ಕೊಡಸಿಗೆ ಅಥವಾ ಕೊಡಸಿಗ ಇದರ ವೈಜ್ಞಾನಿಕ ಹೆಸರು ಹೊಲೆರನಿ ಆಂಟಿಡೀಸೆಂಟ್ರಿಕಾ. ಇದು ಎಪೋಸೈನೇಸಿ ಸಸ್ಯ ಕುಟುಂಬಕ್ಕೆ ಸೇರಿದೆ. ಕರಾವಳಿ ಕರ್ನಾಟಕದ ಭಾಗಗಳಲ್ಲಿ ಇದನ್ನು ಕೊಡಸಾನ ಎನ್ನುತ್ತಾರೆ. ಕನ್ನಡದಲ್ಲಿ ಕೊಡಸಾನ, ಕೊಡಮುರಿಕೆ, ಕೊಡಸ, ಎಂಬುದಾಗಿಯೂ ಕರೆಯುತ್ತಾರೆ. === ಇತರ ಭಾಷೆಗಳಲ್ಲಿನ ಹೆಸರು === ಕನ್ನಡದಲ್ಲಿ: ಕೊಡಸ, ಕೊಡಸಿಗ, ಕೊಡಗಾಸನ, ಕುಟಜಾ ಇಂಗ್ಲೀಷ್: ಈಸ್ಟರ್‍ಟ್ರೀ ಸಂಸ್ಕೃತ: ಕುಟಜಾ, ಗಿರಿಮಲ್ಲಿಕಾ, ವತ್ಸಕ, ಪಾಂಡುರಾ ಧೃಮ, ಇಂದ್ರವೃಕ್ಷ, ಕಾಲಿಂಗ ಹಿಂದಿ: ಇಂದ್ರಿಜು, ಕುರುಚಿ ತಮಿಳು: ವೆಪಲೈ ಮಾಲಯಳ: ಕೊಡಗಪಾಲ === ಸಸ್ಯದ ಪರಿಚಯ === ಕೋಡಸಿಗ ಎಂಬುದು ಸಣ್ಣ ಪ್ರಮಾಣದ ಪರ್ಣಪಾತಿ ಮರ. ಪರಸ್ಪರಾಭಿಮುಖ ಎಲೆಗಳು, ತೊಗಟೆ ಬೂದುಕಂದು ಬಣ್ಣವಾಗಿರುತ್ತದೆ. ಕರ್ನಾಟಕದ ಪರ್ಣಪಾತಿ ಕಾಡುಗಳಲ್ಲಿ ಕಂಡು ಬರುತ್ತದೆ. ಎಲೆಗಳು ಡಿಸೆಂಬರ್-ಜನವರಿಗೆ ಹಳದಿ ಬಣ್ಣಕ್ಕೆ ತಿರುಗಿ, ಫೆಬ್ರವರಿ ತಿಂಗಳಿಗೆ ಉದುರಿ ಮರವು ಏಪ್ರಿಲ್‍ವರೆಗೆ ಎಲೆರಹಿತವಾಗಿದ್ದು, ಆಗ ಹೊಸ ತಳಿರು ಮೂಡುತ್ತದೆ. ಹೂಬಿಡುವ ಕಾಲ ವಿಭಿನ್ನವಾಗಿದ್ದು, ಸಾಮಾನ್ಯವಾಗಿ ಬಿಳಿಯ ಹೂಗೊಂಚಲು ಸುವಾಸನೆಯಿಂದ ಕೂಡಿದ್ದು ಮೇ ತಿಂಗಳಿಂದ, ಆಗಸ್ಟ್ ತಿಂಗಳವರೆಗೂ ಕಾಣಬರುತ್ತದೆ. ಕಾಯಿಗಳು ಹೂವಿನ ಜೊತೆಯಲ್ಲಿ ಬೆಳೆದು ೨೦-೪೦ ಸೆ.ಮೀ ಉದ್ದವಾಗಿ ಬೆಳೆದು ಆಗಸ್ಟ್ -ಅಕ್ಟೋಬರ್ ತಿಂಗಳಲ್ಲಿ ಜೋಡಿಜೋಡಿಯಾಗಿ ತೂಗಾಡುತ್ತದೆ. ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಬಿರಿದು ರೇಷ್ಮೆಯಂತಹ ಕೋಶಗಳಿಂದ ಆವೃತವಾದ ಬೀಜಗಳು ಹೊರಚೆಲ್ಲವುತ್ತದೆ. ಉತ್ತಮ ಸುವಾಸನೆ ಹೊಂದಿರುವ ಹೂವು ನಂತರ ಬೂರಗದ ಹತ್ತಿಯ ಕೊಡಿನ ತರಹ ಬೀಜಗಳಾಗಿ ಗಾಳಿಯಲ್ಲಿ ಬೀಜ ಪ್ರಸಾರವಾಗಿ ಸಸ್ಯಾಭಿವೃದ್ದಿಯಾಗುತ್ತದೆ. ಇದನ್ನು ಭಾರತದಾದ್ಯಂತ ಬೇಳೆಯುತ್ತಾರೆ. ಏಷ್ಯಾದ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಭಾರತದ ಉಷ್ಣವಲಯದ ಭಾಗಗಳಲ್ಲಿ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಸಮಾನ್ಯವಾಗಿ ಕಂಡುಬರುತ್ತದೆ. ೧,೧೦೦ ಮೀಟರ್ ಎತ್ತರದಲ್ಲಿ ಅಸ್ಸಾಂ ಮತ್ತು ಉತ್ತರ ಭಾರತದಲ್ಲಿ ಬೆಳೆಯುತ್ತಾರೆ. ಪಶ್ಚಿಮ ಘಟ್ಟ ಮೂಲದ ಈ ಸಸ್ಯ ವರ್ಗದ ಉಪಯೋಗ ದೇಶಾದ್ಯಾಂತ ಇರುವುದು ಕಂಡು ಬರುತ್ತದೆ.[೧]] === ಉಪಯೋಗ === ಇದನ್ನು ಬಿಸಿಲಲ್ಲಿ ಒಣಗಿಸಿಟ್ಟರೆ ಬೇಕಾದಾಗ ತುಪ್ಪದಲ್ಲಿ ಒಗ್ಗರಿಸಿ ಪಲ್ಯ ಇಲ್ಲವೆ ಮಜ್ಜಿಗೆ, ತೆಂಗಿನತುರಿ, ಮೆಣಸಿನೊಂದಿಗೆ ರುಬ್ಬಿ ರುಚಿಕಟ್ಟಾದ ತಂಬುಳಿ ಮಾಡಬಹುದು. ಮಳೆಗಾಲದ ಶೀತ, ಅಜೀರ್ಣದ ಭೇಧಿಗಳಿಗೆ ಇದು ದಿವ್ಯ ಔಷಧಿಯಾಗಿದೆ. ಇದರ ಎಲೆಯನ್ನು ನೆನೆಹಾಕಿ ತಯಾರಿಸಿದ ಎಣ್ಣೆಯನ್ನು ಚರ್ಮದ ತುರಿಕಜ್ಜಿ, ಇಸುಬು, ತಲೆಯ ಹೊಟ್ಟು, ವ್ರಣಗಳ ನಿವಾರಣೆಗೆ ಬಳಸಲಾಗುತ್ತದೆ. ತೊಗಟೆ ಮತ್ತು ಬೇರುಗಳು ಔಷಧೀಯ ಗುಣಗಳನ್ನು ಹೊಂದಿದ್ದು ಮಜ್ಜಿಗೆಯಲ್ಲಿ ತೇಯ್ದು ಸೇವಿಸಿದರೆ ಅಜೀರ್ಣದಿಂದಾಗುವ ಹೊಟ್ಟೆನೋವು, ಆಮಶಂಕೆ, ಬೇಧಿಯಂಥ ಕಾಯಿಲೆಗಳನ್ನು ನಿವಾರಿಸುತ್ತದೆ. ಇದನ್ನು ಹಾಗಲಕಾಯಿಯಂತೆ ಎಲ್ಲಾ ತರದ ಅಡುಗೆಗಳಲ್ಲೂ ಬಳಿಸಬಹುದಾಗಿದೆ. ಅರಳಿದ ಕೊಡಸಿಗ ಹೂಗಳನ್ನು ತೊಳದು ಬಿಸಿಲಿನಲ್ಲಿ ಒಣಗಿಸಿಕೊಂಡರೆ ಬೇಕಾದಾಗ ತಂಬುಳಿ ಮಾಡಬಹುದು. ರಕ್ತಭೇದಿ ಖಾಯಿಲೆಗೆ ಇದರ ಬೀಜಗಳನ್ನು ಶುಂಠಿಯಿಂದ ಬೇರಸಿ ಔಷಧಿ ತಯಾರಿಸುತ್ತಾರೆ. ಇದು ಪದೇ ಪದೇ ಬರುವ ಮಲೇರಿಯಾದಂತಹ ಜ್ವರವನ್ನು ಹುಟ್ಟುಡಗಿಸುವಗುಣ ಹೊಂದಿದೆ. ಇದರಿಂದ ಸ್ಟಿರಾಯ್ಡ್ ಹಾರ್ಮೊನ್ ಉತ್ಪಾದಿಸುತ್ತದೆ. ಹೂವು, ಎಲೆ, ಬೀಜ ಎಳೆಕೊಡು, ತೊಗಡೆ ಮತ್ತು ಬೇರಗಳನ್ನು ಬಳಸಿ ವಿವಿಧ ಚರ್ಮರೋಗಗಳು ಹಾಗೂ ರಕ್ತದಲ್ಲಿನ ನಂಜಿನ ನಿವಾರಣೆಗೆ ಸಿದ್ದ ಔಷದಿ ನೀಡುತ್ತಾರೆ. ಮುಖ್ಯವಾಗಿ ಬೇರುಗಳಿಂದ ತಯಾರಿಸಿದ ಕಷಾಯವನ್ನು ಗಾಯ, ಹುಣ್ಣು ಕಜ್ಜಿಗಳನ್ನು ತೊಳೆಯಲು ಬಳಸುತ್ತಾರೆ. === ಉಲ್ಲೇಖಗಳು === . . & . .