ಖಾಂಡವವನವು ಇಂದ್ರನ ಉದ್ಯಾನಗಳಲ್ಲೊಂದು. ಸರಸ್ವತೀ ದೃಷದ್ವತೀ ನದಿಗಳ ಪೂರ್ವಭಾಗದಲ್ಲಿತ್ತು ಎನ್ನಲಾಗಿದೆ. ಒಮ್ಮೆ ವರುಣ ಲೋಕದಲ್ಲಿ 12 ವರ್ಷ ಸತತವಾಗಿ ಯಜ್ಞ ನಡೆದುದರಿಂದ ಜೀರ್ಣಶಕ್ತಿ ಕುಂದಿ ನರಳತೊಡಗಿದ ಅಗ್ನಿಯನ್ನು ನೋಡಿದ ದೇವವೈದ್ಯರಾದ ಅಶ್ವಿನೀ ದೇವತೆಗಳು ಇಂದ್ರನ ಖಾಂಡವವನದಲ್ಲಿ ಅಜೀರ್ಣವನ್ನು ಹೋಗಲಾಡಿಸುವ ಮೂಲಿಕೆಗಳಿವೆಯೆಂದೂ, ಅವನ್ನು ಸೇವಿಸಿದರೆ ಮಾಂದ್ಯ ಹೋಗುವುದೆಂದೂ ಅಗ್ನಿಗೆ ತಿಳಿಸಿದರು. ಖಾಂಡವವನ ದಹನದ ಮುನ್ನ ಅಗ್ನಿ ಬ್ರಾಹ್ಮಣ ವೇಷದಲ್ಲಿ ಕೃಷ್ಣ ಅರ್ಜುನರಲ್ಲಿಗೆ ಹೋಗಿ ಅವರಿಂದ ಅಭಯ ಪಡೆದು ಅನಂತರ ಖಾಂಡವವನವನ್ನು ಸುಡತೊಡಗಿದ. ಇದರಿಂದ ಕುಪಿತಗೊಂಡ ಇಂದ್ರ ಯುದ್ಧಕ್ಕೆ ಬಂದ. ಅರ್ಜುನ ಇಂದ್ರನನ್ನು ಸೋಲಿಸಿದ. ಅಗ್ನಿಯನ್ನು ತಣ್ಣಗಾಗಿಸಲು ಇಂದ್ರ ಮಳೆ ಸುರಿಸಿದ. ಅರ್ಜುನ ಕೂಡಲೆ ಶರಪಂಜರ ನಿರ್ಮಿಸಿ ಮಳೆ ಅಗ್ನಿಯ ಮೇಲೆ ಬೀಳದಂತೆ ಮಾಡಿ ಅಗ್ನಿಯ ದಹನ ಕಾರ್ಯವನ್ನು ನಿರ್ವಿಘ್ನಗೊಳಿಸಿದ. ಅಲ್ಲಿಯೇ ವಾಸವಾಗಿದ್ದ ರಾಕ್ಷಸರ ಶಿಲ್ಪಿ ಮಯ ಅರ್ಜುನನನ್ನು ಮೊರೆಹೊಕ್ಕ. ಮುಂದೆ, ಖಾಂಡವವನವಿದ್ದ ಕಡೆ ವಿಶ್ವಕರ್ಮ ಪಾಂಡವರಿಗಾಗಿ ಇಂದ್ರಪ್ರಸ್ಥವನ್ನು ನಿರ್ಮಿಸಿದನಷ್ಟೆ. ಅಲ್ಲಿ ರಾಜಸೂಯ ಯಾಗವನ್ನು ನಡೆಸಲು ಅನುಕೂಲವಾಗುವಂಥ ಸಭಾಭವನವೊಂದನ್ನು ಮಯ ತನ್ನ ರಾಕ್ಷಸಶಿಲ್ಪಿಗಳೊಂದಿಗೆ ನಿರ್ಮಿಸಿಕೊಟ್ಟ. ಈ ವೃತ್ತಾಂತ ಭಾರತದಲ್ಲಿ ಬಂದಿದೆ. == ಉಲ್ಲೇಖಗಳು == " , 1: : - : ". -..