ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ (ಕಾರ್ಯಪ್ಪ ಜನವರಿ ) ಇವರು ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಇಬ್ಬರಲ್ಲಿ ಒಬ್ಬರು. ಇನ್ನೋರ್ವರು ಸ್ಯಾಮ್ ಮಾಣಿಕ್ ಶಾ. == ಬಾಲ್ಯ ಮತ್ತು ವಿದ್ಯಾಭ್ಯಾಸ == ಕೊಡಂದೆರ ಮಾದಪ್ಪ ಕಾರಿಯಪ್ಪ ೨೮ನೆಯ ಜನವರಿ, ೧೮೯೯ರಂದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದರು. (ಆದರೆ ಸೈನ್ಯದ ದಾಖಲೆಗಳ ಪ್ರಕಾರ ಅವರು ಹುಟ್ಟಿದ ವರ್ಷ ೧೯೦೦ ಎಂದಿದೆ.).ಇವರು ಕೊಡವ ಜನಾಂಗದವರಾಗಿದ್ದು, ಕೊಡಂದೆರ ಮನೆತನಕ್ಕೆ ಸೇರಿದವರು. ತಂದೆ ಮಾದಪ್ಪನವರು ಕಂದಾಯ ಇಲಾಖೆ ಯಲ್ಲಿದ್ದರು. ಕಟ್ಟುನಿಟ್ಟಾಗಿ ಶಿಸ್ತನ್ನು ಪಾಲಿಸುವವರು. ತಾಯಿ ಕಾವೇರಿ. ಕಾರ್ಯಪ್ಪನವರು ತಮ್ಮ ಕೊನೆಯುಸಿರಿನವರೆಗೂ ಇವರಿಬ್ಬರನ್ನೂ ದೇವರಂತೆ ಪೂಜಿಸಿದರು. ಸಂಬಂಧಿಗಳಿಗೆಲ್ಲ 'ಚಿಮ್ಮ'ನಾಗಿದ್ದ ಕಾರಿಯಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಯಿತು. ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೆಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು. ಕಾಲೆಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರಿಯಪ್ಪನವರನ್ನು ಒಂದೇ ರೀತಿಯಿಂದ ಆಕರ್ಷಿಸಿದವು. ಇವರು ಸಕ್ರಿಯ ಕ್ರೀಡಾಪಟುವಾಗಿದ್ದು, ಹಾಕಿ ಮತ್ತು ಟೆನ್ನಿಸ್‌ನಂಥ ಆಟಗಳನ್ನು ಹುರುಪಿನಿಂದ ಮತ್ತು ಜಾಣತನದಿಂದ ಆಡುತ್ತಿದ್ದರು. ಇದರ ಜೊತೆಗೆ ಸಂಗೀತವನ್ನು ಮೆಚ್ಚುತ್ತಿದ್ದರು ಮತ್ತು ಕೈ ಚಳಕ ತೋರಿಸುವ ಜಾದುವಿನ ಬಗ್ಗೆಯೂ ಇವರಿಗೆ ಒಲವಿತ್ತು. == ಸೇನೆ ಸೇರಿಕೆ ಮತ್ತು ಮೊದಲಿನ ಕೆಲವು ವರ್ಷಗಳು == ೧೯೧೮ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ರಾಜನ ಸೈನ್ಯದಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಇದರ ನಂತರ ನಡೆದ ಕಠಿಣ ಪರೀಕ್ಷೆಗಳ ನಂತರ ಆಯ್ಕೆಯಾದ ಕೆಲವೇ ಭಾಗ್ಯಶಾಲಿಗಳಲ್ಲಿ ಕಾರಿಯಪ್ಪನವರೂ ಕೂಡ ಒಬ್ಬರಾಗಿದ್ದರು, ನಂತರ ಸೇನೆಯ ನಿಯುಕ್ತಿಯ ಮುಂಚಿನ ಕಠಿಣತರವಾದ ತರಬೇತಿಯನ್ನು ಪಡೆದರು. ಇಂದೂರಿನ ಡ್ಯಾಲಿ ಕೆಡೆಟ್ ಕಾಲೇಜ್‌( )ನಲ್ಲಿ ಬ್ರಿಟಿಶ್ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ [ (' )] ಮೊದಲ ವರ್ಗಕ್ಕೆ ಸೇರಿಕೊಂಡರು. ನಂತರ ೧ನೇ ಡಿಸೆಂಬರ್ ೧೯೧೯ರಲ್ಲಿ ಮುಂಬಯಿಯಲ್ಲಿದ್ದ ೨ನೇ ಬೆಟ್ಯಾಲಿಯನ್ ೮೮ನೇ ಕಾರ್ನಾಟಿಕ್ (ಕೊಡಗು) ಪದಾತಿ ದಳಕ್ಕೆ ನಿಯುಕ್ತರಾದರು. ಮೂರು ತಿಂಗಳ ನಂತರ ೨/೧೨೫ನೇಪಿಯರ್ ರೈಫ್‌ಲ್ಸ್ (ಸ್ವಾತಂತ್ರ್ಯಾನಂತರ ೫ನೇ ರಜಪುತಾನ ರೈಫ್‌ಲ್ಸ್)ಗೆ ವರ್ಗಾವಣೆಯಾಗಿ, ಮೆಸೊಪೊಟಾಮಿಯಾ (ಈಗಿನ ಇರಾಕ್)ದಲ್ಲಿ ನೇಮಕಗೊಂಡರು. ಅಲ್ಲಿ ಇದ್ದ ಎರಡು ವರ್ಷಗಳಲ್ಲಿ ಬಂಡುಗೋರರನ್ನು ಹತೋಟಿಗೆ ತರುವುದರಲ್ಲಿ ಸಫಲರಾದರು. ತದ ನಂತರ ಭಾರತಕ್ಕೆ ಮರಳಿ ಬಂದು, ವಾಯವ್ಯ ಗಡಿ ಪ್ರದೇಶ(- )ದ ಅಫಘಾನಿಸ್ಥಾನದ ಸರಹದ್ದಿನ ವಜೀರಿಸ್ತಾನದಲ್ಲಿದ್ದ (ಈಗ ಪಾಕಿಸ್ತಾನದಲ್ಲಿದೆ) ವೇಲ್ಸ್ ರಾಜಕುಮಾರನ ಸ್ವಂತ ೭ನೇ ಡೊಗ್ರಾ ದಳದಲ್ಲಿ ಸೈನ್ಯದ ಸಕ್ರಿಯ ಸೇವೆಯನ್ನು ಮುಂದುವರೆಸಿದರು. ಮರುಭೂಮಿಯಂಥ ವಿಪರೀತ ಹವಾಮಾನವಿರುವ ಆ ಪ್ರದೇಶದಲ್ಲಿ ಲೆಫ್ಟಿನೆಂಟ್ ಕಾರ್ಯಪ್ಪನವರು, ದೂರದರ್ಶಕ ಯಂತ್ರವಿಲ್ಲದಿರುವ ಕೋವಿ(- )ಗಳಿಂದ ಶತ್ರುವಿನ ಎರಡೂ ಕಣ್ಣುಗಳ ಮಧ್ಯಕ್ಕೆ ಗುಂಡು ಹೊಡೆಯುವ ನೈಪುಣ್ಯವಿರುವ ಪಠಾಣರ ವಿರುದ್ಧ ಹೋರಾಡಿ ಜಯಶೀಲರಾದರು. ಅತೀವ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಅನಾಗರಿಕ ಬಂಡುಕೋರರ ಗೆರಿಲ್ಲಾ ಆಕ್ರಮಣಗಳನ್ನು ಎದುರಿಸಿ ಕಾರ್ಯಪ್ಪನವರು ಗಳಿಸಿದ ವಿಜಯಶ್ರೀ ಬ್ರಿಟಿಶ್ ಸೈನ್ಯದ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯಿತು. ಇದು ಸೈನ್ಯದಲ್ಲಿ ಅವರ ಏಳಿಗೆಗೆ ಪ್ರೋತ್ಸಾಹದಾಯಕವಾಯಿತು. ಅಲ್ಲಿಂದ ಇವರನ್ನು ೧/೭ನೇ ರಜಪೂತ ರೆಜಿಮೆಂಟ್‌ಗೆ (ವಿಕ್ಟೊರಿಯಾ ರಾಣಿಯ ಸ್ವಂತ ಲಘು ಪದಾತಿದಳಕ್ಕೆ) ವರ್ಗಾಯಿಸಲಾಯಿತು. ಈ ದಳವೇ ಇವರು ಸೈನ್ಯದಿಂದ ನಿವೃತ್ತಿಯಾಗುವವರೆಗೆ ಇವರ ಮೂಲ ನೆಲೆಯಾಯಿತು. ಇರಾಕ್ ಮತ್ತು ವಜೀರಿಸ್ತಾನದಲ್ಲಿ ನಡೆಸಿದ ಸೈನ್ಯ ಕಾರ್ಯಾಚರಣೆಯ ಅನುಭವವು ಇವರ ಮುಂದಿನ ಜೀವನದ ಶೌರ್ಯ-ಸಾಹಸಗಳಿಗೆ ಅಡಿಪಾಯವನ್ನು ರಚಿಸಿತು. ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. ೧೯೩೩ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬ್ಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿಯಾಗಿದ್ದರು. ಮುಂದೆ ೧೯೪೬ರಲ್ಲಿ ಇವರಿಗೆ ಫ್ರಂಟೀಯರ ಬ್ರಿಗೆಡ್ ಗುಂಪಿನ ಬ್ರಿಗೆಡಿಯರರಾಗಿ ಬಡ್ತಿ ಕೊಡಲಾಯಿತು. ಇದೇ ಅವಧಿಯಲ್ಲಿ ಕರ್ನಲ್ ಅಯೂಬ್ ಖಾನ್ (ಮುಂದೆ ಇವರು ಪಾಕಿಸ್ತಾನrd ಸೈನ್ಯದ ಫೀಲ್ಡ ಮಾರ್ಷಲ್ ಮತ್ತು ೧೯೬೨ರಿಂದ ೧೯೬೯ರವರೆಗೆ ರಾಷ್ಟ್ರಪತಿಯಾಗಿದ್ದರು) ಕಾರ್ಯಪ್ಪನವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. == ವಿದೇಶಗಳಲ್ಲಿ ಸೇವೆ == ೧೯೪೧-೪೨ರ ಅವಧಿಯಲ್ಲಿ ಕಾರಿಯಪ್ಪನವರು ಇರಾಕ್, ಸಿರಿಯಾ ಮತ್ತು ಇರಾನ್ ದೇಶಗಳಲ್ಲಿ ಮತ್ತು ೧೯೪೩-೪೪ರಲ್ಲಿ ಬರ್ಮಾದಲ್ಲಿ ಸೇವೆ ಸಲ್ಲಿಸಿದರು. ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. ೧೯೪೨ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅಂತಹ ಅಧಿಕಾರ ದೊರಕಿದ ಮೊದಲ ಭಾರತೀಯ ಅಧಿಕಾರಿ ಇವರಾಗಿದ್ದರು. ಸ್ವಲ್ಪ ಸಮಯದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ ೨೬ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸುವ ಸ್ವಯಂ ಇಚ್ಛೆ ವ್ಯಕ್ತಪಡಿಸಿ ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ ( ಪ್ರಶಸ್ತಿಯನ್ನು ೧೯೪೪ರಲ್ಲಿ ಕೊಡಲಾಯಿತು. ೧೯೪೬ರಲ್ಲಿ ಕಾರ್ಯಪ್ಪನವರಿಗೆ ಬ್ರಿಗೇಡಿಯರನ್ನಾಗಿ ಬಡ್ತಿಯನ್ನು ನೀಡಿ, ನಾಲ್ಕನೆಯ ಬಾರಿಗೆ ವಾಯವ್ಯ ಗಡಿ ಪ್ರದೇಶದಲ್ಲಿ ನೇಮಿಸಲಾಯಿತು. ಈ ಬಾರಿಗೆ ಬನ್ನು ಬ್ರಿಗೇಡಿನ ನಾಯಕತ್ವವನ್ನು ಕೊಡಲಾಯಿತು. ೧೯೪೭ರಲ್ಲಿ ಯುನೈಟೆಡ್ ಕಿಂಗಡಮ್‌‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದರು, ಇಂತಹ ತರಬೇತಿಯನ್ನು ಪಡೆದ ಮೊದಲ ಭಾರತೀಯರು ಕಾರಿಯಪ್ಪನವರು.ಹೃದಯವಿದ್ರಾವಕವಾದ ವಿಭಜನೆಯ ಸಮಯದಲ್ಲಿ ಕಾರಿಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು, ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಸಂಯಮತೆಯಿಂದ ಮತ್ತೂ ಎರಡೂ ಪಕ್ಷಗಳಿಗೂ ಒಪ್ಪುವ ರೀತಿಯಲ್ಲಿ ನೆರವೇರಿಸಿದರು. ಇವರು ಈ ನಿರ್ಗಮನದ ಕಾರ್ಯದ ಭಾರತದ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದರು. == ಸ್ವಾತಂತ್ರ್ಯಾನಂತರ ಸೇವೆ == ಸ್ವಾತಂತ್ರ್ಯಾನಂತರ ಕಾರ್ಯಪ್ಪನವರಿಗೆ ಮೇಜರ್ ಜನರಲ್ ಪದವಿಯನ್ನಿತ್ತು ಭಾರತೀಯ ಸೈನ್ಯದ ಉಪದಂಡನಾಯಕರನ್ನಾಗಿ ಮಾಡಲಾಯಿತು. ಬಳಿಕ ಲೆಫ್ಟಿನೆಂಟ್ ಜನರಲ್ ಎಂದು ಪದೋನ್ನತಿ ಮಾಡಿದಾಗ ಇವರು ಪೂರ್ವ ಸೈನ್ಯದ ಕಮಾಂಡರ್( ) ಆದರು. ೧೯೪೭ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲನ್ನು ಹಿಂತಿರುಗಿ ಪಡೆಯುವದಕ್ಕೆ ಸೈನ್ಯಕ್ಕೆ ಕಾರ್ಯಪ್ಪನವರು ಮಾರ್ಗದರ್ಶನ ಮಾಡಿದರು. ಅಲ್ಲದೆ, ಲೆಹ್‌ಗೆ ಕಡಿದು ಹೋಗಿದ್ದ ಸಂಪರ್ಕವನ್ನು ಮಾಡಿಕೊಟ್ಟರು. ೧೯೪೯ರ ಜನವರಿ ೧೫ರಂದು ಜನರಲ್ ಆಗಿ ಬಡ್ತಿಯನ್ನು ಪಡೆದ ಕಾರ್ಯಪ್ಪನವರು ಭಾರತೀಯ ಸೈನ್ಯದ ಅತಿ ವರಿಷ್ಠ ನಾಯಕ(--)ರಾದರು. == ಸೈನ್ಯದಿಂದ ನಿವೃತ್ತಿಯ ಬಳಿಕ == ಭಾರತೀಯ ಸೈನ್ಯದಲ್ಲಿ ಕಾರ್ಯಪ್ಪನವರ ಸೇವೆ ಅಖಂಡವಾಗಿ ೨೯ವರ್ಷಗಳವರೆಗೆ ನಡೆಯಿತು. ೧೯೫೩ನೇ ಇಸವಿಯಲ್ಲಿ ಅವರು ಸೈನ್ಯದಿಂದ ನಿವೃತ್ತರಾದರು. ಆ ಬಳಿಕ ೧೯೫೬ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂ ಜೀಲ್ಯಾಂಡ್‌ ದೇಶಗಳ ಹೈ ಕಮಿಶನರ್ ಆಗಿದ್ದರು. ಅವರು ಬಹಳ ದೇಶಗಳ ಸೈನ್ಯಗಳ ಪುನಾರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಪ್ರಪಂಚವನ್ನೆಲ್ಲಾ ಸುತ್ತಿ ಬಂದ ಅನುಭವಿ. ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಹ್ಯಾರಿ ಟ್ರುಮನ್ ಇವರಿಗೆ ' ' ಬಿರುದನ್ನಿತ್ತರು. ನಮ್ಮ ಭಾರತ ಸರ್ಕಾರ ೧೯೮೬ನೇ ಇಸವಿ ಜನವರಿ ೧೪ರಂದು ಫೀಲ್ಡ್ ಮಾರ್ಶಲ್ ಪದವಿಯನ್ನು ಕೊಟ್ಟಾಗ ಅವರಿಗೆ ೮೭ ವರ್ಷ ಪ್ರಾಯವಾಗಿತ್ತು. == ವ್ಯಕ್ತಿತ್ವ == ಮೊದಲ ವಿಶ್ವ ಯುದ್ಧದ ನಂತರದ ದಿನಗಳಲ್ಲಿ ಸೈನ್ಯವನ್ನೂ ಸೇರಿಸಿ, ದೇಶದ ಎಷ್ಟೆಲ್ಲೋ ಸಂಸ್ಥೆಗಳಿಗೆ ಭಾರತೀಯರಿಗೆ ಪ್ರವೇಶವಿರುತ್ತಿರಲಿಲ್ಲ. ಅಂತಹ ಕಡೆಗಳಲೆಲ್ಲಾ ಛಲದಿಂದ ಮತ್ತು ದೃಢ ಪ್ರಯತ್ನದಿಂದ ಕಾರ್ಯಪ್ಪನವರು ಪ್ರವೇಶವನ್ನು ಪಡೆದ ಮೊದಲ ಭಾರತೀಯರಾಗಿದ್ದರು. ಹೀಗೆ ಭಾರತೀಯ ಬ್ರಿಟಿಶ್ ಸೈನ್ಯವನ್ನು ಸೇರಿದ ಬಳಿಕ ಕಾರ್ಯಪ್ಪನವರು ಆಂಗ್ಲ ಸೈನ್ಯಾಧಿಕಾರಿಗಳು ಮತ್ತವರ ಕುಟುಂಬಗಳೊಡನೆಯೂ ಬಹು ಆಪ್ತರಾಗಿದ್ದು, ಆ ವಲಯಗಳಲ್ಲಿ "ಕಿಪ್ಪರ್" () ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದರು. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹ್ರೂ, ಅವರ ಸೋದರಿ ವಿಜಯಲಕ್ಷ್ಮಿ ಪಂಡಿತ್ ಹಾಗೂ ಪುತ್ರಿ ಪ್ರಧಾನಿ ಇಂದಿರಾ ಗಾಂಧಿಯವರೂ ಕಾರ್ಯಪ್ಪನವರನ್ನು ಕಿಪ್ಪರ್ ಎಂದೇ ಕರೆಯುವಷ್ಟು ಆತ್ಮೀಯರಾಗಿದ್ದರು. ತಮ್ಮ ಕುಟುಂಬದವರಿಗೆ ಚಿಮ್ಮನಾಗಿದ್ದ ಇವರು ಗೆಳೆಯರಿಗೆ "ಕ್ಯಾರಿ" () ಆಗಿದ್ದರು. ಅತ್ಯಂತ ಮಾನವೀಯ ಹೃದಯದ ಮತ್ತು ಸರಳತೆಯ ಪ್ರತೀಕವಾಗಿದ್ದ ಇವರು ಕೊಡಗಿನವರಿಗೆ ಪ್ರೀತಿಯ "ಕಾರ್ಯಪ್ಪಜ್ಜ" ಆಗಿದ್ದರು. ಕಾರ್ಯಪ್ಪನವರು ತಮ್ಮನ್ನು ಸೈನಿಕನೆಂದೇ ಗುರುತಿಸಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಭಾರತೀಯ ಸೈನಿಕನೊಬ್ಬನ ಸಣ್ಣ ಮೂರ್ತಿಯೊಂದಿತ್ತು. ನಿವೃತ್ತರಾದ ನಂತರವೂ ೧೯೬೫ ಮತ್ತು ೧೯೭೧ರ ಪಾಕಿಸ್ತಾನದ ವಿರುದ್ಧ ಯುದ್ಧವಾದ ಸಮಯದಲ್ಲಿ ಗಡಿ ಪ್ರದೇಶಗಳಿಗೆ ಹೋಗಿ ಸೈನಿಕರೊಂದಿಗೆ ಮಾತುಕತೆ ನಡೆಸಿ,ಅವರ ಮನಃಸ್ಥೈರ್ಯವನ್ನು ಉತ್ತುಂಗಕ್ಕೆ ತರಲು ಸಹಾಯ ಮಾಡಿದರು. ಕಾರ್ಯಪ್ಪನವರು ಯುದ್ಧ ನಿಪುಣರಾಗಿದ್ದರು. ಹಾಗಿದ್ದರೂ ಶತ್ರುಗಳಲ್ಲೂ ಮಾನವೀಯತೆಯನ್ನು ತೋರಿಸುತ್ತಿದ್ದರು. ೧೯೪೬ರಲ್ಲಿ ಪಠಾಣ್ - ಅಫ್‌ಘನ್ ಬುಡಕಟ್ಟು ಜನಾಂಗದವರ ನಿರಂತರ ಗೆರಿಲ್ಲಾ ದಾಳಿಯು ಬನ್ನು ಎಂಬ ಪ್ರದೇಶಕ್ಕೆ "ಬ್ರಿಟಿಶರ ಶ್ಮಶಾನ" ಎಂಬ ಅನ್ವರ್ಥ ನಾಮ ವನ್ನಿತ್ತಿತ್ತು. ಹಾಜಿ ಮಿರ್ಜಾ ಖಾನ್ ಎಂಬ ಫಕೀರನು ಬ್ರಿಟಿಶ್ ಕಾಫಿರರ ವಿರುದ್ಧ ಜಿಹಾದನ್ನು ಘೋಷಿಸಿದ್ದನು. ಗೆರಿಲ್ಲಾ ದಾಳಿಗೆ ತತ್ತರಿಸಿದ ಭಾರತೀಯ-ಬ್ರಿಟಿಶ್ ಸೈನ್ಯವು ಅಪಾರ ಸಾವು-ನೋವನ್ನುಂಡರೂ ಸೋಲೊಪ್ಪಲಿಲ್ಲ. ಬ್ರಿಗೆಡಿಯರಾಗಿದ್ದ ಕಾರ್ಯಪ್ಪನವರಿಗೆ ಈ ಯುದ್ಧದ ನೇತೃತ್ವ ದೊರಕಿದಾಗ ಇಬ್ಬಗೆಯ ಸೂತ್ರವನ್ನು ಬಳಸಿದರು. ಹಗಲು-ರಾತ್ರಿಗಳೆರಡರಲ್ಲೂ ಅವರ ಸೈನ್ಯವೂ ಗೆರಿಲ್ಲಾ ದಾಳಿಯಿಂದ ಸೇರಿಗೆ ಸವ್ವಾಸೇರಿನ ಉತ್ತರವೀಯಲಾರಂಭಿಸಿತು. ಜತೆಗೆ ಕಾರ್ಯಪ್ಪನವರು ಮಿರ್ಜಾ ಖಾನನೊಡನೆ ಸಮರಸ ಸಂಬಂಧವನ್ನು ಬೆಳೆಸಿದರು. ಈ ನಡುವೆ ಕಾರ್ಯಪ್ಪನವರಿಗೊಂದು ಸುವರ್ಣಾವಕಾಶ ತಾನಾಗಿಯೇ ಎದುರಾಯಿತು. ಅವಕಾಶಗಳನ್ನೇ ನಿರ್ಮಿಸಿಕೊಳ್ಳುವ ಚಾತುರ್ಯ ಮತ್ತು ನೈಪುಣ್ಯವಿದ್ದ ಅವರು ತಾನಾಗಿಯೇ ಬಂದದನ್ನು ಬಿಟ್ಟಾರೆಯೆ? ಒಮ್ಮೆ ಅವರಿಗೆ ತಾವು ಹೋಗುತ್ತಿದ್ದ ಮಾರ್ಗದ ಬದಿಯಲ್ಲಿ ಉದ್ದಕ್ಕೂ ಪಠಾಣ ಹೆಂಗುಸರು ನೀರಿನ ಬಿಂದಿಗೆಗಳನ್ನಿರಿಸಿಕೊಂಡು ನಿಂತಿರುವದು ಕಾಣಿಸಿತು. ಏನೆಂದು ವಿಚಾರಿಸಿದಾಗ, ಹತ್ತಾರು ಮೈಲುಗಟ್ಟಲೆ ದೂರದಿಂದ ಆ ಸ್ತ್ರೀಯರು ತಮ್ಮ ಮನೆಗಳಿಗೆ ನೀರು ತರುತ್ತಿದ್ದಾರೆಂದು ಗೊತ್ತಾಯಿತು. ಮನಕರಗಿದ ಕಾರ್ಯಪ್ಪನವರು ತಮ್ಮ ಠಾಣ್ಯಕ್ಕೆ ಮರಳಿ, ತಮ್ಮ ಸೈನಿಕರನ್ನೊಪ್ಪಿಸಿ, ಆ ಬುಡಕಟ್ಟು ಜನರ ಊರಿನ ಸಮೀಪದಲ್ಲೇ ಬಾವಿಯೊಂದನ್ನು ಸಂಜೆಯಾಗುವದರೊಳಗೆ ತೋಡಿಸಿಕೊಟ್ಟರು. ಕೆಲವೇ ದಿನಗಳಲ್ಲಿ ಆ ಫಕೀರನಿಗೆ ಈ ಸುದ್ಧಿ ಗೊತ್ತಾಗಿ, ತನ್ನ ಸಶಸ್ತ್ರ ಗುಂಪಿನೊಡನೆ ಕಾರ್ಯಪ್ಪನವರ ಬಳಿ ಬಂದು, ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು, "ಖಲೀಫಾ!" ಎಂದು ಉದ್ಘೋಷಿಸಿದ! ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿ ತಾವೂ ಇದ್ದು ಸೈನಿಕರಲ್ಲಿ ಮನಃಸ್ಥೈರ್ಯವನ್ನು ತುಂಬಿಸುತ್ತಿದ್ದರು. ಯುದ್ಧವೆಂದರೆ ಏನೆಂದು ಸೈನಿಕರು ತಿಳಿದಿರುತ್ತಾರೆಯೇ ಹೊರತು ಯುದ್ಧವನ್ನು ನಿರ್ಮಿಸುವ ರಾಜಕಾರಿಣಿಗಳಲ್ಲ, ಎಂದೆನ್ನುತ್ತಿದ್ದರು, ಕಾರ್ಯಪ್ಪನವರು. "ಆಧುನಿಕ ಯುದ್ಧನೀತಿಯಲ್ಲಿ ದೊಡ್ಡ ಸೈನ್ಯಬಲವಲ್ಲ; ಔದ್ಯೋಗಿಕ ಶಕ್ತಿಯ ಬೆಂಬಲ ಮುಖ್ಯವಾದದ್ದು. ಮುಂಚೂಣಿಯಲ್ಲಿ ಸೈನ್ಯ ಇದ್ದಾಗ, ಅದರ ಬೆನ್ನಲ್ಲೇ ಕೈಗಾರಿಕೋದ್ಯಮದ ಆಧಾರ ಅತ್ಯವಶ್ಯ"ಎಂದು ಕಾರ್ಯಪ್ಪನವರ ಪ್ರತಿಪಾದನೆ. "ನಮ್ಮ ಸೈನ್ಯಕ್ಕೆ ಯುದ್ಧಕಾಲದಲ್ಲಿದ್ದ ಶಾಂತಿಯು ಶಾಂತಿಸಮಯದಲ್ಲಿ ಇಲ್ಲವಾಗಿರುವದಕ್ಕೆ ನಮಗೆ ನಾಚಿಕೆಯಾಗಬೇಕು", ಎನ್ನುವದು ಅವರ ಕಳಕಳಿ ತುಂಬಿದ ವಿಡಂಬನೆ! ಪ್ರಾಣವನ್ನು ಮುಡಿಪಾಗಿಟ್ಟು ದೇಶ ಸೇವೆ ಮಾಡುವ ಸೈನಿಕರ ಸೇವೆಯನ್ನು ಸರಕಾರ ಮಾಡಬೇಕು. ಅದಾಗದಿರುವದು ನಮ್ಮ ರಾಜಕೀಯ ದುರಂತ. == ಸಾರ್ವಜನಿಕ ಸೇವೆ == ಕಾರ್ಯಪ್ಪನವರು ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆ ಬಹಳಷ್ಟು ದುಡಿದರು. ೧೯೬೪ರಲ್ಲಿ ‘ಭಾರತೀಯ ಭೂತಪೂರ್ವ ಸೈನಿಕ ಸಂಘ’ವನ್ನು ( - ) ಜನರಲ್ ತಿಮ್ಮಯ್ಯನವರೊಡನೆ ಸ್ಥಾಪಿಸಿದರು. "ರಕ್ಷಣಾಬಲಗಳ ಸ್ಥೈರ್ಯ ಉಳಿದು ಬರಬೇಕಾದರೆ, ನಿವೃತ್ತ ಯೋಧರ ಸ್ಥೈರ್ಯವನ್ನು ಮರೆಯಬೇಡಿರಿ," ಎಂಬ ಕಾರ್ಯಪ್ಪನವರ ಮಾತು ಎಷ್ಟೊಂದು ಅರ್ಥಗರ್ಭಿತ! ‘ದೇಶಕ್ಕಾಗಿ ತಾನು ಸತ್ತರೆ, ತನ್ನ ಸಂಸಾರವನ್ನು ದೇಶವು ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ನಂತರವೂ ಸರ್ಕಾರವು ತನ್ನನ್ನು ಕಡೆಗಣಿಸುವದಿಲ್ಲ’ ಎಂಬ ಭರವಸೆ ಸೈನಿಕನಿಗೆ ಬರಬೇಕು. ಆಸ್ಟ್ರೇಲಿಯಾದಲ್ಲಿ ನಿವೃತ್ತ ಸೈನಿಕರಿಗೆ ಅಲ್ಲಿನ ಸರ್ಕಾರವು ರೂಪಿಸಿದ್ದ ಯಶಸ್ವೀ ಯೋಜನೆಯನ್ನು ನಮ್ಮ ದೇಶವು ಅನುಸರಿಸುವಂತೆ ಕಾರ್ಯಪ್ಪನವರು ಸರ್ಕಾರದ ಮನವೊಲಿಸಲು ಯತ್ನಿಸಿದರು. ತಮ್ಮ ಸ್ನೇಹಿತರ ನೆರವಿನಿಂದ ಧನಸಂಗ್ರಹಿಸಿದರು. ಪಾಟಿಯಾಲದ ಮಹಾರಾಜರು ದಾನವಿತ್ತ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದರು. ಸಿಯೆಟ್ ಕಂಪೆನಿಯವರು ಬೆಂಗಳೂರಿನಲ್ಲಿ ‘ಜನರಲ್ ಕಾರ್ಯಪ್ಪ ಭವನ’ವೆಂಬ ದೊಡ್ಡ ಕಟ್ಟಡವನ್ನು ಕಟ್ಟಿಸಿಕೊಟ್ಟರು. == ಅಂತಿಮ ವರ್ಷಗಳು == ಸಾರ್ವಜನಿಕ ಸೇವೆಯಿಂದ ನಿವೃತ್ತರಾದ ಮೇಲೆ ಕಾರ್ಯಪ್ಪನವರು ಮಡಿಕೇರಿಯಲ್ಲಿ ತಮ್ಮ ಸ್ವಂತ ಮನೆ ‘ರೋಶನಾರಾ’ದಲ್ಲಿ ಇದ್ದರು. ಆರೋಗ್ಯ ಕಮ್ಮಿಯಾದಾಗ ಚಿಕಿತ್ಸೆಗೆಂದು ಬೆಂಗಳೂರಿನಲ್ಲಿ ಕಮಾಂಡೋ ಆಸ್ಪತ್ರೆಗೆ ಹೋಗುತ್ತಿದ್ದರು. ಕೊನೆಗೆ ಬೆಂಗಳೂರಿನಲ್ಲಿಯೇ ಉಳಿದರು. 1993ನೇ ಇಸವಿ ಮೇ ೧೫ನೇ ದಿನಾಂಕ ಬೆಳಿಗ್ಗೆ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರು ಸ್ವರ್ಗಸ್ಥರಾದರು. == ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಬಗ್ಗೆ ಪುಸ್ತಕಗಳು == ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ. ಲೇ: ಎಲ್ ಎಸ್ ಶೇಷಗಿರಿ ರಾವ್. ಪ್ರ:ಸ್ವಪ್ನ ಬುಕ್ ಹೌಸ್, ಬೆಂಗಳೂರು ೫೬೦೦೦೯. ಪ್ರ ವರ್ಷ: ೨೦೦೦, ೨೦೦೧ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ. ಲೇ: ಡಾ ಬೊಜ್ಜಂಗಡ ಅವನಿಜಾ ಸೋಮಯ್ಯ, ಪ್ರ:ಜಗವಿನಿ ಪಬ್ಲಿಕೇಶನ್ಸ್. ಪ್ರ ವ: ೨೦೧೨. , (), : , 110020 2007, 2008, 2012 - , . : & , 110002. 2002. . , : , . 1964. == ಬಾಹ್ಯ ಸಂಪರ್ಕಗಳು == == ಉಲ್ಲೇಖ == == ==