ಕರ್ಣಸುವರ್ಣ: ಪಶ್ಷಿಮ ಬಂಗಾಲ ಪ್ರಾಂತ್ಯದ ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಈಗಿನ ರಂಗ್ಮತಿ ಎಂಬ ಸ್ಥಳವೇ ಇತಿಹಾಸ ಕಾಲದಲ್ಲಿ ಕರ್ಣಸುವರ್ಣ ನಗರ ವಾಗಿತ್ತೆಂದು ಇತಿಹಾಸಕಾರರು ನಿರ್ಧರಿಸಿದ್ದಾರೆ. ಈ ನಗರ ಬಂಗಾಳದ ಇತಿಹಾಸದಲ್ಲಿ ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಪ್ರ.ಶ. 6ನೆಯ ಶತಮಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಗೌಡರು ಇಲ್ಲಿ ಪ್ರಸಿದ್ಧಿಗೆ ಬಂದರು. ಗುಪ್ತವಂಶದ ರಾಜರು ಮತ್ತು ಮೌಖರಿ ವಂಶದ ರಾಜ ಈಶ್ವರವರ್ಮ ಗೌಡಸಂತತಿಯ ರಾಜರ ವಿಸ್ತರಣ ನೀತಿಯನ್ನು ತಡೆಗಟ್ಟಲು ಪ್ರಯತ್ನಿಸಿದರು. ಆ ವಂಶದ ಹೆಸರಾಂತ ರಾಜನಾದ ಜಯನಾಗರನ ನೇತೃತ್ವದಲ್ಲಿ ಅವರು ಕರ್ಣಸುವರ್ಣವನ್ನು ಕೇಂದ್ರವನ್ನಾಗಿ ಮಾಡಿಕೊಂಡು ರಾಜ್ಯವನ್ನು ಎಲ್ಲ ದಿಕ್ಕುಗಳಲ್ಲೂ ವಿಸ್ತರಿಸಿದರು. 606ರಲ್ಲಿ ಪಟ್ಟಕ್ಕೆ ಬಂದ ಶಶಾಂಕನ ಕಾಲದಲ್ಲೂ ಕರ್ಣಸುವರ್ಣ ಬಂಗಾಳದ ಗೌಡಸಂತತಿಯವರ ರಾಜಧಾನಿಯಾಗಿ ಮುಂದುವರಿಯಿತು. ಶಶಾಂಕನ ಮರಣಾನಂತರ ಇದು ಕೆಲವು ಕಾಲ ಕಾಮರೂಪದ (ಅಸ್ಸಾಂ) ರಾಜನಾದ ಭಾಸ್ಕರವರ್ಮನ ಅಧೀನದಲ್ಲಿತ್ತು. ಭಾಸ್ಕರವರ್ಮ ಈ ನಗರವನ್ನು ಗೆದ್ದ. ಇಲ್ಲಿಂದಲೇ ವಿಧಾನಪುರ ಶಾಸನವನ್ನು ಹೊರಡಿಸಿದ.