ಕಪಿಲವಸ್ತು : ಪ್ರಾಚೀನ ಭಾರತದ ಪ್ರಸಿದ್ದ ಪಟ್ಟಣಗಳಲ್ಲಿ ಒಂದು, ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಉತ್ತರಕ್ಕೆ ನೇಪಾಲ ತರೈ ಭೂಮಿಯಲ್ಲಿದೆ. ಕಪಿಲನ ನಿವಾಸ ಎಂದು ಇದರ ಅರ್ಥ. ಸಾಂಖ್ಯದರ್ಶನದ ಪ್ರತಿಪಾದಕನಾದ ಕಪಿಲನಿಗೂ ಈ ಸ್ಥಳಕ್ಕೂ ಏನಾದರೂ ಸಂಬಂಧವಿತ್ತೇ ಎಂಬುದು ಐತಿಹಾಸಿಕವಾಗಿ ಸ್ಥಿರಪಟ್ಟಿಲ್ಲ. == ಐತಿಹ್ಯ == ಇಕ್ಷ್ವಾಕುವಂಶದ ರಾಜನಾದ ವಿರುದ್ದಕನ ನಾಲ್ವರು ಪುತ್ರರು ಅವನಿಂದ ಉಚ್ಚಾಟನೆಹೊಂದಿ ಹಿಮಾಲಯದ ತಪ್ಪಲಿನಲ್ಲಿ ಅಲೆದಾಡುತ್ತಿದ್ದಾಗ ಭಾಗೀರಥೀ ನದಿಯ ದಂಡೆಯಲ್ಲಿ ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದ ಕಪಿಲ ಮಹರ್ಷಿಯನ್ನು ಸಂದರ್ಶಿಸಿದರೆಂದೂ ಋಷಿ ಅವರನ್ನು ಸತ್ಕರಿಸಿದನಲ್ಲದೆ ಅವರಿಗೆ ಒಂದು ನಿವೇಶವನ್ನು ತೋರಿಸಿದನೆಂದೂ ಅಲ್ಲಿ ಆ ರಾಜಪುತ್ರರು ಆ ಋಷಿಯ ನೇತೃತ್ವದಲ್ಲಿ ಒಂದು ಪಟ್ಟಣವನ್ನು ನಿರ್ಮಾಣಮಾಡಿದರೆಂದೂ ಐತಿಹ್ಯವಿದೆ. ಕಪಿಲ ಮಹರ್ಷಿ ದಾನಮಾಡಿದ ನೆಲದಲ್ಲಿ ಕಟ್ಟಲಾದ ಆ ಪಟ್ಟಣಕ್ಕೆ ಕಪಿಲವಸ್ತು ಎಂದು ಹೆಸರು ಬಂತೆಂದು ಹೇಳಲಾಗಿದೆ. == ಬೌದ್ಧ ಧರ್ಮ == ಕಪಿಲವಸ್ತು ಬುದ್ಧನ ಜನ್ಮಸ್ಥಳ. ಬಾಲ್ಯ ಮತ್ತು ಯೌವನಗಳನ್ನು ಆತ ಇಲ್ಲೇ ಕಳೆದ. ಇದರಿಂದಾಗಿ ಈ ನಗರ ಬೌದ್ಧರಿಗೆ ಒಂದು ಪವಿತ್ರ ಯಾತ್ರಾಸ್ಥಳವಾಯಿತು. ಶಾಕ್ಯಪಂಗಡದ ನಾಯಕನೂ ಗೌತಮಬುದ್ಧನ ತಂದೆಯೂ ಆದ ಶುದ್ದೋಧನನಿಗೆ ಕಪಿಲವಸ್ತುವೇ ರಾಜಧಾನಿಯಾಗಿತ್ತು. ಬುದ್ಧನ ಕಾಲದಲ್ಲಿ ಕೋಸಲ ದೇಶದ ರಾಜನಾಗಿದ್ದ ವಿರೂಪಾಕ್ಷ ಕಪಿಲವಸ್ತುವಿನ ಮೇಲೆ ದಾಳಿ ಮಾಡಲು ಪ್ರಯತ್ನ ನಡೆಸಿ ವಿಫಲನಾಗಿದ್ದ. ಆದರೆ ಗೌತಮಬುದ್ಧನ ಮರಣಾನಂತರ ಆತ ಕಪಿಲವಸ್ತುವಿನ ಮೇಲೆ ಮತ್ತೊಮ್ಮೆ ದಾಳಿ ನಡೆಸಿ ಶಾಕ್ಯಕುಲವನ್ನೇ ನಾಶಮಾಡಿದ. ಅಶೋಕ ಚಕ್ರವರ್ತಿ ಕಪಿಲವಸ್ತುವಿಗೆ ಭೇಟಿ ಕೊಟ್ಟಿದ್ದರ ಜ್ಞಾಪಕಾರ್ಥವಾಗಿ ಅಲ್ಲಿ ಅನೇಕ ಸ್ಮಾರಕಗಳನ್ನು ಸ್ಥಾಪಿಸಿದ. ಚೀನದ ಯಾತ್ರಿಕನಾದ ಹ್ಯುಯೆನ್ ತ್ಸಾಂಗ್ ಭಾರತಕ್ಕೆ ಬರುವ ವೇಳೆಗೆ (620-45) ಈ ಇತಿಹಾಸಪ್ರಸಿದ್ದ ಪಟ್ಟಣ ಸಂಪುರ್ಣವಾಗಿ ನಾಶವಾಗಿತ್ತೆಂದು ಆತನ ಬರೆವಣಿಗೆಯಿಂದಲೇ ತಿಳಿಯುತ್ತದೆ. == ಬಾಹ್ಯ ಸಂಪರ್ಕಗಳು == : 2015-09-12 ವೇಬ್ಯಾಕ್ ಮೆಷಿನ್ ನಲ್ಲಿ. . ' ' .