ತುಳು( ) ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಭಾಷೆ. ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಇದು ಹೆಚ್ಚಾಗಿ ಚಾಲ್ತಿಯಲ್ಲಿದೆ. ತುಳು ಮಾತಾಡುವವರನ್ನು ತುಳುವರು (ತುಳುವಿನಲ್ಲಿ ತುಳುವೆರ್) ಎಂದು ಕರೆಯುತ್ತಾರೆ. ಸುಮಾರು ೧೦ನೇ ಶತಮಾನದಲ್ಲಿ ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ವಿಕಾಸವಾದ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ ಆಧಾರಿತ ಲಿಪಿಯನ್ನು ಉಪಯೋಗಿಸುತ್ತಿದರು. ತುಳುವ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಈ ಲಿಪಿಯನ್ನು ತುಳು ಲಿಪಿ ಎಂದು ಕರೆಯಲಾಗಿದೆ. ಈ ಲಿಪಿಯನ್ನು ಸಂಸ್ಕೃತ ದ ಶ್ಲೋಕಗಳನ್ನು ಬರೆದಿಟ್ಟುಕೊಳ್ಳಲು ಬಳಸುತಿದ್ದರು. ಆದರೆ ಅದರ ವ್ಯಾಪಕ ಬಳಕೆ ಇಲ್ಲದಿದ್ದ ಕಾರಣ ಕಾಲಕ್ರಮೇಣ ಲಿಪಿ ಬಳಕೆ ನಶಿಸಿ ಹೋಗಿದೆ. ಇತ್ತಿಚೆನ ದಿನಗಳಲ್ಲಿ ಹಳೆಯ ಈ ಲಿಪಿಯ ಪುನರುಜ್ಜೀವನಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿವೆ. ಪುರಾತನ ತಿಗಳಾರಿ ಲಿಪಿ ಮಲೆಯಾಳಂ ಲಿಪಿಯನ್ನು ಹೋಲುತ್ತದೆ. ಪ್ರಸ್ತುತ ತುಳುಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುತ್ತಾರೆ. ತುಳುಭಾಷೆಯಲ್ಲಿ ರಚಿತವಾಗಿರುವ ಕೃತಿಗಳ ಲಭ್ಯತೆ ಕಡಿಮೆ ಇರುವುದರಿಂದ ತುಳು ಭಾಷೆಯ ಪ್ರಾಚೀನತೆಯನ್ನು ಅಂದಾಜು ಮಾಡುವುದು ಕಷ್ಟ. ಆದರೂ ತುಳು ಭಾಷೆಯ ಪ್ರಾಚೀನತೆಯನ್ನು ತುಳುವ ಜನ ಜೀವನದಲ್ಲಿ ಅಡಕವಾಗಿರುವ ವಿಶಿಷ್ಟ ಸಂಸ್ಕೃತಿ ಹಾಗೂ ಪಾಡ್ದನ ಎಂಬ ಜಾನಪದ ಸಾಹಿತ್ಯಗಳಿಂದ ನಿಷ್ಕರ್ಷೆ ಮಾಡಬಹುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಹುಪಾಲು ಜನರು ತುಳು ಭಾಷೆ ಮಾತನಾಡುತ್ತಾರೆ. ಈ ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನು ಚಾರಿತ್ರಿಕವಾಗಿ ತುಳುನಾಡು ಎಂದು ಕರೆಯಲಾಗುತ್ತದೆ. ಹಾಗೆಯೇ ಮುಂಬಯಿ ಪಟ್ಟಣ, ಗುಜರಾತ್ ರಾಜ್ಯದ ಕೆಲ ಭಾಗಗಳಲ್ಲಿ ತುಳುವರು ಇದ್ದಾರೆ. ಸುಮಾರು ೨ ದಶಲಕ್ಷ ಜನರು ತುಳು ಭಾಷೆ ಮಾತಾಡುತ್ತಾರೆ. == ಪ್ರಮುಖ ಬರಹಗಳು == ಮಾಧ್ವ ಮತದ ತಿಗಳಾರಿ ಸರ್ವಮೂಲ ಗ್ರಂಥಗಳು ತುಳು ಲಿಪಿಯಲ್ಲಿ ದೊರಕಿವೆ, ೭೦೦ ವರ್ಷಗಳ ಇತಿಹಾಸವಿರುವ ಈ ಗ್ರಂಥಗಳೇ ತುಳು ಭಾಷೆಯ ಮೂಲ ಲಿಪಿ ಹುಡುಕಲು ಸಹಾಯವಾಗಿವೆ, ಇದನ್ನು ಶ್ರೀ ಪಲಿಮಾರು ಮಠದ ಹೃಷಿಕೇಶ ತೀರ್ಥರು ಪ್ರಕಟಿಸಿದ ಸರ್ವಮೂಲ ಗ್ರಂಥಮಾಲಿಕೆ ಯಲ್ಲಿ ಕಾಣಬಹುದು. ಉಡುಪಿ ಜಿಲ್ಲೆಗೆ ಸೇರಿದ ಒಬ್ಬ ಬ್ರಾಹ್ಮಣ ತಿಗಳಾರಿ ಲಿಪಿಯನ್ನು ಬಳಸಿ 'ಭಾಗವತ'ವನ್ನು(ಅಪೂರ್ಣವಾಗಿ) ಬರೆದಿರುವ ಆಧಾರವಿದೆ. ಮಂದಾರ ಕೇಶವ ಭಟ್ಟರು 'ಮಂದಾರ ರಾಮಾಯಣ' ಎಂಬ ಆಧುನಿಕ ತುಳು ಮಹಾಕಾವ್ಯವನ್ನು ಬರೆ ದಿದ್ದಾರೆ.ತುಳುವಿನಲ್ಲಿ ನಂತರ ಬರೆದಿರುವ ಮಹನೀಯರಲ್ಲಿ ಅ.ಬಾಲಕೃಷ್ಣ ಶೆಟ್ಟಿ, ಕೆದಂಬಾಡಿ ಜತ್ತಪ್ಪ ರೈ, ಕಯ್ಯಾರ ಕಿಂಞಣ್ಣ ರೈ, ಡಾ.ಅಮೃತ ಸೋಮೇಶ್ವರ, ಪ್ರೊ.ಬಿ.ಎ.ವಿವೇಕ್ ರೈ, ಕೆ. ಚಿನ್ನಪ್ಪ ಗೌಡ, ಡಾ.ಶಿವರಾಮಶೆಟ್ಟಿ, ಪ್ರೊ. ಅಭಯಕುಮಾರ್, ಶ್ರೀಮತಿ ಜಾನಕಿ ಬ್ರಹ್ಮಾವರ,ನಾ.ದಾಮೋದರ ಶೆಟ್ಟಿ, ಡಾ.ಮಾಧವ ಪೆರಾಜೆ, ಡಾ.ಮಹಾಲಿಂಗ ಭಟ್, ಶ್ರೀ ಪ್ರಭಾಕರ ನೀರುಮಾರ್ಗ ಪ್ರಮುಖರು. == ತುಳು ಭಾಷೆ == ತುಳು ಭಾಷೆಯು ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಅಲ್ಲದೆ ಭಾರತದ ಪ್ರಾಚೀನ ಭಾಷೆಗಳಲ್ಲೊಂದು ಎಂಬ ಸ್ಥಾನವನ್ನು ಪಡೆದಿದೆ. ತುಳು ಮಾತನಾಡುವ ಪ್ರದೇಶಗಳಲ್ಲಿ ದಕ್ಷಿಣದಿಂದ ಉತ್ತರಕ್ಕೆ ಮಾತನಾಡುವ ಶೈಲಿಯು ಬದಲಾಗುತ್ತದೆ. ಮಾತನಾಡುವ ಶೈಲಿಗೆ ಅನುಸಾರವಾಗಿ ತುಳು ಭಾಷೆಯನ್ನು ಮುಖ್ಯವಾಗಿ ೪ ವಿಧವಾಗಿ ವಿಂಗಡನೆ ಮಾಡಬಹುದು: - ಬ್ರಾಹ್ಮಣ, ಸಾಮಾನ್ಯ, ಜೈನ, ಹಾಗೂ ಬುಡಕಟ್ಟು. ಬ್ರಾಹ್ಮಣ : ಶಿವಳ್ಳಿ, ಪಧಾರ್ಥಿ ಮತ್ತು ಸ್ಥಾನಿಕ ಬ್ರಾಹ್ಮಣರು ಮಾತಾಡುವ ಶೈಲಿ ಜೈನ : ಉತ್ತರ ತುಳುನಾಡಿನ ಜೈನರು ಮಾತಾಡುವ ಶೈಲಿ ಸಾಮಾನ್ಯ : ತುಳುನಾಡಿನ ಹೆಚ್ಚಿನ ಜನರು ಮಾತಾಡುವ ಶೈಲಿ. ಈ ಶೈಲಿಯನ್ನು ವಾಣಿಜ್ಯ, ಕಲೆ, ಮತ್ತು ಸಾಮಾನ್ಯ ಬಳಕೆಯಲ್ಲಿ ಉಪಯೋಗಿಸುಲಾಗುತ್ತದೆ ಬುಡಕಟ್ಟು : ಬುಡಕಟ್ಟಿನ ಜನರು ಮಾತಾಡುವ ಶೈಲಿ. ಈ ಶೈಲಿಯು ಸಾಮಾನ್ಯ ಶೈಲಿಯನ್ನು ತುಂಬಾ ಹೋಲುತ್ತದೆ. == ಭೌಗೋಳಿಕ ವಿತರಣೆ == ಮಲಯಾಳಂ ಕೃತಿ ಕೇರಳೊತ್ಪತ್ತಿ , ಸಂಗಮ ಸಾಹಿತ್ಯದ ಕೆಲವು ಹಾಗೂ ತುಳು ಜನಪದ ಪಾಡ್ದನ ಹಾಡುಗಳ ಪ್ರಕಾರ, ಚಾರಿತ್ರಿಕವಾಗಿ ತುಳುನಾಡಿನ ವಿಸ್ತಾರವು ಕಾಸರಗೋಡಿನ ಚಂದ್ರಗಿರಿ ನದಿಯಿಂದ (ಈಗಿನ ಕೇರಳ) ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರೆಗೆ ಇತ್ತು ಎಂದು ತಿಳಿಯಲಾಗಿದೆ. ಆದರೆ ಈಗಿನ ತುಳುನಾಡು ದಕ್ಷಿಣ ಕನ್ನಡ ಹಾಗೂ ಉಡುಪಿ (ಕುಂದಾಪುರ ತಾಲೂಕು ಬಿಟ್ಟು) ಜಿಲ್ಲೆಗಳಿಗೆ ಹಾಗೂ ಕೇರಳ ದಲ್ಲಿರುವ ಕಾಸರಗೋಡು ಜಿಲ್ಲೆಗೆ ಸೀಮಿತವಾಗಿದ್ದರೂ, ಮಹಾರಾಷ್ಟ್ರದ ಮುಂಬಯಿ ಹಾಗೂ ಥಾಣೆಗಳಲ್ಲಿ ಬಹಳಷ್ಟು ತುಳುವರು ಇದ್ದಾರೆ. == ಲಿಪಿ == ಹಿಂದೆ ತುಳು ಬ್ರಾಹ್ಮಣರು ತುಳು ಭಾಷೆ ಬರೆಯಲು ತಿಗಳಾರಿ ಲಿಪಿಯನ್ನು ಉಪಯೋಗಿಸುತ್ತಿದ್ದರು. ಇದನ್ನೇ ತುಳು ಲಿಪಿ ಎಂದು ಪರಿಗಣಿಸಲಾಗಿದೆ. ಈ ಲಿಪಿಯನ್ನು ಸಂಸ್ಕೃತದ ಶ್ಲೋಕಗಳನ್ನು ಬರೆದಿಟ್ಟುಕೊಳ್ಳಲು ಉಪಯೋಗಿಸುತ್ತಿದ್ದರು. ತದನಂತರ, ತುಳುಲಿಪಿಯಲ್ಲಿ ಬರೆಯಲಾದ ಹಲವು ಗ್ರಂಥಗಳ ಹಸ್ತಪ್ರತಿಗಳು ಲಭಿಸಿವೆ. ಪ್ರಸ್ತುತವಾಗಿ ತುಳು ಬರೆಯಲು ವ್ಯಾಪಕವಾಗಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ತುಳು ವಿಕಿಪೀಡಿಯಾ ಕೂಡಾ ಕನ್ನಡ ಲಿಪಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ತುಳು ಲಿಪಿಗಳನ್ನು ಕಲಿಸಲಾಗುತ್ತಿದ್ದು, ಕೆಲವು ಸಂಸ್ಥೆ ಸಂಘಟನೆಗಳು, ತುಳು ಲಿಪಿ ಕಲಿಸುವ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ. == ವಿಶ್ವ ತುಳು ಸಮ್ಮೇಳನ == ಮೊತ್ತ ಮೊದಲಿಗೆ ಮಂಗಳೂರಿನ ಪ್ರಸಿದ್ದ ವಕೀಲರಾದ ಶ್ರೀ ದಿವಂಗತ ಎಸ್.ಅರ್ ಹೆಗ್ಡೆಯವರು ಇವರು ೪.೧.೧೯೭೦ರಲ್ಲಿ ಮಂಗಳೂರು ತುಳುಕೂಟವನ್ನು ಸ್ಥಾಪಿಸಿದರು.ಈ ತುಳುಕೂಟದ ವತಿಯಿಂದ ೧೯೯೪ರಲ್ಲಿ ಮೂಲ್ಕಿಯಲ್ಲಿ ಪ್ರೂ. ಅಮೃತ ಸೋಮೇಶ್ವರವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮ ವಿಶ್ವ ತುಳು ಸಮ್ಮೇಳನ ನಡೆಯಿತು. ಈ ವಿಶ್ವ ತುಳು ಸಮ್ಮೇಳನದಲ್ಲಿ ಸರ್ಕಾರದ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸುವಂತೆ ಸರ್ಕಾರವನ್ನು ಕೇಳುವ ನಿರ್ಣಯ ಕೈಗೊಳ್ಳಲಾಯಿತು. ತುಳುವರು ತುಳುಕೂಟ ಮತ್ತಿತರ ಸಂಘ ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ ೧೯೯೪ ರಲ್ಲಿ ಶ್ರೀ ಎಂ. ವೀರಪ್ಪ ಮೊಯ್ಲ್ಲಿಯವರು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡಿತು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಬಿ.ಎ.ವಿವೇಕ ರೈಯವರು ಮೊದಲ ಅಧ್ಯಕ್ಷರಾದರು ೨೦೦೯ ರ ಡಿಸೆಂಬರ್ ೧೦ ರಿಂದ ೧೩ ರ ವರೆಗೆ ವಿಶ್ವ ತುಳು ಸಮ್ಮೇಳನ ಉಜಿರೆಯಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಮ್ಮೇಳನದ ಪ್ರಮುಖ ಆಯೋಜಕರಾಗಿದ್ದರು. ೩ ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ತುಳು ಗ್ರಾಮದ ಮಾದರಿಯನ್ನು ರಚಿಸಲಾಗಿತ್ತು. ತುಳು ಗ್ರಾಮದಲ್ಲಿ ೬೦ ವರ್ಷ ಹಿಂದೆ ತುಳುನಾಡಿನ ಹಳ್ಳಿಗಳು ಹೇಗೆ ಇದ್ದವು ಎಂಬ ಬಗ್ಗೆ ಕಟ್ಟಡಗಳು, ಗುತ್ತಿನಮನೆ, ದೇವಸ್ಥಾನ, ಭಜನಾ ಮಂದಿರ, ಬೀದಿ, ದೈವಸ್ಥಾನ, ನಾಗನಕಟ್ಟೆ , ದೋಣಿ ವಿಹಾರ, ಅವಲಕ್ಕಿ, ಕಬ್ಬಿನ ಗಾಣ, ಕಬ್ಬಿಣದ, ಮರದ ಕೆಲಸ, ಪಂಡಿತರ, ಪಟೇಲರ ಮನೆ ಮೊದಲಾದ್ದನ್ನು ನಿರ್ಮಿಸಲಾಗಿತ್ತು . == ತುಳು ಸಿನಿಮಾ == ೧೯೭೧ನೇ ಇಸವಿಯಲ್ಲಿ ತುಳು ಸಿನಿಮಾಲೋಕ ಉದ್ಘಾಟನೆಯಾಗಿ ಮೊದಲ ತುಳು ಸಿನಿಮಾ ಎನ್ನ ತಂಗಡಿ ಬಿಡುಗಡೆಯಾಯಿತು. ಮುಂದೆ ತುಳುವಿನಲ್ಲಿ ಸುಮಾರು ೪೦ ಸಿನಿಮಾಗಳು ತಯಾರಾದವು. ಎನ್ನ ತಂಗಡಿ. ದಾರೆದ ಬುಡೆದಿ. ಪಗೆತ್ತ ಪುಗೆ. ಬಿಸತ್ತಿ ಬಾಬು. ಉಡಲ್ದ ತುಡರ್. ಕೋಟಿ-ಚೆನ್ನಯ. ಕಾಸ್ದಾಯೆ ಕಂಡನಿ. ಯಾನ್ ಸನ್ಯಾಸಿ ಆಪೆ. ಏರ್ ಮಲ್ತಿನ ತಪ್ಪು. ಬಯ್ಯ ಮಲ್ಲಿಗೆ. ಸಾವಿರೋಡೋರ್ತಿ ಸಾವಿತ್ರಿ. ನ್ಯಾಯೋಗು ಜಿಂದಾಬಾದ್. ತುಳುನಾಡ ಸಿರಿ . ಬೊಳ್ಳಿದೋಟ. ಸಂಗಮ ಸಾಕ್ಷಿ. ಕರಿಯಣಿ ಕಟ್ಟಂದಿ ಕಂಡನಿ. ನ್ಯಾಯೋಗಾದ್ ಎನ್ನ ಬದುಕ್. ಬಾಗ್ಯವಂತೆದಿ. ಬದ್ಕರೆ ಬುಡ್ಲೆ. ದಾರೆದ ಸೀರೆ . ಪೆಟ್ಟಾಯಿ ಪಿಲಿ. ಬದುಕೊಂಜಿ ಕಬಿತೆ. ಸತ್ಯ ಓಲುಂಡು. ರಾತ್ರೆ ಪಗೆಲ್. ಬಂಗಾರ್ ಪಟ್ಲೆರ್. ಸೆಪ್ಟೆಂಬರ್-೮. ಬದ್ಕುದ ಬಿಲೆ. ಮಾರಿ ಬಲೆ . ಕಾಲ. ಒಂತೆ ಎಜ್ಜೆಸ್ಟ್ ಮಲ್ಪಿ. ತುಡರ್. ಕೋಟಿ-ಚೆನ್ನಯ -೨. ಕಡಲ ಮಗೆ . ಬಿರ್ಸೆ.. ದೇವೆರ್. ಕಂಚಿಲ್ದ ಬಾಲೆ. ಒರಿಯರ್ದೊರಿ ಅಸಲ್. ಬಂಗಾರ್ದ ಕುರಲ್. ಆಮೆಟ್ ಅಸಲ್ ಈಮೆಟ್ ಕುಸಲ್ ಸೋಂಪ ರಿಕ್ಷಾ ಡ್ರೈವರ್ ಪಕ್ಕಿಲು ಮೋಜಿ ಬರ್ಕೆ ನಿರೆಲ್ ಚಾಲಿ ಪೋಲಿಲು ರಂಗ್ ಮದಿಮೆ ಎಕ್ಕ ಸಕ ಬರ್ಕೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಚಂಡಿ ಕೋರಿ ಧಾಂಡ್ ಸೂಮ್ಬೆ ಸೂಪರ್ ಮರ್ಮಾಯೆ ಒರಿಯನ್ ತೂಂಡ ಒರಿಯಗಾಪುಜ್ಜಿ ರೈಟ್ ಬೊಕ್ಕ ಲೆಫ್ಟ್ ಕುಡ್ಲ ಕೆಫೆ ಬರ್ಸ ಶಟರ್ ದುಲಾಯಿ ರಂಬಾರೂಟಿ ಪಿಲಿಬೈಲ್ ಯಮುನಕ್ಕ ದಬಕ್ ದಬಾ ಐಸಾ ಮದಿಪು ಅರೆ ಮರ್ಲೆರ್ ಪತ್ತನಾಜೆ ಗುಡ್ಡೆದ ಭೂತ ಅರ್ಜುನ್ ವೆಡ್ಸ್ ಅಮೃತಾ ಏಸಾ ನೇಮದ ಬೂಳ್ಯ ಪತ್ತನಾಜೆ ಅಂಬರ್ ಕ್ಯಾಟರರ್ಸ್ ಬಿಡುಗಡೆ ಆಗದಿರುವ ಸಿನಿಮಾಗಳು ೪ ನಮ್ಮ ಭಾಗ್ಯ ಸರ್ಪ ಸಂಕಲೆ == ತುಳು ಯಕ್ಷಗಾನ == === ಪೀಠಿಕೆ === ಯಕ್ಷಗಾನದಲ್ಲಿ ಭಾಷೆ,ಪ್ರಸಂಗ ಮತ್ತು ವೇಷಭೂಷಣಗಳಲ್ಲಿ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡಿರುವ ತುಳು ಯಕ್ಷಗಾನ ಪರಂಪರೆಯನ್ನು ವಿದ್ವಾಂಸರು "ತುಳುತಿಟ್ಟು" ಎಂದು ಗುರುತಿಸಿಕೊಂಡಿದ್ದಾರೆ. ಇದು ತೆಂಕುತಿಟ್ಟು ಯಕ್ಷಗಾನದ ಪ್ರಭೇದವಾಗಿ ವ್ಯವಸಾಯಿ ಮೇಳವಾಗಿ ಬೆಳೆದು ಬಂತು.ತುಳು ಯಕ್ಷಗಾನವು ತುಳುನಾಡಿನಲ್ಲಿ ಉಗಮವಾದರೂ,ಅದರ ಮಾಧ್ಯಮ ಕನ್ನಡವೇ ಆಗಿದ್ದಿತು. ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿದ್ದರಿಂದ ತುಳು ಭಾಷೆಯ ಪ್ರಸಂಗಗಳು-ಪ್ರದಶ‌‌ನಗಳು ವಿಫುಲವಾಗಿ ಕಂಡು ಬರುತ್ತದೆ. === ತುಳು ಯಕ್ಷಗಾನ ಬೆಳೆದು ಬಂದ ರೀತಿ === ೧೮೮೭ರಲ್ಲಿ ಬಾಯಾರು ಪೆರುವಡಿ ಸಂಕಯ್ಯ ಭಾಗವತರು ರಚಿಸಿದ "ಪಂಚವಟಿ-ವಾಲಿಸುಗ್ರೀವೆರೆ ಕಾಳಗೊ" ಎಂಬುದು ತುಳು ಭಾಷೆಯಲ್ಲಿ ದೊರಕಿದ ಮೊದಲ ಉಪಲಬ್ದ ಪ್ರಸಂಗ ಕೃತಿ. ಅನಂತರ ಮೂವತ್ತರ ದಶಕದಲ್ಲಿ "ಕೃಷ್ಣ ಸಂಧಾನ","ಅಂಗದ ಸಂಧಾನ"ಮೊದಲಾದ ಪ್ರಸಂಗ ಕೃತಿಗಳು ರಚನೆಯಾದವು. ೧೯೨೯ರಲ್ಲಿ ಪಂದಬೆಟ್ಟು ವೆಂಕಟರಾಯರು ಕೋಟಿ-ಚೆನ್ನಯ ಎಂಬ ಅವಳಿ ಪುಣ್ಯಪುರುಷರ ಸಾಹಸಗಾಧೆಯನ್ನು ತುಳು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿದ ಮೊದಲ ಪ್ರಯತ್ನವಾಗಿದೆ. ಪ್ರಾರಂಭದ ದಿನಗಳಲ್ಲಿ ಕನ್ನಡ ಯಕ್ಷಗಾನಗಳು ಜನಪ್ರೀಯಗೊಂಡರೂ ತುಳುನಾಡಿನ ಜನತೆ ತುಳು ಭಾಷೆಯ ಯಕ್ಷಗಾನಕ್ಕೆ ಒಲವು ತೋರಿಸಿದ್ದರ ಪರಿಣಾಮವಾಗಿ ಜಾನಪದ,ಐತಿಹಾಸಿಕ,ಕಾಲ್ಪನಿಕ ಪ್ರಸಂಗಗಳ ಟೆಂಟ್ ಮೇಳಗಳು ಹುಟ್ಟಿಕೊಂಡವು. === ತುಳು ಯಕ್ಷಗಾನ ಪ್ರಸಂಗಗಳು === ತುಳುನಾಡಸಿರಿ ಕಾಡಮಲ್ಲಿಗೆ ತುಳುನಾಡ ಬಲಿಯೇಂದ್ರ ಕೋಟಿ-ಚೆನ್ನಯ ನಾಗಸಂಪಿಗೆ ಬಹ್ಮಮೊಗೆರರು ಕೋಡ್ದಬ್ಬು ಕಲ್ಕುಡ-ಕಲ್ಲುಟಿ ಗೆಜ್ಜೆದ-ಪೂಜೆ ಅಮರ್ ಬೊಳ್ಳಿಲು ಬಾರಗ ಕಾಂತಬಾರೆ-ಬೂದಾಬಾರೆ ದೇವುಪೂಂಜ ಪ್ರತಾಪ ಬ್ರಹ್ಮ-ಬಲಾಂಡಿ ಸತ್ಯದಪ್ಪೆ ಚೆನ್ನಮ್ಮ ಬನತ್ತ ಬಂಗಾರ್ ಬನತ್ತ ಬೊಬ್ಬರ್ಯೆ ಕಚ್ಚೂರ ಮಾಲ್ದಿ ಬಾಲೆ ಭಾಗ್ಯವಂತೆ ಸಿರಿ ದೇವಿ ಮಹಾತ್ಮೆ ಬೊಳ್ಳಿದ ಬೊಲ್ಗುಡೆ === ತುಳು ಯಕ್ಷಗಾನ ಮೇಳಗಳು === ಶ್ರೀ ಸೋಮನಾಥೇಶ್ವರ ಮೇಳ ಇರಾ ಸುರತ್ಕಲ್ ಕನಾ‍ಟಕ ನಾಟಕ ಸಭಾ ಮಂಡಳಿ ಮಂಗಳೂರು ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಕದ್ರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಕುಂಬಳೆ ಬಪ್ಪನಾಡು ಮೇಳ ಸುಬ್ರಹ್ಮಣ್ಯ ಮೇಳ ಮಂಗಳಾದೇವಿ ಮೇಳ ಕುಂಟಾರು ಮೇಳ ಮಧೂರು ಮೇಳ ಪುತ್ತೂರು ಮೇಳ == ಉಲ್ಲೇಖಗಳು == == ಹೊರಗಿನ ಸಂಪರ್ಕ == ( ) ತುಳು ಭಾಷೆಯ ಬಗ್ಗೆ ಸಮಗ್ರ ಮಾಹಿತಿ 2010-05-04 ವೇಬ್ಯಾಕ್ ಮೆಷಿನ್ ನಲ್ಲಿ. ತುಳು ಸಾಹಿತ್ಯ ತುಳು ವಿಕಿಪೀಡಿಯ ಯುನಿಕೋಡ್‌ನಲ್ಲಿ ತುಳು ಸೇರಿಸುವ ಬಗ್ಗೆ