ಚಾಮುಂಡೇಶ್ವರಿ ಹಿಂದೂಧರ್ಮದಲ್ಲಿ, ಚಾಮುಂಡಿ ಎಂದೂ ಪರಿಚಿತವಾಗಿರುವ ಹಿಂದೂ ದೇವಿಮಾತೆಯಾದ ದೇವಿಯ ಭಯಾನಕ ರೂಪ ಮತ್ತು ಸಪ್ತ ಮಾತೃಕೆಯರ ಪೈಕಿ ಒಬ್ಬಳು. ಅವಳು ಯೋಧೆ ದುರ್ಗಾ ದೇವಿಯ ಪರಿಚಾರಕಿಯರಾದ ಅರವತ್ತ ನಾಲ್ಕು ಅಥವಾ ಎಂಬತ್ತೊಂದು ತಾಂತ್ರಿಕ ದೇವತೆಗಳಾದ, ಮುಖ್ಯ ಯೋಗಿನಿಗಳ ಪೈಕಿ ಕೂಡ ಒಬ್ಬಳು. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ ಚಂಡ ಮತ್ತು ಮುಂಡರ ಸಂಯೋಗವಾಗಿದೆ. == ಮೈಸೂರಿನ ಅಧಿದೇವತೆಯಾಗಿ == ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. "ಚಾಮುಂಡಿ" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆಂಬುದು ತಿಳಿಯುತ್ತದೆ. ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿ ದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ. ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು ೧೧೦೧ ಮೆಟ್ಟಿಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ. ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ. == ಪದ ವಿವರಣಾ ಕೋಶದಲ್ಲಿ ಚಾಮುಂಡಿ ಪದದ ನಿಷ್ಪತ್ತಿ == ಪದ ವಿವರಣಾ ಕೋಶದ ಪ್ರಕಾರ -"ಚಾಮುಂಡಿ"ಎಂಬ ಪದ 'ಚಾಮುಂಡ' ಶಬ್ದದ ಅಪಭ್ರಂಶ ರೂಪ. ಗ್ರಾಮವೃದ್ದ > ಶ್ಯಾಮವೃದ್ದ > ಚಾಮವೊಡ್ಡಿ > ಚಾಮಉಂಡಿ > ಚಾಮುಂಡಿ > ಚಾವುಡಿ > ಚೌಡಿ ಎಂದಾಗಿದೆ. ಒಟ್ಟಿನಲ್ಲಿ ಚಾಮುಂಡಿ ಒಬ್ಬ ಉಗ್ರದೇವತೆ. ಅಷ್ಟಕರಗಳನ್ನು ಹೊಂದಿದ್ದಾಳೆ. ಈಕೆಯ ಎಂಟು ಕೈಯಲ್ಲೂ ಆಯುಧಗಳಿರುತ್ತವೆ. ಕೊರಳ ಸುತ್ತ ರುಂಡಗಳ ಮಾಲೆ, ಕೆಂಪಾದ ನಾಲಿಗೆ ಚಾಚಿ ರಕ್ತಕ್ಕಾಗಿ ಹಂಬಲಿಸುತ್ತಾ, ತ್ರಿಶೂಲಧಾರಿಣಿಯಾಗಿ ತಾಮಸಗುಣದ ಪ್ರಧಾನ ದೇವತೆಯಾಗಿದ್ದಾಳೆ. ಜೊತೆಗೆ ಕಾಳಿಕಾ ಮಾತೆಯ ಪ್ರತಿರೂಪವಾಗಿದ್ದಾಳೆ. == ಪುರಾಣ ಹಿನ್ನೆಲೆ == ಪುರಾಣವೊಂದರ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷನನ್ನು ಶಕ್ತಿ ಮತ್ತು ಯುಕ್ತಿಯಿಂದ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ. ಮಹಿಷನನ್ನು ಕೊಂದ ನಂತರ ಚಾಮುಂಡಿ ಯುದ್ದದಿಂದಾದ ಶರೀರದ ಆಯಾಸವನ್ನು ನೀಗಿಸಿ ಕೊಳ್ಳಲು, ನಂಜನಗೂಡಿನ ಕಪಿಲಾ ನದಿ ತಟಕ್ಕೆ ಬಂದು, ಮಧ್ಯರಾತ್ರಿಯಲ್ಲಿ ಸ್ನಾನ ಮಾಡಿ, ತನ್ನ ತಲೆಗೂದಲನ್ನು ಹರವಿ ಒಣಗಿಸುತ್ತಾ ಇರಬೇಕಾದರೆ, ರಾತ್ರಿ ಸಂಚಾರಕ್ಕೆ ಬಂದ ಶಿವನಂಜುಂಡೇಶ್ವರ, ಈಕೆಯಲ್ಲಿ ಅನುರಕ್ತನಾಗುತ್ತಾನೆ. ಶಿವನಿಗೆ ವಿವಾಹವಾಗಿರುವುದರ ಅರಿವಿರದ ಚಾಮುಂಡಿ ತಾನೂ ಕೂಡ ಶಿವನಲ್ಲಿ ಅನುರಕ್ತಳಾಗುತ್ತಾಳೆ. ತದ ನಂತರ ಈ ಸುದ್ದಿ ಶಿವನ ಧರ್ಮಪತ್ನೀಯಾದ ಪಾರ್ವತಿಗೆ ಗೊತ್ತಾಗಿ ಅವಳು ಚಾಮುಂಡಿಯೊಂದಿಗೆ ಜಗಳವಾಡುತ್ತಾಳೆ. ಚಾಮುಂಡಿ-ಗೌರಿಯರ ಜಗಳ ಜನಪದ ಸಾಹಿತ್ಯದಲ್ಲಿ ನಿಚ್ಚಳವಾಗಿ ದಾಖಲಾಗಿದೆ. ಪಾರ್ವತಿಯ ಮಾತಿನಿಂದ ಮುಖಭಂಗಗೊಂಡ ಚಾಮುಂಡಿ ಮೈಸೂರಿಗೆ ಬರುವ ಹಾದಿಯಲ್ಲಿ ಆಕಸ್ಮಿಕವಾಗಿ ಸುತ್ತೂರಿನೆಡೆಗೆ ಸಾಗುತ್ತಿದ್ದ ಮಹದೇಶ್ವರನ ಬಳಿ ಹೋಗಿ ಪ್ರೇಮಭಿಕ್ಷೆ ಬೇಡುತ್ತಾಳೆ. ಇದರಿಂದ ಕಂಗಾಲಾದಮಹದೇಶ್ವರ ಏನೊಂದು ಮಾತನಾಡದೆ ಚಾಮುಂಡಿಯಿಂದ ತಪ್ಪಿಸಿಕೊಳ್ಳಲು ಬಿರ ಬಿರನೆ ನಡೆದು ಹೋಗುತ್ತಾನೆ. ಪಟ್ಟು ಬಿಡದ ಚಾಮುಂಡಿಯು ಆತನನ್ನು ಹಿಂಬಾಲಿಸಿದಾಗ, ಮಹದೇಶ್ವರ ಆಕೆಯಿಂದ ತಪ್ಪಿಸಿಕೊಳ್ಳಲು ಎಪ್ಪತ್ತೇಳು ಮಲೆಯಲ್ಲಿ ನೆಲೆಸಿದನಂತೆ. ನಂತರ ಚಾಮುಂಡಿ ಬೆಟ್ಟದ ಮೇಲೆ ನೆಲೆಸಿದಳಂತೆ. ಇವಳನ್ನು ಸಿಂಹವಾಹಿನಿಯೆಂದು ಪುರಾಣಗಳಲ್ಲಿ ಬಣ್ಣಿಸಲಾಗಿದೆ. == ಶಿಷ್ಟಪುರಾಣಗಳಲ್ಲಿ ಚಾಮುಂಡಿ == ಶಿಷ್ಟಪುರಾಣಗಳಾದ-"ಸ್ಕಂದ ಪುರಾಣ, ವರಾಹ ಪುರಾಣ, ಶ್ರೀದೇವಿ ಭಾಗವತ, ಕಾಳಿಕಾ ಪುರಾಣ, ವಿಷ್ಣು ಧರ್ಮೋತ್ತರ ಪುರಾಣ, ಸನತ್ಕುಮಾರ ಶಿಲ್ಪರತ್ನ ಪುರಾಣ ,ಮಾರ್ಕಂಡೇಯ ಪುರಾಣ"-ಮುಂತಾದ ಗ್ರಂಥಗಳು ಅಲ್ಪ-ಸ್ವಲ್ಪ ಪಾಠಾಂತರಗಳೊಂದಿಗೆ ಚಾಮುಂಡಿಯ ಪುರಾಣ ವನ್ನುವಿಶದಪಡಿಸಿವೆ. ಚಾಮುಂಡಿಯ ವೀರೋಚಿತಕಥೆಗಳನ್ನು, ಪ್ರಣಯ ಪ್ರಸಂಗವನ್ನು "ನೀಲಗಾರರು, ದೇವರಗುಡ್ಡರು, ಹೆಳವರು, ತಂಬೂರಿಯವರು, ಜನಪದ ಮಹಿಳೆಯರು "ವಿವರವಾಗಿ ಭಕ್ತಿಯಿಂದ ಹಾಡುತ್ತಾರೆ. == ಜನಪದ ಕಥೆಯ ಪ್ರಕಾರಗಳು == ಜನಪದ ಕಥೆಯ ಪ್ರಕಾರ ಚಾಮುಂಡಿ ಉಜ್ಜಯಿನಿ ದೇಶದ ಬಿಜ್ಜಳರಾಯನ ಕಿರಿಯ ಮಗಳು. ಚಾಮುಂಡಿಯ ಅಕ್ಕ ಉರಿಮಸಣಿ ಸೇರಿದಂತೆ ಒಟ್ಟು ಏಳುಜನ ಅಕ್ಕ-ತಂಗಿಯರು. ಇವರು ಕಾರಣಾಂತರಗಳಿಂದ ಪರಸ್ಪರ ಜಗಳ ಕಾದು, ಮನೆಬಿಟ್ಟು ಪರಿತ್ಯಕ್ತೆಯರಾಗುತ್ತಾರೆ. ಇವರೆಲ್ಲ ಉತ್ತರ ಪ್ರದೇಶದಿಂದ ಹೊರಟು, ದಕ್ಷಿಣ ಪ್ರಾಂತ್ಯದ ಭಿನ್ನ ಭಿನ್ನ ಸ್ಥಳಗಳಲ್ಲಿ ನೆಲೆ ಕಂಡು ಕೊಳ್ಳುತ್ತಾರೆ. ಚಾಮುಂಡಿಯ ಹಿನ್ನೆಲೆಗೆ ಸಂಬಂಧಿಸಿದಂತೆ ಹಲವಾರು ಪಾಠಾಂತರಗಳು ಇರುವುದನ್ನು ಕಾಣಬಹುದಾಗಿದೆ. ಮತ್ತೊಂದು ಕಥೆಯ ಪ್ರಕಾರ ಚಾಮುಂಡಿ ಚಾಮರಾಯನ ಮಗಳು. ಈಕೆಗೆ ಕಿಚುಕುಚು ಮಾರಿ ಎಂಬ ಸೋದರಿ, ಮಹದೇಶ್ವರ ಮತ್ತು ಬ್ರಹ್ಮೇಶ್ವರ ಎಂಬ ಸೋದರರಿರುತ್ತಾರೆ. ಅನ್ಯ ಕಾರಣ ನಿಮಿತ್ತ ಈ ನಾಲ್ವರು ಮನೆ ಬಿಟ್ಟು ಹೊರಬರುವಾಗ, ಮಾರ್ಟಳ್ಳಿಯ ಹತ್ತಿರವಿರುವ ಸುಳ್ವಾಡಿ ಎಂಬ ಊರಲ್ಲಿ ಲಂಬಾಣಿ ಜನಾಂಗದವರು ಮಾಂಸದಡುಗೆ ಮಾಡುತ್ತಿರುವುದನ್ನು ಕಂಡ ಕಿಚುಕುಚು ಮಾರಿಯ ಬಾಯಲ್ಲಿ ನೀರೂರಿ ಬಿಡುತ್ತದೆ. ಆಗ ಆಕೆ ತನ್ನ ಅಕ್ಕ ಮತ್ತು ಅಣ್ಣಂದಿರಿಗೆ ತಾನಿಲ್ಲೆ ಉಳಿಯುವುದಾಗಿ ಹೇಳುತ್ತಾಳೆ. ಅದಕ್ಕವರು ಸಮ್ಮತಿಸುತ್ತಾರೆ. ಸುಮಾರು ಒಂದು ಮೈಲಿ ದೂರ ಬಂದಾಗ ಮಹದೇಶ್ವರ, ತಮ್ಮನಾದ ಬ್ರಹ್ಮೇಶ್ವರನಿಗೆ ನೀನು ತಂಗಿಯ ರಕ್ಷಣೆಗಾಗಿ ಇಲ್ಲೇ ಉಳಿವಂತೆ ಆದೇಶಿಸುತ್ತಾನೆ. ನಂತರ ತಾನು ಮಹದೇಶ್ವರ ಬೆಟ್ಟದೆಡೆಗೆ ಸಾಗಿ ಏಳುಮಲೆಯಲ್ಲಿ ನೆಲೆಸುತ್ತಾನೆ. ಚಾಮುಂಡಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ರಕ್ಷಣಾ ದೇವತೆಯಾಗಿ ನೆಲೆ ನಿಲ್ಲುತ್ತಾಳೆ. == ಇತಿಹಾಸದಲ್ಲಿ ಚಾಮುಂಡಿ == ಮೈಸೂರಿನ ಚರಿತ್ರೆಯ ಪ್ರಕಾರ ಈಕೆ ಐತಿಹಾಸಿಕ ವೀರವನಿತೆ. ಅಪಾರ ಧೈರ್ಯಶಾಲಿನಿ. ಮೈಸೂರು ಒಡೆಯರ ಕುಲದೇವತೆ, ರಕ್ಷಣಾದೇವತೆ, ಅಧಿದೇವತೆಯಾಗಿದ್ದಾಳೆ. ಈಕೆಯ ಕಾಲ ಸುಮಾರು-೧೬ನೇ ಶತಮಾನವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. * ಮಹಿಷ ಮಂಡಲ/ಮಹಾಬಲ ಬೆಟ್ಟ/ ಚಾಮುಂಡಿಬೆಟ್ಟವಾಗಲು ಹಲವು ಕಾಲಾಂತರಗಳಾಗಿವೆ.ಮೈಸೂರು ಇತಿಹಾಸದಲ್ಲಿ ಗಂಗರ ಆಳ್ವಿಕೆಯನ್ನು 950ರ ಹಿಂದಿನ ಶಾಸನದಲ್ಲಿ ಇದರ ಉಲ್ಲೇಖವಿದೆ. ಈಗಲೂ ಚಾಮುಂಡಿ ಬೆಟ್ಟದ ಮೇಲೆ ಇದನ್ನು ಕಾಣಬಹುದು. * ನಗರದ ಚೋಳರು, ಚಾಲುಕ್ಯರು, ಹೊಯ್ಸಳರು , ವಿಜಯನಗರ ಸಾಮ್ರಾಜ್ಯ ಮತ್ತು ಯದು ರಾಜವಂಶದ ನಂತರ ಗಂಗಾ ಸಾಮ್ರಾಜ್ಯವು ಮೊದಲು ಆಳ್ವಿಕೆ ನಡೆಸಿತು. ಹೊಯ್ಸಳರ ಕಟ್ಟಡ ಅಥವಾ ಚಾಮುಂಡಿ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡಿ ದೇವಸ್ಥಾನ ಸೇರಿದಂತೆ ನಗರದಲ್ಲಿ ನಿರ್ಮಿಸಿದ ಸುಂದರ ದೇವಾಲಯಗಳು ಅತ್ಯಂತ ವಿಸ್ತೃತವಾಗಿವೆ. ನಂತರ ಬೆಟ್ಟದ ಚಾಮರಾಜ ಒಡೆಯರ್ ಎಂದು ಕರೆಯಲ್ಪಡುವ ಪ್ರಸಿದ್ಧ ರಾಜ ತಮ್ಮ ಆಳ್ವಿಕೆಯಲ್ಲಿ ಕೋಟೆಯನ್ನು, ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ನಂತರ ಮಹಿಷೂರು, ಅಂತಿಮವಾಗಿ ಮೈಸೂರಾಗಿ ಬದಲಾಯಿತು. ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣವನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಹೀಗೆ ರಾಜ ಒಡೆಯರ್ ಆಳ್ವಿಕೆಯಲ್ಲಿ, ಮೈಸೂರು ತನ್ನ ವೈಭವವನ್ನು ಮರಳಿ ಪಡೆಯಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == -: 2011-09-29 ವೇಬ್ಯಾಕ್ ಮೆಷಿನ್ ನಲ್ಲಿ. . ( ) () 2015-04-26 ವೇಬ್ಯಾಕ್ ಮೆಷಿನ್ ನಲ್ಲಿ. ( ),