ಕವಿತಾಳ: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ರಾಯಚೂರು ಲಿಂಗಸುಗೂರು ರಸ್ತೆಯಲ್ಲಿ ಲಿಂಗಸುಗೂರಿನಿಂದ ೨೮ಕಿಮೀ ದೂರದಲ್ಲಿರುವ ಒಂದು ಗ್ರಾಮ. ಈ ಊರಿನಲ್ಲಿ ಪಟ್ಟಣ ಪಂಚಾಯಿತಿ ಇದೆ. == ಇತಿಹಾಸ == ಇದರ ಪುರಾತತ್ವ ಪ್ರಾಗೈತಿಹಾಸಿಕ ಕಾಲದಷ್ಟು. ಊರಿನಿಂದ ಆಗ್ನೇಯದಲ್ಲಿರುವ ಗುಡ್ಡದಲ್ಲಿ ಅನೇಕ ನೈಸರ್ಗಿಕ ಗುಹೆಗಳಿದ್ದು ಅಲ್ಲಿ ಪುರಾತನ ಶಿಲಾಯುಗ ಕಾಲದಿಂದ ಆಗಾಗ ಜನವಸತಿ ಇದ್ದಿತೆಂದು ತಿಳಿದುಬರುತ್ತದೆ. ಬೆಟ್ಟದ ತಪ್ಪಲಲ್ಲಿ ಕಬ್ಬಿಣದ ಕಿಟ್ಟಗಳೂ ಮಣ್ಣಿನ ಪಾತ್ರೆಗಳೂ ಕುಶಲವಸ್ತುಗಳೂ ದೊರಕಿವೆ. ಊರಿನ ಪಶ್ಚಿಮದಲ್ಲಿ ಒಂದು ಬೂದಿತಿಟ್ಟು ಸಹ ಇದೆ. ಈ ಊರ ಬಳಿಯಲ್ಲಿನ ತುಪ್ಪಲ ದೊಡ್ಡಿಯ ಬಳಿಯಲ್ಲಿ ಪುರಾತನ ಅವಶೇಷಗಳ ಜೊತೆಗೆ ಬಂಗಾರದ ಗಣಿಯೂ ಇದ್ದು ಅದನ್ನು ಪುರಾತನಕಾಲದಲ್ಲಿ ಶೋಧಿಸಿದುದರ ಕುರುಹುಗಳೂ ದೊರೆತಿವೆ. == ತ್ರ್ಯಂಬಕೇಶ್ವರ ದೇವಾಲಯ == ಈ ಊರಿನ ತ್ರ್ಯಂಬಕೇಶ್ವರ ದೇವಸ್ಥಾನ ಬಹು ಪ್ರಸಿದ್ಧವಾದುದು. ಇದನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಿದೆ. ದೇವಸ್ಥಾನದಲ್ಲಿ ಮೂರು ಗರ್ಭಗೃಹಗಳಿದ್ದು ಮಧ್ಯದಲ್ಲಿ ನವರಂಗವಿದೆ. ಮೂರೂ ಗರ್ಭಗೃಹಗಳಿಗೂ ನವರಂಗಕ್ಕೂ ಮಧ್ಯೆ ಸುಕನಾಸಿಗಳಿವೆ. ಪ್ರಾಕಾರ ಸರಳವಾಗಿದ್ದರೂ ಕಂಬಗಳು ಒಳ್ಳೆಯ ಪ್ರಭಾವಯುತವಾಗಿವೆ. ದೇವಸ್ಥಾನದ ಶಿಖರಗಳು ಸುಂದರವಾಗಿವೆ. ಇವುಗಳಲ್ಲಿ ೨/೩ ಭಾಗ ಕಲ್ಲಿನಲ್ಲಿಯೂ ಮಿಕ್ಕ ಭಾಗವನ್ನು ಇಟ್ಟಿಗೆ ಹಾಗೂ ಗಾರೆಯಲ್ಲಿಯೂ ಕಟ್ಟಲಾಗಿದೆ. ಇಲ್ಲಿನ ಮೂರು ಭಿತ್ತಿಮಂಟಪಗಳಲ್ಲಿ ಒಂದೊಮ್ಮೆ (ಮೂರರಲ್ಲೂ) ಪ್ರಾಯಃ ಲಿಂಗಗಳೂ ಇದ್ದುವೆಂದು ತೋರುತ್ತದೆ. ಈಗ ಎರಡರಲ್ಲಿ ಇವೆ. ಇಲ್ಲಿನ ಒಂದು ಮಹಿಷಾಸುರ ಮರ್ದಿನಿಯ ಮೂರ್ತಿ ಕೂಡ ತುಂಬ ಸೊಗಸಾಗಿದೆ. ಈ ದೇವಸ್ಥಾನದಲ್ಲಿನ ಗೋಡೆಗಳನ್ನು ದೊಡ್ಡ ದೊಡ್ಡ ನಸುಗೆಂಪಿನ ಕಗ್ಗಲ್ಲುಗಳಲ್ಲಿ (ಖೊಕಾಸನ್ ಕಲ್ಲುಗಳು) ಕಟ್ಟಿದೆ; ಅಲ್ಲಲ್ಲಿ ಯಾಳಿಗಳನ್ನೂ ಬಿಡಿಸಲಾಗಿದೆ. ಇಲ್ಲಿ ಕೆಲವೆಡೆ ಗಜಯುದ್ಧ ಇತ್ಯಾದಿಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದಲ್ಲಿ ಸೇವುಣ ಸಿಂಘಣನ ಮಾಂಡಲಿಕನಾದ ಮಲ್ಲಿದೇವರಸ ಬರೆಯಿಸಿದ ಎರಡು ಕನ್ನಡ ಶಾಸನಗಳಿವೆ.