ಕರೂರ್ ತಮಿಳು ನಾಡಿನ ತಿರುಚ್ಚಿರಾಪಳ್ಳಿ ಜಿಲ್ಲೆಯ ಕಾವೇರಿ ಮುಖಜಭೂಮಿಯ ಒಂದು ತಾಲ್ಲೂಕು. == ಭೌಗೋಳಿಕ == ವಿಸ್ತೀರ್ಣ 1585 ಚ.ಕಿಮೀ ಇದೊಂದು ವಿಶಾಲ ಬಯಲು. ತಾಲ್ಲೂಕಿನ ಉತ್ತರದ ಅಂಚಿನಲ್ಲಿ ಕಾವೇರಿ ಮತ್ತು ನೋಯಿಲ್ ನದಿಗಳು ಹರಿಯುತ್ತವೆ. ಅಮರಾವತಿ ಉಪನದಿ ಕಾವೇರಿಯನ್ನು ಕೂಡುವುದು ಈ ತಾಲ್ಲೂಕಿನಲ್ಲಿ. ದಕ್ಷಿಣದ ಕಡೆಯಿಂದ ಕೊಡಗನೂರ್ ಮತ್ತು ನಂಗನೋಲಾರ್ ಹೊಳೆಗಳು ಅಮರಾವತಿಯನ್ನು ಸೇರುತ್ತವೆ. ಕಾಡುಗಳು ಕಡಿಮೆ ಇರುವುದರಿಂದಲೂ ಸಮುದ್ರದ ಪ್ರಭಾವದಿಂದ ಇದು ದೂರದಲ್ಲಿರುವುದರಿಂದಲೂ ಇಲ್ಲಿ ಸೆಖೆ ಹೆಚ್ಚು. ವರ್ಷದಲ್ಲಿ ಸುಮಾರು 63 ಸೆಂಮೀ. ಮಳೆಯಾಗುತ್ತದೆ. ಇಲ್ಲಿಯ ಮಣ್ಣು ಕೆಂಪುನಸುಬೂದು ಮರುಳಿಂದ ಕೂಡಿದೆ.ಅರವಕುರುಚಿ, ಪಳ್ಳಪಟ್ಟಿಇವು ಈ ತಾಲ್ಲೂಕಿನ ಇತರ ಮುಖ್ಯಸ್ಥಳಗಳು. ಕರೂರ್ ಈ ತಾಲ್ಲೂಕಿನ ಕೇಂದ್ರ. ಅಮರಾವತಿ ನದಿಯ ದಡದ ಮೇಲಿರುವ ಈ ನಗರ ತಿರುಚ್ಚಿರಾಪಳ್ಳಿಯಿಂದ ಪಶ್ಚಿಮಕ್ಕೆ 77 ಕಿಮೀ ದೂರದಲ್ಲಿದೆ. == ಇತಿಹಾಸ == ಕರೂರ್ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇದರ ಹೆಸರನ್ನು ಟಾಲೆಮಿ(ಸು.141) ತನ್ನ ಭೂವಿವರಣೆಯಲ್ಲಿ ತಿಳಿಸಿದ್ದಾನೆ. ರೋಮನ್ ಚಕ್ರವರ್ತಿಗಳಾದ ಆಗಸ್ಟಸ್ (ಪ್ರ.ಶ. ಪು. 27- ಪ್ರ.ಶ. 14) ಟೈಬೀರಿಯಸ್ (14-37) ಮತ್ತು ಕ್ಲಾಡಿಯಸರ (41-54) ನಾಣ್ಯಗಳು ಈ ಸ್ಥಳದ ಬಳಿಸಿಕ್ಕಿವೆಯಾದ್ದರಿಂದ ಆಕಾಲದಿಂದಲೂ ಇದು ಪ್ರಸಿದ್ಧವಾಗಿದ್ದಿರಬೇಕು. ಕೊಂಗುನಾಡಿನ ಸಪ್ತ-ಶಿವಾಲಯಗಳಲ್ಲಿ ಇಲ್ಲಿಯ ಪಶುಪತೀಶ್ವರ ದೇವಾಲಯವೂ ಒಂದು. ಆದುದರಿಂದ ಈ ನಗರವನ್ನು ತಿರುವಾಣಿಲೈ ಅಥವಾ ಪಶುಪತಿಎಂದು ತಮಿಳು ಗ್ರಂಥಗಳಲ್ಲಿ ಕರೆಯಲಾಗಿದೆ. ಚೇರ ಜೋಳ ಪಾಂಡ್ಯ ರಾಜ್ಯಗಳು ಸಂಧಿಸುವ ಸ್ಥಳದಲ್ಲಿ ಈ ನಗರವಿದ್ದುದರಿಂದ ಪ್ರಾಚೀನ ಕಾಲದ ಅನೇಕ ಕದನಗಳಲ್ಲಿ ಇದು ಪ್ರಮುಖ ಪಾತ್ರವಹಿಸಿತ್ತು. ಒಮ್ಮೆ ಚೇರರಾಜ್ಯದ ರಾಜಧಾನಿಯೂ ಆಗಿತ್ತು. ವಿಜಯನಗರದ ಪತನದ ಅನಂತರ ಈ ನಗರ ಮಧುರೆಯ ನಾಯಕರಿಗೆ ಸೇರಿತು. 17ನೆಯ ಶತಮಾನದ ಕೊನೆಯಲ್ಲಿ ಇದು ಮೈಸೂರು ರಾಜ್ಯಕ್ಕೆ ಸೇರಿ, ಅದರ ಮುಖ್ಯ ಗಡಿ ಠಾಣ್ಯವಾಯಿತು. 1736ರಲ್ಲಿ ಚಂದಾಸಾಹೇಬ ಇದನ್ನು ಆಕ್ರಮಿಸಲು ಪ್ರಯತ್ನಿಸಿ ಸೋತ. 1760ರಲ್ಲಿ ಇದು ಇಂಗ್ಲಿಷರ ವಶವಾಯಿತು. 1768ರಲ್ಲಿ ಹೈದರ್ ಇದನ್ನು ಗೆದ್ದುಕೊಂಡ. 1790ರಲ್ಲಿ ಇದು ಮತ್ತೆ ಇಂಗ್ಲಿಷರ ವಶವಾಯಿತು. ಸೇನಾನೆಲೆಯಾಗಿದ್ದ ಈ ನಗರಕ್ಕೆ 1901ರಲ್ಲಿ ಪೌರಸಭೆಯ ಸ್ಥಾನ ಲಭ್ಯವಾಯಿತು. == ವ್ಯವಸಾಯ ಮತ್ತು ವಾಣಿಜ್ಯ == ಕಾವೇರಿಯ ನೀರನ್ನು ಕಾಲುವೆಗಳ ಮುಖಾಂತರ ವ್ಯವಸಾಯಕ್ಕೆ ಮೊಟ್ಟಮೊದಲು ಬಳಸಲಾದದ್ದು ಈ ತಾಲ್ಲೂಕಿನಲ್ಲಿ. ನೀರಾವರಿ ಬೇಸಾಯವೇ ಇಲ್ಲಿ ಪ್ರಧಾನ. ತಾಲ್ಲೂಕಿನ ಪಶ್ಚಿಮಭಾಗಕ್ಕೆ ಭವಾನಿಯೋಜನೆಯಿಂದ ನೀರಾವರಿ ಸೌಲಭ್ಯ ಒದಗಿದೆ. ನೀರಾವರಿ ಸೌಲಭ್ಯವಿದ್ದಲ್ಲೆಲ್ಲ ಬತ್ತ ಮತ್ತು ಕಬ್ಬು ಬೆಳೆಸುತ್ತಾರೆ. ಕಡಲೆ ಮುಖ್ಯ ಬೆಳೆ. ಇದರೊಂದಿಗೆ ಹತ್ತಿ, ಮೆಣಸು, ತಂಬಾಕು, ಜೋಳ ಮತ್ತು ರಾಗಿಗಳನ್ನೂ ಬೆಳೆಸುವುದುಂಟು. ಜನಸಾಂದ್ರತೆ ಚ. ಕಿಮೀ.ಗೆ 100-259, ಪುಂಜೈಪುಗಳೂರಿನಲ್ಲಿ ಸಕ್ಕರೆ ಕಾರ್ಖಾನೆಯಿದೆ. ಹತ್ತಿ ಮತ್ತಿತರ ಗಿರಣಿಗಳೂ ಉಂಟು. ಇದು ರೈಲು ರಸ್ತೆಗಳ ಸಂಧಿಸ್ಥಳ. ಪಶ್ಚಿಮ ತಮಿಳು ನಾಡಿನ ಮುಖ್ಯ ವ್ಯಾಪಾರ ಮತ್ತು ಕೈಗಾರಿಕಾ ಕೇಂದ್ರ. ಇಲ್ಲಿ ತಾಮ್ರದ ಪಾತ್ರೆಗಳು ತಯಾರುಗುತ್ತವೆ. == ಬಾಹ್ಯ ಸಂಪರ್ಕಗಳು == == ಉಲ್ಲೇಖಗಳು ==