ಎಂ.ಡಿ.ರಾಮನಾಥನ್ (ಮೇ 20, 1923 –ಎಪ್ರಿಲ್ 27, 1984) ಕರ್ನಾಟಕ ಸಂಗೀತ ಪದ್ಧತಿಯ ಗಾಯಕ ಹಾಗೂ ವಾಗ್ಗೇಯಕಾರ. == ಬಾಲ್ಯ == ಎಂ.ಡಿ.ರಾಮನಾಥನ್ ಹಿಂದೆ ಮದ್ರಾಸ್ ಪ್ರಾಂತ್ಯದಲ್ಲಿದ್ದ (ಈಗ ಕೇರಳ ರಾಜ್ಯ) ಪಾಲಕ್ಕಾಡ್ ಜಿಲ್ಲೆಯ 'ಮಂಜಪ್ಪಾರ' ಎಂಬಲ್ಲಿ ಮೇ ೨೦,೧೯೨೩ರಂದು ಜನಿಸಿದರು. ಇವರ ತಂದೆ ದೇವಸ ಭಾಗವತರ್ ಸಂಗೀತ ಶಿಕ್ಷಕರಾಗಿದ್ದರು.ಪಾಲಕ್ಕಾಡ್‍ನಲ್ಲಿ ತನ್ನ ಶಿಕ್ಷಣದ ಬಳಿಕ ಸಂಗೀತದಲ್ಲಿ ಹೆಚ್ಚಿನ ಸಾಧನೆಗಾಗಿ ಮದ್ರಾಸಿಗೆ ವಲಸೆ ಹೋದರು. == ಶಿಕ್ಷಣ == ಮದ್ರಾಸಿನಲ್ಲಿ ೧೯೪೪ರಲ್ಲಿ ರುಕ್ಮಿಣಿದೇವಿ ಅರುಂಡೇಲ್ ತಮ್ಮ ಕಲಾಕ್ಷೇತ್ರ ಗುರುಕುಲದಲ್ಲಿ ಸಂಗೀತಕ್ಕಾಗಿ ಸಂಗೀತ ಶಿರೋಮಣಿ ಎಂಬ ವಿಷಯದಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸಿದಾಗ ಅದಕ್ಕೆ ಸೇರ್ಪಡೆಯಾದವರಲ್ಲಿ ರಾಮನಾಥನ್ ಒಬ್ಬರೇ ಆಗಿದ್ದರು.ಅಲ್ಲಿಂದ ಟೈಗರ್ ವರದಾಚಾರ್ಯರ ಆತ್ಮೀಯ ಶಿಷ್ಯರಾದರು.ಮುಂದೆ ಇದೇ ಕಲಾಕ್ಷೇತ್ರದಲ್ಲಿ ಭೋದಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. == ಸಾಧನೆ == ಕರ್ನಾಟಕ ಸಂಗೀತ ಗಾಯನದಲ್ಲಿ ಇವರು ತಮ್ಮದೇ ಶೈಲಿಯನ್ನು ಅಭಿವೃದ್ಧಿ ಪಡಿಸಿದರು. 'ಮಂದ್ರಸ್ಥಾಯಿ'ಯಲ್ಲಿ ಉಚ್ಛಾರ ಶುದ್ಧವಾಗಿ ನಿಧಾನವಾದ ಇವರ ಗಾಯನ ಕೇಳುಗರಿಗೆ ಹಾಡಿನ ಭಾವವನ್ನು ಅರ್ಥೈಸಿಕೊಳ್ಳಲು ಸಾಕಷ್ಟು ಅವಕಾಶವನ್ನು ಕೊಡುತ್ತದೆ. ಇವರ ಹೆಚ್ಚಿನ ಗಾಯನ ಸಹನ,ಶ್ರೀ,ಆನಂದ ಬೈರವಿ,ರೀತಿಗೌಳ, ಯದುಕುಲ ಕಾಂಭೋಜಿ ಮುಂತಾದ ರಾಗಗಳಲ್ಲಿತ್ತು. ವಾಗ್ಗೇಯಕಾರರಾಗಿ ರಾಮನಾಥನ್ ಸುಮಾರು ೩೦೦ ಕ್ಕಿಂತಲೂ ಹೆಚ್ಚು ಕೃತಿಗಳನ್ನು ತಮಿಳು, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ರಚಿಸಿದ್ದಾರೆ. ತಮ್ಮ ರಚನೆಗಳಲ್ಲಿ ಮುದ್ರೆಯನ್ನಾಗಿ ವರದದಾಸ ಎಂಬ ಅಂಕಿತವನ್ನು ತಮ್ಮ ಗುರುಗಳಾದ ವರದಾಚಾರ್ಯರ ಗೌರವಾರ್ಥ ಬಳಸಿದ್ದಾರೆ. == ಪ್ರಶಸ್ತಿಗಳು ಮತ್ತು ಗೌರವಗಳು == ಇವರ ಸಂಗೀತ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ೧೯೭೪ರಲ್ಲಿ ಭಾರತ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿ, ೧೯೭೫ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಮುಖವಾದವುಗಳು. == ಮರಣ == ರಾಮನಾಥನ್ ದೀರ್ಘಕಾಲದ ಅಸೌಖ್ಯದ ಕಾರಣ ತಮ್ಮ ೬೦ನೆಯ ವರ್ಷದಲ್ಲಿ ಎಪ್ರಿಲ್ ೧೭,೧೯೮೪ ರಂದು ನಿಧನರಾದರು. == ಬಾಹ್ಯ ಸಂಪರ್ಕಗಳು == .. 2018-09-17 ವೇಬ್ಯಾಕ್ ಮೆಷಿನ್ ನಲ್ಲಿ. , 2021-02-10 ವೇಬ್ಯಾಕ್ ಮೆಷಿನ್ ನಲ್ಲಿ. ( )