ಕೀಚಕ ಮಹಾಭಾರತದ ಪ್ರಮುಖ ಪಾತ್ರ ಇವನು ವಿರಾಟ ರಾಜ್ಯದ ಸೇನೆಯ . ಭಾರತೀಯ ಮಹಾಕಾವ್ಯ ಮಹಾಭಾರತದಲ್ಲಿ, ಕಿಚಕ (ಕೀಚಕ ಎಂದು ಸಹ ಉಚ್ಚರಿಸಲಾಗುತ್ತದೆ) ಮತ್ಸ್ಯದ ಸೈನ್ಯದ ಸೈನ್ಯಾಧಿಪತಿ ಆಗಿದ್ದನು. ಈ ದೇಶವು ರಾಜ ವಿರಾಟಾ ಆಳ್ವಿಕೆ ನಡೆಸಿತು. ಅವರು ರಾಣಿ ಸುದೇಶ್ನಳ ಕಿರಿಯ ಸಹೋದರನಾಗಿದ್ದನು. == ಬಾಲ್ಯ ಮತ್ತು ಜೀವನ == ಬಾಣಾಸುರನ ಅಂಶದಿಂದ ಕೇಕಯ ರಾಜ ಮತ್ತು ಮಾಲವಿಯರ ಮಗನಾಗಿ ಜನಿಸಿದವ. ಈತನಿಗೆ ೧೦೫ ಮಂದಿ ಒಡಹುಟ್ಟಿದವರೂ ಸುದೇಷ್ಣೆಯೆಂಬ ಸೋದರಿಯೂ ಇದ್ದರು. ಸುದೇಷ್ಣೆ ವಿರಾಟರಾಜನ ರಾಣಿ. ಇವನೂ ಇವನ ತಮ್ಮಂದಿರಾದ ೧೦೫ ಮಂದಿ ಉಪಕೀಚಕರೂ ವಿರಾಟರಾಜನಲ್ಲಿಯೇ ಇದ್ದರು. == ಕಥೆ == ಮಹಾ ಬಲಶಾಲಿಯಾದ ಕೀಚಕ ವಿರಾಟನ ಸೇನಾಪತಿಯಾಗಿದ್ದ. ಇವನಿಗೆ ಸಿಂಹಬಲನೆಂಬ ಬೇರೆಯ ಹೆಸರೂ ಇದ್ದಿತು. ಕೀಚಕನನ್ನು ಕಂಡು ಹೆದರಿದ ಕೌರವರು ವಿರಾಟನ ರಾಜ್ಯದ ಕಡೆಗೆ ತಲೆ ಮಾಡಿ ಮಲಗುವುದಿಲ್ಲವೆಂಬ ಅಂಶವನ್ನು ತಿಳಿದ ಪಾಂಡವರು ವಿರಾಟ ರಾಜಧಾನಿಯಲ್ಲಿ ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ನಿರ್ಧರಿಸಿದರು. ದ್ರೌಪದಿ ಸೈರಂಧ್ರಿಯಾಗಿ ಮಾಲಿನಿ ಎಂಬ ಹೆಸರಿನಲ್ಲಿ ರಾಣಿ ಸುದೇಷ್ಣೆಯ ಬಳಿ ಸೇವಕಿಯಾದಳು. 'ಇಲ್ಲಿಯ ಹೆಂಗಸರೂ ಇಲ್ಲಿ ಕಾಣುವ ಗಿಡಮರಗಳೂ ನಿನ್ನಲ್ಲಿ ಮೋಹಗೊಂಡಂತೆ ತೋರುತ್ತಿದೆ. ಇನ್ನು ಗಂಡಸರು ಕಂಡರೆ ಮೋಹಗೊಳ್ಳದೆ ಇರುತ್ತಾರೆಯೇ' ? ಎಂಬ ಸುದೇಷ್ಣೆಯ ಮಾತುಗಳಿಂದ, ದ್ರೌಪದಿ ಮರೆವೇಷದಲ್ಲಿದ್ದರೂ ತನ್ನ ಸೌಂದರ್ಯವನ್ನು ಮುಚ್ಚಿಟ್ಟುಕೊಳ್ಳಲುಸಮರ್ಥಳಾಗಿದ್ದಾಳೆಂಬುದು ಸ್ಪಷ್ಟ. ಅಕ್ಕನ ಅಂತಃಪುರದಲ್ಲಿ ಓಡಾಡುತ್ತಿದ್ದ ಇವಳನ್ನು ಕೀಚಕ ಕಂಡು, 'ವಾಸನೆಗಟ್ಟಿದ ಮದ್ಯದಂತೆ ಉನ್ಮಾದಗೊಳಿಸುತ್ತಿದ್ದ' ಅವಳ ಪ್ರೇಮವನ್ನು ಯಾಚಿಸುತ್ತಾನೆ. ದ್ರೌಪದಿಯಿಂದ ತಿರಸ್ಕøತನಾದ ಕೀಚಕ ಅಕ್ಕನ ನೆರವನ್ನು ಬೇಡುತ್ತಾನೆ. ಮಧುವನ್ನು ತರುವಂತೆ ಒತ್ತಾಯ ಮಾಡಿ ಸುದೇಷ್ಣೆ ಮಾಲಿನಿಯನ್ನು ಕೀಚಕನ ಅರಮನೆಗೆ ಕಳುಹಿಸುತ್ತಾಳೆ. ಅವಳನ್ನು ಕಂಡ ಕೀಚಕ ಕಾಮೋದ್ರೇಕದಿಂದ ಮುಂದುವರಿಯುತ್ತಾನೆ. ದ್ರೌಪದಿ ಅವನಿಂದ ತಪ್ಪಿಸಿಕೊಂಡು ಬಂದು ರಾಜಸಭೆಯನ್ನು ಪ್ರವೇಶಿಸುತ್ತಾಳೆ. ಕೀಚಕ ಬೆನ್ನಟ್ಟಿ ಬಂದು ತುಂಬಿದ ಸಭೆಯಲ್ಲಿ ಅವಳ ಜುಟ್ಟು ಹಿಡಿದು ವಿರಾಟರಾಜ, ವೇಷಾಂತರದಲ್ಲಿದ್ದ ಧರ್ಮರಾಯ ಮತ್ತು ಭೀಮಾದಿಗಳೆದುರಿಗೆ ಒದ್ದು ಕೆಡವುತ್ತಾನೆ. ಅಪಮಾನ ಜರ್ಝರಿತಳಾದ ದ್ರೌಪದಿ ಭೀಮನ ನೆರವನ್ನು ಬೇಡುತ್ತಾಳೆ. ಭೀಮ ಭರವಸೆ ಕೊಟ್ಟಮೇಲೆ ದ್ರೌಪದಿ ಕೀಚಕನನ್ನು ರಾತ್ರಿ ನಾಟ್ಯಶಾಲೆಗೆ ಏಕಾಂಗಿಯಾಗಿ ಬರಲು ಆಹ್ವಾನ ಕೊಡುತ್ತಾಳೆ. ಇಚ್ಛಾಪೂರ್ಣತೆಯ ಭರವಸೆಯಿಂದ ಹಿಗ್ಗಿ ಕೀಚಕ ರಾತ್ರಿ ನಾಟ್ಯಶಾಲೆಗೆ ಗೋಪ್ಯವಾಗಿ ಬರುತ್ತಾನೆ. ಮರೆವೇಷದಲ್ಲಿದ್ದ ಭೀಮನಿಗೂ ಕೀಚಕನಿಗೂ ಮಲ್ಲಯುದ್ಧ ನಡೆದು ಕೀಚಕ ಸಾಯುತ್ತಾನೆ. ಅಣ್ಣನ ದುರ್ಮರಣಕ್ಕೆ ಮಾಲಿನಿಯೇ ಕಾರಣಳೆಂದು ತಿಳಿದ ಉಪಕೀಚಕರು ಅವಳನ್ನು ಹಿಡಿದು ಶವರಥಕ್ಕೆ ಕಟ್ಟಿ ಶ್ಮಶಾನಕ್ಕೆಳೆದೊಯ್ಯುತ್ತಿರುತ್ತಾರೆ. ದ್ರೌಪದಿ ಪಾಂಡವರ ಗೋಪ್ಯ ನಾಮವನ್ನು ಹಿಡಿದು ಕೂಗುತ್ತಾಳೆ. ಇದನ್ನು ಕೇಳಿಸಿಕೊಂಡ ಭೀಮ ದೊಡ್ಡ ಮರವೊಂದನ್ನು ಕಿತ್ತು ತಂದು ಉಪಕೀಚಕರನ್ನು ಸವರಿ ಹಾಕಿ, ದ್ರೌಪದಿಯನ್ನು ಬಂಧಮುಕ್ತಳನ್ನಾಗಿಸುತ್ತಾನೆ. ಕೀಚಕ ಹಾಗೂ ಅವನ ದುಷ್ಟ ಸೋದರರು ನಾಶವಾಗುತ್ತಾರೆ == ಉಲ್ಲೇಖಗಳು ==