ಒಣಗಣ್ಣು ಕಣ್ಣುಗುಡ್ಡೆ ಮುಂಭಾಗವನ್ನು ಯಾವಾಗಲೂ ತೇವದಲ್ಲಿಡುವ ತೆಳುವಾದ ಮೇಲ್ಪೊರೆ ಈ ಬೇನೆಯಲ್ಲಿ ಒಣಗಿದಂತಿರುತ್ತದೆ (ಕ್ಸಿರಾಫ್ತಾಲ್ಮಿಯ). == ಕಾರಣಗಳು == ಇದಕ್ಕೆ ಮುಖ್ಯಕಾರಣ ಮೈಯಲ್ಲಿ ಎ ಜೀವಸತ್ವದ ಕೊರತೆ. ಇದರಿಂದ ಮೊಟ್ಟ ಮೊದಲಾಗಿ ಮೈಯಲ್ಲಿ ಎಲ್ಲೆಲ್ಲೂ ಮೇಲ್ಪೊರೆಗಳಲ್ಲಿ ಆಗುವಂತೆ, ಚರ್ಮದಲ್ಲೂ ಕಣ್ಣಗುಡ್ಡೆಯಲ್ಲೂ ಬದಲಾವಣೆಗಳಾಗುವುವು. ಕಣ್ಣುಗುಡ್ಡೆ ಒಣಗುವ ಮುನ್ನ ಮಬ್ಬು, ನಸುಕಿನ ಬೆಳಕು, ಇರುಳುಗಳಲ್ಲಿ ಕಣ್ಣಿನ ನೋಟ ಮಸಕಾಗುತ್ತ, ಕೊನೆಗೆ ಇರುಳು ಗುರುಡು (ನೈಟ್ ಬ್ಲೈಂಡ್ನೆಸ್) ಆಗುತ್ತದೆ. ಇದು ಹೆಚ್ಚಿದಂತೆಲ್ಲ, ಕಣ್ಣಿನ ಕೊಡುಪೊರೆಯೂ (ಕಂಜಂಕ್ಟೈವ) ಅದರೊಂದಿಗೆ ಕಣ್ಣುಗುಡ್ಡೆಯ ಮುಂದಿರುವ ಪಾರದರ್ಶಕ ಪಟಲ (ಕಾರ್ನಿಯ) ಕೂಡ ಹೊಳಪು ಕಳೆದುಕೊಂಡು ಒಣಗುತ್ತದೆ. ಬಹುಮಟ್ಟಿಗೆ ಕಣ್ಣೀರು ಸುರಿತ ಇಂಗುವುದರಿಂದ ಹೀಗಾಗುವುದು. ಆ ಮೇಲೆ ಬಿಳಿಯ ಕಣ್ಣುಗುಡ್ಡೆಯ ಮೇಲೆ ಪಕ್ಕಗಳಲ್ಲಿ ಸಾಬೂನು ನೊರೆ ಅಂಟಿಸಿದ ಹಾಗೆ ಹುರುಪೆ ಏಳುತ್ತದೆ. ಇದಕ್ಕೆ ಬೀಟಟನ ಮಟ್ಟೆಗಳು ಎಂದು ಹೆಸರಿದೆ. ಇದರೊಂದಿಗೆ ಸೋಂಕೂ ಹತ್ತಿದರೆ, ಕೋಡುಪೊರೆ ಹುಣ್ಣಾಗಿ ಮೆತ್ತಗಾಗಿ ಕೊಳೆತು ಕರಗಿ ಕಣ್ಣುಗುಡ್ಡೆಯೊಳಗಿನ ವಸ್ತುಗಳೆಲ್ಲ ಹೊರಬೀಳುತ್ತವೆ. ಹೀಗೆ ತೀರ ಹಾಳಾದ ಸ್ಧಿತಿಗೆ ‘ಕೆರಾಟೊಮಲೇಸಿಯ’ ಎಂದು ಹೆಸರು. ರೋಗ ಕೈಮೀರುವ ಮುಂಚೆ ಸಾಕಷ್ಟು ಪ್ರಮಾಣಗಳಲ್ಲಿ ಎ ಜೀವಸತ್ವವನ್ನು ಕೊಡುವುದೇ ಇದರ ಪರಿಣಾಮಕರ ಚಿಕಿತ್ಸೆ. ಸುಮಾರು 25-30 ವರ್ಷಗಳಷ್ಟು ಹಿಂದೆ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ ಜನರ ಶೈಕ್ಷಣಿಕ ಮಟ್ಟ ಹೆಚ್ಚಿದ ಪರಿಣಾಮವಾಗಿ ಮತ್ತು ಅದಕ್ಕಿಂತ ಮುಖ್ಯವಾಗಿ ಭಾರತ ಸರ್ಕಾರದ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಯಶಸ್ಸಿನ ದ್ಯೋತಕವಾಗಿ ಈಗ ಬಹಳ ಕಡಿಮೆಯಾಗಿದೆ ಎಂಬುದು ಸಮಾಧಾನ ತರುವ ವಿಷಯ. ಇತ್ತೀಚಿನ ಆಧುನಿಕ ಕಾಲದಲ್ಲಿ ಒಣಗಿದ ಕಣ್ಣು ಇನ್ನೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ನಾವು ‘ಡ್ರೈ ಐ ಸಿಂಡ್ರೋಮ್” ಎಂದು ಹೇಳುತ್ತೇವೆ. ಕಣ್ಣು ಉರಿಯುತ್ತದೆ, ಚುಚ್ಚಿದ ಹಾಗೆ ಆಗುತ್ತದೆ ಎಂಬ ಲಕ್ಷಣಗಳೊಂದಿಗೆ ಆರಂಭವಾಗುತ್ತದೆ. ಈ ಕಾಯಿಲೆ ಕಣ್ಣಿನ ಹೊರಗಿನ ಕಪ್ಪಾಗಿ ಕಾಣುವ ಪಾರದರ್ಶಕ ಪಟಲ ಕಾರ್ನಿಯಾದಲ್ಲಿ ರಕ್ತನಾಳಗಳಿಲ್ಲ. ಹಾಗಾಗಿ ಅದರ ಆಹಾರ ಪುರೈಕೆ-ಎಂದರೆ ಕಣ್ಣೀರಿನಿಂದ. ಈ ಕಣ್ಣೀರಿನ ಅಂಶ ವಿವಿಧ ಕಾರಣಗಳಿಂದ ಕಡಿಮೆ ಆದಾಗ ಕಣ್ಣು ಒಣಗಲಾರಂಭಿಸುತ್ತದೆ. ಆಗ ಕಾರ್ನಿಯಾಕ್ಕೆ ಆಹಾರ ಪುರೈಕೆ ಕಡಿಮೆ ಆಗಿ ಒಣಗಿದ ಕಣ್ಣಿನ ಲಕ್ಷಣಗಳು ಅದರಲ್ಲಿ ಕಾಣಿಸಲಾರಂಭವಾಗುತ್ತದೆ. ಹತ್ತಿರ ವಸ್ತುಗಳನ್ನು ದಿಟ್ಟಿಸಿ ಕೆಲಸ ಮಾಡುವ ಅದರಲ್ಲೂ ಕಂಪ್ಯುಟರ್ನೊಂದಿಗೆ ಬಹಳ ಕಾಲ ಕೆಲಸ ಮಾಡುವವರಲ್ಲಿ ಇದು ಹೆಚ್ಚು. ಈ ಶುಷ್ಕ ಕಣ್ಣಿನ ಕಾರಣಗಳು ಸರಿಯಾಗಿ ಗೊತ್ತಾದಾಗ ಚಿಕಿತ್ಸೆ ಸುಲಭ ಗೊತ್ತಾಗದಿದ್ದಾಗ ಕಣ್ಣೀರನ್ನು ಹೆಚ್ಚಿಸುವ ಔಷಧಿಗಳನ್ನು ಬಹಳ ಕಾಲದವರೆಗೆ ಕೊಡಬೇಕು. ಇದರ ಚಿಕಿತ್ಸೆ ತುಂಬಾ ತ್ರ್ರಾಸದಾಯಕ ಮತ್ತು ಪರಿಣಾಮಕಾರಿಯಲ್ಲ. == ಉಲ್ಲೇಖಗಳು ==