ಮಹಾಭಾರತ ಮಹಾಕಾವ್ಯದಲ್ಲಿ ಏಕಲವ್ಯ ನಿಷಾದ ಕುಲ ಅಂದರೆ ಈಗಿನ ವಾಲ್ಮೀಕಿ ಅಥವಾ ಬೇಡ ಪಂಗಡದ ರಾಜಕುಮಾರ. ಇವನು ದ್ರೋಣಾಚಾರ್ಯರ ನಿರಾಕರಣೆಯ ಹೊರತಾಗಿಯೂ ಶಸ್ತ್ರಭ್ಯಾಸದಲ್ಲಿ, ಅರ್ಜುನನಷ್ಟೇ ಕೌಶಲ್ಯ ಹೊಂದಿದ್ದನು. == ದ್ರೋಣಾಚಾರ್ಯರ ನಿರಾಕರಣೆ ಮತ್ತು ಸ್ವಂತ ಕಲಿಕೆ == ಏಕಲವ್ಯನು ಬಿಲ್ವಿದ್ಯೆಯನ್ನು ಸಾಧಿಸಿಕೊಳ್ಳುವ ಹಂಬಲದಿಂದ ದ್ರೋಣಾಚಾರ್ಯರ ಬಳಿಗೆ ಬರುತ್ತಾನೆ. ಆದರೆ ತಮ್ಮ ಮೆಚ್ಚಿನ ಶಿಷ್ಯ ಅರ್ಜುನನನ್ನು ಜಗತ್ತಿನ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುವ ಪಣ ತೊಟ್ಟಿದ್ದ ದ್ರೋಣರು, ಕ್ಷತ್ರಿಯರಲ್ಲದವರಿಗೆ ಬಿಲ್ವಿದ್ಯೆ ಹೇಳಿಕೊಡಲು ಇಚ್ಛಿಸದೆ, ಏಕಲವ್ಯನನ್ನು ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸುತ್ತಾರೆ. ನಿರಾಶನಾಗದ ಏಕಲವ್ಯನು, ದಿನವೂ ದೂರದಲ್ಲಿ ನಿಂತು ದ್ರೋಣಾಚಾರ್ಯರು ಕೌರವರಿಗೆ, ಪಾಂಡವರಿಗೆ ಹೇಳಿಕೊಡುತ್ತಿದ್ದ ವಿದ್ಯೆಯನ್ನು ಮನನ ಮಾಡಿಕೊಂಡು, ಕಾಡಿಗೆ ಮರಳಿ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಅವರನ್ನೇ ತನ್ನ ಮಾನಸ ಗುರುವೆಂದು ನಂಬಿ ಬಿಲ್ವಿದ್ಯೆಯನ್ನು ಸ್ವತಃ ಸಾಧಿಸಿಕೊಳ್ಳುತ್ತಾನೆ. ನಂತರ ತನ್ನ ಇಚ್ಛಾಶಕ್ತಿಯ ಬಲದಿಂದಲೇ ಏಕಲವ್ಯನು ಅರ್ಜುನನ ಸಮಾನವಾಗಿ ಕೌಶಲ್ಯವನ್ನು ಹೊಂದುತ್ತಾನೆ. ಒಮ್ಮೆ ದ್ರೋಣಾಚಾರ್ಯರು ತಮ್ಮ ಪ್ರಿಯ ಶಿಷ್ಯ ಅರ್ಜುನ ನೊಂದಿಗೆ ಕಾಡಿನ ವೀಕ್ಷಣೆಗೆ ಬಂದಾಗ, ನಾಯಿಯೊಂದು ಬೊಗಳುತ್ತ ಬರುವುದರ ಅರಿವಾದಾಗ, ಶಬ್ದವೇದಿ ವಿದ್ಯೆಯಲ್ಲಿ ಪಾರಂಗತನಾಗಿದ್ದ ಅರ್ಜುನ ತನ್ನ ಬಾಣ ಪ್ರಯೋಗ ಮಾಡುವುದರೊಳಗೆ, ಆ ನಾಯಿ ಬೊಗಳುವುದು ನಿಂತು ಹೋಗುತ್ತದೆ. ಮುಂದೆ ಸಾಗಿದಾಗ ಯಾರೋ ಶಬ್ದವೇದಿ ವಿದ್ಯೆಯಲ್ಲಿ ಪ್ರವೀಣರಾದವರು ಅದರ ಬಾಯಿಗೆ ಬಾಣಗಳನ್ನು ತುಂಬಿರುತ್ತಾರೆ. ಇದರಿಂದ ದ್ರೋಣಾಚಾರ್ಯರು ಮತ್ತು ಅರ್ಜುನ ಚಕಿತರಾಗಿ, ಬಾಣ ಹೂಡಿದ ವ್ಯಕ್ತಿಯನ್ನು ಹುಡುಕಿಕೊಂಡು ಸಾಗಿದಾಗ ಏಕಲವ್ಯನನ್ನು ಸಂಧಿಸುತ್ತಾರೆ. ಏಕಲವ್ಯ ಅಭ್ಯಾಸದಲ್ಲಿ ನಿರತನಾದಾಗ ನಾಯಿಯೊಂದು ಬೊಗಳುತ್ತಿದ್ದು ತನ್ನ ಏಕಾಗ್ರತೆಗೆ ಭಂಗ ತಂದಾಗ ಅದರ ಕಡೆ ನೋಡದೆ ಬಾಣಗಳನ್ನು ಬಿಟ್ಟು ಅದನ್ನು ಸುಮ್ಮನಾಗಿಸುತ್ತಾನೆ. ಈ ನಾಯಿಯು ಓಡುವುದನ್ನು ನೋಡಿದ ಪಾಂಡವರು ಈ ಸಾಹಸ ವನ್ನು ಮಾಡಿದವರಾರೆಂದು ಆಶ್ಚರ್ಯ ಚಕಿತರಾಗುತ್ತಾರೆ. ಆಗ ಏಕಲವ್ಯನು ಆ ಸ್ಥಳಕ್ಕೆ ಹಾಜರಾಗಿ ತನ್ನನ್ನು ದ್ರೋಣಚಾರ್ಯರ ಶಿಷ್ಯ ಎಂದು ಪರಿಚಯಿಸಿಕೊಳ್ಳುತ್ತಾನೆ. == ಏಕಲವ್ಯನ ಗುರು ದಕ್ಷಿಣೆ == ಅರ್ಜುನನಿಗೆ ಶ್ರೇಷ್ಠ ಬಿಲ್ಲುಗಾರನಾಗಿ ತನ್ನ ಸ್ಥಾನ ಚ್ಯುತಿಯಾಗುವ ಚಿಂತೆಯಾಗುತ್ತದೆ. ಇದನ್ನು ಗಮಿನಿಸಿದ ದ್ರೋಣರು ರಾಜಕುಮಾರರ ಜೊತೆ ಕಾಡಿಗೆ ತೆರಳಿ ಏಕಲವ್ಯನ ನ್ನು ಸಂಧಿಸುತ್ತಾನೆ. ತನ್ನ ಗುರುವನ್ನು ಕಂಡ ಕೂಡಲೇ ಏಕಲವ್ಯನು ಆನಂದಿತನಾಗಿ ಗುರುಸೇವೆಗೆ ತೊಡಗುತ್ತಾನೆ. ತಮ್ಮ ನಿರಾಕರಣೆಯ ಹೊರತಾಗಿಯೂ ಶಿಷ್ಯತ್ವವನ್ನು ಹೇಳಿ ಕೊಂಡಿದ್ದರಿಂದ ಕುಪಿತರಾದ ದ್ರೋಣಾಚಾರ್ಯರು ಏಕಲವ್ಯನ ಧಾರ್ಷ್ಟ್ಯವನ್ನು ತೆಗಳುತ್ತಾರೆ. ಆಗ ಏಕಲವ್ಯನಿಂದ ಒಂದು ಗುರು ದಕ್ಷಿಣೆಯನ್ನು ಕೇಳುತ್ತಾರೆ. ಇದಕ್ಕೆ ಒಪ್ಪಿದ ಏಕಲವ್ಯನ ಬಲಗೈ ಹೆಬ್ಬೆರಳನ್ನು ಕೇಳುತ್ತಾರೆ. ತನ್ನ ಬಿಲ್ವಿದ್ಯೆಯ ಕೌಶಲ್ಯಕ್ಕೆ ಇದರಿಂದ ಹಾನಿಯಾಗುವುದೆಂದು ತಿಳಿದ ಹೊರತಾಗಿಯೂ ಸ್ವಲ್ಪವೂ ಯೋಚಿಸದೆ ಏಕಲವ್ಯನು ಇದನ್ನು ಪೂರೈಸುತ್ತಾನೆ. ಇದು ಗುರು ಭಕ್ತಿಯ ಅತಿ ಶ್ರೇಷ್ಠ ನಿದರ್ಶನವಾಗಿದೆ. ದ್ರೋಣಾ ಚಾರ್ಯರು ಈ ಸಂದರ್ಭದಲ್ಲಿ ಕೆಟ್ಟ ಗುರುವಿನಂತೆ ವರ್ತಿಸುತ್ತಾರೆ. ಅವರ ಸ್ವಾರ್ಥ ಮತ್ತು ಅಹಂಕಾರಗಳೂ ಇದರಲ್ಲಿ ಕಾಣಸಿಗುತ್ತವೆ. ನಂತರದ ದಿನಗಳಲ್ಲಿ ಏಕಲವ್ಯ ಮತ್ತೆ ಬಾಣ ಪ್ರಯೋಗಿಸುವುದನ್ನು ಕಲಿತು ಸವ್ಯಸಾಚಿ ಎನಿಸಿಕೊಂಡು, ದ್ರೋಣಾಚಾರ್ಯರ ಮುಖಭಂಗಕ್ಕೆ ಕಾರಣನಾಗಿ, ಕೌರವನ ಬಳಿ ಬಂದು ಪಾಂಡವರ ವಿರುದ್ದ ಯುದ್ದ ಮಾಡುತ್ತಾನೆ. == ಏಕಲವ್ಯನ ನಿಧನ == ಏಕಲವ್ಯ ಜರಾಸಂಧನ ಪರವಾಗಿ ಕೃಷ್ಣ ಮತ್ತು ಬಲರಾಮರ ವಿರುದ್ಧ ಹೋರಾಡಿ ಯಾದವ ಸೈನ್ಯದ ಮೂಲಕ ಹತನಾಗುತ್ತಾನೆ. ಒಟ್ಟಿನಲ್ಲಿ ಏಕಲವ್ಯನದು ದುರಂತ ನಾಯಕನ ಪಾತ್ರ. == ಆಧುನಿಕ ದೃಷ್ಟಿಕೋನ == ಏಕಲವ್ಯನ ಕಥೆಯನ್ನು ಆಧುನಿಕ ವಿಮರ್ಶಕರು 'ಜಾತೀಯತೆ'ಯ ನಿದರ್ಶನವೆಂದು ಟೀಕಿಸುತ್ತಾರೆ. ಆದರೆ ಇದನ್ನು ದ್ರೋಣಾಚಾರ್ಯರ ಸ್ವಾರ್ಥವೆಂದು ಪರಿಗಣಿಸಬಹುದು. ಇಲ್ಲವೆ ಗುರುಭಕ್ತಿಯನ್ನು ಸೂಚಿಸುವ ನಿದರ್ಶನವೆಂದು ತಿಳಿಯಬಹುದಾಗಿದೆ. ಈ ಬಗ್ಗೆ ಕುವೆಂಪುರವರು ಬರೆದಿರುವ 'ಬೆರಳ್ ಗೆ ಕೊರಳ್' ಮತ್ತು ಸಿದ್ದಲಿಂಗಯ್ಯನವರ 'ಏಕಲವ್ಯ' ನಾಟಕಗಳನ್ನು ಪರಿಶೀಲಿಸ ಬಹುದು. ಅಲ್ಲದೆ ಆತನು ಅನೇಕ ರಾಜಕುಮಾರನ್ನು ಬಂಧಿಸಿಟ್ಟು ಚಿತ್ರಹಿಂಸೆಕೊಡುತ್ತಿದ್ದ ಜರಾಸಂಧನ ಪರ ನಿಲ್ಲುತ್ತಾನೆ. ಪಾಂಡವರ ರಾಜ್ಯವನ್ನು ಷರತ್ತು ಪೂರೈಸಿದ ಮೇಲೂ, ಅವರಿಗೆ ಕೊಡದೆ ರಾಜ್ಯ ಅಪಹರಣ ಮಾಡಿದವನ ಕಡೆ ಸೇರಿಕೊಳ್ಳುತ್ತಾನೆ. ದ್ರೋಣರಿಗೆ ತಮ್ಮ ವಚನ ಉಳಿಸಿಕೊಳ್ಳುವದೇ ಮುಖ್ಯವಾಗಿತ್ತು. ಅರ್ಜುನನಿಗೆ ದ್ರೋಣರು ತನಗೆ ವಂಚಿಸಿ ಏಕಲವ್ಯನಿಗೆ ರಹಸ್ಯವಾಗಿ ಉತ್ತಮ ಧ್ನುರ್ವಿದ್ಯೆ ಕಲಿಸಿದರೇ ಎಂಬ ಅನುಮಾನ. ಅದನ್ನು ಪರಿಹರಿಸಲು ದ್ರೋಣರು ಈ ಕಠಿಣ ನಿರ್ಧಾರ ತೆಗೆದುಕೊಂಡರೇ? ಮಹಾಭಾರತದ ಕರ್ತೃ ವ್ಯಾಸಮಹರ್ಷಿಗಳು ತಮ್ಮ ಕೃತಿಯಲ್ಲಿ ಈ ಬಗೆಯ ಅನೇಕ ಧರ್ಮಸಮಕಟದ ಸನ್ನಿವೇಶವನ್ನು ಉದ್ದೇಶಪೂರ್ವಕ ಸೇರಿಸಿದ್ದಾರೆ. ಕೊಟ್ಟ ವಚನ ಉಳಿಸಿಕೊಂಡು ಸತ್ಯವಂತರಾಗಬೇಕೋ ಅಥವಾ ದಯೆತೋರಿ ಶಿಷ್ಯನೆದುರು ವಚನಭ್ರಷ್ಟರೆನಿಸಿಕೊಳ್ಳಬೇಕೋ? == ಕನ್ನಡ ಸಾಹಿತ್ಯದಲ್ಲಿ == ಏಕಲವ್ಯನ ಈ ಕಥೆ ಕನ್ನಡದ ಮೂವರು ಪ್ರಸಿದ್ಧ ಲೇಖಕರಿಗೆ ರೂಪಕಸಾಮಗ್ರಿಯನ್ನೊ ದಗಿಸಿದೆ. ಕೈಲಾಸಂ ಅವರು ಪರ್ಪಸ್ ಮತ್ತು ಫುಲ್ಫಿಲ್ಮೆಂಟ್ ಎಂಬ ಎರಡು ನಾಟಕಗಳನ್ನು ರಚಿಸಿದ್ದಾರೆ. ಕುವೆಂಪು ಅವರು ತಮ್ಮ ಬೆರಳ್ಗೆ ಕೊರಳ್ ಎಂಬ ನಾಟಕದಲ್ಲಿ ಬೆರಳನ್ನು ಬೇಡಿದ ದ್ರೋಣರು ಹೇಗೆ ಕರ್ಮಫಲವಾಗಿ ತಮ್ಮ ಕೊರಳನ್ನು ಅರ್ಪಿಸಿದರು ಎಂಬ ವಸ್ತುವನ್ನು ಬಹುಗಂಭೀರವಾಗಿ ಚಿತ್ರಿಸಿದ್ದಾರೆ. ಹಾಗೆಯೇ ಗೋವಿಂದ ಪೈಗಳು ಇದೇ ವಸ್ತುವನ್ನಾಧಾರವಾಗುಳ್ಳ ಹೆಬ್ಬೆರಳು ಎಂಬ ನಾಟಕವನ್ನು ರಚಿಸಿದ್ದಾರೆ. ದಿವಂಗತ ಕಾಶಿವಿಶ್ವನಾಥಶೆಟ್ಟಿ ಅವರೂ ಏಕಲವ್ಯ ಎಂಬ ನಾಟಕವನ್ನು ರಚಿಸಿದ್ದಾರೆ. ಸಿದ್ಧಲಿಂಗಯ್ಯನವರು ಏಕಲವ್ಯ ಎಂಬ ನಾಟಕವನ್ನು ರಚಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==