ಗೋಕುಲ ಭಾರತದ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಮಥುರಾದ ಆಗ್ನೇಯದಲ್ಲಿ ೧೫ ಕಿ.ಮೀ (೯.೩ ಮೈಲಿ) ದೂರದಲ್ಲಿದೆ. ಭಾಗವತ ಪುರಾಣದ ಪ್ರಕಾರ, ಕೃಷ್ಣನು ತನ್ನ ಬಾಲ್ಯವನ್ನು ಗೋಕುಲದಲ್ಲಿ ಕಳೆದನು. ಹುಟ್ಟಿದ ಕೂಡಲೇ ಶ್ರೀಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಆತ ತನ್ನ ದಿವ್ಯ ಬಾಲಲೀಲೆಗಳನ್ನು ಮೆರೆದು ಅಲ್ಲಿನ ಮಹತ್ವ ಹೆಚ್ಚಿಸಿದನು. ಗೋಕುಲ ಗೋಪಾಲಕರ ವಸತಿಸ್ಥಾನ. ನಂದಗೋಪ ಅವರ ಮುಖ್ಯಸ್ಥ. ಆತನ ಮನೆಯಲ್ಲಿಯೇ ಶ್ರೀಕೃಷ್ಣ ಬೆಳೆದು ದೊಡ್ಡವನಾದ; ಪೂತನಿ ವಧೆ, ಯಮಳಾರ್ಜುನ ಉದ್ಧಾರ ಮುಂತಾದ ಬಾಲಲೀಲೆಗಳನ್ನು ಇಲ್ಲಿಯೇ ಮೆರೆದ. ವೈಷ್ಣವ ಸಂಪ್ರದಾಯದಲ್ಲಿ ಗೋಕುಲಕ್ಕೆ ಬಹುದೊಡ್ಡ ಸ್ಥಾನವಿದೆ. ಗೋಕುಲವನ್ನು ಒಂದು ಪ್ರಿಯಧಾಮವೆಂದು ವೈಷ್ಣವ ಸಂತರು ಕೀರ್ತಿಸಿದ್ದಾರೆ. ಮಥುರೆಯಿಂದ ಶ್ರೀಕೃಷ್ಣನನ್ನು ಕರೆದುಕೊಂಡು ಬಂದ ಅಕ್ರೂರ ಗೋಕುಲದ ಜನರಲ್ಲಿ ನೆಲೆಸಿದ್ದ ಭಕ್ತಿಪ್ರೇಮಗಳಿಂದ ವಿಹ್ವಲನಾಗಿ ಅದೇ ವಾತಾವರಣದಲ್ಲಿಯೇ ಇರಬಯಸಿದ. ಗೋಕುಲವನ್ನು ಕಂಡು ಮನಸೋತ ಉದ್ಧವ ಅಲ್ಲಿಯ ಔಷಧಿ ವನಸ್ಪತಿಗಳಲ್ಲಿ ತಾನೂ ಒಂದಾಗಲು ಬಯಸಿದ. == ಭೂಗೋಳಶಾಸ್ತ್ರ == ಪಟ್ಟಣವು ಸರಾಸರಿ ೧೬೩ ಮೀ (೫೩೫ ಅಡಿ) ಎತ್ತರವನ್ನು ಹೊಂದಿದೆ. == ಸಾರಿಗೆ == ಗೋಕುಲ ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವಾದ ಮಥುರಾದಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ. ಈ ಯಾತ್ರಾ ಸ್ಥಳವು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರತಿಯೊಂದು ಮಹತ್ವದ ಭಾರತೀಯ ನಗರಕ್ಕೆ ಉತ್ತಮ ಸಂಪರ್ಕವನ್ನು ಹೊಂದಿದೆ. === ರಸ್ತೆ === ಗೋಕುಲ ಅತ್ಯುತ್ತಮ ರಸ್ತೆ ಸಂಪರ್ಕವನ್ನು ಹೊಂದಿದ್ದು, ಕಾರಿನಲ್ಲಿ ಇಲ್ಲಿಗೆ ಪ್ರಯಾಣಿಸಲು ಸುಲಭವಾಗಿದೆ. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಥುರಾ ಮತ್ತು ಗೋಕುಲಕ್ಕೆ ಮತ್ತು ಅಲ್ಲಿಂದ ಹಲವಾರು ಸ‍್ಥಳಗಳಿಗೆ ಬಸ್ಸುಗಳನ್ನು ನಡೆಸುತ್ತದೆ. ಹೆಚ್ಚುವರಿಯಾಗಿ, ಪಟ್ಟಣವು ಯಮುನಾ ಎಕ್ಸ್‌ಪ್ರೆಸ್‌ವೇ ಮತ್ತು ತಾಜ್ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಗೋಕುಲಕ್ಕೆ ಸಮೀಪದಲ್ಲಿ ಹಾದುಹೋಗುವ ರಾಜ್ಯ ಮತ್ತು ಫೆಡರಲ್ ಹೆದ್ದಾರಿಗಳ ಯೋಗ್ಯವಾದ ಜಾಲವನ್ನು ಹೊಂದಿದೆ. === ರೈಲು === ಪಟ್ಟಣದಿಂದ ೭ ಕಿಮೀ ದೂರದಲ್ಲಿರುವ ಮಥುರಾ ಹತ್ತಿರದ ರೈಲು ನಿಲ್ದಾಣವನ್ನು ಹೊಂದಿದೆ. ರೈಲು ನಿಲ್ದಾಣದಿಂದ, ಗೋಕುಲಕ್ಕೆ ಕ್ಯಾಬ್ ಮೂಲಕ ತಲುಪಬಹುದು. ದೆಹಲಿ, ಲಕ್ನೋ ಮತ್ತು ಮುಂಬಯಿ ಸೇರಿದಂತೆ ಇತರ ಭಾರತೀಯ ನಗರಗಳನ್ನು ಮಥುರಾ ರೈಲುಮಾರ್ಗದಿಂದ ಸುಲಭವಾಗಿ ಪ್ರವೇಶಿಸಬಹುದು. === ವಿಮಾನ === ಗೋಕುಲದಿಂದ ೫೪ ಕಿಲೋಮೀಟರ್ ದೂರದಲ್ಲಿರುವ ಆಗ್ರಾ ಹತ್ತಿರದ ವಿಮಾನ ನಿಲ್ದಾಣವನ್ನು ಹೊಂದಿದೆ. ಆಗ್ರಾ ವಿಮಾನ ನಿಲ್ದಾಣದಿಂದ ಗೋಕುಲಕ್ಕೆ ಹೋಗಲು, ಟ್ಯಾಕ್ಸಿ ವ್ಯವಸ್ಥೆ ಮಾಡಬಹುದು. ಕಡಿಮೆ ವಿಮಾನಗಳೊಂದಿಗೆ, ಆಗ್ರಾ ವಿಮಾನ ನಿಲ್ದಾಣದ ವಾಯು ಸಂಪರ್ಕವು ಅತ್ಯುತ್ತಮವಾಗಿಲ್ಲ. ಪರ್ಯಾಯವಾಗಿ, ಇಲ್ಲಿಗೆ ಹೋಗಲು ಜೈಪುರದ ವಿಮಾನ ನಿಲ್ದಾಣದಿಂದ ೨೩೨ ಕಿ.ಮೀ ಅಥವಾ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೧೮೬ ಕಿ.ಮೀ ಪ್ರಯಾಣಿಸಬಹುದು. ಯಾವುದೇ ವಿಮಾನ ನಿಲ್ದಾಣದಿಂದ ಗೋಕುಲಕ್ಕೆ ಕ್ಯಾಬ್‍ನ ಮೂಲಕ ತಲುಪಬಹುದು. == ಜನಸಂಖ್ಯಾಶಾಸ್ತ್ರ == ಭಾರತದ ೨೦೦೧ ರ ಜನಗಣತಿಯ ಪ್ರಕಾರ, ಗೋಕುಲವು ೪೦೪೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ಶೇಕಡ ೫೫ ಮತ್ತು ಮಹಿಳೆಯರು ಶೇಕಡ ೪೫ ರಷ್ಟಿದ್ದಾರೆ. ಸರಾಸರಿ ಸಾಕ್ಷರತಾ ಪ್ರಮಾಣವು ಶೇಕಡ ೬೦ ಆಗಿತ್ತು, ರಾಷ್ಟ್ರೀಯ ಸರಾಸರಿ ಶೇಕಡ ೫೯.೫ ಕ್ಕಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ಶೇಕಡ ೬೮, ಮತ್ತು ಮಹಿಳಾ ಸಾಕ್ಷರತೆ ಶೇಕಡ ೪೯. ಶೇಕಡ ೧೮ ರಷ್ಟು ಜನಸಂಖ್ಯೆಯು ೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. == ಆರಾಧನ ಸ್ಥಳವಾಗಿ == ವಲ್ಲಭ ಸಂಪ್ರದಾಯದವರಿಗೆ ಗೋಕುಲ ಒಂದು ಪ್ರಮುಖ ಆರಾಧನಾಸ್ಥಳವಾಗಿದೆ. ಈ ಸಂಪ್ರದಾಯದ ೨೪ ಕಟ್ಟೋಣಗಳು(ಮಠ) ಇಲ್ಲಿವೆ. ಔರಂಗಜೇಬನ ಕಾಲದಿಂದ ವಲ್ಲಭಸಂಪ್ರದಾಯದ ಸರ್ವಪೂಜ್ಯ ಠಾಕೂರ ಇಲ್ಲಿ ಇರುತ್ತಿದ್ದುದರಿಂದ ದೂರದೂರದ ಶ್ರೀಕೃಷ್ಣ ಭಕ್ತರು ಗೋಕುಲದ ಕಡೆಗೆ ಆಕರ್ಷಿತರಾಗುತ್ತಿದ್ದರು. == ಆಸಕ್ತಿಯ ಸ್ಥಳಗಳು == ವಲ್ಲಭಾಚಾರ್ಯರ ಮಠ (ಸಭಾಗೃಹ), ಗೋಕುಲನಾಥನ ಮಠ, ಗೋವಿಂದಘಾಟ್, ವಲ್ಲಬಘಾಟ್, ಗೋಕುಲನಾಧ ದೇವಸ್ಥಾನ, ವ್ರಜರಾಜ ದೇವಸ್ಥಾನ ಇತ್ಯಾದ. ರಮಣರೇತೀ ಮತ್ತು ಬ್ರಹ್ಮಾಂಡತೀರ್ಥ ಇವು ಗೋಕುಲದಲ್ಲಿನ ಪವಿತ್ರತೀರ್ಥಗಳು. === ಮಹಾಪ್ರಭು ಶ್ರೀಮದ್ ವಲ್ಲಭಾಚಾರ್ಯರ ಬೈಠಕ್ಜಿ === ಶ್ರೀ ವಲ್ಲಭಾಚಾರ್ಯ ಮಹಾಪ್ರಭುಗಳು ಗೋಕುಲ ಮತ್ತು ಶ್ರೀ ಕೃಷ್ಣನು ತನ್ನ ಲೀಲೆಯನ್ನು ಮಾಡಿದ ಸ್ಥಳಗಳನ್ನು ಮರುಶೋಧಿಸಿದವರು. ಅಲ್ಲಿ ಬೈಠಕ್ಜಿ ಎಂಬ ಎರಡು ಸ್ಥಳಗಳಾದ ಗೋವಿಂದಘಾಟ್ ಮತ್ತು ಬಡಿ ಭಿತರ್ ಬೈಠಕ್ ಎಂಬಲ್ಲಿ ಶ್ರೀಮದ್ ಭಾಗವತ ಪಾರಾಯಣ ಮಾಡಿದರು. === ರಾಜಾ ಠಾಕೂರ್ ದೇವಸ್ಥಾನ === ಇದು ವಲ್ಲಭ ಸಂಪ್ರದಾಯ ಪುಷ್ಟಿಮಾರ್ಗ್‌ನ ಪ್ರಮುಖ ದೇವಾಲಯವಾಗಿದೆ. ಇದು ಶ್ರೀ ಗುಸೈಜಿಯ ನೆಲೆಯಾಗಿದೆ ಮತ್ತು ಸ್ವಯಂ-ವ್ಯಕ್ತ ದೇವತೆ ಶ್ರೀ ನವನಿತ್ಲಾಲ್ (ಕೃಷ್ಣನ ಒಂದು ರೂಪ) ವಾಸಿಸುತ್ತಿದ್ದ ಸ್ಥಳವೆಂದು ಪರಿಗಣಿಸಲಾಗಿದೆ. ಇದು ದೈವಿಕ ಸ್ಥಳವಾಗಿದೆ. == ಕೃತಿಗಳಲ್ಲಿ ಉಲ್ಲೇಖ == ಭಾಗವತ ಪುರಾಣದ ದಶಮಸ್ಕಂಧದಲ್ಲಿ ಗೋಕುಲ, ಗೋಪ, ಗೋಪಿ ಮತ್ತು ಗೋಧನಗಳ ಬಗ್ಗೆ ರಮ್ಯವರ್ಣನೆ ದೊರೆಯುತ್ತದೆ. ಇದನ್ನೇ ಆಧರಿಸಿಕೊಂಡು ಚೈತನ್ಯ, ಮೀರಾಬಾಯಿ, ಏಕನಾಥ, ಸೂರದಾಸ, ತುಳಸೀದಾಸ, ಪುರಂದರದಾಸರಂಥವರು ಗೋಕುಲದ ಮಹಿಮೆಯನ್ನು ತಮ್ಮ ಕೃತಿಗಳಲ್ಲಿ ಕೊಂಡಾಡಿದ್ದಾರೆ. == ಉಲ್ಲೇಖಗಳು ==