ಗೃಹಭಂಗ ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್.ಭೈರಪ್ಪನವರ ಒಂದು ಪ್ರಸಿದ್ಧ ಕಾದಂಬರಿ. ೧೯೨೦ರ ನಂತರ ಪ್ರಾರಂಭವಾಗುವ ಇದರ ಕಥಾವಸ್ತು, ೧೯೪೦-೪೫ರ ಸುಮಾರಿಗೆ ಮುಗಿಯುತ್ತದೆ. ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ. == ಪರಿಚಯ == ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ. ‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ. ಕಾದಂಬರಿಕಾರರು ತಮ್ಮ ಕಾದಂಬರಿಯ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.- ಗೃಹಭಂಗ ಎಂಬುದು ಈ ಕೃತಿಯ ಕೇಂದ್ರಕಲ್ಪನೆ ಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನ ಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯ ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು. === ಗೃಹಭಂಗ - ಈ ಹೆಸರು ಹೇಗೆ ಬಂತು?-(ಕಾದಂಬರಿಕಾರರ ಅಭಿಪ್ರಾಯ) === ಕಾದಂಬರಿಗೆ ಇಟ್ಟಿರುವ ಗೃಹಭಂಗ ಎಂಬ ಹೆಸರು ಹೇಗೆ ಬಂದಿತೆನ್ನುವ ಬಗ್ಗೆಯೂ ಭೈರಪ್ಪನವರು ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ವಿವರಿಸಿದ್ದಾರೆ - ಕೆಲವು ಬಾರಿ ಕೃತಿ ರಚನೆಯಾಗುವಾಗ, ಅಥವಾ ಅದಕ್ಕಿಂತ ಮೊದಲೇ, ಹೆಸರು ಹೊಳೆದು ಬಿಡುತ್ತದೆ. ಮತ್ತೆ ಕೆಲವು ಬಾರಿ ಬರೆದು ಎರಡು ವರ್ಷ ಸಂದು, ತಲೆಗೂದಲ ಮಧ್ಯೆ ಬೆರಳು ತೂರಿಸಿ ಯೋಚಿಸಿದರೂ ಹೊಳೆಯುವುದಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ ``ಯಾವುದಾದರೇನು? ಹೆಸರೇ ಬೇಡ. 'ಎಸ್.ಎಲ್. ಭೈರಪ್ಪ: ಕಾದಂಬರಿ ಸಂಖ್ಯೆ: ೮' ಎಂದು ಯಾಕೆ ಇಡಬಾರದು? ಎಂಬ ವಿಚಾರ ಹುಟ್ಟಿತ್ತು. ವಸ್ತುವು ಹಲವು ಪಾರ್ಶ್ವಗಳುಳ್ಳದ್ದಾಗಿರುವಾಗ ಹೆಸರು ವಾಚಕರ ಗಮನವನ್ನೆಲ್ಲ ಒಂದೇ ಪಾರ್ಶ್ವದಲ್ಲಿ ಎಳೆದು ನಿಲ್ಲಿಸಿ, ಉಳಿದ ಭಾಗಗಳನ್ನು ಮಬ್ಬುಮಾಡುವ ಅಪಾಯವಿರುತ್ತದೆ. ಆದುದರಿಂದ ಯಾವ ಸಾಹಿತ್ಯ ಕೃತಿಯನ್ನು ಓದಿ ಗ್ರಹಿಸಬೇಕಾದರೂ ಲೇಖಕನು ಇಟ್ಟಿರುವ ಹೆಸರನ್ನು ಆರಂಭದಲ್ಲಿಯೇ ಪ್ರತ್ಯೇಕಿಸುವುದು ಕ್ಷೇಮ. ಇವೆಲ್ಲವನ್ನೂ ಸಮಗ್ರವಾಗಿ ಧ್ವನಿಸುವ ಹೆಸರು ನನಗೆ ತಿಳಿಯಲಿಲ್ಲ. ಹಸ್ತಪ್ರತಿಯನ್ನು ಓದಿ ವಿವರವಾಗಿ ಟೀಕೆ ಟಿಪ್ಪಣಿ ಮಾಡಿ, ತಿದ್ದಲು ಸಹಾಯಕರಾದ ದಿಲ್ಲಿ ಆಕಾಶವಾಣಿಯ ಎಂ.ಶಂಕರ್, ಬೆಂಗಳೂರಿನ ಎಂ.ಎಸ್.ಕೆ. ಪ್ರಭು ಇವರಿಗೂ ಹೊಳೆಯಲಿಲ್ಲ. ಹೆಸರಿಡದೆ ಪ್ರಕಟವಾಗುವುದು ಸಾಧ್ಯವಿಲ್ಲ. ಪ್ರಕಟಣೆಯ ಘಟ್ಟದಲ್ಲಿ ಯಾವುದೋ ಒಂದನ್ನು ಇಡಲೇಬೇಕೆಂದು ಹಟಹಿಡಿದಾಗ, `ಗೃಹಭಂಗ' ಎಂದು ಮನಸ್ಸಿಗೆ ಬಂತು, ಇಟ್ಟಿದ್ದೇನೆ. == ಕಥಾವಸ್ತು == ಸರಳವಾದ ಆಡುನುಡಿಯಲ್ಲಿ ಲೇಖಕರ ವಿವರಣೆ ಮೂಡಿಬಂದಿರುವುದರಿಂದ ಇಲ್ಲಿನ ಚಿತ್ರಣ ನಮ್ಮ ಸುತ್ತಮುತ್ತವೇ ನಡೆದ ಘಟನೆಗಳು ಎನಿಸುತ್ತವೆ. ಬ್ರೀಟಿಷರ ಕಾಲದ ಹಳ್ಳಿಗಳು ಹಾಗು ಹಳ್ಳಿಯ ಸೊಗಡು ಕಾದಂಬರಿಯಲ್ಲಿ ನೈಜವಾಗಿ ಮೂಡಿ ಬಂದಿದೆ. ಅನೇಕ ಪಾತ್ರಗಳಲ್ಲಿ ಕಥೆಗೆ ಆಧಾರ ಪಾತ್ರ ಎಂದು ಹೇಳಬಹುದಾದ “ನಂಜಮ್ಮ” ಬದುಕನ್ನು ಸ್ವೀಕರಿಸುವ ರೀತಿ, ಆಕೆ ಅನುಸರಿಸಿದ ನೈತಿಕ ಪದ್ದತಿಗಳು, ಅನ್ಯಾಯದ ವಿರುದ್ದ ಸಿಡಿದು ಬೀಳುವ ಪರಿ ಎಲ್ಲವೂ ಸುಂದರವಾಗಿ ಮೂಡಿದೆ. ಅತ್ತೆ, ಸೊಸೆ ಹಾಗು ಮಗಳ ಮೂಲಕ ಮೂರು ತಲೆಮಾರುಗಳ ಹೆಣ್ಣಿನ ಸಂವೇದನೆಗಳನ್ನು, ಕಾದಂಬರಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಜೊತೆಗೆ ಮಾದೇವಯ್ಯನವರ ಪಾತ್ರ, ಅಲೆಮಾರಿ ಬದುಕಿನಲ್ಲೂ ಸಂಸ್ಕೃತಿ ಹೇಗೆ ಕಾಪಾಡಿಕೊಂಡರು ಎಂದು ಬಿಂಬಿತವಾಗುತ್ತದೆ. ಅದಲ್ಲದೆ ಒಬ್ಬ ತಾಯಿ (ಗಂಗಮ್ಮ) ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ, ಸರ್ವಾಧಿಕಾರಿ ಧೋರಣೆಯಿಂದ ಬದುಕಿದರೆ, ಮಕ್ಕಳು ಹೇಗೆ ಹದಗೆಡುತ್ತಾರೆ ಎನ್ನುವುದೂ ಕೂಡ ಬದುಕಿನ ಪಾಠವಾಗಿ ಸಾಬೀತಾಗುತ್ತದೆ. ಆದರೆ ಪೇಟೆಯಲ್ಲಿ ಬೆಳೆದು, ಮದುವೆ ಆಗಿ ಹಳ್ಳಿಗೆ ಬಂದು, ಹಳ್ಳಿಯ ಸಂಸ್ಕೃತಿಗೆ ಒಗ್ಗದೆ, ಪೇಟೆಯ ಧ್ಯಾನದಲ್ಲೇ ದಿನಕಳೆಯುವ ಹೆಣ್ಣಿನ ಇನ್ನೊಂದು ಮುಖ ಚಿತ್ರಿತವಾಗಿದೆ. ಇದರಿಂದ ಕುಟುಂಬದ ಮೇಲಾಗುವ ಪರಿಣಾಮವೂ ಚಿತ್ರಿತವಾಗಿದೆ. ಸಾವಿನ ದವಡೆಯಲ್ಲಿ, ಸಿಕ್ಕಿದ ಮಕ್ಕಳನ್ನು ಕಂಡು ನಂಜಮ್ಮ ಕೊರಗುವ ಸ್ಥಿತಿ, ಹಾಗು ಸಾವು ಸಾರ್ವಕಾಲಿಕ ಸತ್ಯ ಎಂದು ನಂಬಿ ಮತ್ತೆ ಬದುಕಿಗೆ ಮುಖ ಮಾಡುವ ರೀತಿ, ಬದುಕಿನ ನೈಜತೆಯನ್ನು ಬಿಂಬಿಸುತ್ತದೆ. ನಂಜಮ್ಮನ ಕುಟುಂಬ ನಾಶವಾಗಿ, ನಂಜಮ್ಮನ ಕೊನೆ ಮಗ “ವಿಶ್ವ” ನನ್ನು ಮಾದೇವಯ್ಯನವರು ಕರೆದುಕೊಂಡು ಊರು ಬಿಟ್ಟು ಹೋಗುವಾಗ, ವಿಶ್ವನ ಅಪ್ಪನ ನಿರ್ಲಿಪ್ತತೆ, ಅವನ ಉದಾಸೀನತೆಯನ್ನು ತೋರಿಸುತ್ತದೆ. == ಗೃಹಭಂಗ ಕಿರುತೆರೆ ಧಾರಾವಾಹಿಯಾಗಿ == ಈ ಕೃತಿಯ ಟಿವಿ ರೂಪಾಂತರ ೨೦೦೪-೨೦೦೫ ರಲ್ಲಿ ಈಟಿವಿ ವಾಹಿನಿಯಲ್ಲಿ ಪ್ರಸಾರವಾಯಿತು. ಜೀವನದ ಏರಿಳಿತಗಳಿಂದ ಧೃತಿಗೆಡದೆ ಜೀವನವನ್ನು ಕೇವಲ ಜೀವನವಾಗಿಯೆ ಕಾಣುವಂತ ಓರ್ವ ಅತಿ ಸಾಧಾರಣ ಗೃಹಿಣಿಯ ಕಥೆ. ಈ ಧಾರಾವಾಹಿಯ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಹಾಗೂ ಮುಖ್ಯ ಪಾತ್ರದಲ್ಲಿ ಮಾಳವಿಕಾ ಅವಿನಾಶ್ ನಟಿಸಿದ್ದಾರೆ. ಇದರ ಶೀರ್ಷಿಕೆ ಗೀತೆಯನ್ನು ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ. ಗೀತೆಯ ಒಂದು ಸಾಲು - "ಎಲ್ಲ ಸಹಿಸಿ ಮುಂದೆ ಪಯಣ ಬದುಕೇ ವಿಸ್ಮಯರಂಗ..." ಈ ಕೃತಿಯ ಸಮಸ್ತ ಭಾವವನ್ನು ಪ್ರತಿಬಿಂಬಿಸುತ್ತಿದೆ ಎಂಬುದು ಧಾರಾವಾಹಿ ವೀಕ್ಷಿಸಿದವರ ಅಭಿಪ್ರಾಯವಾಗಿದೆ. ಗೃಹಭಂಗ ಭೈರಪ್ಪನವರ ಜೀವನವನ್ನೇ ಬಿಂಬಿಸುತ್ತದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. == ಹೊರಗಿನ ಸಂಪರ್ಕಗಳು == ಗೃಹಭಂಗ ಕೃತಿ ಅಂತರಜಾಲದಲ್ಲಿ 2005-10-19 ವೇಬ್ಯಾಕ್ ಮೆಷಿನ್ ನಲ್ಲಿ.