ಬೆಂಗಳೂರು - ಕನಕಪುರ ರಸ್ತೆಯಿಂದ ಒಳಗೆ ಇರುವ ಒದು ಸ್ಥಳ ತೊಟ್ಟಿಕಲ್ಲು. ಇದು ತೊಟ್ಟಿಕಲ್ಲು ಜಲಪಾತ ಅಥವಾ ಟಿ.ಕೆ. ಜಲಪಾತವೆಂದು ಕರೆಯಲ್ಪಡುವ ಜಲಪಾತಕ್ಕೆ ಹೆಸರಾಗಿದೆ. ಬನ್ನೇರುಘಟ್ಟದ ಸ್ವರ್ಣಮುಖಿ ಕಾನನ ಪ್ರದೇಶದಲ್ಲಿರುವುದರಿಂದ ಇದನ್ನು 'ಸ್ವರ್ಣಮುಖಿ ಜಲಪಾತ'ವೆಂತಲೂ ಕರೆಯುತ್ತಾರೆ. ಬೆಂಗಳೂರಿನಿಂದ ಸುಮಾರು ೩೦ ಕಿ.ಮೀ. ದೂರದಲ್ಲಿದೆ. == ಮಾರ್ಗಸೂಚಿ == ಬೆಂಗಳೂರಿನಿಂದ ಕನಕಪುರ ಮಾರ್ಗದಲ್ಲಿನ ಕಗ್ಗಲೀಪುರದಿಂದ ಎಡಕ್ಕೆ ಬನ್ನೇರುಘಟ್ಟಕ್ಕೆ ಹೋಗುವ ಹಾದಿಯಲ್ಲಿ ಸರಿಯಾಗಿ ಐದು ಕಿ.ಮೀ. ಕ್ರಮಿಸಿದಲ್ಲಿ ಬ್ಯಾಲದಮರದೊಡ್ಡಿಯೆಂಬ ಪುಟ್ಟ ಗ್ರಾಮ ಇದೆ. ಇಲ್ಲಿಂದ ಕುರುಚಲು ಮರಗಿಡಗಳಿಂದ ಕೂಡಿದ ಅರಣ್ಯ ಪ್ರದೇಶದ ಕಣಿವೆಯ ಒರಟಾದ ಕಲ್ಲುಮಣ್ಣಿನ ಹಾದಿಯಲ್ಲಿ ಸುಮಾರು ಒಂದು ಕಿ.ಮೀ. ದೂರದಲ್ಲಿ ಕಾಣಸಿಗುತ್ತದೆ ತೊಟ್ಟಿಕಲ್ಲು ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ. ಇಲ್ಲಿಂದ ಮುಂದೆ ಅನತಿ ದೂರದಲ್ಲಿ ಕಾಣಿಸುವ ಒಂದು ದೊಡ್ಡ ಬಂಡೆಗಳ ಸಮುಚ್ಛಯದೆಡೆಗೆ ಒಂದರ್ಥ ಫರ್ಲಾಂಗ್ ಏರಿದರೆ ತೊಟ್ಟಿಕಲ್ಲು ಜಲಪಾತ ಸಿಗುತ್ತದೆ. ಸುಮಾರು ೫೦ ರಿಂದ ೬೦ ಅಡಿ ಎತ್ತರದಿಂದ ಒಂದು ನೂರಡಿಗಿಂತಲೂ ವಿಶಾಲವಾಗಿ ಹರಡಿರುವ ಬೃಹತ್ ಏಕಶಿಲಾ ಬಂಡೆಯ ಒಂದು ಬದಿಯಲ್ಲಿ ಈ ಜಲಧಾರೆಯು ಧುಮ್ಮಿಕ್ಕುತ್ತದೆ. ಟಿ.ಕೆ. ಜಲಪಾತಕ್ಕೆ ಬನ್ನೇರುಘಟ್ಟದಿಂದಲೂ ಬರಬಹುದಾಗಿದ್ದು ಬನ್ನೇರುಘಟ್ಟದ ವೃತ್ತದಿಂದ ಬಲಕ್ಕೆ ಕಗ್ಗಲೀಪುರಕ್ಕೆ ಹೋಗುವ ಹಾದಿಯಲ್ಲಿ ಸುಮಾರು 8 ಕಿ.ಮೀ. ಸಾಗಿ ಬಂದಲ್ಲಿ ಈ ಟಿ.ಕೆ. ಜಲಪಾತದ ಪರಿಸರವನ್ನು ತಲುಪಬಹುದು. ಬೇಸಿಗೆ ಸಮಯದಲ್ಲಿ ಹೆಚ್ಚು ನೀರು ಇಲ್ಲದಿರುವುದರಿಂದ ಮಳೆಗಾಲದಲ್ಲಿ ಭೇಟಿ ಕೊಡುವುದು ಸೂಕ್ತ. ಆಹಾರ ಮತ್ತು ಕುಡಿಯುವ ನೀರಿನ ಯಾವುದೇ ವ್ಯವಸ್ಥೆ ಇಲ್ಲ. == ಉಲ್ಲೇಖಗಳು == == ಹೊರಕೊಂಡಿಗಳು == ತೊಟ್ಟಿಕಲ್ಲು ಜಲಪಾತ: ಬೆಂಗಳೂರಲ್ಲಿ ಮಲೆನಾಡ ಸೊಬಗು, ವಿಜಯಕರ್ನಾಟಕ ಪತ್ರಿಕೆ, ೦೮ಸೆಪ್ಟೆಂಬರ್೨೦೧೨