ತಿರುವಣ್ಣಾಮಲೈ ( ಇಂಗ್ಲೀಷ್ : ತಿರುವಣ್ಣಾಮಲೈ ) ಭಾರತದ ತಮಿಳು ನಾಡು ರಾಜ್ಯದ ಒಂದು ಜಿಲ್ಲೆ ತಿರುವಣ್ಣಾಮಲೈ. ಭಾರತದ ಮತ್ತು ತಮಿಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ತಿರುವಣ್ಣಾಮಲೈ ವಿ‌ಶೇ‍ಷ ಸ್ಥಾನವನ್ನು ಪಡೆದುಕೊಂಡಿದೆ. == ಅರುಣಾಚಲೇಶ್ವರ ದೇವಸ್ಥಾನ == ಅರುಣಾಚಲೇಶ್ವರ ದೇವಸ್ಥಾನ ಅಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿದೆ. ಹಿಂದೂ ಭಕ್ತಾಧಿಗಳಿಗೆ ಇದು ಪವಿತ್ರ ಕ್ಷೇತ್ರ. ಇಲ್ಲಿ ಶಿವಪೂಜೆ ಸಡೆಯುತ್ತಿದ್ದು ಶೈವರಿಗೆ ಹೆಚ್ಚಿನ ಮಹತ್ವವುಳ್ಳ ಕ್ಷೇತ್ರವಿದು. ದೇವಸ್ಥಾನದಲ್ಲಿ ಶಿವನನ್ನು ಪ್ರತಿನಿಧಿಸುವ ಲಿಂಗವಿದೆ. ಲಿಂಗದ ಜೊತೆಗೆ ಪಾರ್ವತಿ ದೇವಿಯ ಪೂಜೆಯೂ ನಡೆಯುತ್ತದೆ. ಪಾರ್ವತಿ ದೇವಿಯನ್ನು ಇಲ್ಲಿ ಉನ್ನಮುಲ್ಯಮ್ಮ ಎಂದು ಪೂಜಿಸಲಾಗುತ್ತದೆ. ದೇವಸ್ಥಾನವನ್ನು ಅಗ್ನಿ ಪ್ರತಿಕವೆಂದು ಭಾವಿಸಲಾಗುತ್ತದೆ ಮತ್ತು ಶಿವನನ್ನು ಅಗ್ನಿ ಲಿಂಗವೆಂದು ಕರೆಯುತ್ತಾರೆ.ತಮಿಳು ಸಂತರು ನಾಯನ್ನರು ಬರೆದ ಶಾಸ್ತ್ರೋಕ್ತ ಪದ್ಯಗಳಲ್ಲಿ ದೇವಸ್ಥಾನದ ಉಲ್ಲೇಖವಿದೆ. ದೇಶದಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನ ಇದು. ಸುಮಾರು 10 ಹೆಕ್ಟೇರ್ ನಷ್ಟು ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಅದ್ಭುತವಾದ ನಾಲ್ಕು ಗೋಪುರಗಳಿವೆ. ಪೂರ್ವದ ಗೋಪುರ 66 ಮೀಟರ್ ಎತ್ತರವಿದ್ದು ಭಾರತದ ಎತ್ತರದ ಗೋಪುರವೆಂಬ ಹೆಗ್ಗಳಿಕೆ ಪಡೆದುಕೊಂಡಿದೆ. == ರಮಣ ಮಹರ್ಷಿ ಆಶ್ರಮ == ಆಧುನಿಕ ತತ್ವಜ್ಞಾನಿಯಾಗಿರುವ ರಮಣಮಹರ್ಷಿಗಳು 1922 ರಿಂದ 1950 ರವರೆಗೆ ತಿರುವಣ್ಣಾಮಲೈನಲ್ಲಿ ನೆಲೆ ನಿಂತಿದ್ದರು. ತಿರುವಣ್ಣಾಮಲೈನ ಪಶ್ಚಿಮ ದಿಕ್ಕಿನಲ್ಲಿ ಅರುಣಾಚಲ ಬೆಟ್ಟದ ತಪ್ಪಲಿನಲ್ಲಿದೆ ಈ ರಮಣ ಆಶ್ರಮ. ಮಹರ್ಷಿ ರಮಣರು 1950ರಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದಾಗ ಅವರು ವಾಸಿಸಿದ್ದ ಸ್ಥಳದಲ್ಲಿ ಕೊನೆಯ ಕ್ಷಣಗಳನ್ನು ಮನತುಂಬಿಕೊಳ್ಳುವುದಕ್ಕೆ ಸಾವಿರಾರು ಭಕ್ತರು ಇಲ್ಲಿ ನೆರೆದಿದ್ದರು. ಅವರ ಸಾವಿನ ನಂತರವೂ ಬಹಳಷ್ಟು ಅನುಯಾಯಿಗಳು ಮತ್ತು ಕುತೂಹಲವುಳ್ಳ ಭಕ್ತರು ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಮಹರ್ಷಿ ರಮಣರು ಕೊನೆಯುಸಿರೆಳೆದ ಸ್ಥಳದಲ್ಲಿ ಮಂದಿರವೊಂದನ್ನು ನಿರ್ಮಿಸಿ ಅವರಿಗೆ ಅರ್ಪಿಸಲಾಗಿದೆ. ಪ್ರತಿವರ್ಷ ಅವರ ಅನುಯಾಯಿಗಳು ಆಶ್ರಮಕ್ಕೆ ಭೆಟಿ ನೀಡಿ ಸಾಮಾಜಿಕ ಕೆಲಸಗಳನ್ನು ಮಾಡುತ್ತ ಸಮಯ ಕಳೆಯುತ್ತಾರೆ. == ಆದಿ ಅಣ್ಣಾಮಲೈ == ತಿರುವಣ್ಣಾಮಲೈ ಸುತ್ತಮುತ್ತಲಿನಲ್ಲಿಯೇ ಅತ್ಯಂತ ಹಳೆಯ ದೇವಸ್ಥಾನ ಆದಿ ಅಣ್ಣಾಮಲೈ. ಅರುಣಾಚಲೇಶ್ವರ ದೇವಸ್ಥಾನವನ್ನು ಕಟ್ಟುವುದಕ್ಕೂ ಮೊದಲೇ 100 ವರ್ಷಗಳ ಮುಂಚೆಯೇ ಈ ದೇವಸ್ಥಾನವನ್ನು ನಿರ್ಮಿಸಲಾಗಿತ್ತು. ಹೀಗಾಗಿ ಈ ದೇವಸ್ಥಾನ ಸುಮಾರು 2000 ವರ್ಷಗಳಷ್ಟು ಹಳೆಯದೆಂದು ನಂಬಲಾಗುತ್ತದೆ. ಮೊದಲು ದೇವಸ್ಥಾನವನ್ನು ಹಲವರು ದೇವ ದೇವತೆಗಳ ಮೂರ್ತಿಗಳಿಂದ ಕೂಡಿದ ಮರಗಳಿಂದ ನಿರ್ಮಿಸಲಾಗಿತ್ತು. ನಂತರದ ವರ್ಷಗಳಲ್ಲಿ ಗೋಪುರಗಳನ್ನು ನಿರ್ಮಿಸಿ ಮರದ ಕೆತ್ತನೆಗಳಿಗೆ ಬದಲಾಗಿ ಕಲ್ಲುಗಳಿಂದ ದೇವಸ್ಥಾನ ಕಟ್ಟಲಾಯಿತು. ಈಗಿರುವ ದೇವಸ್ಥಾನ ಸುಮಾರು 1200 ವರ್ಷಗಳಷ್ಟು ಹಳೆಯದು. ಆದಿ ಎಂಬುದರ ಅರ್ಥ ಮೊದಲನೆಯದು ಎಂದು. ಅರುಣಾಚಲೇಶ್ವರ ದೇವಸ್ಥಾನಕ್ಕಿಂತ ಮುಂಚೆ ಇದನ್ನು ನಿರ್ಮಿಸಲಾಯಿತಾದರೂ ಈ ದೇವಸ್ಥಾನವಿರುವುದು ಕೇವಲ ಅರ್ಧ ಎಕರೆ ಮಾತ್ರ. ಇಲ್ಲಿ ಪೂಜಿಸಲ್ಪಡುವ ಲಿಂಗವನ್ನು ಸ್ವತಃ ಬ್ರಹ್ಮನೇ ಕೆತ್ತಿದನೆಂಬ ನಂಬಿಕೆಯಿದೆ. == ಶೇಷಾದ್ರಿ ಸ್ವಾಮಿಗಳ ಆಶ್ರಮ == ರಮಣ ಆಶ್ರಮಕ್ಕೆ ಸಮೀಪದಲ್ಲಿಯೇ ಇದೆ ಶೇಷಾದ್ರಿ ಸ್ವಾಮಿಗಳ ಆಶ್ರಮ. ರಮಣ ಆಶ್ರಮಕ್ಕೆ ಹೋಗುವ ದಾರಿಯಲ್ಲಿಯೇ ಇರುವ ಶೇಷಾದ್ರಿ ಸ್ವಾಮಿಗಳ ಆಶ್ರಮ ಕೇವಲ ಮೂರು ಕಟ್ಟಡಗಳ ಅಂತರದಲ್ಲಿದೆ. ಸ್ವಾಮಿಗಳ ಆಶ್ರಮದಲ್ಲಿ ಬೇರೆ ನಗರಗಳಿಂದ ಬರುವ ಭಕ್ತರಿಗೆ ವಸತಿ ವ್ಯವಸ್ಥೆಯಿದೆ. ಇಲ್ಲಿನ ವಸತಿ ಬಾಡಿಗೆ ಅತ್ಯಂತ ಕಡಿಮೆ ಖರ್ಚಿನದ್ದು. ಕೆಲವೊಮ್ಮೆ ಹಣ ನೀಡಲಾಗದ ಭಕ್ತರಿಗೆ ಉಚಿತ ವಸತಿ ಸೌಲಭ್ಯವೂ ಇದೆ. ಈ ಆಶ್ರಮವನ್ನು ಕಟ್ಟಿದ್ದು ಶೇಷಾದ್ರಿ ಸ್ವಾಮಿಗಳು- ಇವರು ಬಂಗಾರದ ಕೈಯ ಸಂತನೆಂದೇ ಪ್ರಸಿದ್ದಿ ಪಡೆದಿದ್ದಾರೆ. ದಕ್ಷಿಣ ಭಾರತದ ಜನ ಪೂಜಿಸುವ ಈ ಸಂತ ಭಾರತೀಯ ಸಂತರಲ್ಲಿಯೇ ಹೆಚ್ಚು ಮೆಚ್ಚತಕ್ಕ ಸಂತನೆಂದು ತಿಳಿಯಲಾಗುತ್ತದೆ. ತಿರುವಣ್ಣಾಲೈನಲ್ಲಿ ಜನಿಸಿದ ಇವರು ತಮ್ಮ ಜೀವಿತದ ಹೆಚ್ಚು ಸಮಯವನ್ನು ಜನರಿಗೆ ಆಧ್ಯಾತ್ಮ ಹಾಗು ಆರ್ಥಿಕ ಸಬಲತೆ ನೀಡುವುದರಲ್ಲಿಯೇ ವ್ಯಯಿಸಿದರು. ಈ ಕಾರಣಕ್ಕಾಗಿಯೇ ಹಲವರ ಪಾಲಿಗೆ ಈತ ದೇವತಾ ಪುರುಷ. == ವಿರೂಪಾಕ್ಷ ಗುಹೆ == ವಿರೂಪಾಕ್ಷ ಗುಹೆ ಸುಮಾರು 14ನೇ ಶತಮಾನದಿಂದಲೂ ಧಾರ್ಮಿಕ ಮಹತ್ವ ಹೊಂದಿದೆ. ಪ್ರಾರಂಭದಲ್ಲಿ ಗುಹೆ ಪ್ರಸಿದ್ದಿ ಪಡೆದಿದ್ದು ಸಂತ ವಿರೂಪಾಕ್ಷ ದೇವನಿಂದ. ಆದರೆ ಇದೀಗ ವಿರೂಪಾಕ್ಷ ಗುಹೆ ಹೆಸರುವಾಸಿಯಾಗಿರುವುದು ರಮಣ ಮಹರ್ಷಿಗಳಿಂದ. 1899 ರಿಂದ ಸುಮಾರು 16 ವರ್ಷಗಳ ಕಾಲ ವಿರೂಪಾಕ್ಷ ಗುಹೆಯನ್ನು ರಮಣ ಮಹರ್ಷಿಗಳು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದರು. ಮಹರ್ಷಿಗಳು ಗುಹೆಯಿಂದ ಹೊರ ಬಂದಿದ್ದು 1916 ರಲ್ಲಿ. ಇದೇ ಗುಹೆಯಲ್ಲಿರುವಾಗ ಸೆಲ್ಫ್ ಎನ್ಕ್ವೈರಿ ಮತ್ತು ವ್ಹೂ ಎಮ್ ಐ ಎಂಬ ಗ್ರಂಥಗಳನ್ನು ಬರೆದರು. ರಮಣ ಮಹರ್ಷಿಗಳ ಅನುಯಾಯಿಗಳು ಗುಹೆಗೆ ಧಾರ್ಮಿಕ ಮಹತ್ವ ನೀಡಿರಲು ಇದೂ ಒಂದು ಕಾರಣ. ಅಂತರಂಗದ ಶಾಂತಿಯ ಹುಡುಕಾಟಕ್ಕೆ ಹಲವರು ಇದೇ ಸ್ಥಳದಲ್ಲಿ ಧ್ಯಾನಕ್ಕೆ ಕೂರುತ್ತಾರೆ. ವಿರೂಪಾಕ್ಷ ಗುಹೆಗೆ ಹೋಗುವಾಗ ರಮಣ ಆಶ್ರಮ ಮತ್ತು ಸ್ಕಂದಾಶ್ರಮಗಳನ್ನು ದಾರಿಯಲ್ಲಿ ಹಾದು ಹೋಗಬೇಕು. ತಿರುವಣ್ಣಾಮಲೈ ದೇವಸ್ಥಾನ ಮತ್ತು ಅರುಣಾಚಲೇಶ್ವರ ದೇವಸ್ಥಾನ ಮಾರ್ಗವಾಗಿಯೂ ಗುಹೆಗೆ ಹೋಗಬಹುದು. ಹಲವು ಭಕ್ತರು ತಿರುವಣ್ಣಾಮಲೈನ ಮುಖ್ಯ ದೇವಸ್ಥಾನದಿಂದ ನಡೆದುಕೊಂಡು ಹೋಗುತ್ತಾರೆ. ಈ ನಡಿಗೆ ತಮ್ಮ ಯಾತ್ರೆಯ ಒಂದು ಭಾಗವೆಂದು ಭಾವಿಸುವ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾ ಸಾಗುತ್ತಾರೆ. == ಸಾತನೂರ್ ಅಣೆಕಟ್ಟು == 1958 ರಲ್ಲಿ ಕಟ್ಟಿದ ಸಾತನೂರ್ ಅಣೆಕಟ್ಟು ತಿರುವಣ್ಣಾಮಲೈ ಜಿಲ್ಲೆಯಲ್ಲಿದ್ದು ದಕ್ಷಿಣ ಭಾರತದ ಪ್ರಮುಖ ಡ್ಯಾಂಗಳಲ್ಲೊಂದು. ತಿರುವಣ್ಣಾಮಲೈ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರ ಕುಡಿಯುವ ನೀರು ಮತ್ತು ನೀರಾವರಿಯ ಉದ್ದೇಶಕ್ಕೆ ಈ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟನ್ನು ಪೆನ್ನೈಯಾರ್ ಮತ್ತು ತೆನ್ಪೆನ್ನೈ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ನದಿಗಳು ಚೆನ್ನಕೇಶವ ಬೆಟ್ಟದ ಮಾರ್ಗವಾಗಿ ತಂದರಪೆಟ್ ತಾಲೂಕಿನಲ್ಲಿ ಹರಿಯುತ್ತವೆ. ತಿರುವಣ್ಣಾಮಲೈ ನಗರದಿಂದ 30ಕಿಮೀ ದೂರದಲ್ಲಿದೆ ಈ ಡ್ಯಾಂ. ಉತ್ತಮ ರಸ್ತೆ ಮಾರ್ಗಗಳು ಮೂಲಕ ಡ್ಯಾಂ ತಲುಪಬಹುದು. ಕೇವಲ ನಿಸರ್ಗದ ಸೌಂದರ್ಯ ಸವಿಯಲು ಮಾತ್ರ ಇಲ್ಲಿಗೆ ಬೇಟಿ ನೀಡುವುದಲ್ಲ. ಬದಲಿಗೆ, ನದಿಯ ದಂಡೆಯಲ್ಲಿ ಮೊಸಳೆ ಫಾರ್ಮ್ ಮತ್ತು ಮೀನು ಸಾಕಾಣಿಕಾ ಕೇಂದ್ರಗಳಿವೆ. ಅನೆಕಟ್ಟಿಗೆ ಸಮೀಪದಲ್ಲಿಯೇ ಒಂದು ಉದ್ಯಾನವನ ಕೂಡ ಇದೆ. ದಕ್ಷಿಣ ಭಾರತದ ಹಲವು ಸಿನಿಮಾ ಹಾಡುಗಳು ಇಲ್ಲಿನ ಪಾರ್ಕ್ ನಲ್ಲಿ ಶೂಟಿಂಗ್ ಆಗಿವೆ. == ಸ್ಕಂದಾಶ್ರಮ == ಸ್ಕಂದಾಶ್ರಮವನ್ನು ಸ್ಥಾಪಿಸಿದವರು ಕಂದಸ್ವಾಮಿ. ಇವರೇ ಕಟ್ಟಡದ ಪ್ರಾಥಮಿಕ ಭಾಗವನ್ನು ನಿರ್ಮಿಸಲು ಮುಂದಾದವರು. ಸ್ಕಂದಾಶ್ರಮವೊಂದು ಗುಹೆಯಾಗಿದ್ದು ವಿರೂಪಾಕ್ಷ ಗುಹೆಗೆ ಹತ್ತಿರದಲ್ಲಿಯೇ ಇದೆ. ಆಶ್ರಮದಲ್ಲಿ ಸ್ವಚ್ಚ ನೀರಿನ ತೊರೆಯಿದ್ದು ಕುಡಿಯಲು ಯೋಗ್ಯವಾಗಿದೆ. ಗುಹೆಯಲ್ಲಿ ಎರಡು ಕೋಣೆಯನ್ನೂ ಕಟ್ಟಲಾಗಿದೆ. ಆಶ್ರಮದ ತಾರಸಿಯಲ್ಲಿ ನಿಸರ್ಗದ ಸುಂದರತೆಯನ್ನು ಸವಿಯಲು ಅವಕಾಶವಿದೆ. ಭಗವಾನ್ ತಮ್ಮ ತಾಯಿ ಅಲಗಮ್ಮ ಕೊನೆಯುಸಿರೆಳೆಯುವವರೆಗೆ 1922 ರವರೆಗೆ ಇದೇ ಆಶ್ರಮದಲ್ಲಿ ತಂಗಿದ್ದರು ಎಂದು ನಂಬಲಾಗುತ್ತದೆ. 1922 ರಲ್ಲಿ ರಮಣ ಮಹರ್ಷಿಗಳ ತಾಯಿಯ ಸಮಾಧಿಯೂ ಇಲ್ಲೇ ನಿರ್ಮಿಸಲಾಗಿದೆ. == ಮಾಮರಾ ಗುಹೈ == ಮಾಮರಾ ಗುಹೈ ತಿರುವಣ್ಣಾಮಲೈನಲ್ಲಿರುವ ಹಿಂದೂ ದೇವಸ್ಥಾನ. ಮಾಮರ ಗುಹೈನ ಅರ್ಥ ಮಾವಿನ ಹಣ್ಣಿನ ಗುಹೆ ಎಂದು. ದೇವಸ್ಥಾನ ಮೂಲತಃ ಗುಹೆಯಾಗಿದ್ದು ಮಂದಿರದ ರೂಪ ನೀಡಲಾಗಿದೆ. ಹೊರನೋಟಕ್ಕೆ ಗುಹೆಯು ಮಾವಿನ ಮರದಂತೆ ತೋರುತ್ತದೆ. ಸ್ಥಳೀಯ ಹಿಂದೂ ಜನರಿಗೆ ಇದು ಧಾರ್ಮಿಕ ಮಹತ್ವವುಳ್ಳ ಸ್ಥಳ. ಮಹರ್ಷಿ ರಮಣರು ಇಲ್ಲಿ 6 ವರ್ಷಗಳ ಕಾಲ ಧ್ಯಾನಸ್ಥರಾಗಿದ್ದರು. ಶಿವ ಮತ್ತು ಎರಡು ದೇವತೆಗಳು- ಒಟ್ಟೂ ಮೂರು ಮೂರ್ತಿಗಳು ಗುಹೆಯೊಳಗಿವೆ. ಜಗತ್ತಿನ ಅಧಿಪತಿಯೆಂದು ನಂಬುವ ಶಿವ ದೇವರ ವಿಶ್ವಂತರ ರೂಪವಿದು. ಹೆಣ್ಣು ದೇವತೆಗಳ ಮೂರ್ತಿಗಳು - ರಾಜರಾಜೇಶ್ವರಿ ಮತ್ತು ಅನ್ನಪೂರ್ಣೇಶ್ವರಿಯವರದ್ದು. ಸಿದ್ದ ಗುರುಗಳ ಲಿಂಗಗಳನ್ನು ಮಂದಿರದ ಒಳಗೆ ಪವಿತ್ರಗೊಳಿಸಲಾಗಿದೆ. == ಅಣ್ಣಮಲೈ ಬೆಟ್ಟ == ಅಣ್ಣಮಲೈ ಬೆಟ್ಟ ಪಶ್ಚಿಮಘಟ್ಟದ ಭಾಗವಾಗಿದ್ದು ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾದುಹೋಗುತ್ತದೆ. ಅಣ್ಣೈ ಮತ್ತು ಮಲೈ ಎಂಬ ಎರಡು ಶಬ್ದಗಳಿಂದ ಅಣ್ಣಮಲೈ ಬೆಟ್ಟದ ಹೆಸರು ಹುಟ್ಟಿಕೊಂಡಿದೆ. ಅಣ್ಣಾಮಲೈ ಎಂಬುದರ ಮೂಲಾರ್ಥ ಆನೆಗಳ ಬೆಟ್ಟ ಎಂದು. ಅನಮುಡಿ ಸಮುದ್ರ ಮಟ್ಟದಿಂದ 264 ಮೀಟರ್ ಎತ್ತರದಲ್ಲಿದ್ದು ಅಣ್ಣಮಲೈ ಬೆಟ್ಟದಲ್ಲಿಯೇ ಎತ್ತರದ ಶೃಂಗ. ಈ ಶಿಖರ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಕಮಿಟಿಯ ಪಟ್ಟಿಯಲ್ಲಿ ಅಣ್ಣಾಮಲೈ ಬೆಟ್ಟದ ಹೆಸರೂ ಕೂಡ ಇದೆ. ಅಣ್ಣಾಮಲೈ ಬೆಟ್ಟದಲ್ಲಿ ಎರ್ವೈಕುಲಂ ನ್ಯಾಷನಲ್ ಪಾರ್ಕ್, ಪರಂಬಿಕುಳುಂ ಅಭಯಾರಣ್ಯ, ಇಂದಿರಾಗಾಂಧಿ ಅಭಯಾರಣ್ಯ ಮತ್ತು ಅನಮಲ ಹುಲಿ ಸಂರಕ್ಷಣಾ ಪ್ರದೇಶವಿದೆ. ದೊಡ್ಡ ಗಾತ್ರದ ಕೋರೆಹಲ್ಲುಗಳನ್ನು ಸಂರಕ್ಷಿಸಲು ಈ ಎಲ್ಲ ಪಾರ್ಕ್ ಮತ್ತು ಅಭಯಾರಣ್ಯಗಳಿವೆ. ಗೀರ್, ಹುಲಿಗಳು, ಚಿರತೆ, ಕಾಡುಬೆಕ್ಕು, ಸಂಬಾರ್, ಧೋಲ್, ಸ್ಲೋತ್ ಕರಡಿ ಮತ್ತು ನೀರೆಮ್ಮೆಗಳು ಇಲ್ಲಿವೆ. == ಅಷ್ಟ ಲಿಂಗ == ಅಷ್ಟ ಲಿಂಗಂ ಅಥವಾ ಎಂಟು ಲಿಂಗಗಳು ಸ್ಥಾಪನೆಗೊಂಡಿರುವುದು ಅಣ್ಣಾಮಲೈ ಬೆಟ್ಟದ ತಳದಲ್ಲಿ. ತಿರುವಣ್ಣಾಮಲೈನಲ್ಲಿ ಧಾರ್ಮಿಕ ಮತ್ತು ಆದ್ಯಾತ್ಮಿಕ ಪ್ರತಿಧ್ವನಿಸಲು ಮುಖ್ಯ ಕಾರಣ ಇದೇ ಅಷ್ಟ ಲಿಂಗ. ಅಷ್ಟಲಿಂಗಗಳು ಸಂತರು ಮತ್ತು ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಲಿಂಗಗಳಿಗೆ ಸಣ್ಣ ಮಂದಿರಗಳನ್ನು ನಿರ್ಮಿಸಲಾಗಿದೆ. 14 ಕಿಮೀ ವ್ಯಾಪ್ತಿಯಲ್ಲಿ ಅಷ್ಟಲಿಂಗ ಮಂದಿರಗಳಿವೆ. ಅಷ್ಟಲಿಂಗಗಳೆಂದರೆ ಇಂದ್ರಲಿಂಗ, ಅಗ್ನಿಲಿಂಗ, ವಾಯುಲಿಂಗ, ವರುಣಲಿಂಗ, ನರುತಿಲಿಂಗ, ಕುಬೇರಲಿಂಗ, ಈಶಾನ್ಯಲಿಂಗ. ಈ ಎಂಟು ಲಿಂಗಗಳು 12 ಚಂದ್ರಾಕೃತಿಗಳೊಂದಿಗೆ ಬೆಸೆದುಕೊಂಡಿವೆ. ಈ ಎಂಟು ಲಿಂಗಗಳು ಗಿರಿವಲಂನ ಭಾಗವಾಗಿದೆ. == ಪಚ್ಚೈಯಮ್ಮನ್ ಕೋವಿಲ್ == ಪಚ್ಚೈಯಮ್ಮನ್ ಕೋವಿಲ್ ಪುರಾತನ ದೇವಸ್ಥಾನ ತಿರುವಣ್ಣಾಮಲೈನ ಹೊರಭಾಗದಲ್ಲಿದೆ. 1000 ವರ್ಷಕ್ಕಿಂತಲೂ ಹಳೆಯ ದೇವಸ್ಥಾನವಾಗಿದ್ದರೂ ಅದರ ರಚನೆಗಳು ಇನ್ನೂ 10 ವರ್ಷದಷ್ಟು ಹಳೆಯದೆನಿಸುತ್ತವೆ. ಶಿವನ ಪತ್ನಿಯಾದ ಪಾರ್ವತಿ ದೇವಿಯನ್ನು ಇಲ್ಲಿ ಪಚ್ಚೈಯಮ್ಮನ್ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದೇವತೆ ಜಗತ್ತಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾಳೆ ಎಂಬ ನಂಬಿಕೆಯಿದೆ. ತಿರುವಣ್ಣಾಮಲೈನಲ್ಲಿ 1905 ರಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡಾಗ ರಮಣ ಮಹರ್ಷಿಗಳು 6 ತಿಂಗಳುಗಳ ಕಾಲ ದೇವಸ್ಥಾನದಲ್ಲಿಯೇ ಆಶ್ರಯ ಪಡೆದಿದ್ದರು. ವಿರೂಪಾಕ್ಷ ಗುಹೆಯಲ್ಲಿ ವಾಸವಾಗಿದ್ದುಕೊಂಡು ಪ್ಲೇಗ್ ನಂಜಿನಿಂದ ಮಹರ್ಷಿಗಳು ಪಾರಾಗಿದ್ದರು. == ಅರಂತಗಿರಿ ಜೈನ ಮಠ == ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಅರಂತಗಿರಿ ಜೈನ ಮಠ ಇಡೀ ಭಾರತದ ಜೈನ ಸಮುದಾಯದವರ ಧಾರ್ಮಿಕ ಶ್ರದ್ದಾ ಕೇಂದ್ರ. ಸಮುದಾಯ ಕೇಂದ್ರಿತ ಸೇವೆಗಳನ್ನು ಒದಗಿಸುವ ಗುರಿಯನ್ನಿಟ್ಟುಕೊಂಡು 1998ರಲ್ಲಿ ಅರಂತಗಿರಿ ಜೈನ ಮಠವನ್ನು ಸ್ಥಾಪಿಸಲಾಯಿತು. ಮಠದ ಒಳಭಾಗದಲ್ಲಿ ಹಲವಾರು ಸಂಕೀರ್ಣಗಳಿವೆ. ನಾಲ್ಕು ಜೈನ ದೇವಸ್ಥಾನಗಳು, ಮೂರು ಜೈನ ಗುಹೆಗಳು ಮತ್ತು 16 ಮೀಟರ್ ಎತ್ತರದ ನೇಮಿನಾಥನ ರಚೆನಗಳಿವೆ. ತಮಿಳುನಾಡಿನಲ್ಲಿಯೇ ಇದು ಎತ್ತರದ ರಚನೆಯಾಗಿದ್ದು 12 ನೇ ಶತಮಾನಕ್ಕೆ ಸೇರಿದ್ದು ಎಂಬ ನಂಬಿಕೆಯಿದೆ. ನೇಮಿನಾಥ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ದ ಸಿನಿಮಾವೊಂದನ್ನು ಮಾಡಲಾಗಿದೆ. ಭಟ್ಟಾರಕ ಧವಳಕೀರ್ತಿಯವರು ಮಠದ ಮುಖ್ಯಸ್ಥರು. ಬಡವರು ಮತ್ತು ಅವಶ್ಯಕತೆಯುಳ್ಳವರಿಗೆ ಇವರು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದರು. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಶಾಲೆಗಳನ್ನು ತೆರೆದು ಅವರಿಗೆ ಬದುಕಲು ಕಲಿಸಲಾಯಿತು. == ಪಡವೇಡು ರೇಣುಕಾಂಬಾ ದೇವಸ್ಥಾನ == ಪಡವೇಡು ರೇಣುಕಾಂಬಾ ದೇವಸ್ಥಾನ ಪಡವೇಡು ಪಟ್ಟಣದಲ್ಲಿದೆ ಮತ್ತು ತಿರುವಣ್ಣಾಮಲೈನಿಂದ 7ಕಿಮೀ ದೂರದಲ್ಲಿದೆ. ಶಕ್ತಿ ಸ್ಥಳಗಳಲ್ಲಿ ಇಧು ಒಂದು. ಸೋಮನಾಥಲಿಂಗವು ಇಲ್ಲಿದೆ. ಐತಿಹ್ಯಗಳ ಪ್ರಕಾರ, ವಿಷ್ಣುವಿನ ಮತ್ತೊಂದು ಅವತಾರವಾದ ಪರಶುರಾಮ ತನ್ನ ತಂದೆ ಋಷಿ ಜಮದಗ್ನಿಯ ಆದೇಶದಂತೆ ತನ್ನ ತಾಯಿ ರೇಣುದೇವಿಯ ತಲೆಯನ್ನು ಕತ್ತರಿಸುತ್ತಾನೆ. ಮತ್ತು ತಂದೆಯ ಬಳಿ ತಾಯಿಯನ್ನು ಬದುಕಿಸಿಕೊಡುವಂತೆ ವರ ಕೇಳುತ್ತಾನೆ. ಅದರಂತೆ ಜಮದಗ್ನಿ ಮಹರ್ಷಿ ತಾಯಿಯ ರುಂಡವನ್ನು ದೇಹಕ್ಕೆ ಜೋಡಿಸುವಂತೆ ಹೇಳುತ್ತಾನೆ. ರೇಣುಕಾದೇವಿಯ ತಲೆಯನ್ನು ದೇಹಕ್ಕೆ ಜೋಡಿಸಿಬಿಡುತ್ತಾನೆ. ಇವಳನ್ನೇ ಇಲ್ಲಿ ಪಡವೇಡು ದೇವಸ್ಥಾನದಲ್ಲಿ ರೇಣುಕಾಂಬಾ ದೇವಿಯಾಗಿ ಪೂಜಿಸಲಾಗುತ್ತದೆ. == ನೆಡುಂಗುಣಂ ರಾಮ ದೇವಸ್ಥಾನ == ನೆಡುಂಗುಣಂ ರಾಮ ದೇವಸ್ಥಾನದಲ್ಲಿ ರಾಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ತಿರುವಣ್ಣಮಲೈನಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನವಿದು. ಸುಮಾರು 700 ವರ್ಷಗಳಷ್ಟು ಹಳೆಯ ದೇವಸ್ಥಾನ ಇದಾಗಿದ್ದು ಹಲವಾರು ದೊರೆಗಳು ಇದರ ನವೀಕರಣ ಮಾಡಿದ್ದಾರೆ. ದೇವಸ್ಥಾನದ ವಿಶಿಷ್ಟ ರಚನೆಯೆಂದರೆ ಶ್ರೀರಾಮನ ಮೂರ್ತಿಯನ್ನು ಕೂತ ಭಂಗಿಯಲ್ಲಿ ಸ್ಥಾಪಿಸಲಾಗಿದೆ. ಜೊತೆಗೆ ರಾಮನ ಕೈಯ್ಯಲ್ಲಿ ಧನುಸ್ಸು ಇಲ್ಲ. ಈ ಭಂಗಿಯನ್ನು ಯೋಗ ರಾಮನೆಂದು ಕರೆಯುತ್ತಾರೆ. ಮತ್ತು ರಾಮನ ಬಲಗೈ ಹೃದಯಕ್ಕೆ ಹತ್ತಿರದಲ್ಲಿದ್ದು ಗ್ನಾನಮುದ್ರೆ ಎನ್ನುತ್ತಾರೆ. ಶ್ರೀರಾಮನ ಮುಂಭಾಗದಲ್ಲಿ ಹನುಮಾನ ದೇವರು ತಾಳೆಗರಿಯಲ್ಲಿ ಬರೆದ ಬ್ರಹ್ಮ ಸೂತ್ರವನ್ನು ಪಠಿಸುತ್ತಿದ್ದಾರೆ. ಸೀತೆಯ ಪ್ರತಿಮೆಯನ್ನು ಪಕ್ಕದಲ್ಲಿಯೇ ಸಿಂಹ ಪೀಠದಲ್ಲಿ ಕೂರಿಸಲಾಗಿದೆ. ಬೇರೆಲ್ಲಿಯೂ ನೋಡಲು ಸಿಗದ ಭಂಗಿಯಲ್ಲಿ ರಾಮನ ಮೂರ್ತಿಯಿರುವುದರಿಂದ ಭಕ್ತಾಧಿಗಳ ಆಕರ್ಷಣೆ ಹೆಚ್ಚು. == ಜನಸಂಖ್ಯೆ == ತಿರುವಣ್ಣಾಮಲೈ ಜಿಲ್ಲೆಯ ಜನಸಂಖ್ಯೆಯು 24,64,875 ಆಗಿದೆ . [೧] [೨] [೩]