ಎನ್ ವೆಂಕಟಾಚಲ (ಜುಲೈ 3-1930 - 30 ಅಕ್ಟೋಬರ್ 2019) ಕರ್ನಾಟಕದ ಲೋಕಾಯುಕ್ತರು, ಸರ್ವೋಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು. == ಜನನ ಮತ್ತು ಶಿಕ್ಷಣ == ಇವರು 1930 ಜುಲೈ 3ರಂದು ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಮಿಟ್ಟೂರು ಗ್ರಾಮದಲ್ಲಿ ಜಮೀನುದಾರ ಮನೆತನದಲ್ಲಿ ಜನಿಸಿದರು. ಇವರ ಪೂರ್ಣಹೆಸರು ನಂಜೇಗೌಡ ವೆಂಕಟಾಚಲ. ಅನಸೂಯ ಇವರ ಪತ್ನಿ. ಇವರು ಮಿಟ್ಟೂರು, ಕೋಲಾರ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ ಬಿಎಸ್.ಸಿ. ಪದವಿ ಪಡೆದ ಅನಂತರ ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, == ಉದ್ಯೋಗ == ಮೈಸೂರು ಉಚ್ಚನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭಿಸಿದರು(1955). ವಕೀಲ ವೃತ್ತಿಯ ಜೊತೆಗೆ ಉಪನ್ಯಾಸಕರಾಗಿಯೂ ಕೆಲಸ ಮಾಡಿದರು. ಸರ್ಕಾರಿ ವಕೀಲರಾಗಿ ಸೇವೆಸಲ್ಲಿಸುತ್ತಿದ್ದ ಇವರು ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಗೊಂಡರು (1977 ನವೆಂಬರ್ 28). ಅನಂತರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದರು (1992 ಜುಲೈ 3). ನಿವೃತ್ತಿಯ ತರುವಾಯ ಬೆಂಗಳೂರಿಗೆ ಬಂದು ನೆಲಸಿದ ಇವರ ಶಿಸ್ತು, ನ್ಯಾಯನಿಷ್ಠುರತೆ, ಪ್ರಾಮಾಣಿಕತೆ, ಆಳವಾದ ವ್ಯಾಸಂಗ, ಸಾಮಾಜಿಕ ಕಾಳಜಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ಇವರನ್ನು ಲೋಕಾಯುಕ್ತರನ್ನಾಗಿ ನೇಮಿಸಿತು. == ಕರ್ನಾಟಕದ ಲೋಕಾಯುಕ್ತರಾಗಿ == ಲೋಕಾಯುಕ್ತರಾದ ಇವರು ಭ್ರಷ್ಟಚಾರದ ವಿರುದ್ಧ ಬಹಿರಂಗವಾಗಿ ದನಿಯೆತ್ತಿದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ಆಸ್ಪತ್ರೆ, ಸರ್ಕಾರಿ, ಖಾಸಗಿ, ಅರೆಖಾಸಗಿ ಕಚೇರಿಗಳು, ಶಾಲೆಗಳು ಮೊದಲಾದ ಸ್ಥಳಗಳ ಭ್ರಷ್ಟಾಚಾರದ ವಿವಿಧ ರೂಪಗಳನ್ನು ಬಯಲಿಗೆಳೆದರು. ಅನೇಕ ಭ್ರಷ್ಟ ಅಧಿಕಾರಿಗಳ ಲೆಕ್ಕಕ್ಕೆ ಸಿಗದ ಆಸ್ತಿಪಾಸ್ತಿಗಳನ್ನು ಹೊರಕ್ಕೆ ತೆಗೆದರು. ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸೇವೆಯಿಂದ ಅಮಾನತುಗೊಳಿಸಲು ಶಿಫಾರಸು ಮಾಡಿದರು. ಬೆಂಗಳೂರಿನ ಸುತ್ತುಮುತ್ತ ಇರುವ ಐದು ನಗರ ಸಭೆಗಳಲ್ಲಿ ನಡೆದ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಬಯಲಿಗೆಳೆದರು. ಇವರ ಕಾರ್ಯವೈಖರಿಯನ್ನು ವಿರೋಧಿಸಿದವರೂ ಕೊನೆಗೆ ಇವರ ಕ್ಷಮೆ ಕೇಳುವಂತಾಯಿತು. ಇವರು ಭ್ರಷ್ಟಾಚಾರ ರಹಿತ ಶುದ್ಧ ಸಮಾಜ ನಿರ್ಮಾಣಕ್ಕಾಗಿ ಸಮಾಜದಲ್ಲಿ ಜಾಗೃತಿಯನ್ನುಂಟುಮಾಡುತ್ತಿದ್ದಾರೆ.(ಕೆ.ಎಸ್.ಎಮ್.) == ಬಾಹ್ಯ ಕೊಂಡಿಗಳು == ಕಾರ್ಯಾಂಗದಲ್ಲಿನ ‘ಲಂಚ ಸಾಮ್ರಾಜ್ಯ’ಕ್ಕೆ ಶಾಕ್ ನೀಡಿದ ಅಚಲ ವ್ಯಕ್ತಿತ್ವ;, 30, 2019, ಎನ್.ವೆಂಕಟಾಚಲ ಕರ್ನಾಟಕದ ಪ್ರಥಮ ಲೋಕಾಯುಕ್ತ ಅಲ್ಲ;ಪ್ರಜಾವಾಣಿ ವೆಬ್‌ ಡೆಸ್ಕ್;: 30 ಅಕ್ಟೋಬರ್ 2019, == ಉಲ್ಲೇಖಗಳು ==