ಐರಾವತ ಜೀವ ಜಗತ್ತಿನ ಪ್ರ ಪ್ರಥಮ ಶ್ವೇತವರ್ಣದ ಆನೆ. ಇದು ದೇವಲೋಕದ ದೇವೇಂದ್ರನ ವಾಹನ ಎಂದು ನಂಬಲಾಗಿದೆ. ಬೃಹತ್ತಾದ ಈ ಆನೆ ಇರಾವತಿಯ ಮಗನೆಂದು ಹೇಳಲಾಗಿದೆ. == ಪ್ರಸ್ತಾವನೆ == ಐರಾವತ ಜೀವ ಜಗತ್ತಿನ ಪ್ರಪ್ರಥಮ ಬಿಳಿ ಆನೆಯೆಂದೂ, ಅಷ್ಟ ದಿಗ್ಗಜಗಳಲ್ಲಿ ಒಂದೆಂದೂ, ಪೂರ್ವವಲಯವನ್ನು ರಕ್ಷಿಸುವಂತಹದೆಂದು ಹೇಳಲಾಗಿದೆ. ಪ್ರಾಚೀನ ಕಾಲದ ಆನೆಗಳಿಗೆ ರೆಕ್ಕೆಗಳಿದ್ದುವು. ಅವು ಆಕಾಶದಲ್ಲಿ ಸಂಚರಿಸುತ್ತಿದ್ದುವು. ಒಮ್ಮೆ ಅವು ಋಷಿಯ ಗುರುಕುಲಕ್ಕೆ ತೊಂದರೆಯನ್ನು ಉಂಟು ಮಾಡಿದಾಗ ಋಷಿ ಅವುಗಳಿಗೆ ಶಾಪ ಕೊಟ್ಟ ಪ್ರಯುಕ್ತ ಅವು ನೆಲದ ಮೇಲೆ ಉಳಿಯ ಬೇಕಾಯಿತು. ಬಿಳಿ ಆನೆಗಳಿಗೆ ಮೋಡಗಳನ್ನು ಉಂಟು ಮಾಡುವ ಮಾಂತ್ರಿಕ ಶಕ್ತಿಯಿದೆ . ಐರಾವತ ದೇವಲೋಕದ ದೇವೇಂದ್ರನ ವಾಹನ ಎಂದು ನಂಬಲಾಗಿದೆ. ಐರಾವತ ಎಂದರೆ ನೀರಿನಿಂದ ಹೊರಬಂದದ್ದು ಎಂಬ ಅರ್ಥವಿದೆ. ಬೃಹತ್ತಾದ ಈ ಆನೆ ಇರಾವತಿಯ ಮಗನೆಂದು ಹೇಳಲಾಗಿದೆ. == ಪುರಾಣ ಐತಿಹ್ಯ == ೧.ಮಹಾಭಾರತದ ಪ್ರಕಾರ- ಐರಾವತ ಹುಟ್ಟಿದ್ದು ಕ್ಷೀರಸಾಗರ ಮಥನದಿಂದ. ದೇವಾಸುರರು ಕ್ಷೀರಸಾಗರವನ್ನು ಕಡೆಯುವಾಗ ಇತರ ಅಮೂಲ್ಯ ವಸ್ತುಗಳ ಜೊತೆಗೆ ಐರಾವತವೂ ನೀರಿನಿಂದ ಮೇಲೆ ಉದಿಸಿ ಬಂದಿತೆಂದು ಆದಿ ಪರ್ವದಲ್ಲಿ ಹೇಳಲಾಗಿದೆ. ಐರಾವತ ಬಹು ದೀರ್ಘಕಾಲ ಕ್ಷೀರಾಬ್ಧಿಯಲ್ಲಿ ವಾಸ ಮಾಡಿದುದರಿಂದ ಬಿಳಿಯ ಬಣ್ಣದ ಮೈಕಾಂತಿ ಪಡೆದು ಕೊಂಡಿತು. ಐರಾವತವನ್ನು ಬ್ರಹ್ಮ ಆನೆಗಳಿಗೆಲ್ಲ ಅಧಿಪತಿಯಾಗಿ, ಗಜರಾಜನಾಗಿ ನೇಮಿಸಿದ. ೨.ಮತಂಗಲೀಲಾದ ಪ್ರಕಾರ- ಸೂರ್ಯ ಪಕ್ಷಿಯಾದ ಗರುಡ ಅಸ್ತಿತ್ವಕ್ಕೆ ಬಂದ ನಂತರ ಬ್ರಹ್ಮ ತನ್ನ ಕೈಯಲ್ಲಿ ಹಿಡಿದ ಮೊಟ್ಟೆಯಚಿಪ್ಪಿನ ಎರಡು ಭಾಗಗಳ ಮೇಲೆ ಪವಿತ್ರವಾದ ಏಳು ರಾಗಗಳನ್ನು ಹಾಡಿದನು. ಆಗ ಆತನ ಬಲಗೈ ಚಿಪ್ಪಿನಿಂದ ಉದ್ಭವವಾದ ಮೊದಲ ಆನೆ ಐರಾವತ. ಆನಂತರ ಬ್ರಹ್ಮನ ಎಡಗೈ ಚಿಪ್ಪಿನಿಂದ ಹದಿನಾರು ಆನೆಗಳು ಉದ್ಭವಿಸಿ , ಜಗತ್ತನ್ನು ಅಷ್ಟ ದಿಕ್ಕುಗಳಾಗಿ ಮಾಡಿಕೊಂಡೂ ಅವುಗಳನ್ನು ಕಾವಲು ಕಾಯುತ್ತಾ ವಿಶ್ವದ ಆಧಾರ ಸ್ತಂಭಗಳಾದುವು. == ಸಮಾರೋಪ == ಐರಾವತ ಇಂದ್ರನ ಆನೆಯಾಗಿದ್ದರೂ ಭೂಲೋಕದ ಜನರು ಅಕ್ಕರೆಯಿಂದ ಕಾಣಲು ಕಾರಣಗಳಿವೆ. ಆನೆಪೂಜೆ ಭಾರತೀಯ ಪುರಾಣಗಳಲ್ಲಿ ಅಸ್ತಿತ್ವದಲ್ಲಿದೆ. ಮೊಟ್ಟ ಮೊದಲು ಐರಾವತವನ್ನು ಭೂಮಿಗೆ ತರಿಸಿದವನು ಅರ್ಜುನ. ಗಾಂಧಾರಿ ಕುಂತಿದೇವಿಯನ್ನು ಕರೆಯದೆ ಮಣ್ಣಿನ ಆನೆಪೂಜೆ ಮಾಡಿದಾಗ ಕುಂತಿದೇವಿ ಸಹಜವಾಗಿ ಬೇಸರಗೊಳ್ಳುತ್ತಾಳೆ. ಆಗ ಅರ್ಜುನ ತಾಯಿಯ ಇಚ್ಛೆ ಪೂರೈಸಲು ಐರಾವತವನ್ನು ಭೂಮಿಗೆ ತರಿಸುತ್ತಾನೆ. ಯು.ಆರ್.ಅನಂತಮೂರ್ತಿ ಅವರ 'ಕಲ್ಲಿನಕೊಳಲು' ಕಥೆಯಲ್ಲಿ ಅಜ್ಜಯ್ಯ ಐರಾವತವು ಭೂಮಿಗೆ ಬಂದು ತಾನು ಕುಳಿತಿರುವ ಬಂಡೆಕಲ್ಲಾಗಿದೆಯೆಂದು ಹೇಳುತ್ತಾನೆ. ದೇವಲೋಕದ ವಸ್ತುವನ್ನೇ ಜನಸಾಮಾನ್ಯರು ಮುಟ್ಟುವ ಪ್ರಕ್ರಿಯೆ ವಿಸ್ಮಯವನ್ನು ಉಂಟುಮಾಡುತ್ತದೆ. == ಸಹಾಯಕೃತಿ == ಕನ್ನಡ ಜಾನಪದ ವಿಶ್ವಕೋಶ ಸಂಪುಟ-೧ -ಸಂ:ಡಾ.ಚಂದ್ರಶೇಖರಕಂಬಾರ == ಧ್ವಜ ಪತಾಕೆಯಲ್ಲಿ ಐರಾವತ == ="200px" == ಉಲ್ಲೇಖ ==