ಕಾಗಿನೆಲೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಕಾಗಿನೆಲೆ ಇದ್ದು , ಹಾವೇರಿಯಿಂದ 9 ಮೈ. ದೂರದಲ್ಲಿದೆ. ಇದು ಕನಕದಾಸರ ಆರಾಧ್ಯದೈವ ಆದಿಕೇಶವನ ನೆಲೆಬೀಡು. == ಇತಿಹಾಸ == ಹಿಂದೆ ಒಂದು ಪರಗಣೆಯಾಗಿ ಅನೇಕ ಗ್ರಾಮಗಳನ್ನು ಒಂಗೊಂಡಿತ್ತು. ಸುಮಾರು 15 ಶಿಲಾಶಾಸನಗಳೂ 10 ಪುರಾತನ ದೇವಾಲಯಗಳೂ ಇವೆ. ಒಮ್ಮೆ ಬನವಾಸಿಯ ಕದಂಬರ ಆಧಿಪತ್ಯಕ್ಕೆ ಒಳಪಟ್ಟಿತ್ತು. ಬನವಾಸಿಯು ಚಾಳುಕ್ಯರ ಕೈಗೆ ಬಂದಾಗ ಇದೂ ಚಾಳುಕ್ಯರ ಆಡಳಿತಕ್ಕೊಳಪಟ್ಟಿತು. ಕೆಲಕಾಲ ಇದು ದೇವಗಿರಿಯ ಯಾದವರ ಅಂಕಿತದಲ್ಲಿದ್ದುದೂ ಉಂಟು. ಚಾಳುಕ್ಯರ ಭುವನೈಕಮಲ್ಲ ದತ್ತಿ-ದಾನಗಳನ್ನು ಕೊಟ್ಟಿರುವುದರ ಬಗ್ಗೆ ಆಧಾರಗಳಿವೆ. ದೇವಗಿರಿಯ ಯಾದವರು ಬೆಟ್ಟೇಶ್ವರ ಮತ್ತು ಕಾಳಹಸ್ತೀಶ್ವರ ದೇವಾಲಯಗಳಿಗೆ ದಾನವಿತ್ತರು. 14ನೆಯ ಶತಮಾನದಲ್ಲಿ ಬಹಮನೀ ಸುಲ್ತಾನರು ವಿಜಯನಗರದ ದೊರೆ ಬುಕ್ಕನಿಂದ ಇದನ್ನು ವಶಪಡಿಸಿಕೊಂಡರು. ಅನಂತರ ಮತ್ತೆ ಇದು ವಿಜಯನಗರದಲ್ಲೇ ಇದ್ದು ಒಂದು ಪರಗಣೆಯಾಗಿ ಸುಭೆಯಾಗಿ ಇತ್ತು. ಈ ಕಾಲದಲ್ಲಿ ಕನಕ ಇದರ ಢಣಾಯಕನಾಗಿ ವಿಜಯನಗರದ ಮಾಂಡಲೀಕನಾಗಿದ್ದ. ವಿಜಾಪುರದ ಸುಲ್ತಾನ ಇದನ್ನು ಜಯಿಸಿ ಆಗ ಪ್ರಾಂತ್ಯವಾಗಿದ್ದ ಬಂಕಾಪುರಕ್ಕೆ ಸೇರಿಸಿದನೆಂದು (1573) ಹೇಳಲಾಗಿದೆ. ವಿಜಾಪುರದ ದಂಡನಾಯಕನಾಗಿದ್ದ ಮುಸ್ತಫಾಖಾನನ ದಾಳಿಯಿಂದ ಇಲ್ಲಿಯ ಕೋಟೆಕೊತ್ತಳಗಳು ನಾಶವಾಗಿರಬೇಕು. ಮುಂದೆ ಇದು ಸವಣೂರ ನವಾಬರ, ಅನಂತರ ಮೊಗಲರ, ವಿಜಾಪುರದ ಸುಲ್ತಾನರ, ಮರಾಠರ ಮತ್ತು ಬ್ರಿಟೀಷರ ಅಂಕಿತಕ್ಕೊಳಪಟ್ಟಿತ್ತು. == ಪ್ರಕೃತಿ ಸೌಂದರ್ಯ == ಮಲೆನಾಡಿನ ಅಂಚಿನಲ್ಲಿರುವ ಇದು ತನ್ನ ಪ್ರಕೃತಿ ಸೌಂದರ್ಯದಿಂದ ಅನೇಕರನ್ನು ಆಕರ್ಷಿಸಿದೆ. ಆಂಡಯ್ಯ ಮತ್ತು ಕನಕದಾಸರು ಇಲ್ಲಿಯ ಪ್ರಕೃತಿಸೌಂದರ್ಯವನ್ನು ಬಣ್ಣಿಸಿದ್ದಾರೆ. ಈ ಬಣ್ಣನೆಯನ್ನು ಚಾಳುಕ್ಯರ ಮತ್ತು ಯಾದವರ ಶಾಸನಗಳಲ್ಲಿಯೂ ಕಾಣಬಹುದಾಗಿದೆ. == ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿ == ಪ್ರಾಚೀನ ಕಾಲದಿಂದಲೂ ಇದು ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ. ಜೈನ, ವೈಷ್ಣವ, ಶೈವ, ವೀರಶೈವ ಸಂಸ್ಕೃತಿಗಳ ಸಂಗಮ ಇದೆನ್ನುವುದಕ್ಕೆ ಸಾಕ್ಷಿ-ಇಲ್ಲಿಯ ಅನೇಕ ಗುಡಿ, ಗೋಪುರಗಳು. ಲಕ್ಷ್ಮೀನರಸಿಂಹ, ಆದಿಕೇಶವ, ಕಾಳಹಸ್ತೀಶ್ವರ, ವೀರಭದ್ರ, ಸೋಮೇಶ್ವರ, ಬ್ರಹ್ಮೇಶ್ವರ, ಸಂಗಮೇಶ್ವರ, ಬಸವಣ್ಣ, ಆದಿಶಕ್ತಿ-ಇವು ಇಲ್ಲಿಯ ಪ್ರಮುಖ ದೇವಾಲಯಗಳು. ಆದಿಶಕ್ತಿ ದೇವಾಲಯವೊಂದನ್ನಳಿದು ಮಿಕ್ಕವೆಲ್ಲ 10ನೆಯ ಶತಮಾನದಿಂದೀಚೆಗೆ ಸ್ಥಾಪಿಸಲ್ಪಟ್ಟವು. ಇಲ್ಲಿನ ಮುಖ್ಯ ದೇವಾಲಯಗಳು ಆದಿಕೇಶವ, ನರಸಿಂಹ. ಮಣ್ಣುಗೋಡೆಯಿಂದ ಸುತ್ತುವರಿಯಲ್ಪಟ್ಟ ಪ್ರಾಕಾರದೊಳಗೆ ಎರಡೂ ದೇವಾಲಯಗಳಿವೆ. ಹೆಬ್ಬಾಗಿಲು ಪ್ರವೇಶಿಸಿದೊಡನೆ ಗೋಚರಿಸುವುದು ನರಸಿಂಹ ಮಂದಿರ. ಎಡಭಾಗದಲ್ಲಿ 10 ಅಡಿಗಳ ಅಂತರದಲ್ಲಿ ಆದಿಕೇಶವ ದೇವಾಲಯವಿದೆ. 16ನೆಯ ಶತಮಾನದಲ್ಲಿ ಆದಿಕೇಶವನ ಮೂರ್ತಿಯನ್ನು ಕನಕದಾಸಬಾಡ ಗ್ರಾಮದಿಂದ ತಂದು ಪ್ರತಿಷ್ಠಾಪಿಸಿದನಂತೆ. ಆದಿಕೇಶವನ ಮೂರ್ತಿ 1 1/2 ಅಡಿ ಎತ್ತರವಾಗಿದೆ. ಕಲ್ಯಾಣದಿಂದ ಹೊರಟ ಶರಣರ ಗುಂಪು ಈ ಸ್ಥಳದಿಂದ ಆಕರ್ಷಿತವಾಗಿ ಇಲ್ಲೊಂದು ಸಂಗಮನಾಥ ಮಂದಿರ ನಿರ್ಮಿಸಿದೆ. ಇಲ್ಲಿಯ ಕೆರೆಯ ದಂಡೆಯ ಮೇಲೆ ಕನಕದಾಸನ ಸಮಾಧಿಯಿದೆ. ಸುಮಾರು 9ನೆಯ ಶತಮಾನದಿಂದ 16ನೆಯ ಶತಮಾನದ ವರೆಗೆ ಧಾರ್ಮಿಕ-ಸಾಂಸ್ಕೃಕ ಕೇಂದ್ರವಾಗಿದ್ದ ಇದು ಅನಂತರ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿದ್ದುದರಿಂದ ಅದರ ಚಟುವಟಿಕೆಗಳೆಲ್ಲ ನಿಂತುಹೋದುವು. == ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರ == ಕರ್ನಾಟಕ ರಾಜ್ಯ ಸರ್ಕಾರವು ಕಾಗಿನೆಲೆ ಅಭಿವೃದ್ದಿಗಾಗಿ "ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರ" ಸ್ಥಾಪನೆ ಮಾಡಿದೆ. == ಸಂಪರ್ಕಗಳು == ಪ್ರಾಧಿಕಾರ