ಇದು ಧಾರವಾಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹುಬ್ಬಳ್ಳಿ ತಾಲ್ಲೂಕಿನ ಆಗ್ನೇಯಕ್ಕಿದೆ.೧೯೪೮ರಲ್ಲಿ ಇದು ಧಾರವಾಡ ಜಿಲ್ಲೆಯಲ್ಲಿ ಸಮಾವೇಶವಾಗುವ ಮೊದಲು ಜಮಖಂಡಿ ಸಂಸ್ಥಾನದ ಆಡಳಿತದಲ್ಲಿತ್ತು. == ವಿಸ್ತಾರ == ತಾಲ್ಲೂಕಿನ ವಿಸ್ತೀರ್ಣ ೬೦೮ ಚ.ಕಿಮೀ.ಮೊದಲು ಈ ತಾಲ್ಲೂಕಿನಲ್ಲಿದ್ದ ಹಳ್ಳಿಗಳ ಸಂಖ್ಯೆ ೫೮. ಪ್ರಾದೇಶಿಕ ಬದಲಾವಣೆಗಳ ಅನಂತರ ೫೧ಕ್ಕೆ ಇಳಿಯಿತು. ಪಟ್ಟಣವೆಂದರೆ ಕುಂದಗೋಳವೊಂದೇ. ಎರಡು ದೊಡ್ಡ ಪಂಚಾಯಿತೆ ಹಳ್ಳಿಗಳಿವೆ. ಉಳಿದವು ಕಿರಿಯವು. == ಜನಸಂಖ್ಯೆ == ತಾಲೂಕಿನ ಜನಸಂಖ್ಯೆ ೧,೫೭,೦೩೯(೨೦೦೧ರ ಜನಗಣತಿ ಪ್ರಕಾರ) == ಹವಾಗುಣ == ಇಲ್ಲಿಯದು ಶುಷ್ಕ ವಾಯುಗುಣ; ಕಪ್ಪುಮಿಶ್ರಿತ ಮಣ್ಣು. ತುಂಬ ಫಲವತ್ತಾಗಿದೆ. ಹತ್ತಿ ಮತ್ತು ಜೋಳ ಇಲ್ಲಿಯ ಮುಖ್ಯ ಬೆಳೆಗಳು. ಮಳೆ ಸಾಮಾನ್ಯವಾಗಿ 25"-30". == ವಾಣಿಜ್ಯ == ಇಲ್ಲಿ ದೊಡ್ಡಕೈಗಾರಿಕೆ ಯಾವುದೂ ಇಲ್ಲ. ಹತ್ತಿ ಎಕ್ಕುವ ಒಂದು ಕಾರ್ಖಾನೆಯಿದೆ. ಕೃಷಿಯೇ ಮುಖ್ಯ ಕಸಬು. == ಇತಿಹಾಸ == ತಾಲ್ಲೂಕಿನ ಮುಖ್ಯಸ್ಥಳವಾದ ಕುಂದಗೋಳ ಇತಿಹಾಸ ಪ್ರಸಿದ್ಧವಾದ್ದು. ಅದು ಮೊದಲು ಬ್ರಹ್ಮಪುರವಾಗಿದ್ದಿರಬೇಕೆಂದು ಸ್ಥಳಪುರಾಣದಿಂದ ವ್ಯಕ್ತವಾಗುತ್ತದೆ. ಇಲ್ಲಿಯ ಶಂಭುಲಿಂಗ ದೇವಾಲಯ ಪ್ರಸಿದ್ಧವಾದ್ದು. ಇದು ಬಂಕಾಪುರ ಕೋಟೆಯಲ್ಲಿರುವ ೬೦ ಕಂಬಗಳ ದೇವಾಲಯದ ಮಾದರಿಯಲ್ಲಿದೆ. ಚಾಳುಕ್ಯ ಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದ ಮೂಲ ಗುಡಿಯ ಸಭಾಮಂಟಪ ಮತ್ತು ಗರ್ಭಗುಡಿಗಳು ಮಾತ್ರ ಉಳಿದಿವೆ. ಸಭಾಮಂಟಪದ ವೃತ್ತಿನಲ್ಲಿ ಅಷ್ಟದಿಕ್ಪಾಲಕರನ್ನು ಕೆತ್ತಲಾಗಿದೆ. ಹೊರಬದಿಯಲ್ಲಿ ಕೀರ್ತಿ ಮುಖಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವೂ ಮುಂಭಾಗದ ಕೋಣೆಯ ಎಡಬಲಗಳಲ್ಲಿ ಪಾರ್ವತಿ ವಿಘ್ನೇಶ್ವರರ ವಿಗ್ರಹಗಳೂ ಇವೆ. ದ್ವಾರದ ಮೇಲ್ಭಾಗದಲ್ಲಿ ಲಕ್ಷ್ಮಣ ರಾಮ ಸೀತೆಯರನ್ನು ಕೆತ್ತಲಾಗಿದೆ. ದೇವಾಲಯದ ಕೆಲಭಾಗದ ಜೀರ್ಣೊದ್ಧಾರವಾಗಿದೆ. ಬ್ರಹ್ಮದೇವರ ಗುಡಿ, ದತ್ತಾತ್ರೇಯಗುಡಿ, ಶಂಕರಾಚಾರ್ಯರ ಗುಡಿ ಹಾಗೂ ಮಲ್ಲಕಾರ್ಜುನ ಗುಡಿಗಳು ಇಲ್ಲಿಯ ಇತರ ದೇವಾಲಯಗಳು. ಇಲ್ಲಿ ಹನ್ನೊಂದು ಶಿಲಾಶಾಸನಗಳಿವೆ. ೧೦೪೦ರದು ಅತಿ ಹಳೆಯದು. ಈ ಶಿಲಾಶಾಸನಗಳು ಚಾಳುಕ್ಯ, ಕಳಚುರಿ ಮತ್ತು ವಿಜಯನಗರ ಕಾಲಗಳಿಗೆ ಸೇರಿದವು == ಸಂಗೀತ ಕ್ಷೇತ್ರ == ಕುಂದಗೋಳ ಭಾರತದ ಸಂಗೀತ ನಕ್ಷೆಯಲ್ಲಿ ತನ್ನ ಹೆಸರನ್ನು ಮೂಡಿಸಿಕೊಂಡಿದೆ. ಸವಾಯಿ ಗಂಧರ್ವರು ಇಲ್ಲಿದ್ದಾಗ ಅವರು ಭೀಮಸೇನ ಜೋಷಿ ಮತ್ತು ಗಂಗೂಬಾಯಿ ಹಾನಗಲ್ಲರಂಥ ಅಖಿಲ ಭಾರತ ಖ್ಯಾತಿಯ ಶಿಷ್ಯರನ್ನು ತಯಾರಿಸಿದರು. ಸವಾಯಿಗಂಧರ್ವರ ಸಂಗೀತದಿಂದಾಗಿ ಕುಂದಗೋಳ ಪಟ್ಟಣ ಸಂಗೀತದ ನೆಲೆವೀಡಾಗಿ ಪರಿಣಮಿಸಿತು. ಇಲ್ಲಿಯ ನಾನಾಸಾಹೇಬ ನಾಡಗಿರರು ಅವರ ಶಿಷ್ಯರಲೊಬ್ಬರು. ಅವರೀಗ ತಮ್ಮ ಗುರುಗಳ ಪುಣ್ಯತಿಥಿಯಂದು ಕುಂದಗೋಳದಲ್ಲಿ ಸಂಗೀತ ಸಮಾರೋಹ ಜರುಗಿಸುತ್ತಾರೆ. ಭಾರತದ ನಾನಾ ಮೂಲೆಗಳಿಂದ ಬರುವ ಸಂಗೀತಗಾರರ ಕಾರ್ಯಕ್ರಮಗಳಿಂದ ಕೂಡಿದ ಈ ಸಂಗೀತಾರಾಧನೆ ಜನಾಕರ್ಷಕವಾಗಿ ಪರಿಣಮಿಸಿದೆ. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರೂ ಕುಂದಗೋಳ ತಾಲೂಕಿನ ಕಮಡೊಳ್ಳಿಯವರು. == ಉಲ್ಲೇಖಗಳು ==