ಗಬ್ಬೂರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಂದು ಗ್ರಾಮ, ಐತಿಹಾಸಿಕ ಸ್ಥಳ, ಹೋಬಳಿ ಕೇಂದ್ರ ದೇವದುರ್ಗಕ್ಕೆ ಆಗ್ನೇಯದಲ್ಲಿ, ರಾಯಚೂರು ಮಾರ್ಗದಲ್ಲಿದೆ. ಈ ಗ್ರಾಮಕ್ಕೆ ಗೊಬ್ಬೂರು ಎಂಬ ಹೆಸರೂ ಇದೆ. ಇದು 12-13ನೆಯ ಶತಮಾನಗಳಲ್ಲಿ ಗೋಪುರ ಗ್ರಾಮ ಎಂಬ ಹೆಸರಾಗಿದ್ದ ಅಗ್ರಹಾರ ಮತ್ತು ವಿದ್ಯಾಕ್ಷೇತ್ರವಾಗಿತ್ತು. ಇಲ್ಲಿ ಚಂಡಿ ದರ್ವಾಜ ಎಂಬ ಹಳೆಯ ದ್ವಾರವೂ ಅನೇಕ ದೇವಾಲಯಗಳೂ ಶಿಲಾಶಾಸನಗಳೂ ಇವೆ. ಮಲೇಶಂಕರ, ವೆಂಕಟೇಶ್ವರ, ಈಶ್ವರ, ಬಂಗಾರ ಬಸಪ್ಪ ಮತ್ತು ಹನುಮಂತ ದೇವಾಲಯಗಳು ಮುಖ್ಯವಾದವು. ಮಲೇಶಂಕರ ದೇವಾಲಯದಲ್ಲಿಯ ಹೊರಭಾಗದ ಕೆತ್ತನೆಯ ಕೆಲಸ ಮತ್ತು ಕಲ್ಲಿನಲ್ಲಿ ಕೊರೆದ ಆನೆಗಳು ನೋಡತಕ್ಕವು. ಇದರ ಪೂರ್ವಕ್ಕೆ ಇರುವ ಕಲ್ಯಾಣಿಯನ್ನು ಸಾತ್ ಬಾವಡಿ ಎಂದು ಕರೆಯುತ್ತಾರೆ. ಗಣ್ಣಿಗುಡಿ ಮಠದ ಮಹಾದ್ವಾರದ ಕೆತ್ತನೆ ಕೆಲಸ ಬಹಳ ಸುಂದರವಾಗಿದೆ. ಒಂದು ಕಾಲದಲ್ಲಿ ಊರ ಸುತ್ತಲೂ ಇದ್ದ ಕೋಟೆಯ ಅವಶೇಷಗಳು ಕಾಣಸಿಗುತ್ತವೆ. ಕಲ್ಯಾಣ ಚಾಳುಕ್ಯ 6ನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ್ದ ಸು. 1109ರ ಶಾಸನದ ಪ್ರಕಾರ (ಈ ಶಾಸನ ಈಗ ಹೈದರಾಬಾದಿನಲ್ಲಿರುವ ಪುರಾತತ್ತ್ವ ವಸ್ತು ಸಂಗ್ರಹಾಲಯ ದಲ್ಲಿದೆ) ಬ್ರಹ್ಮಜಿನಾಲಯವೆಂಬ ಜೈನ ಮಂದಿರವೊಂದು ಇಲ್ಲಿದ್ದಿತ್ತು. ಅಂದು ಈ ಊರಿಗೆ ಹಿರಿಯ ಗೊಬ್ಬೂರು ಎಂಬ ಹೆಸರಿತ್ತೆಂದು ತಿಳಿದು ಬರುತ್ತದೆ. ಬಂಗಾರ ಬಸಪ್ಪನ ಗುಡಿಯಲ್ಲಿ ಒಂದು ಶಾಸನವೂ ಗಣೇಶನ ಮತ್ತು ಎರಡು ನಂದಿಗಳ ವಿಗ್ರಹಗಳೂ ಇವೆ. ಜೇಡರ ದಾಸಿಮಯ್ಯನ ಶಿಷ್ಯ ಮತ್ತು ಪುತ್ರ ಇಲ್ಲಿಯ ಗಣೇಶ್ವರ ದೇವರಿಗೆ ದತ್ತಿ ಕೊಟ್ಟಿರುವ ಉಲ್ಲೇಖ ಇಲ್ಲಿಯ ಇನ್ನೊಂದು ಶಾಸನದಲ್ಲಿದೆ. ಶ್ರೀ ವೆಂಕಟೇಶ್ವರ ದೇವಸ್ಥಾನವು ಕ್ರಿ.ಶ. 1213 ನೇ ಶತಮಾನದಾಗಿದ್ದು ದೇವಸ್ಥಾನವು ಚಾಲುಕ್ಯರ ವಾಸ್ತುಶಿಯಲ್ಲಿ ನಿರ್ಮಾಣಗೊಂಡಿದ್ದು, ಸೇವಣ ವಂಶದ ಸಿಂಘಣ ರಾಜನ ಕಾಲದಲ್ಲಿ ನಿರ್ಮಾಣವಾಗಿದೆ. ಪ್ರತಿ ವರ್ಷ ನವರಾತ್ರಿ ಉತ್ಸವವು ಬಹು ವಿಜೃಂಭಣೆಯಿಂದ ನಡೆಯುತ್ತ ಬಂದಿರುತ್ತದೆ.