾದಕರು. ಬೆಂಗಳೂರು ಆವೃತ್ತಿಗೆ ಬಿ.ಕೆ.ಗಣೇಶ್ ಸ್ಥಾನಿಕ ಸಂಪಾದಕರಾಗಿದ್ದಾರೆ. == ಹೊರಗಿನ ಸಂಪರ್ಕಗಳು == ಉದಯವಾಣಿ ಅಂತರಜಾಲ ಆವೃತ್ತಿ