ಕುರುಕ್ಷೇತ್ರ ಹರಿಯಾಣ ರಾಜ್ಯದಲ್ಲಿರುವ ಒಂದು ನಗರ ಮತ್ತು ಜಿಲ್ಲೆ. ಪಾಂಡವ-ಕೌರವರ ಪೂರ್ವಜ 'ಕುರು' ಎಂಬ 'ಕುರುವಂಶದ ಮೂಲ ಪುರುಷ'ನಿಂದ 'ಕುರುವಂಶ' ಹಾಗೂ 'ಕುರುಕ್ಷೇತ್ರ'ವೆಂಬ ಹೆಸರು ಬರಲು ಕಾರಣ. == ಇತಿವೃತ್ತ == ನವದೆಹಲಿಯಿಂದ ಉತ್ತರದ ಕಡೆಗೆ ಸಾಗುವಾಗ ೧೬೦ ಕಿಮೀ ದೂರದಲ್ಲಿ ಸೋನಿಪತ್ ಪಾನಿಪತ್ ಅನಂತರ ಪುರಾಣಪ್ರಸಿದ್ಧ ಕುರುಕ್ಷೇತ್ರ ರೈಲುನಿಲ್ದಾಣ ಸಿಗುತ್ತದೆ. ಅದೊಂದು ಪುಟ್ಟ ರೈಲುನಿಲ್ದಾಣ. ಕುರುಕ್ಷೇತ್ರವೆಂದರೆ ಮಹಾಭಾರತಯುದ್ಧ ನಡೆದ ಸ್ಥಳ. ಪುರಾತನ ಧಾರ್ಮಿಕ ಕ್ಷೇತ್ರ. ಇದಕ್ಕೆ 'ಧರ್ಮ ಕ್ಷೇತ್ರ'ವೆಂದು ಹೆಸರು. ಇದು ಪೌರಾಣಿಕ ಸ್ಥಳವೆಂದು ಬೆರಳೆಣಿಕೆಯಷ್ಟು ಯಾತ್ರಾರ್ಥಿಗಳು ಬರುತ್ತಾರೆ ಹೊರತು ಹೇಳಿಕೊಳ್ಳುವಂಥ ದೊಡ್ಡ ಪಟ್ಟಣವೇನಲ್ಲ. ಕುರುಕ್ಷೇತ್ರ ಜಿಲ್ಲೆಯ ಒಟ್ಟು ವಿಸ್ತೀರ್ಣ ೧,೬೮೨ ಚ. ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸ೦ಖ್ಯೆ ೬, ೪೧, ೦೦೦. == ಕುರುಕ್ಷೇತ್ರದ ಸುತ್ತ ಮುತ್ತ == ಪುಟ್ಟ ರೈಲು ನಿಲ್ದಾಣ, ಕೆಲವು ಬ್ಯಾಂಕುಗಳು, ಅಂಗಡಿಸಾಲು ಹಾಗೂ ಜನಜೀವನ ಇವೆಲ್ಲ ಉತ್ತರ ಇಂಡಿಯಾದ ಬೇರೆಲ್ಲ ಊರುಗಳಂತೆಯೇ ತೋರಿದರೂ ಹಲವಾರು ಧರ್ಮಶಾಲೆಗಳು ಹಾಗೂ ಗುಡಿಗಳು ನಮ್ಮ ಮನಸ್ಸನ್ನು ನಿಧಾನವಾಗಿ ಪುರಾಣಪ್ರಸಿದ್ಧ ಕಾಲವೊಂದಕ್ಕೆ ಕರೆದೊಯ್ಯು ತ್ತವೆ. ಸಿಖ್ ಧರ್ಮದಲ್ಲಿಯೂ ಇದು ಪವಿತ್ರ ಸ್ಥಳ-ಎಲ್ಲ ಹತ್ತು ಸಿಖ್ ಗುರುಗಳೂ ಇಲ್ಲಿಗೆ ಭೇಟಿ ನೀಡಿದ್ದರಿ೦ದ ಈ ಸ್ಥಳಕ್ಕೆ ಸಿಕ್ಖರಲ್ಲಿ ಪವಿತ್ರ ಸ್ಥಾನ ಉ೦ಟು. ಕುರುಕ್ಷೇತ್ರ ಜಿಲ್ಲೆಯಲ್ಲಿ ಥಾನೇಶ್ವರ ಮತ್ತು ಪೆಹೋವ ತಾಲ್ಲೂಕುಗಳಿವೆ. ಥಾನೇಶ್ವರ, ಪೆಹೋವ ಮತ್ತು ಕುರುಕ್ಶೇತ್ರ ಇಲ್ಲಿಯ ಮುಖ್ಯಪಟ್ಟಣಗಳು. ಚಂಧೀಘಡ ಇಲ್ಲಿಂದ ೭೫ ಕಿ.ಮೀ.ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೧ ಇಲ್ಲಿಂದ ಸಾಗುತ್ತದೆ. == ಸನ್ನಿಹತ್ ಸರೋವರ == ಸುಪ್ರಸಿದ್ಧ ತೀರ್ಥ ಸ್ಥಳವಾದ,ಸನ್ನಿಹಿತ್ ಸರೋವರ ಇಲ್ಲಿದೆ. ೧,೫೦೦ ಅಡಿ ಉದ್ದ,೫೦ ಅಡಿ ಅಗಲವಿರುವ ಈ ಸರೋವರದ ಸುತ್ತಲೂ ಸ್ನಾನದ ಕಟ್ಟೆಗಳು ಇದ್ದು ನದಿಗೆ ಹೋಗಲು ಮೆಟ್ಟಿಲುಗಳಿವೆ. ಕೆರೆಯ ಹತ್ತಿರ, ಧ್ರುವನಾರಾಯಣ, ಮಾತಾ ದುರ್ಗೆ, ಮತ್ತು ಹನುಮಾನ್ ಮಂದಿರಗಳಿವೆ. 'ಏಳು ಪವಿತ್ರ ಸರಸ್ವತಿಯರ ಸಂಗಮ ಸ್ಥಾನ'ವೆಂಬ ನಂಬಿಕೆ ಜನರಲ್ಲಿದೆ. ಅಮಾವಾಸ್ಯೆ, ಮತ್ತು ಗ್ರಹಣದ ದಿನಗಳಲ್ಲಿ ಇಲ್ಲಿ ಸ್ನಾನಮಾಡುವುದರಿಂದ ಸಕಲ ಪಾಪಗಳೂ ಪರಿಹಾರವಾಗುವುದೆಂಬ ನಂಬಿಕೆ ಇದೆ. == ಬ್ರಹ್ಮ ಸರೋವರ == ಬೃಹದಾಕಾರದ ಬ್ರಹ್ಮಸರೋವರವು ಯಾತ್ರಾರ್ಥಿಗಳಿಗೆ ತಂಗುದಾಣ, 'ಸ್ನಾನಘಟ್ಟ', 'ದೋಣಿವಿಹಾರ', 'ನಡುಗಡ್ಡೆ' ಮುಂತಾದವುಗಳಿಂದ ಸುಸಜ್ಜಿತವಾಗಿದೆ. ಸರೋವರದ ಎದುರಿಗಿನ ವಿದ್ಯಾಪೀಠದಲ್ಲಿ ಕುರುಕ್ಷೇತ್ರ ಯುದ್ಧವನ್ನು ಜೀವಂತಿಕೆಯಿಂದ ತೋರಿಸುವ 'ಗೊಂಬೆ ಗ್ಯಾಲರಿ' ಇದೆ. ಅಲ್ಲಿಂದ ಪಂಚಪಾಂಡವರ ಮಂದಿರ ದಾಟಿಕೊಂಡು ಮುಂದೆ ಹೋದರೆ ಬಿರ್ಲಾ ಮಂದಿರವಿದ್ದು ಅದರ ಆವರಣದಲ್ಲಿರುವ ಅಮೃತಶಿಲೆಯ ಶ್ರೀಕೃಷ್ಣರಥವು ಕಣ್ಮನ ಸೆಳೆಯುತ್ತದೆ. ಮಹಾಭಾರತ ಯುದ್ಧದಲ್ಲಿ ಪ್ರಾಣತೆತ್ತ ಹದಿನೆಂಟು ಅಕ್ಷೋಹಿಣಿ ಸೈನಿಕರಿಗೆ ಒಮ್ಮೆಗೇ ತರ್ಪಣ ಬಿಟ್ಟ ಸ್ಥಳವೆಂದು 'ಸೂರಜ್‌ಕುಂಡ್' ಪ್ರಸಿದ್ಧವಾಗಿದೆ. == ಗೀತೋಪದೇಶದ ಸ್ಥಾನ == ಮಹಾಭಾರತದ ಯುದ್ಧದಲ್ಲಿ ನಡೆದ ಅತಿ ಮುಖ್ಯವಾದ ಘಟನೆ ಗೀತೋಪದೇಶ. ಕುರುಕ್ಷೇತ್ರದ ಊರ ಹೊರಗೆ ಹೊರಟರೆ ನಾಲ್ಕು ಕಿಲೋಮೀಟರು ದೂರದಲ್ಲಿ ಜೋತಿಸರ ಎಂಬಲ್ಲಿ ಒಂದು ಪ್ರದೇಶವನ್ನು ಈ ಗೀತೋಪದೇಶದ ತಾಣವೆಂದು ಗುರುತಿಸಲಾಗಿದೆ. ಆ ಜಾಗದಲ್ಲಿ ಒಂದು ರಥವನ್ನೂ ಅದರ ಚಾಲಕಸ್ಥಾನದಲ್ಲಿ ಕೃಷ್ಣನ ಮೂರ್ತಿಯನ್ನೂ, ಅರ್ಜುನನ ಮೂರ್ತಿಯನ್ನೂ ನಿಲ್ಲಿಸಲಾಗಿದೆ. ಸನಿಹದಲ್ಲೇ ಒಂದು ಪುರಾತನ ಆಲದ ಮರವಿದ್ದು ಗೀತೋಪದೇಶಕ್ಕೆ ಸಾಕ್ಷಿಯಾದ ಮರವೆಂದು ಅದನ್ನು ಪೂಜಿಸಲಾಗುತ್ತಿದೆ. ಈ ಜಾಗವನ್ನೂ ಹತ್ತಿರದ ಗುಡಿಗಳು ಹಾಗೂ ಸನಿಹದ ಸರೋವರವನ್ನೂ ಸಂಯೋಜಿಸಿ ರಾತ್ರಿ ಹೊತ್ತಿನಲ್ಲಿ ಪ್ರದರ್ಶಿಸುವ ಧ್ವನಿಬೆಳಕಿನ ಕಾರ್ಯಕ್ರಮವು ನೋಡಲು ಚೆನ್ನಾಗಿರುತ್ತದೆ. == ಬಾಣ ಗಂಗ == ಕುರುಕ್ಷೇತ್ರದ ಇನ್ನೊಂದು ಮುಖ್ಯವಾದ ಸ್ಥಳ ಬಾಣಗಂಗಾ. ಕುರುಕ್ಷೇತ್ರ ಯುದ್ಧದಲ್ಲಿ ಧರೆಗುರುಳಿದ ಇಚ್ಛಾಮರಣಿ ಭೀಷ್ಮನಿಗೆ ನೀರಡಿಕೆಯಾದಾಗ ಬಿಲ್ಗಾರ ಅರ್ಜುನನು ಭೂಮಿಗೆ ಬಾಣ ಹೂಡಿ ನೀರು ಚಿಮ್ಮಿಸಿದನೆನ್ನಲಾದ ತಾಣವಿದು. ಈ ಸ್ಥಳದಲ್ಲಿ ಒಂದು ಬಾವಿಯಿದ್ದು ಇದರ ಜಲವನ್ನು ಜನರು ಶ್ರದ್ಧಾಭಕ್ತಿಗಳಿಂದ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. == ಕುರುಕ್ಷೇತ್ರ ವಿಶ್ವವಿದ್ಯಾಲಯ == ಇವೇ ಪುರಾಣ ದೃಶ್ಯಗಳನ್ನು ಮತ್ತೆ ನೋಡಲೆಂದೇ ಇರುವ ಪ್ಯಾನೋರಮಾ ಮತ್ತು ವಿಜ್ಞಾನಕೇಂದ್ರವು ಕುರುಕ್ಷೇತ್ರ ಯುದ್ಧವರ್ಣನೆಯನ್ನು ವಿವರಿಸುವ ವಿನೂತನ ತಂತ್ರಜ್ಞಾನದ ಸ್ಥಿರಚಿತ್ರಶಾಲೆ. ಕುರುಕ್ಷೇತ್ರದ ನೆಲದಲ್ಲಿ ಕಾಲೂರಿ ಕುರುಕ್ಷೇತ್ರದ ಕಾಲಕ್ಕೆ ಜಾರುತ್ತಾ ಅಂದಿನ ಮಹಾಭಾರತ ಯುದ್ಧವನ್ನು ಕಣ್ಣಾರೆ ಕಾಣುವ ಅವಕಾಶ ಒದಗಿಸುತ್ತದೆ ಈ ಕಲಾಕೇಂದ್ರ. 'ಕೃಷ್ಣ ವಸ್ತುಸಂಗ್ರಹಾಲಯ'ವೂ ಪಕ್ಕದಲ್ಲಿಯೇ ಇದ್ದು ಮಹಾಭಾರತವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಇಷ್ಟಲ್ಲದೆ ಕುರುಕ್ಷೇತ್ರದಲ್ಲಿ ವಿಶ್ವವಿದ್ಯಾಲಯವಿದೆ, ಕಲ್ಪನಾ ಚಾವ್ಲಾ ತಾರಾಲಯವಿದೆ. ಇವೆಲ್ಲ ಆಧುನಿಕತೆಯ ನಡುವೆ ಎತ್ತ ನೋಡಿದರತ್ತ ಗಲೀಜು, ಕಾವಿಧಾರಿ ಭಿಕ್ಷುಕರ ಸಾಲು, ಬೀಡಾಡಿ ವೃದ್ಧರ ದಯನೀಯ ಚಿತ್ರಗಳು ನಮ್ಮ ಇಂಡಿಯಾದ ಪುರಾಣ ಮತ್ತು ನವ್ಯತೆಯ ನಡುವಿನ ಕೊಂಡಿಗಳಾಗಿ ಉಳಿಯುತ್ತವೆ. == ಉಲ್ಲೇಖಗಳು ==