ಒಡಿಶಾ - ಭಾರತದ ಆಗ್ನೇಯ ತೀರದಲ್ಲಿರುವ ರಾಜ್ಯ. ಈ ರಾಜ್ಯದ ರಾಜಧಾನಿ ಭುವನೇಶ್ವರ. ಮಹಾಭಾರತದ ಕಾಲದಲ್ಲಿ "ಕಳಿಂಗ" ಎಂದು ಪ್ರಖ್ಯಾತವಾದ ನಾಡು ಇಂದಿನ ಒಡಿಶಾ. ಒಡಿಶಾ ಬ್ರಿಟೀಷ್ ಇಂಡಿಯಾದ ಒಂದು ಪ್ರಾಂತ್ಯವಾಗಿ ೧ ಎಪ್ರಿಲ್ ೧೯೩೬ರಲ್ಲಿ ರಚಿಸಲಾಯಿತು ಮತ್ತು ಮುಖ್ಯವಾಗಿ ಒಡಿಯಾ ಮಾತಾಡುವ ಜನರಿಂದ ಕೂಡಿತ್ತು. ಆದ್ದರಿಂದ ೧ ಎಪ್ರಿಲ್ ಅನ್ನು ಉತ್ಕಲ ದಿವಸವನ್ನಾಗಿ ಆಚರಿಸಲಾಗುತ್ತದೆ. ಒಡಿಶಾ ವಿಸ್ತೀರ್ಣದಲ್ಲಿ ಭಾರತದ ಒಂಬತ್ತನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ. ಒಡಿಯಾ ರಾಜ್ಯದ ಆಡಳಿತ ಭಾಷೆಯಾಗಿದೆ ಹಾಗು ಅತಿ ಹೆಚ್ಚು ಉಪಯೋಗಿಸಲ್ಪಡುವ ಭಾಷೆಯಾಗಿದೆ. ಒಡಿಶಾ ತುಲನಾತ್ಮಕವಾಗಿ ಸಮತಟ್ಟಾದ ಕರಾವಳಿಯನ್ನು (ಸುಮಾರು ೪೮೦ ಕಿ.ಮೀ.) ಹೊಂದಿದೆ ಪಾರಾದೀಪ್ ನಲ್ಲಿ ಪ್ರಮುಖ ಬಂದರನ್ನು ಹೊಂದಿದೆ. ಕಡಿಮೆಯಗಲದ ಸಮತಟ್ಟಾದ ಕರಾವಳಿಯು ಹಾಗು ಮಹಾನದಿಯ ಮುಖಜ ಭೂಮಿಯು ಬಹುಪಾಲು ಜನಸಂಖ್ಯೆಗೆ ಆಶ್ರಯವಾಗಿದೆ. ಒಡಿಶಾದ ಒಳನಾಡು ಗುಡ್ಡಗಾಡುಗಳಿಂದ ಕೂಡಿದ್ದು ನಿಬಿಡವಲ್ಲದಾಗಿದೆ. ರಾಜ್ಯದ ಅತಿ ಎತ್ತರದ ಸ್ಥಳ ದೇವಮಾಲಿಯಾಗಿದೆ. ಜಗತ್ತಿನ ಅತಿ ಉದ್ದವಾದ ಅಣೆಕಟ್ಟುಗಳಲ್ಲಿ ಒಂದಾದ ಹಿರಾಕುಡ್ ಅಣೆಕಟ್ಟು ಒಡಿಶಾದಲ್ಲಿದೆ. ಒಡಿಶಾ ತೀವ್ರವಾದ ಚಂಡಮಾರುತಗಳಿಗೀಡಾಗಿದೆ. ನೋಡಿ == ಹೆಸರು == ೨೦೧೧ ನವಂಬರ್ ೪ ರಂದು ಹಿಂದೆ ಇದ್ದ ಒಡಿಶಾ ಎಂಬ ಹೆಸರನ್ನು ಒಡಿಶಾ ಎಂದು ಬದಲಾಯಿಸಲಾಯಿತು.ಒಡಿಶಾ ಎಂಬ ಹಸರು ಸಂಸ್ಕತದ ಒಡ್ರ ದೇಶ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. == ಮೇಲ್ಮೈಲಕ್ಷಣ == ಒಡಿಶಾ ರಾಜ್ಯವು 170 ಡಿಗ್ರಿ 49' ಉತ್ತರ ಅಕ್ಷಾಂಶದಿಂದ 220 ಡಿಗ್ರಿ 34' ಉತ್ತರ ಅಕ್ಷಾಂಶದವರೆಗೂ 810 ಡಿಗ್ರಿ 27' ಪುರ್ವ ರೇಖಾಂಶದಿಂದ 870 ಡಿಗ್ರಿ 29' ಪುರ್ವ ರೇಖಾಂಶದವರೆಗೂ ಹಬ್ಬಿದೆ. ಭಾರತದ ಪುರ್ವ ತೀರದಲ್ಲಿ ಹಬ್ಬಿರುವ ಈ ರಾಜ್ಯದ ಈಶಾನ್ಯದಲ್ಲಿ ಪಶ್ಚಿಮ ಬಂಗಾಲ, ಉತ್ತರದಲ್ಲಿ ಬಿಹಾರ, ಪಶ್ಚಿಮದಲ್ಲಿ ಮಧ್ಯಪ್ರದೇಶ, ದಕ್ಷಿಣದಲ್ಲಿ ಆಂಧ್ರಪ್ರದೇಶ ಮತ್ತು ಪೂರ್ವದಲ್ಲಿ ಬಂಗಾಲ ಕೊಲ್ಲಿ ಇವೆ. ವಿಸ್ತೀರ್ಣ 1,55,707 ಚ.ಕಿಮೀ ಜನಸಂಖ್ಯೆ 4,19,47,358 (2011). ರಾಜಧಾನಿ ಭುವನೇಶ್ವರ. ಭೂರಚನೆಯ ದೃಷ್ಟಿಯಿಂದ ಒರಿಸ್ಸವನ್ನು ಕರಾವಳಿ ಮೈದಾನ, ಮಧ್ಯದ ಬೆಟ್ಟಪ್ರದೇಶ, ಏರುನೆಲ, ನದೀಕಣಿವೆ, ತಗ್ಗಿನ ಪ್ರಸ್ಥಭೂಮಿ-ಎಂದು ವಿಂಗಡಿಸಬಹುದು. ಮಹಾನದಿ, ವೈತರಣಿ, ಬ್ರಾಹ್ಮಣಿ, ಸ್ವರ್ಣರೇಖಾ, ಋಷಿಕುಲ್ಯ ಮತ್ತು ಬೂರಾ ಬಲಾಂಗ್-ಎಂಬ ಆರು ಮುಖ್ಯ ನದಿಗಳು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ಈ ರಾಜ್ಯದ ಕರಾವಳಿಯ ಮೈದಾನಗಳು ರಚಿತವಾಗಿವೆ. ಇವನ್ನು ಆರು ನದೀ ಮುಖಜಭೂಮಿಗಳ ಪ್ರದೇಶ ಎನ್ನಬಹುದು. ಆದರೂ ಅನೇಕ ನದಿಗಳು ನಿಜಾರ್ಥದಲ್ಲಿ ನದೀಮುಖಜಭೂಮಿಯ ವಿಶಿಷ್ಟತೆಯನ್ನು ಬೆಳೆಸುವುದರಲ್ಲಿ ನಿಷ್ಪ್ರಯೋಜಕವಾಗಿವೆ. ಸಮುದ್ರದಿಂದ ನುಗ್ಗಿಬರುವ ಪ್ರವಾಹಗಳು ಇದಕ್ಕೆ ಕಾರಣ. ಒರಿಸ್ಸದ ಮುಕ್ಕಾಲು ಭಾಗ ಪರ್ವತ ಪ್ರದೇಶ. ಇದು ಪಶ್ಚಿಮದಿಂದ ಪುರ್ವಕ್ಕೆ ಇಳಿಜಾರಾಗಿ ನಡೆದು ಅನಂತರ ಇದ್ದಕ್ಕಿದ್ದಂತೆ ಉತ್ಕರ್ಷಗೊಂಡು ಪುರ್ವಘಟ್ಟಗಳಲ್ಲಿ ಲೀನವಾಗುತ್ತದೆ. ಜಲಪ್ರವಾಹ ವೈವಿಧ್ಯ ಮೇಲ್ಮೈಯ ನಿರ್ದಿಷ್ಟ ವಿನ್ಯಾಸಕ್ಕೆ ಅನುಗುಣವಾಗಿ ಅದರ ಜಲೋತ್ಸಾರಣ (ಡ್ರೇನೇಜ್) ಏರ್ಪಟ್ಟಿದೆ. 300, 600 ಮತ್ತು 900 ಮೀಗಳಲ್ಲಿ ಒರಿಸ್ಸದ ಪುರ್ವಘಟ್ಟಗಳು ಮೂರು ಉತ್ಕರ್ಷತೆಗಳನ್ನು ಕಂಡಿವೆಯೆಂದು ನಂಬಲಾಗಿದೆ. ಇವು ಜಲೋತ್ಸಾರಣದ ಪ್ರಾಚೀನ ರೇಖೆಗಳ ಕುರುಹುಗಳನ್ನೆಲ್ಲ ಅಳಿಸಿಬಿಟ್ಟಿವೆಯೆನ್ನಬಹುದಾದರೂ ಈ ಬಗ್ಗೆ ವೈಜ್ಞಾನಿಕವಾಗಿ ಇನ್ನೂ ನಿರ್ಣಯವಾಗಿಲ್ಲ. ಪರ್ವತ ಪ್ರದೇಶವನ್ನು ಹೀಗೆ ವಿಭಾಗಿಸಬಹುದು: ಸಿಮುಲಿಯ ಮತ್ತು ಮೇಘಾಸನಿ ಪರ್ವತಗಳು, ಮಂಕರ್ನದ ಮಲಯಗಿರಿ ಮತ್ತು ಗಂಧಮಾರ್ದನ ಪರ್ವತಗಳು, ಬ್ರಾಹ್ಮಣಿ ಮತ್ತು ಮಹಾನದಿ ಜಲಾನಯನ ಭೂಮಿ, ಮಹಾನದಿ, ಋಷಿಕುಲ್ಯ ಮತ್ತು ವಂಶಧಾರಾ ನದಿಗಳ ಪ್ರದೇಶ, ಪೊಟ್ಟಂಗಿ ಮತ್ತು ಚಂದ್ರಗಿರಿ ಪರ್ವತ ಸಾಲುಗಳು. ಎತ್ತರದ ಪ್ರದೇಶಗಳು ಪ್ರಸ್ಥಭೂಮಿಗಿಂತ ಕಡಿಮೆ ಎತ್ತರದವು. ಅವು 148-296 ಮೀ ವರೆಗೆ ಎತ್ತರವಾಗಿವೆ. ನದೀಕೊಳ್ಳಗಳಿಗೆ ಇವು ಆಶ್ರಯ ನೀಡಿವೆ. ಇವೆಲ್ಲವೂ ಪುರ್ವಘಟ್ಟಗಳ ಪಶ್ಚಿಮದಲ್ಲಿ ವಿಸ್ತಾರವಾಗಿ ಬೆಳೆದಿವೆ. ಬ್ರಾಹ್ಮಣಿ, ಮಹಾನದಿ ಮತ್ತು ವಂಶಧಾರಾ ನದೀಕಣಿವೆಗಳು ಮುಖ್ಯವಾದುವು. ವೈತರಣಿಯ ತಲೆಯೆಡೆಯ ಜಲಾನಯನ ಪ್ರದೇಶಗಳಾದ ಪಾಂಪೋಷ್-ಕಿಯೋಝಾರ್-ಪಲ್ಲಹರ ಪ್ರಸ್ಥಭೂಮಿಗಳೂ ಸಾಬರಿ ನದೀ ಪಾತ್ರದ ತಲೆಯೆಡೆಯ ಜಲಾನಯನ ಭೂಮಿಯಾದ ನವರಂಗಪುರ-ಜಯಪುರ ಪ್ರಸ್ಥಭೂಮಿಯೂ 296-592 ಮೀ ಗಳವರೆಗೆ ಪ್ರಸ್ಥಭೂಮಿಗಳ ಪೈಕಿ ಮುಖ್ಯವಾದುವು. ಒರಿಸ್ಸವನ್ನು 1 ತೀರದ ಮೈದಾನಗಳು, 2 ನದೀಕಣಿವೆ ಮತ್ತು ಪ್ರವಾಹಗಳ ಬಯಲು, 3 ಇಳಿಜಾರಾದ ಎತ್ತರದ ಪ್ರದೇಶಗಳು, 4 ಪ್ರಸ್ಥಭೂಮಿಗಳು ಮತ್ತು 5 ಪರ್ವತಗಳು ಎಂದು ವಿಭಾಗಿಸಬಹುದು. ತೀರದ ಮೈದಾನಗಳನ್ನು ಉತ್ತರ, ಮಧ್ಯ ಮತ್ತು ದಕ್ಷಿಣ ತೀರಗಳ ಬಯಲುಗಳೆಂದು ವಿಂಗಡಿಸಬಹುದಾಗಿದೆ. ನದೀ ಕಣಿವೆಗಳೂ ಪ್ರವಾಹದ ಬಂiÀÄಲುಗಳೂ ಮುಖ್ಯನದಿಗಳ 76 ರಿಂದ 152 ಮೀಗಳವರೆಗಿನ ಮಟ್ಟರೇಖೆಗಳ ಎತ್ತರದಲ್ಲಿ ಕಂಡುಬರುತ್ತವೆ. 152 ರಿಂದ 304 ಮೀಗಳ ಮಧ್ಯದಲ್ಲಿ ಇಳಿಜಾರಾದ ಎತ್ತರದ ಪ್ರದೇಶಗಳು ಕಂಡುಬರುತ್ತವೆ. ರಾಯ್ರಂಗ್ಪುರ್ ಮತ್ತು ವೈತರಣಿ, ಬ್ರಾಹ್ಮಣಿ ಮತ್ತು ಮಹಾನದಿ ಕೊಳ್ಳಗಳು ಇಳಿಜಾರದ ಎತ್ತರದ ಪ್ರದೇಶಗಳು. ಪ್ರಸ್ಥಭೂಮಿಗಳಲ್ಲಿ ಕಿಯೋಂಝಾರ್-ಪಂಪೋಷ್ ಪ್ರಸ್ಥಭೂಮಿ, ನವರಂಗ್ಪುರ-ಜಯಪುರ ಪ್ರಸ್ಥಭೂಮಿ ಮತ್ತು ವಂಶಧಾರಾ ಮೇಲ್ದಂಡೆಯ ಪ್ರಸ್ಥಭೂಮಿಗಳು ಮುಖ್ಯವಾದವು. ಒರಿಸ್ಸದ ಬೆಟ್ಟಗಳು ಪುರ್ವಘಟ್ಟಗಳಿಗೆ ಸೇರಿವೆ. ಮಹಾನದಿ ಮತ್ತು ಬ್ರಾಹ್ಮಣಿ ಮುಂತಾದ ನದಿಗಳು ಈ ಬೆಟ್ಟಗಳನ್ನು ಛೇದಿಸುತ್ತವೆ. ಈಶಾನ್ಯ ದಿಕ್ಕಿನಲ್ಲಿನ ಸಿಮುಲಿಪಲ್ ಮತ್ತು ಮೇಘಾಸನಿ ಎರಡು ಮುಖ್ಯ ಪರ್ವತ ಶಿಖರಗಳು. ಇವುಗಳ ಎತ್ತರ 1,165 ಮೀಟರುಗಳು. ವೈತರಣಿ-ಬ್ರಾಹ್ಮಣಿ ನದೀಪ್ರವಾಹಗಳ ತೆಕ್ಕೆನೆಲದಲ್ಲಿ ಪಲ್ಲಹರದ ಮಲಯ ಗಿರಿ ಅತ್ಯಂತ ಎತ್ತರ ಶಿಖರ. ಇದರ ಎತ್ತರ 1,186 ಮೀ ಕೋರಾಪುಟ್ ಮತ್ತು ಕಾಲಾಹಂದಿ ಜಿಲ್ಲೆಗಳಲ್ಲಿನ ಪರ್ವತಗಳು ತುಂಬ ಎತ್ತರವಾದವು. ಆಂಧ್ರದ ಕರಾವಳಿಯ ಬಂiÀÄಲಿನಿಂದ ಇವು ಇದ್ದಕ್ಕಿದ್ದಂತೆ ಮೇಲೆದ್ದಿವೆ. ಪೊಟ್ಟಂಗಿಯ ದೇವಮಾಲಿ ಬೆಟ್ಟಗಳಲ್ಲೂ ಎತ್ತರ ಶಿಖರಗಳಿವೆ (1667 ಮೀ == ಭೂವಿಜ್ಞಾನ == ತೀರದ ಮೈದಾನಗಳು ಮುಖ್ಯವಾಗಿ ಪ್ಲಿಸ್ಟೊಸೀನ್ ಮತ್ತು ಇತ್ತೀಚಿನ ಸಂಚಯನಗಳಿಂದಾಗಿವೆ. ಆಲಿಗೋಸೀನ್ ಮತ್ತು ಕೆಳ ಮಯೊಸೀನ್ ಕಾಲದ ಅವಶೇಷಗಳು ಪುರಿ ಜಿಲ್ಲೆಯಲ್ಲಿ ಕಂಡುಬರುತ್ತವೆ. ಮುಖ್ಯವಾಗಿ ಮೇಲ್ಭಾಗದ ಗೊಂಡ್ವಾನ ಶಿಲಾಸ್ತೋಮವನ್ನೊಳಗೊಂಡ ಜುರಾಸಿಕ್ ಶಿಲೆಗಳು ಮಹಾನದಿ ಮುಖಜಭೂಮಿಯ ಅಗ್ರದ ಉತ್ತರದಲ್ಲಿ ಕಂಡುಬರುತ್ತವೆ. ಅಂತ್ಯ ಕಾರ್ಬಾನಿಫರಸ್ (ಗೊಂಡ್ವಾನ ಶಿಲಾಸ್ತೋಮದ ಅಡಿಭಾಗಗಳು) ಸಂಚಯನಗಳು ಮಹಾನದಿ ಮತ್ತು ಬ್ರಾಹ್ಮಣಿ ನದಿಗಳ ಮಧ್ಯಂತರ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವೇ ತಾಲ್ಚೆರ್ ಶಿಲಾಪದರಗಳು. ಇವುಗಳಲ್ಲಿ ಕಲ್ಲಿದ್ದಲಿನ ಭಾರಿಯ ಸಂಚಯನಗಳನ್ನು ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಪಶ್ಚಿಮ ಒರಿಸ್ಸದ ಸಾಬರಿ ಮೇಲ್ಕಣಿವೆಯಲ್ಲಿ ಪ್ರಿ-ಕೇಂಬ್ರಿಯನ್ ಕಾಲದ ಕಡಪಶಿಲೆಗಳು ಕಂಡುಬರುತ್ತವೆ. ಧಾರ್ವಾಡೀಯ ಬಂಡೆಗಳು ಉತ್ತರ ಒರಿಸ್ಸದಲ್ಲಿ, ಮಯೂರ್ಭಂಜ್, ಕಿಯೋಂಝಾರ್ ಮತ್ತು ಸುಂದರಘರ್ ಜಿಲ್ಲೆಗಳಲ್ಲಿವೆ. ಇಲ್ಲಿನ ಕಬ್ಬಿಣದ ಅದಿರಿನ ನಿಕ್ಷೇಪಗಳು ಜಂಷೆಡ್ಪುರ, ದುರ್ಗಾಪುರ ಮತ್ತು ರೂರ್ಕೆಲಗಳಲ್ಲಿನ ಉಕ್ಕಿನ ಕಾರ್ಖಾನೆಗಳಲ್ಲಿ ಅಧಿಕ ಬೇಡಿಕೆಗಳನ್ನು ಪುರೈಸುತ್ತಿವೆ. ಇವು ರಫ್ತೂ ಆಗುತ್ತಿವೆ. ಫುಲ್ ಬಾನಿ ಮತ್ತು ಉತ್ತರ ಗಂಜಾಂ ಜಿಲ್ಲೆಗಳಲ್ಲಿ ಖೊಂಡಲೈಟ್ ಸಿಗುತ್ತದೆ. ಕೋರಾಪುಟ್ ಜಿಲ್ಲೆಯ ಪುರ್ವಘಟ್ಟಗಳ ಎತ್ತರದ ಪ್ರದೇಶ ಇವುಗಳಿಂದ ಉಂಟಾಗಿದೆ. ಇದೇ ಪ್ರದೇಶದ ಬಂಡೆಗಲ್ಲುಗಳ ಕೋಡುಭಾಗಗಳು ಮುಖ್ಯವಾಗಿ ಚಾರ್ನೊಕೈಟ್ ಶಿಲಾರೀತಿಗಳಿಂದ ಸಂಭವಿಸಿವೆ. ರಾಜ್ಯದ ಹೆಚ್ಚು ಭಾಗ ಗ್ರಾನೈಟ್ ಮತ್ತು ನೈಸ್ ಶಿಲೆಗಳಿಂದಾದದ್ದು. ಇಡೀ ಶ್ರೇಣಿಯಲ್ಲೇ ಇವು ಅತ್ಯಂತ ಪುರಾತನ ಶಿಲೆಗಳು. == ಮಣ್ಣಿನ ಸ್ವರೂಪ == ಒರಿಸ್ಸದಲ್ಲಿ ಸುಮಾರು ಹನ್ನೆರಡು ಬಗೆಯ ಮಣ್ಣುಗಳಿವೆ. ಸಮುದ್ರತೀರಕ್ಕೆ ಹೊಂದಿಕೊಂಡಿರುವಂಥ ಕಿರಿವಲಯದ ಮರಳು ಮಣ್ಣುಗಳಿವೆ. ಹೊಸ ಮತ್ತು ಹಳೆಯ ಮೆಕ್ಕಲುಮಣ್ಣುಗಳೆರಡೂ ಇಲ್ಲುಂಟು. ತೀರದ ಬಳಿ ನೂತನ ಮೆಕ್ಕಲು ಕಂಡುಬಂದರೆ, ಪುರಾತನ ಮೆಕ್ಕಲು ಒಳನಾಡಿನಲ್ಲಿ ಕಂಡುಬರುತ್ತದೆ. ಬ್ರಾಹ್ಮಣಿಯ ಅಗ್ರಭಾಗದ ಕಣಿವೆಯಲ್ಲೂ ಮಹಾನದಿ ಮತ್ತು ಬ್ರಾಹ್ಮಣಿಗಳ ತೆಕ್ಕನೆಲದಲ್ಲೂ ಭಾವನಿಪಟ್ಟದ ಎತ್ತರ ಪ್ರದೇಶಗಳಲ್ಲೂ ಪ್ಲೇನೋಸಾಲ್ ಕಂಡುಬರುತ್ತದೆ. ಮಯೂರ್ಭಂಜ್, ಸುಂದರಘರ ಮತ್ತು ಕಿಯೋಂಝಾರ್ ಜಿಲ್ಲೆಗಳನ್ನೊಳಗೊಂಡ ಉತ್ತರ ಒರಿಸ್ಸದಲ್ಲಿ ಮುಖ್ಯವಾಗಿ ಕೆಂಪು ಮಣ್ಣಿದೆ. ಸಂಬಾಲ್ಪುರದ ಪೂರ್ವದಲ್ಲಿ, ಮಹಾನದಿಯ ದಂಡೆಯುದ್ಧಕ್ಕೂ ಅದರ ಪ್ರವಾಹದ ದಿಕ್ಕಿನಲ್ಲಿ ಹಬ್ಬಿದ ಹಳದಿ ಮಣ್ಣಿನ ಪುಟ್ಟ ತೇಪೆಯೊಂದು ಕಾಣಬರುತ್ತದೆ. ಮುರಕಲ್ಲು ಮರಳಿನಲ್ಲಿ ಉನ್ನತ ಅವನತ ಮಟ್ಟದವೆಂದು ಎರಡು ವಿಧ. ಪುರಿ, ಕಟಕ್ ಮತ್ತು ಬಾಲಸೂರ್ ಜಿಲ್ಲೆಗಳಲ್ಲಿನ ಮೆಕ್ಕಲು ಮೈದಾನಗಳ ಪಶ್ಚಿಮದ ಅಂಚಿನಲ್ಲಿ ಕೆಳಮಟ್ಟದ ಮುರಕಲ್ಲು ಕಾಣುತ್ತದೆ, ಗಂಜಾಮಿನ ಪೂರ್ವಘಟ್ಟಗಳಲ್ಲಿ ಉನ್ನತ ಮಟ್ಟದ ಮುರ ಕಲ್ಲುಗಳು ಸಾಮಾನ್ಯವಾಗಿವೆ. ಕೆಂಪು ಮತ್ತು ಕಪ್ಪುಮಣ್ಣು ಪದ್ಮಪುರ್ ಮತ್ತು ಸಂಬಲ್ಪುರ್ ಜಿಲ್ಲೆಗಳಲ್ಲಿ ಝಾರ್ ಸುಗಡ ಪ್ರದೇಶದಲ್ಲಿ ಕಂಡುಬರುತ್ತದೆ. ಪೂರ್ವಘಟ್ಟಗಳ ಪಶ್ಚಿಮದ ಇಳಿಜಾರಿನಲ್ಲಿನ ಕೋರಾಪುಟ್ ಜಿಲ್ಲೆಯ ರಾಯಗಡ ಮತ್ತು ನವರಂಗಪುರ ಸಬ್ಡಿವಿಜನ್ಗಳಲ್ಲಿ ಬಾಕ್ಸೈಟ್ ಕಂಡುಬರುತ್ತದೆ. ಕಂದುಬಣ್ಣದ ಕಾಡು ಮರಳು ಫುಲ್ಬಾನಿ ಜಿಲ್ಲೆಯ ಬಲಿಗುಡ ಪ್ರದೇಶದಲ್ಲಿನ ವನಪ್ರದೇಶಗಳಲ್ಲಿದೆ. ಕಪ್ಪು ಮಣ್ಣು ಬೌಧ್-ಅತ್ಮಲ್ಲಿಕ್ ಪ್ರದೇಶದ ಮಹಾನದಿ ಕಣಿವೆಯಲ್ಲೂ ಬೋಲಾಂಗಿರ್ ಪ್ರದೇಶದಲ್ಲೂ ಖರಿಯಾರ್ನಲ್ಲಿ ತೆಲ್ ನದಿಯ ತಲೆಯೆಡೆಯ ಜಲಾನಯನ ಪ್ರದೇಶದಲ್ಲೂ ಉತ್ತರ ನವರಂಗಪುರದಲ್ಲೂ ಕಂಡುಬರುತ್ತದೆ. == ಜಲೋತ್ಸಾರಣ ವಿನ್ಯಾಸ == ಮಹಾನದಿ, ಬ್ರಾಹ್ಮಣಿ, ವೈತರಣಿ, ಸುವರ್ಣ ರೇಖಾ, ಬೂರಾಬಲಾಂಗ್, ವಂಶಧಾರಾ, ನಾಗವಲ್ಲಿ, ಸಲೇರು ಮತ್ತು ಸಾಬರಿ-ಇವು ಒರಿಸ್ಸದ ಮುಖ್ಯ ನದಿಗಳು. ಎಲ್ಲ ನದಿಗಳೂ ಬಂಗಾಳ ಕೊಲ್ಲಿ ಸೇರುತ್ತವೆ. ಮಹಾನದಿಯನ್ನುಳಿದು ಎಲ್ಲ ನದಿಗಳೂ ಮಾನ್ಸೂನ್ ಕಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ. ಉಳಿದ ಕಾಲದಲ್ಲಿ ಬತ್ತಿಹೋಗುತ್ತವೆ. ಆಗ ನಾವೆಗಳ ಸಂಚಾರ ಅಸಾಧ್ಯ. ಮಾನ್ಸೂನ್ ಕಾಲದಲ್ಲಿ ನದಿಗಳಲ್ಲಿನ ನೀರು ಹೆಚ್ಚು ವೇಗವಾಗಿ ಹರಿಯುವುದರಿಂದ ಕಚ್ಚಾ ದೋಣಿಗಳು ಅವುಗಳಲ್ಲಿ ಹೋಗಲಾಗುವುದಿಲ್ಲ. ಆದ್ದರಿಂದ ಸಾರಿಗೆಯ ದೃಷ್ಟಿಯಿಂದ ಈ ನದಿಗಳು ಅಷ್ಟು ಉಪಯುಕ್ತವಲ್ಲ. ಮಹಾನದಿಯಲ್ಲಿ ಮಾತ್ರ ಸಂಬಲ್ಪುರದವರೆಗೆ ನಾವೆಯ ಸಂಚಾರ ಸಾಧ್ಯ. == ಹವಾಮಾನ == ರಾಜ್ಯವು ನಾಲ್ಕು ಹವಾಮಾನ ಋತುಗಳನ್ನು ಅನುಭವಿಸುತ್ತದೆ: ಚಳಿಗಾಲ (ಜನವರಿಯಿಂದ ಫೆಬ್ರವರಿ), ಪೂರ್ವ ಮಾನ್ಸೂನ್ ಋತು (ಮಾರ್ಚ್ ನಿಂದ ಮೇ), ನೈಋತ್ಯ ಮಾನ್ಸೂನ್ ಋತು (ಜೂನ್ ನಿಂದ ಸೆಪ್ಟೆಂಬರ್) ಮತ್ತು ಈಶಾನ್ಯ ಮಾನ್ಸೂನ್ ಋತು (ಅಕ್ಟೋಬರ್-ಡಿಸೆಂಬರ್).ಸ್ಥಳೀಯವಾಗಿ ವರ್ಷವನ್ನು ಆರು ಸಾಂಪ್ರದಾಯಿಕ ಋತುಗಳಾಗಿ ವಿಂಗಡಿಸಲಾಗಿದೆ : ಗ್ರಿಷ್ಮಾ (ಬೇಸಿಗೆ), ಬರ್ಶಾ (ಮಳೆಗಾಲ), ಶರತ (ಶರತ್ಕಾಲ), ಹೇಮಂತ (ಇಬ್ಬನಿ), ಶೀತಾ (ಚಳಿಗಾಲ) ಮತ್ತು ಬಸಂತ (ವಸಂತ). ರಾಜ್ಯದ ಮಳೆಯ ಪ್ರಮಾಣದ ತಖ್ತೆ ಈ ರೀತಿ ಇದೆ. == ಬೆಳೆ == ಒರಿಸ್ಸ ಪ್ರಧಾನವಾಗಿ ಏಕ ಬೆಳೆಯ ಪ್ರದೇಶ. ಬತ್ತ ಮುಖ್ಯ ಆಹಾರ ಬೆಳೆ. ಬತ್ತದ ಬಯಲುಗಳು ಮುಖ್ಯವಾಗಿ ನದೀಕಣಿವೆಗಳು ಮತ್ತು ತೀರದ ಮೈದಾನಗಳಲ್ಲಿ-ಅಲ್ಲಿ ಅನುಕೂಲ ಪರಿಸ್ಥಿತಿಗಳು ಇರುವುದರಿಂದ-ಹರಡಿವೆ. 1961-62ರಲ್ಲಿ ಆಹಾರ ಧಾನ್ಯ ಬೆಳೆಯುತ್ತಿದ್ದ 1.048 ಕೋಟಿ ಎಕರೆಗಳ ಪೈಕಿ ಸು. 1.007 ಕೋಟಿ ಎಕರೆಗಳಲ್ಲಿ ಬತ್ತದ ಬೆಳೆ ಇತ್ತು. ಬತ್ತಕ್ಕೆ ಎರಡನೆಯದಾಗಿರುವ ಮುಖ್ಯ ಆಹಾರ ಬೆಳೆ ರಾಗಿ (1.8 ಲಕ್ಷ ಎಕರೆ). ದ್ವಿದಳ ಧಾನ್ಯಗಳಲ್ಲಿ ತೊಗರಿ, ಕಡಲೆ ಮುಖ್ಯ. ಎಳ್ಳು ಬೆಳೆಯುವ ನೆಲದ ವಿಸ್ತಾರ 2.3 ಲಕ್ಷ ಎಕರೆ. ಇವನ್ನು ನೀರಾವರಿ ಪ್ರದೇಶಗಳಲ್ಲೂ ನದೀಕಣಿವೆಗಳಲ್ಲೂ ಬೆಳೆಸುತ್ತಾರೆ. ನಾರಿನ ಬೆಳೆಗಳಲ್ಲಿ ಸಣಬು ಸು. 1.1 ಲಕ್ಷ ಎಕರೆಗಳನ್ನು ಆವರಿಸಿಕೊಂಡಿದೆ. ಇದು ಮುಖ್ಯವಾಗಿ ಮಹಾನದಿ ಮುಖಜಭೂಮಿ ಮತ್ತು ಬಾಲಸೂರ್ ತೀರದ ಮೈದಾನಗಳಿಗೆ ಸೀಮಿತವಾಗಿದೆ. ಮುಖಜಭೂಮಿಯ ತರಿ ಪ್ರದೇಶದಲ್ಲೂ ಹಿರಾಕುಡ್ ಜಲವಸತಿ ಪ್ರದೇಶದಲ್ಲೂ (6.6 ಲಕ್ಷ ಎಕರೆ) ಕಬ್ಬನ್ನು ಬೆಳೆಸುತ್ತಾರೆ. ಪ್ರತಿ ವರ್ಷವೂ ಒರಿಸ್ಸ ಸು. 37ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೆಳೆಯುತ್ತದೆ. ಈ ವಿಚಾರದಲ್ಲಿ ಇದು ಸ್ವಯಂಪುರ್ಣ ರಾಜ್ಯ. ಒಮ್ಮೊಮ್ಮೆ ಹೆಚ್ಚುವರಿ ರಾಜ್ಯವೂ ಹೌದು. ಆದರೆ ಬತ್ತದ ಬೆಳೆ ಪ್ರವಾಹವನ್ನೇ ಅವಲಂಬಿಸಿರುವುದರಿಂದ ಅನಾವೃಷ್ಟಿಯ ಕಾಲದಲ್ಲಿ ಅಥವಾ ಅತಿ ಪ್ರವಾಹದಿಂದ ಅಲ್ಲಿ ಅಕ್ಕಿಯ ಕೊರತೆ ಏರ್ಪಡುವುದೂ ಉಂಟು. ಸಂಸ್ಥಾನದ ಅರಣ್ಯ ಸಂಪನ್ಮೂಲಗಳು ಅಗತ್ಯಕ್ಕಿಂತ ಹೆಚ್ಚಾಗಿವೆ. ಆದರೆ ಅವುಗಳ ನ್ಯೂನ ಹಂಚಿಕೆ ಒಂದು ದೊಡ್ಡ ಸಮಸ್ಯೆ. ಅಸಮರ್ಪಕ ರಸ್ತೆ ವ್ಯವಸ್ಥೆ, ವಿಪರೀತ ಏರುತಗ್ಗುಗಳಿಗೆ ಒಳಗಾಗುವ ಪ್ರವಾಹ, ಸರದಿಯ ಬೆಳೆಯ ಕೃಷಿಪದ್ಧತಿ ಅನುಸರಿಸುವ ಗಿರಿಜನ ಸಮೂಹ-ಈ ನಾನಾ ಕಾರಣಗಳಿಂದಾಗಿ ಅರಣ್ಯಪದಾರ್ಥಗಳ ಸಮರ್ಪಕ ಬಳಕೆ ಸಾಧ್ಯವಾಗಿಲ್ಲ. 1960-61ರಲ್ಲಿದ್ದ 66,800 ಚ.ಕಿಮೀ. ಕಾಡುಗಳಲ್ಲಿ 22,400 ಚ.ಕಿಮೀ. ಕಾದಿರಿಸಿದ ಕಾಡು; 16,800 ಚ.ಕಿಮೀ ರಕ್ಷಿತ ಅರಣ್ಯ. ಒರಿಸ್ಸದ ಕಾಡುಗಳನ್ನು ಉತ್ತರೋಷ್ಣವಲಯದ ಅರ್ಧ ನಿತ್ಯಹಸುರು ಕಾಡು ಮತ್ತು ಉತ್ತರೋಷ್ಣ ವಲಯದ ತೇವಪುರಿತ ವಾಯುಗುಣದ ಎಲೆ ಉದುರುವ ಮರಗಳ ಕಾಡು (ಸಾಲ, ಬಿದಿರು ಮುಂತಾದವು) ಎಂದು ವಿಂಗಡಿಸಬಹುದು. ಮಿಶ್ರಿತ ಅರಣ್ಯಗಳೂ ಅಲ್ಲುಂಟು. ಉತ್ತರೋಷ್ಣವಲಯದ ಒಣ ವಾಯುಗುಣದ ಎಲೆ ಉದುರುವ ಕಾಡೂ ಉಷ್ಣವಲಯದ ಹುಲ್ಲುಗಾವಲೂ ಭಾರತದ ಕಾಡುಗಳೂ ಇವೆ. ಉತ್ತರ ಒರಿಸ್ಸದಲ್ಲಿ ಉತ್ತರ ಉಷ್ಣವಲಯದ ಅರ್ಧ ನಿತ್ಯಹಸುರು ಮತ್ತು ಸಾಲುಮರಗಳ ಕಾಡುಗಳೂ ಮಹಾನದಿ ಮತ್ತು ಬ್ರಾಹ್ಮಣಿ ನದಿಗಳ ನಡುನೆಲ ಮತ್ತು ಋಷಿಕುಲ್ಯದ ಮೇಲ್ಭಾಗದ ಪ್ರದೇಶದಲ್ಲಿ ಬಿದಿರು ಕಾಡುಗಳೂ ಇವೆ. ಉತ್ತರೋಷ್ಣವಲಯದ ಒಣ ವಾಯುಗುಣದ ಎಲೆ ಉದುರುವ ಮರಗಳು ಪಶ್ಚಿಮ ಒರಿಸ್ಸದ ಬೊಲಾಂಗಿರ್ ಮತ್ತು ಸಂಬಲ್ಪುರ್ ಜಿಲ್ಲೆಗಳಲ್ಲಿವೆ. ಭರತದ ಕಾಡುಗಳು ಮಹಾನದಿ ಮುಖಜಭೂಮಿ ಮತ್ತು ಚಿಲ್ಕಾ ಸರೋವರದ ದ್ವೀಪಗಳಿಗೆ ಸೀಮಿತವಾಗಿವೆ. ಅರಣ್ಯದ ಉತ್ಪನ್ನಗಳ ಒಟ್ಟು ವಾರ್ಷಿಕ ಮೌಲ್ಯ 286 ಲಕ್ಷ ರೂ. ಇದರಲ್ಲಿ ಮರದ ದಿಮ್ಮಿಗಳ ಮೌಲ್ಯ 175 ಲಕ್ಷ ರೂ. ಬಿದಿರು, ಸೌದೆ ಮತ್ತು ಕಾಂಡು ಎಲೆಗಳು ಇತರ ಮುಖ್ಯ ವಸ್ತುಗಳು.ಮರಗೆಲಸ, ಮರ ಕೊಯ್ತ, ಬೀಡಿ, ಕಾಗದ, ಅರಗು, ಚರ್ಮ ಹದಗಾರಿಕೆ, ಕತ್ತಾಳೆ ನಾರು ಮುಂತಾದ ಅರಣ್ಯಮೂಲದ ಕೈಗಾರಿಕೆಗಳಿವೆ. == ನೀರಾವರಿ == 1960-61ರಲ್ಲಿದ್ದ ಒಟ್ಟು ಬೇಸಾಯದ ಭೂಮಿ 117.1 ಲಕ್ಷ ಎಕರೆಗಳ ಪೈಕಿ 25.7 ಲಕ್ಷ ಎಕರೆಗಳಲ್ಲಿ (ಒಟ್ಟು ಬೇಸಾಯದ ನೆಲದ ಶೇ. 21.95). ನೀರಾವರಿ ಅನುಕೂಲವಿತ್ತು. ಹಿರಾಕುಡ್ ಯೋಜನೆ (ವಾರ್ಷಿಕ ನೀರಾವರಿ ಸಾಮಥರ್ಯ್‌ 2.2 ಲಕ್ಷ ಎಕರೆ), ಋಷಿಕುಲ್ಯ ಕಾಲುವೆ ಅಚ್ಚುಕಟ್ಟು (1.40 ಲಕ್ಷ ಎಕರೆ), ಸಾಲಂದಿ ಯೋಜನೆ (0.3 ಲಕ್ಷ ಎಕರೆ) ಇವು ರಾಜ್ಯದ ಮುಖ್ಯ ನೀರಾವರಿ ಯೋಜನೆಗಳು. == ಸಾರಿಗೆ ವ್ಯವಸ್ಥೆ == ಒರಿಸ್ಸದಲ್ಲಿ 31,300 ಕಿಮೀ ರಸ್ತೆಗಳಿವೆ. ಇದರಲ್ಲಿ ಕೇವಲ 8,200 ಕಿಮೀ ರಸ್ತೆಗಳು 1,55,800 ಚ.ಕಿಮೀ. ಪ್ರದೇಶದಲ್ಲಿದೆ. ಇವು ಏನೇನೂ ಸಾಲವು. ಕಚ್ಚಾ ರಸ್ತೆಗಳು ಮಳೆಗಾಲದಲ್ಲಿ ಗಾಡಿಗಳ ಸಂಚಾರಕ್ಕೆ ಪ್ರಯೋಜನಕ್ಕೆ ಬರುವುದಿಲ್ಲ. ಇವಲ್ಲದೆ 1,400 ಕಿಮೀನಷ್ಟು ರಾಷ್ಟ್ರೀಯ ಹೆದ್ದಾರಿ ಇದೆ. ಇದರಲ್ಲಿ 1,200 ಕಿಮೀ ಜಲ್ಲಿ ರಸ್ತೆ. ಒರಿಸ್ಸದ ರಸ್ತೆಗಳ ಮುಖ್ಯ ಸಮಸ್ಯೆ ಎಂದರೆ ಕರಾವಳಿಯ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗಳ ಅಧಿಕ ವೆಚ್ಚ. ವಾರ್ಷಿಕ ನೆರೆಹಾವಳಿಯೇ ಇದಕ್ಕೆ ಮುಖ್ಯ ಕಾರಣ. ಅನೇಕ ನದಿ ಹಾಗೂ ಕಾಲುವೆಗಳಿಗೆ ಸೇತುವೆಗಳನ್ನು ನಿರ್ಮಿಸಬೇಕಾಗಿದೆ. ಪರ್ವತ ಹಾಗೂ ಬೆಟ್ಟಪ್ರದೇಶಗಳಲ್ಲೂ ರಸ್ತೆಗಳ ಅಭಿವೃದ್ದಿಯಾಗಿಲ್ಲ. ಒರಿಸ್ಸದ ಕರಾವಳಿಯಲ್ಲಿರುವ ಹೌರಾ-ಮದ್ರಾಸ್ ರೈಲುಮಾರ್ಗ ಮುಖ್ಯವಾದದ್ದು. ವರ್ಷದ ಹೆಚ್ಚು ದಿನಗಳಲ್ಲಿ ನದಿಗಳಲ್ಲಿ ನಾವೆಯ ಸಂಚಾರ ಅಸಾಧ್ಯ. ತೀರದ ಬಳಿ ಕಡಲು ಆಳವಾಗಿಲ್ಲದೆ, ಮೇಲೆತ್ತಲ್ಪಟ್ಟದ್ದಾಗಿರುವುದರಿಂದ ಸ್ವಾಭಾವಿಕ ಬಂದರಿಗೆ ವಿಶಾಲ ಸ್ಥಳವಾವುದೂ ಇಲ್ಲ. ಮಹಾನದಿಯ ಅಳಿವೆಯಲ್ಲಿನ ಪರದೀಪ್ ಬಂದರನ್ನು ಸುಕಂದ ಗಣಿಗಳಿಂದ ಜಪಾನಿಗೆ ಕಬ್ಬಿಣದ ಅದುರನ್ನು ರವಾನಿಸಲು ಅನುಕೂಲವಾಗುವಂತೆ ಒಂದು ಮುಖ್ಯ ಬಂದರನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಮಹಾನದೀ ಮುಖಜಭೂಮಿಯ ಅಗ್ರದಲ್ಲಿರುವ ಕಟಕ್ ಬಳಿಯ ಜೋಬ್ರಾ ಅಣೆಕಟ್ಟೆಯ ಮೂಲದಿಂದ ಹೊರಡುವ ಕೆಲವು ಕಾಲುವೆಗಳಲ್ಲಿ ನಾವೆ ಸಂಚಾರವಿದೆ. ಚಾಂದ್ಬಾಲಿ ಮತ್ತು ಗೋಪಾಲ್ಪುರ ಇವುಗಳ ಮೇಲಣ ಸಣ್ಣ ಬಂದರುಗಳು. ಸಮುದ್ರದಲ್ಲಿ ಪ್ರಯಾಣ ಮಾಡುವ ಹಡುಗುಗಳು ತೀರಕ್ಕೆ ಬರುವುದಿಲ್ಲ. ಭರ್ತಿ ಮತ್ತು ಖಾಲಿಮಾಡುವ ಕಾರ್ಯ ಚಟುವಟಿಕೆಗಳನ್ನು ಸಣ್ಣ ದೋಣಿಗಳಿಂದ ಕೊಲ್ಲಿಯ ಮಧ್ಯದಲ್ಲಿ ನಡೆಸಲಾಗುತ್ತದೆ. == ಜನಸಂಖ್ಯೆ == 1901ರಲ್ಲಿ ಒರಿಸ್ಸದ ಜನಸಂಖ್ಯೆ 62 ಲಕ್ಷವಿತ್ತು. 1961ರಲ್ಲಿ ಇದು 1.75 ಕೋಟಿಗೆ ಏರಿತು. ಆದರೆ ಇದು ರಾಜ್ಯದಾದ್ಯಂತ ಏಕರೀತಿಯಾಗಿ ಏರಿಲ್ಲ. ಇತ್ತೀಚಿನ ದಶಕಗಳಲ್ಲಿ ಒಳನಾಡಿನ ಪ್ರದೇಶವಾದ ಪಶ್ಚಿಮ ಒರಿಸ್ಸದಲ್ಲಿನ ಸಂಪನ್ಮೂಲಗಳು ವಿವಿಧ ರೀತಿಗಳಲ್ಲಿ ಉಪಯೋಗಿಸಲ್ಪಟ್ಟಿರುವುದರಿಂದ ಜನಸಂಖ್ಯೆ ಅತ್ಯಂತ ಹೆಚ್ಚಳವಾಗಿ ಬೆಳೆದಿದೆ. ಕೋರಾಪುಟ್ ಮತ್ತು ಕಾಲಾಹಂಡಿ ಜಿಲ್ಲೆಗಳ ದಂಡಕಾರಣ್ಯಪ್ರದೇಶ ಮತ್ತು ವೈತರಣಿಯ ತಲೆಭಾಗದಲ್ಲಿರುವ ಕಿಯೋಂಝಾರ್ ಮತ್ತು ಪನ್ಪೋಷ್ ಪ್ರದೇಶಗಳಲ್ಲೂ ಶೇ. 100 ರಷ್ಟು ಜನಸಂಖ್ಯೆಯ ಹೆಚ್ಚಳವನ್ನು ಕಾಣಬಹುದು. ಬಾರೀಪದಾ ಮತ್ತು ಬೊಲಾಂಗಿರ್ಗಳ ಎತ್ತರದ ಪ್ರದೇಶಗಳಲ್ಲೂ ಸಾಕಷ್ಟು ಹೆಚ್ಚಾಗಿದೆ. ಮತ್ತೊಂದು ದೃಷ್ಟಿಯಿಂದ ನೋಡಿದರೆ ಅನೇಕ ವರ್ಷಗಳಿಂದ ಅಭಿವೃದ್ದಿಯಾಗುತ್ತ ಬಂದಿರುವ ತೀರ ಪ್ರದೇಶಗಳ ಜನಸಂಖ್ಯೆ ಇಳಿದಿದೆ. ಬಾಲಾಸೂರ್, ಭದ್ರಕ್, ಕಟಕ್-ಕೇಂದ್ರಾಪಾರ, ಭುವನೇಶ್ವರ ಮತ್ತು ಬೆರ್ಹಾಂಪರ್ ತೀರಪ್ರದೇಶಗಳು ಇಂಥವು. ಅತ್ಯಂತ ಹೆಚ್ಚಿನ ಜನಸಾಂದ್ರತೆ ಇರುವುದು ಮಹಾನದಿಯ ಮುಖಜಭೂಮಿಯಲ್ಲಿ. ಇಲ್ಲಿನ ಕೆಲವು ಕಡೆಗಳಲ್ಲಿ ಚ.ಕಿಮೀಗೆ 1,000 ಜನರಿದ್ದಾರೆ. ಹೆಚ್ಚಿನ ಜನಕ್ಕೆ ವ್ಯವಸಾಯವೇ ಆಧಾರ. ಇಂಥವರು ಒಟ್ಟು ಜನಸಂಖ್ಯೆಯ ಶೇ. 79.3 ಇದ್ದಾರೆ. 1881ರಲ್ಲಿ ಶೇ. 61.6 ಮಂದಿ ಬೇಸಾಯವನ್ನವಲಂಬಿಸಿದ್ದರು. 1961ರಲ್ಲಿ ಇವರ ಪ್ರಮಾಣ ಶೇ. 79.3ಕ್ಕೆ ಏರಿತ್ತು. == ಕೈಗಾರಿಕೆಗಳು ಮತ್ತು ಖನಿಜಗಳು == ಎರಡನೆಯ ಪಂಚವಾರ್ಷಿಕ ಯೋಜನೆಯ ಕೊನೆಯಲ್ಲಿ ಮಾತ್ರವೇ ಒರಿಸ್ಸದ ಕೈಗಾರಿಕಾ ಯುಗದ ಆವಿರ್ಭಾವವಾಯಿತು. ಜವಳಿ ಗಿರಣಿಗಳು, ಸಕ್ಕರೆ ಕಾರ್ಖಾನೆಗಳು, ಕಾಗದ ಮತ್ತು ಕಾಗದದ ರಟ್ಟಿನ ಕಾರ್ಖಾನೆಗಳು ಮತ್ತು ಸತುಲೇಪಿತ ಕೊಳವೆ (ಗ್ಯಾಲ್ವನೈಸ್ಡ್‌ ಪೈಪ್) ಕಾರ್ಖಾನೆಗಳು ಸ್ಥಾಪಿತವಾದುವು. ರೂರ್ಕೆಲದಲ್ಲಿ ಉಕ್ಕಿನ ಕಾರ್ಖಾನೆ, ಸುಣ್ಣಕಲ್ಲು, ಅಲ್ಯೂಮಿನಿಯಂ ಮತ್ತು ವಿದ್ಯುತ್ ರಾಸಾಯನಿಕ ಕಾರ್ಖಾನೆಗಳಿವೆ. ಹಿರಾಕುಡ್ ಮತ್ತು ಮುಚಕುಂಡ್ ಯೋಜನೆಗಳಿಂದ ಈ ಕೈಗಾರಿಕೆಗಳಿಗೆ ವಿದ್ಯುತ್ತನ್ನು ಒದಗಿಸಲಾಗುತ್ತದೆ. ತಾಲ್ಚೆರ್ನಲ್ಲಿ ಕೆಳಮಟ್ಟದ ಕಲ್ಲಿದ್ದಲನ್ನು ಉಪಯೋಗಿಸಿಕೊಂಡು, ಬೃಹತ್ ಪ್ರಮಾಣದ ಉಷ್ಣ-ವಿದ್ಯುತ್ ಶಕ್ತಿಯನ್ನು ತಯಾರಿಸಲು ನಿಯೋಜಿಸಲಾಗಿದೆ. ಶೇ. 60ಕ್ಕಿಂತ ಹೆಚ್ಚು ಪ್ರಮಾಣದ ಲೋಹ ಹೊಂದಿರುವ ಉತ್ತಮ ಮಟ್ಟದ ಕಬ್ಬಿಣದ ಅದಿರನ್ನು ಉತ್ತರ ಒರಿಸ್ಸ ಹೆಚ್ಚಿನ ಪ್ರಮಾಣದಲ್ಲಿ ಜಮ್ಷೆಡ್ಪುರ, ದುರ್ಗಾಪುರ ಮತ್ತು ರೂರ್ಕೆಲ ಉಕ್ಕಿನ ಕಾರ್ಖಾನೆಗಳಿಗೆ ಒದಗಿಸುತ್ತದೆ. ಸುಂದರ್ಘರ್ ಪ್ರದೇಶದಲ್ಲಿ ಸುಣ್ಣಕಲ್ಲು ಹೇರಳವಾಗಿ ದೊರೆಯುತ್ತದೆ. ಇದನ್ನು ಉಕ್ಕಿನ ಕಾರ್ಖಾನೆಗಳಲ್ಲಿ ಕಬ್ಬಿಣ ಕರಗಿಸುವ ಮೂಸೆಗಳಲ್ಲಿ ಸ್ರಾವಕವಸ್ತುವನ್ನಾಗಿ (ಫ್ಲಕ್ಸ್‌) ಉಪಯೋಗಿಸುತ್ತಾರೆ. ಪಶ್ಚಿಮ ಒರಿಸ್ಸದಲ್ಲಿ ಬಾಕ್ಸೈಟ್ ಬೇಕಾದಷ್ಟು ದೊರೆಯುತ್ತದೆ. ಆದ್ದರಿಂದ ಹಿರಾಕುಡ್ನಲ್ಲಿ ಅಲ್ಯೂಮಿನಿಯಂ ಕಾರ್ಖಾನೆಯೊಂದನ್ನು ಪ್ರಾರಂಭಿಸಲಾಗಿದೆ. ಕಡಿಮೆ ಬೆಲೆಯಲ್ಲಿ ವಿದ್ಯುತ್ ದೊರೆಯುವುದರಿಂದ ಚೌದ್ವಾರ್ ಮತ್ತು ಬ್ರಜ್ ರಾಜ್ನಗರಗಳಲ್ಲಿ ಕಾಗದದ ಕಾರ್ಖಾನೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಅಂತೆಯೆ ಕೋರಾಪುಟ್ನ ದಂಡ ಕಾರಣ್ಯ ಪ್ರದೇಶಗಳಲ್ಲಿ ಕಾಗದದ ತಯಾರಿಕೆಗೆ ಅನುಕೂಲಗಳುಂಟು. ಕೈಮಗ್ಗ, ನಕ್ಕಿ, ಕೊಂಬಿನ ಸಾಮಾನು, ಒಡವೆ-ಮುಂತಾದ ಗೃಹಕೈಗಾರಿಕೆಗಳು ವ್ಯಾಪಕವಾಗಿವೆ. ವಿದೇಶೀ ವಿನಿಮಯವನ್ನು ಸಂಪಾದಿಸಲು ಕಬ್ಬಿಣದ ಅದುರನ್ನು ಪರದೀಪ್ ಮತ್ತು ವಿಶಾಖಪಟ್ಟಣಗಳ ಮುಖಾಂತರ ಜಪಾನಿಗೆ ರಫ್ತು ಮಾಡಲಾಗುತ್ತಿದೆ. ಒರಿಸ್ಸದ ಸ್ವಾಭಾವಿಕ ಸಂಪನ್ಮೂಲಗಳೊಂದಿಗೆ ಹೋಲಿಸಿದರೆ ಕೈಗಾರಿಕೆಗಳ ಬೆಳೆವಣಿಗೆಯ ವೇಗ ಮತ್ತು ತಲಾ ಆದಾಯ ತುಂಬಾ ಸೀಮಿತ. ಇನ್ನೂ ಹೆಚ್ಚಿನ ಮಟ್ಟದ ಕೈಗಾರಿಕೆಯ ಕಾರ್ಯಚಟುವಟಿಕೆಗಳಿಗಾಗಿ ಸಂಚಾರ ಮಾರ್ಗಗಳ ಅಭಿವೃದ್ದಿ ಅತ್ಯಂತ ಆವಶ್ಯಕ. ಈ ದೃಷ್ಟಿಯಿಂದ ಒರಿಸ್ಸಕ್ಕೆ ಉತ್ತಮ ಭವಿಷ್ಯವಿದೆ. == ಆಡಳಿತ == ಒರಿಸ್ಸ ರಾಜ್ಯವನ್ನು 30 ಜಿಲ್ಲೆಗಳಾಗಿ ವಿಂಗಡಿಸಿದೆ. ಅವುಗಳ ವಿವರ ಈ ರೀತಿ ಇದೆ: ರಾಜ್ಯದಲ್ಲಿ ಏಕಸದನವಿರುವ ವಿಧಾನಮಂಡಲವಿದೆ. ಪರದೀಪ್ ಮುಖ್ಯ ಬಂದರು; ಭಾರತದ ಏಳು ದೊಡ್ಡ ಬಂದರುಗಳ ಪೈಕಿ ಒಂದು. ಭುವನೇಶ್ವರ್ ರಾಜಧಾನಿ (ಜನಸಂಖ್ಯೆ 8,81,988). ಇತರ ನಗರಗಳು ಮತ್ತು ಪಟ್ಟಣಗಳು: ಕಟಕ್ (6,58,986), ರೂರ್ಕೆಲ (5,52,970), ಬೆರ್ಹಾಂಪುರ್ (355,823), ಪುರಿ (201,026), ಸಂಬಲ್ಪುರ್ (270,331), ಬಲಸೂರ್ (144,373). ೨೦೧೧ ಜನಗಣತಿಯ ಪ್ರಕಾರ ರಾಜ್ಯದ ಗಂಡಸರ ಪೈಕಿ ಶೇ.೮೨ ಮತ್ತು ಹೆಂಗಸರಲ್ಲಿ ಶೇ. ೬೪ ಮಂದಿ ಅಕ್ಷರಸ್ಥರು. . ಕಟಕ್ ಉತ್ಕಲವಿಶ್ವವಿದ್ಯಾಲಯದ ಕೇಂದ್ರ. ಪುರಿ ಒಂದು ಮುಖ್ಯ ಯಾತ್ರಾಸ್ಥಳ. ಇಲ್ಲಿ ಜಗನ್ನಾಥನ ದೇವಾಲಯವಿದೆ. ಬ್ರಿಟಿಷ್ ಆಡಳಿತದ ಪ್ರಾರಂಭ ಕಾಲದಲ್ಲಿ ಮಹಾನದೀ ಮುಖಜಭೂಮಿಯನ್ನೂ ಹೂಗ್ಲಿ ನದಿಯನ್ನೂ ಸೇರಿಸುವ ಕಾಲುವೆಯೊಂದನ್ನು ಕಡಲಿಗೆ ಸಮಾನಾಂತರವಾಗಿ ನಿರ್ಮಿಸಲಾಗಿತ್ತು. ಬಾಲಾಸರ್ ರೇವು ನಿರ್ಮಾಣವಾಗಿದ್ದು ಇದರ ದಡದ ಮೇಲೆ. ಭುವನೇಶ್ವರ್ ಮತ್ತು ಕಟಕ್ಗಳು ಮುಖ್ಯ ವಿಮಾನಕೇಂದ್ರಗಳು. ಭಾರತದ ಎಂಟು ದೊಡ್ಡ ಬಂದರುಗಳ ಪೈಕಿ ಪರದೀಪ್ ಒಂದು. == ಇತಿಹಾಸ == ಇತಿಹಾಸ ಪೂರ್ವದಿಂದಲೂ ಒಡಿಶಾದಲ್ಲಿ ಒಡ್ಡೆರಾಜು ಕ್ಷತ್ರಿಯ ರಾಜರು ಹಾಗೂ ಆ ರಾಜವಂಶಸ್ಥರು ಇದ್ದರು. ಇವರ ನಂತರ ಬುಡಕಟ್ಟು ಜನಾಂಗ ವಾಸವಾಗಿದ್ದರು.ಅಧಿಕೃತವಾಗಿ ಒಡಿಸ್ಸಾಕ್ಕೆ ಸುಮಾರು ೫೦೦೦ ವರ್ಷಗಳ ಇತಿಹಾಸವಿದೆ. ಕಳಿಂಗ ಪೂರ್ವದಲ್ಲಿ ಇದನ್ನು ಓಡ್ರ ದೇಶ ಎಂದು ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಇದು ಮುಖ್ಯವಾಗಿ ಮಹಾನದಿಯ ಕಣಿವೆ ಪ್ರದೇಶಕ್ಕೆ ಸೀಮಿತವಾಗಿದ್ದಿತು.ಈ ಪ್ರದೇಶವು ಕಳಿಂಗ,ಕೋಶಲ,ಉತ್ಕಲ ಮುಂತಾದ ವಂಶದವರಿಂದ ಆಳಲ್ಪಟ್ಟಿತ್ತು. ಇದರಲ್ಲಿ ಕಳಿಂಗ ವಂಶದ ಬಗ್ಗೆ ವೇದ ಕಾಲದ ಬರಹಗಾರರಿಂದಲೂ ಉಲ್ಲೇಖಿಸಲ್ಪಟ್ಟಿತ್ತು. . ಕ್ರಿಸ್ತಪೂರ್ವ ೬ನೆಯ ಶತಮಾನದಲ್ಲಿ ಬೋದಾಯನ ಋಷಿಯು ಕಳಿಂಗವು ವೈದಿಕ ಸಂಸ್ಕೃತಿಯಿಂದ ಹೊರಗಿದ್ದುದನ್ನು ಉಲ್ಲೇಖಿಸುತ್ತಾರೆ. . ಒಡಿಶಾವು ಪ್ರಪಂಚದ ಇತಿಹಾಸದಲ್ಲಿ ಪ್ರಾಮುಖ್ಯವಾದ ಒಂದು ಘಟನೆಗೆ ಸಾಕ್ಷಿಯಾಗಿದೆ. ಅದುವೇ ಕಳಿಂಗ . ಯುದ್ಧ. ಕ್ರಿಸ್ತಪೂರ್ವ ೨೬೧ರಲ್ಲಿ ನಡೆದ ಈ ಯುದ್ಧದ ಪರಿಣಾಮ ಚಕ್ರವರ್ತಿ ಅಶೋಕನು ಹಿಂಸೆಯನ್ನು ತ್ಯಜಿಸಿ ಬೌದ್ಧಧರ್ಮವನ್ನು ಅನುಸರಿಸಿದ. ಮುಂದಿನ ದಿನಗಳಲ್ಲಿ ಬೌದ್ದಧರ್ಮವು ಭಾರತದಿಂದಾಚೆಗೂ ಪಸರಿಸಲು ಪ್ರೇರಕನಾದ. ಏಪ್ರಿಲ್-ಮೇ-೨೦೧೪ರಲ್ಲಿ ಒಡಿಶಾ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಂದ ಫಲಿತಾಂಶದ ವಿವರ ಈ ಕೆಳಗಿನಂತಿದೆ. ೧೪೭ ಕ್ಷೇತ್ರಗಳಲ್ಲಿ ಪಕ್ಷಗಳು ಪಡೆದ ಸ್ಥಾನಗಳು ಈ ಕೆಳಕಂಡ ಹಾಗೆ ಇವೆ. ಭಾರತೀಯ ಜನತಾ ಪಾರ್ಟಿ- ೧೦ ಸ್ಥಾನಗಳು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) - ೧ಸ್ಥಾನ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- ೧೬ ಸ್ಥಾನಗಳು. ಬಿಜು ಜನತಾದಳ - ೧೧೭ಸ್ಥಾನಗಳು. ಸಮತಾ ಕ್ರಾಂತಿ ದಳ - ೧ ಸ್ಥಾನ. ಸ್ವತಂತ್ರ ಅಭ್ಯರ್ಥಿಗಳು - ೨ ಸ್ಥಾನಗಳು. ಒಟ್ಟು ಸ್ಥಾನಗಳು - ೧೪೭ == ಉಲ್ಲೇಖಗಳು == == ಇದನ್ನೂ ನೋಡಿ == ಒಡಿಶಾದ ನೃತ್ಯ ಸಂಪ್ರದಾಯ ಒಡಿಶಾದ ಇತಿಹಾಸ ಒಡಿಶಾದ ಪ್ರಾಗಿತಿಹಾಸ ಒಡಿಶಾದ ವಾಸ್ತುಶಿಲ್ಪ ಒಡಿಶಾದ ಶಾಸನಗಳು ಮತ್ತು ನಾಣ್ಯಗಳು ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ == ಬಾಹ್ಯ ಸಂಪರ್ಕಗಳು ==