ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು ೧೯೦೪ ಜುಲೈ ೨೯ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಇವರ ತಾಯಿ ಭಾರತೀಬಾಯಿ ; ತಂದೆ ಭೀಮಾಚಾರ್ಯರು. ಜಿ.ಬಿ.ಜೋಶಿಯವರು ೧೯೩೩ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗು ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನು ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು. ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಅವರಲ್ಲೊಬ್ಬರು. ೧೯೫೯ರಲ್ಲಿ ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕ “ಮನ್ವಂತರ”ವನ್ನು ಪ್ರಾರಂಭಿಸಿದರು.ಜಿ.ಬಿ.ಜೋಶಿಯವರು "ಜಡಭರತ" ಹಾಗು "ಅನಾಮಧೇಯ" ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ. == ಕೃತಿಗಳು == ಅವರ ನಾಟಕಗಳು ಹಾಗು ಇತರ ಕೃತಿಗಳು ಇಂತಿವೆ: === ನಾಟಕ === ಮೂಕಬಲಿ ಸತ್ತವರ ನೆರಳು ಕದಡಿದ ನೀರು ಆ ಊರು ಈ ಊರು ನಾನೇ ಬಿಜ್ಜಳ ಪರಿಮಳದವರು ಜರ್ಮನ್ ಬಂಗ್ಲೆ === ಕಾದಂಬರಿ === ಧರ್ಮಸೆರೆ === ಕವನಸಂಕಲನ === ಜೀವಫಲ == ರಂಗಭೂಮಿ == ಜಿ. ಬಿ. ಜೋಶಿಯವರ ನಾಟಕಗಳು ದಿವಂಗತ ಬಿ.ವಿ.ಕಾರಂತರಿಂದ ಹಾಗು ನೀ. ನಾ. ಸಂ. ತಂಡದವರಿಂದ ರಂಗಭೂಮಿಯ ಮೇಲೆ ಪ್ರಯೋಗಗೊಂಡಿವೆ. ವಿಶೇಷತಃ ಬಿ. ವಿ. ಕಾರಂತರಿಂದ ಪ್ರದರ್ಶಿತವಾದ “ಸತ್ತವರ ನೆರಳು” ತುಂಬಾ ಜನಪ್ರಿಯ ನಾಟಕಪ್ರದರ್ಶನವಾಗಿತ್ತು. == ಚಿತ್ರೀಕರಣ == ಜಿ.ಬಿ.ಜೋಶಿಯವರ “ಧರ್ಮಸೆರೆ” ಕಾದಂಬರಿಯನ್ನು ಚಲನಚಿತ್ರವಾಗಿ ರೂಪಾಂತರಿಸಲಾಗಿದೆ. ಈ ಚಲನಚಿತ್ರದಲ್ಲಿ ಶ್ರೀನಾಥ ನಾಯಕರಾಗಿ ಹಾಗು ಆರತಿ ನಾಯಕಿಯಾಗಿ ಅಭಿನಯಿಸಿದ್ದಾರೆ. == ಪುರಸ್ಕಾರಗಳು == ೧೯೭೪ರಲ್ಲಿ “ಸತ್ತವರ ನೆರಳು” ಹಾಗು ೧೯೭೭ರಲ್ಲಿ “ನಾನೇ ಬಿಜ್ಜಳ” ಈ ನಾಟಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು. ೧೯೮೬ರಲ್ಲಿ ಜಿ.ಬಿ.ಜೋಶಿಯವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೧೯೮೬ರಲ್ಲಿ ಕರ್ನಾಟಕಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೮೭ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ ೧೯೯೩ರಲ್ಲಿ ಭಾರತೀಯ ಪ್ರಕಾಶಕರ ಒಕ್ಕೂಟದಿಂದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ ದೊರೆತಿದೆ. == ನಿಧನ == ಜಿ.ಬಿ.ಜೋಶಿಯವರು ೧೯೯೩ ಡಿಸೆಂಬರ ೨೬ರಂದು ನಿಧನರಾದರು. == ಉಲ್ಲೇಖಗಳು ==