= ತಾಳಿಬಂಧಿ = == ಭಾರತದಲ್ಲಿ ಆಭರಣದ ಮಹತ್ವ == ಭಾರತೀಯ ಸಂಪ್ರದಾಯದಲ್ಲಿ ಹಿಂದಿನ ಕಾಲದಿಂದಲೂ ಆಭರಣಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಕೇವಲ ಘನತೆಗಾಗಿ ಅಥವಾ ಚಿನ್ನದ ಮೇಲಿನ ಮೋಹಕ್ಕಾಗಿ ಅಷ್ಟೇ ಅಲ್ಲದೆ, ಕೆಲವೊಂದು ಆಭರಣಗಳನ್ನು ಧರಿಸುವುದು ಶ್ರೇಯಸ್ಕರ ಎಂಬುದು ಶಾಸ್ತ್ರದಲ್ಲಿ ಕೂಡ ಉಲ್ಲೇಖವಾಗಿದೆ. ಕೆಲವೊಂದು ಆಭರಣಗಳಿಗೆ ಶಾಸ್ರ್ತದಲ್ಲಿ ಉನ್ನತವಾದ ಸ್ಥಾನವನ್ನು ನೀಡಲಾಗಿದ್ದು ಆಯಾ ಧರ್ಮಗಳಲ್ಲಿ ಅವರವರ ಆಚರಣೆಗಳಿಗೆ ತಕ್ಕಂತೆ ಆಭರಣಕ್ಕೆ ನೀಡುವ ಮಹತ್ವವು ಬದಲಾಗುತ್ತ ಹೋಗುತ್ತದೆ. ಹೆಚ್ಚಿನದಾಗಿ ಮದುವೆ, ಹಬ್ಬದ ಸಂದರ್ಭಗಳಲ್ಲಿ ಚಿನ್ನಕ್ಕೆ ಮಹತ್ವವನ್ನು ನೀಡಲಾಗುತ್ತದೆ. ಬೇರೆ ಬೇರೆ ಧರ್ಮಗಳಲ್ಲಿ ಅವರದೇ ಆದತಂಹ ಆಚಾರ ವಿಚಾರ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಕಾಲ ಬದಲಾಗುತ್ತಿದ್ದಂತೆ ಆಭರಣಗಳ ಶೈಲಿಯು ಬದಲಾಗುತ್ತಿವೆ. ಆದರೆ ಸಂಪ್ರದಾಯ ಬದ್ಧ ಆಭರಣಗಳು ಇಂದು ಕೂಡ ತನ್ನ ಹಿರಿಮೆಯನ್ನು ಕಳೆದುಕೊಂಡಿಲ್ಲ ಮಹಿಳೆ ಆಭರಣ ಪ್ರಿಯೆ ಎಂಬುದು ಎಲ್ಲಿರಿಗೂ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಅಗಿದೆ. ಆದರೆ ಸಂಪ್ರದಾಯದ ಪ್ರಕಾರ ಮಹಿಳೆಗೆ ತನಗಿಷ್ಟ ಬಂದಂತೆ ಕೆಲವೊಂದು ಆಭರಣಗಳನ್ನು ಧರಿಸುವಂತಿಲ್ಲ. ಉದಾಹರಣೆಗೆ ಮುತ್ತೈದೆಯರು ಧರಿಸುವಂತಹ ಕರಿಮಣಿ, ಕಾಲುಂಗುರ, ಕರಿಮಣಿ ಬಳೆ ಮತ್ತು ತಾಳಿ ಬಂಧಿ. == ಜೈನ ಧರ್ಮದ ವಿಶೇಷ ಸಾಂಪ್ರದಾಯಿಕ ಆಭರಣ ತಾಳಿ ಬಂಧಿ == ವಿವಿಧ ಧರ್ಮಗಳ ಆಯಾ ಸಂಪ್ರದಾಯಗಳಂತೆ ಜೈನಧರ್ಮದಲ್ಲೂ ಕೂಡ ವಿಭಿನ್ನ ರೀತಿಯ ಸಂಪ್ರದಾಯಗಳು ಇವೆ. ಜೈನ ಧರ್ಮದಲ್ಲಿ ಅದೂ ಕೂಡ ಮದುವೆ ಸಂದರ್ಭದಲ್ಲಿ ಒಂದು ವಿಶೇಷ ಆಭರಣವನ್ನು ಮದುಮಗಳಿಗೆ ಧರಿಸಲಾಗುತ್ತದೆ ಅದೇ ‘ತಾಳಿ ಬಂಧಿ’. ‘ತಾಳಿ ಅಥವಾ ‘ಕರಿಮಣಿ’ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಆದರೆ ಜೈನಧರ್ಮದಲ್ಲಿ ಮದುವೆಯ ದಿನ ಮದುಮಗಳಿಗೆ ಈ ‘ತಾಳಿ ಬಂಧಿ' ಎಂಬ ಆಭರಣವನ್ನು ಹಾಕಿ ಆಕೆಯನ್ನು ಆಶೀರ್ವಧಿಸಲಾಗುತ್ತದೆ. == ತಾಳಿ ಬಂಧಿ ಧರಿಸುವ ಮುಖ್ಯ ಉದ್ದೇಶ == ‘ತಾಳಿ’ ಎಂದರೆ ಶುಭ ಸೂಚನೆ ಮತ್ತು ಮುತ್ತೈದೆ ಧರಿಸಬೇಕಾದ ಐದು ಮುತ್ತು ಅಥವಾ ಆಭರಣಗಳಲ್ಲಿ ಒಂದು. ‘ಬಂಧಿ’ ಎಂದರೆ ಬಂಧನಗೊಳ್ಳುವುದು. ಈ ‘ತಾಳಿ ಬಂಧಿ’ ಆಭರಣಮದುಮಗಳಿಗೆ ಧರಿಸುವ ಮುಖ್ಯ ಉದ್ದೇಶವೆಂದರೆ ಆಕೆಗೆ ಅಕ್ಷಯ ಪದಪ್ರಾಪ್ತಿಯಾಗಿ ಮದುವೆಯಲ್ಲಿ ಯಾವುದೇ ವಿಘ್ನಗಳು ಬಾರದೇ ಇರಲಿ ಮತ್ತು ಆಕೆ ಹೊಸ ಸಂಬಂಧಗಳಲ್ಲಿ, ಸಂತೋಷಗಳಲ್ಲಿ ಬಂಧಿಯಾಗಿ ತನ್ನ ಹೊಸ ಜೀವನವನ್ನು ಮೊದಲುಗೊಳ್ಳಬೇಕು ಎಂಬುದು. ಈ ಸಂದರ್ಭದಲ್ಲಿ ಉಳಿದೆಲ್ಲ ಮುತ್ತೈದೆಯರು ಮದುಮಗಳಿಗೆ ಅಕ್ಷತೆ ಹಾಕಿ ಅಕ್ಷಯಪದ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತಾರೆ. == ತಾಳಿ ಬಂಧಿ ವಿಶೇಷ ಪದ್ಧತಿ == ‘ತಾಳಿ ಬಂಧಿ’ಯ ಮತ್ತೊಂದು ವಿಶೇಷವೆಂದರೆ ಈ ಆಭರಣವನ್ನು ಮದುವೆ ಹುಡುಗ ಅಂದರೆ ಆಕೆಯ ಗಂಡ ಆಕೆಗೆ ಕಟ್ಟುವಂತಿಲ್ಲ. ವಾಸ್ತವವಾಗಿ ತಾಳಿಯನ್ನು ಹೆಣ್ಣಿಗೆ ಆಕೆಯ ಗಂಡ ಕಟ್ಟಿ ಹೊಸ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಜೈನಧರ್ಮದಲ್ಲಿ ತಾಳಿ ಬಂಧಿ ಶಾಸ್ತ್ರದಲ್ಲಿ ಮದುಮಗನ ಕಡೆಯ ಹೆಣ್ಣು ಮಗು ‘ತಾಳಿ ಬಂಧಿ’ಯನ್ನು ಮದುಮಗಳಿಗೆ ಕಟ್ಟಲಾಗುತ್ತದೆ. ಇದರ ಉದ್ದೇಶ ಎಂದರೆ ಮಕ್ಕಳ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶ ಅಥವಾ ಕೆಟ್ಟ ಭಾವನೆಗಳು ಇಲ್ಲದೆ ಪರಿಶುದ್ಧವಾಗಿ ಇರುತ್ತಾ. ಇದರಿಂದ ಯಾವುದೇ ರೀತಿಯ ವಿಘ್ನಗಳು ಸಂಭವಿಸುವುದಿಲ್ಲ ಎಂಬುದಾಗಿದೆ. ಯಾವ ರೀತಿ ತಾಳಿಯನ್ನು ಮದುವೆಗೆ ಮುಂಚೆ ಧರಿಸಬಾರದು ಎಂಬ ಸಂಪ್ರದಾಯ ಇದೆಯೋ ಅದೇ ರೀತಿ ಜೈನ ಧರ್ಮದ ಪದ್ದತಿಯಲ್ಲೂ ‘ತಾಳಿ ಬಂಧಿ’ಯನ್ನು ವಿವಾಹ ಪೂರ್ವ ಯುವತಿಯರು ಧರಿಸುವಂತಿಲ್ಲ. ವಾಸ್ತವವಾಗಿ ಗಂಡ ಕಟ್ಟಿಲ್ಲವಾದರು ಈ ಆಭರಣದಲ್ಲಿ ತಾಳಿಯ ಅಂಶ ಇರುವುದರಿಂದ ಇದನ್ನು ಮದುವೆಯಾಗದ ಯುವತಿ ಧರಿಸಬಾರದು ಎಂಬ ಪದ್ಧತಿಯಿದೆ. == ತಾಳಿ ಬಂಧಿ ಆಭರಣದ ರಚನೆ == ‘ತಾಳಿ ಬಂಧಿ’ಯ ರಚನೆಯೆ ವಿಭಿನ್ನ ಮತ್ತು ವಿಶೇಷವಾಗಿದೆ. ಉಳಿದ ಆಭರಣಗಳಂತೆ ತಾಳಿ ಬಂಧಿಯನ್ನು ಎಲ್ಲ ಆಭರಣ ಮಳಿಗೆಯಲ್ಲಿ ಮಾಡಲಾಗುವುದಿಲ್ಲ. ಹಿಂದಿನ ಕಾಲದಲ್ಲಿ ತಾಳಿ ಬಂಧಿ ಆಭರಣವನ್ನು ಬಹಳ ಸರಳ ರೀತಿಯಲ್ಲಿ ಮಾಡಲಾಗುತ್ತಿತ್ತು. ದಪ್ಪನೆಯ ಒಂದು ಸರಕ್ಕೆ ಅಗಲವಾದ ತಾಳಿಯನ್ನು ಜೋಡಿಸಲಾಗುತ್ತಿತ್ತು. ಆದರೆ ಈಗ ಪ್ಯಾಷನ್ ಬದಲಾಗುತ್ತಿದ್ದಂತೆ ತಾಳಿ ಬಂಧಿಯ ರಚನೆಯನ್ನು ಆಕರ್ಷಕವಾಗಿ ಮಾಡಲಾಗುತ್ತಿದೆ. ತಾಳಿ ಬಂಧಿಯಲ್ಲಿರುವ ಸರವನ್ನು ಸಂಬಂಧಗಳ ಸೇತುವೆ ಮತ್ತು ತಾಳಿಯನ್ನು ಅಕ್ಷಯ ಪ್ರಾಪ್ತ ಮತ್ತು ಮುತ್ತೈದೆಯ ಸಂಕೇತವಾಗಿ ಗುರುತಿಸಲಾಗುತ್ತದೆ. == ವಿಶೇಷ ನಂಬಿಕೆ == ತಾಳಿ ಬಂಧಿ ತಯಾರಿಸುವ ಸಂದರ್ಭದಲ್ಲಿ ಕೆಲವೊಂದು ಶಾಸ್ತ್ರಗಳನ್ನು ಪಾಲಿಸಲಾಗುತ್ತಿತ್ತು ಎಂಬ ಉಲ್ಲೇಖವಿದೆ. ಏಕೆಂದರೆ ತಾಳಿಯ ಸ್ವರೂಪವಾದ ತಾಳಿ ಬಂಧಿಗೆ ಪದ್ಮಾವತಿ ದೇವಿಯ ಅಂಶ ಜೊತೆಗೂಡಿ ಮುತ್ತೈದೆಗೆ ಮತ್ತು ಆಕೆಯ ಮುತೈದೆತನಕ್ಕೆ ರಕ್ಷಣೆ ನೀಡುತ್ತದೆ ಎಂಬ ನಂಬಿಕೆ ಇದೆ. == ತಾಳಿ ಬಂಧಿ ಶಾಸ್ತ್ರ == ಹಿಂದಿನ ಕಾಲದಲ್ಲಿ ಮದುವೆ ಸತತ 7 ದಿನಗಳ ಕಾಲ ನಡೆಯುತ್ತಿದ್ದವು. ಆದರೆ ಇಂದು ಸಮಯದ ಅಭಾವದ ಕಾರಣ ಕೇವಲ ಒಂದು ದಿನಕ್ಕೆ ಸೀಮಿತವಾಗಿದೆ. ಹಿಂದಿನ ದಿನಗಳಲ್ಲಿ ಹುಡುಗಿಯ ಮನೆಗೆ ತೆರಳಿ ನಿಶ್ಚಯ ಮಾಡಿದ ಮುಹೂರ್ತದಲ್ಲಿ ಆಕೆಯ ಮನೆಯಲ್ಲೇ ತಾಳಿ ಬಂಧಿ ಶಾಸ್ತ್ರವನ್ನು ನೇರವೇರಿಸಲಾಗುತಿತ್ತು. ಪ್ರಸ್ತುತವಾಗಿ ಕಲ್ಯಾಣ ಮಂಟಪಗಳಲ್ಲಿ ಮದುವೆ ನೆರವೇರುವ ಕಾರಣದಿಂದ ಮದುಮಗಳನ್ನು ಮದುಮಗನ ಕುಟುಂಬಿಕರು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಮದುಮಗಳನ್ನು ಮಂಟಪದಲ್ಲಿ ಕೂರಿಸಲಾಗುತ್ತದೆ. ನಂತರ ಮದುಮಗಳಿಗೆ ಹುಡುಗನ ಸಂಬಂಧಿಕರು ಬಳೆ, ಸೀರೆ, ಅಲಂಕಾರಿಕ ವಸ್ತು, ಮಲ್ಲಿಗೆ ಹೂವು, ಕಾಲುಂಗುರ ನೀಡಿ ನಂತರ ಮಗುವಿನ ಕೈಯಲ್ಲಿ ತಾಳಿ ಬಂಧಿ ತೊಡಿಸಲಾಗುತ್ತದೆ. ನೆರೆದಿರುವ ಮುತ್ತೈದೆಯರಿಂದ ಅಕ್ಷತೆ ಹಾಕಿ ಆಶಿರ್ವದಿಸಿ ನಂತರ ಹುಡುಗನ ಸಂಬಂಧಿಕರು ನೀಡಿದ ಸೀರೆಯನ್ನು ಹೊದಿಸಿ ಮತ್ತೆ ಮಂಟಪದಲ್ಲಿ ಕೂರಿಸಿ ಆಶಿರ್ವದಿಸಲಾಗುತ್ತದೆ. ಇದು ತಾಳಿ ಬಂಧಿ ಕಟ್ಟುವ ಸಮಯದಲ್ಲಿ ನಡೆಯುವಂತಹ ಶಾಸ್ತ್ರವಾಗಿದೆ. ಉಲ್ಲೇಖ ವೃಷಭರಾಜ್ ಇಂದ್ರ , ಪ್ರಧಾನ ಇಂದ್ರರು ಅಜ್ಜಿಬೆಟ್ಟು ಬಸದಿ