ದಿಸ್ಪುರ್ ಇದು ಭಾರತದ ರಾಜ್ಯವಾದ ಅಸ್ಸಾಂ ರಾಜ್ಯದ ರಾಜಧಾನಿಯಾಗಿದೆ ಮತ್ತು ಗುವಾಹಟಿಯ ಉಪನಗರವಾಗಿದೆ. ೧೯೭೩ ರಲ್ಲಿ ಹಿಂದಿನ ರಾಜಧಾನಿಯಾಗಿದ್ದ ಶಿಲ್ಲಾಂಗ್, ಅಸ್ಸಾಂನಿಂದ ಬೇರ್ಪಟ್ಟು ಮೇಘಾಲಯ ರಾಜ್ಯದ ರಾಜಧಾನಿಯಾದಾಗ ದಿಸ್ಪುರ್ ಅಸ್ಸಾಂನ ರಾಜಧಾನಿಯಾಯಿತು. ದಿಸ್ಪುರ್ ಅಸ್ಸಾಂ ಸರ್ಕಾರದ ಅಧಿಕಾರದ ಸ್ಥಾನವಾಗಿದೆ. ಅಸ್ಸಾಂ ಸೆಕ್ರೆಟರಿಯೇಟ್ (ಜನತಾ ಭವನ) ಕಟ್ಟಡವು ದಿಸ್ಪುರದಲ್ಲಿದೆ. ಜೊತೆಗೆ ಅಸ್ಸಾಂ ವಿಧಾನಸಭಾ ಭವನ, ಶಾಸಕರ ವಸತಿ ನಿಲಯಗಳು ಮತ್ತು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಗಳು ಕೂಡ ಇಲ್ಲಿದೆ. ಅಸ್ಸಾಂನ ಟ್ರಂಕ್ ರಸ್ತೆ ಮತ್ತು ಜಿಎಸ್ ರಸ್ತೆ ದಿಸ್ಪುರದ ಮೂಲಕ ಹಾದುಹೋಗುತ್ತವೆ. ದಿಸ್ಪುರದ ದಕ್ಷಿಣಕ್ಕೆ, ದೇವತಾಶಾಸ್ತ್ರೀಯವಾಗಿ ಪ್ರಮುಖ ತಾಣವಾಗಿರುವ ಬಸಿಷ್ಠ ಆಶ್ರಮ ಮತ್ತು ೧೯೯೦ ರ ದಶಕದಲ್ಲಿ ರಚಿಸಲಾದ ಸಾಂಸ್ಕೃತಿಕ ಕೇಂದ್ರವಾದ ಶಂಕರದೇವ ಕಲಾಕ್ಷೇತ್ರವಿದೆ. ದಿಸ್ಪುರದ ಪಕ್ಕದಲ್ಲಿ ಜತಿಯಾ ಎಂಬ ಪಟ್ಟಣವಿದೆ. ವಿಶ್ವದ ಅತ್ಯಂತ ಜನನಿಬಿಡ ಚಹಾ ವ್ಯಾಪಾರ ಸೌಲಭ್ಯಗಳಲ್ಲಿ ಒಂದಾದ ಗುವಾಹಟಿ ಚಹಾ ಹರಾಜು ಕೇಂದ್ರವು ಈ ನಗರದಲ್ಲಿದೆ. == ಭೂಗೋಳಶಾಸ್ತ್ರ == ಭರಾಲು ನದಿಯು ಈ ಪಟ್ಟಣದ ಹೃದಯಭಾಗದ ಮೂಲಕ ಹರಿಯುತ್ತದೆ. === ಹವಾಮಾನ === ದಿಸ್ಪುರ್‌, ಗುವಾಹಟಿಯ ಒಂದು ಭಾಗವಾಗಿರುವುದರಿಂದ, ಬೆಚ್ಚಗಿನ ಬೇಸಿಗೆ ಮತ್ತು ಶೀತ ಚಳಿಗಾಲವನ್ನು ಹೊಂದಿದೆ. ಚಳಿಗಾಲವು ಸಾಂದರ್ಭಿಕ ಮಳೆಯೊಂದಿಗೆ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ದಿಸ್ಪುರದಲ್ಲಿ ಮಳೆಗಾಲವು ಜೂನ್ ತಿಂಗಳಿನಿಂದ ಪ್ರಾರಂಭವಾಗುತ್ತದೆ. ದಿಸ್ಪುರದಲ್ಲಿ ಮಾನ್ಸೂನ್‍ನಲ್ಲಿ ಸಾಮಾನ್ಯವಾಗಿ ಭಾರಿ ಮಳೆಯ ಜೊತೆಗೆ ತೀವ್ರವಾದ ಗುಡುಗು ಸಹಿತ ಮಳೆಯಾಗುತ್ತದೆ. == ರಾಜಕೀಯ == ದಿಸ್ಪುರ್ ಗುವಾಹಟಿ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಬಿಜೆಪಿಯ ಕ್ವೀನ್ ಓಜಾ ಸಂಸದೆಯಾಗಿದ್ದರು. ಹಾಗೂ ಬಿಜೆಪಿಯ ಶ್ರೀ ಅತುಲ್ ಬೋರಾ ಅವರು ದಿಸ್ಪುರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. == ಪ್ರವಾಸಿ ಆಕರ್ಷಣೆಗಳು == ರಾಜಧಾನಿಯಾಗಿರುವುದರಿಂದ ಇದು ಉತ್ತಮ ಯೋಜಿತ ಸ್ಥಳವಾಗಿದೆ. ದಿಸ್ಪುರದಲ್ಲಿ ಅನೇಕ ಪ್ರವಾಸಿ ತಾಣಗಳಿವೆ, ಅವುಗಳೆಂದರೆ: ಶಿಲ್ಪಗ್ರಾಮವು ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ಮತ್ತು ಕರಕುಶಲ ಪರಂಪರೆಗೆ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ಆಭರಣಗಳು, ಕಾರ್ಪೆಟ್‍ಗಳು, ರೇಷ್ಮೆ ಸೀರೆಗಳು, ಮರದ ಮತ್ತು ಲೋಹದ ಕರಕುಶಲ ವಸ್ತುಗಳು ಇಲ್ಲಿ ಲಭ್ಯವಿದೆ. ಬಸಿಷ್ಠ ಆಶ್ರಮವು ದಿಸ್ಪುರದಿಂದ ಆರು ಕಿಲೋಮೀಟರ್ ದೂರದಲ್ಲಿದೆ. ಇದು ಶಿವನ ದೇವಾಲಯಕ್ಕೆ ಜನಪ್ರಿಯವಾಗಿದೆ. ಈ ದೇವಾಲಯವು ೮೩೫ ಬಿಘಾ ಪ್ರದೇಶದಲ್ಲಿ ವ್ಯಾಪಿಸಿದೆ. ಇದು ಪರ್ವತ ತೊರೆಗಳ ದಡದಲ್ಲಿದೆ, ಈ ತೊರೆ ಮೇಘಾಲಯದ ಬೆಟ್ಟಗಳಿಂದ ಹುಟ್ಟುತ್ತದೆ ಮತ್ತು ನಗರದ ಮೂಲಕ ಹರಿಯುವ ಬಸಿಷ್ಠ ಮತ್ತು ಭರಾಲು ನದಿಯನ್ನು ಸೇರುತ್ತದೆ. ಶ್ರೀಮಂತ ಶಂಕರದೇವ ಕಲಾಕ್ಷೇತ್ರವು ಈ ಪ್ರದೇಶದ ಪಂಜಾಬಿ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ಸಾಂಸ್ಕೃತಿಕ ಸಂಸ್ಥೆಯಾಗಿದೆ. ಈ ವಸ್ತುಸಂಗ್ರಹಾಲಯವು ಅಸ್ಸಾಂ ಮತ್ತು ಈಶಾನ್ಯದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಂರಕ್ಷಿಸುತ್ತದೆ. ಅಸ್ಸಾಂನ ಮಹಾನ್ ಸಾಂಸ್ಕೃತಿಕ ಪ್ರತಿಪಾದಕ ಮತ್ತು ವಿದ್ವಾಂಸ ಮಹಾಪುರುಷ ಶ್ರೀಮಂತ ಶಂಕರದೇವ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ವಸ್ತುಸಂಗ್ರಹಾಲಯದ ಒಳಗೆ, ಅಸ್ಸಾಂ ಮತ್ತು ಈಶಾನ್ಯ ಪ್ರದೇಶದ ಉಳಿದ ಸಂಸ್ಕೃತಿಯನ್ನು ಪ್ರದರ್ಶಿಸುವ ಸಾಂಪ್ರದಾಯಿಕ ಆಭರಣಗಳು, ವೇಷಭೂಷಣಗಳು, ಪ್ರತಿಮೆಗಳು, ವಸ್ತುಗಳು, ಶಸ್ತ್ರಾಸ್ತ್ರಗಳು, ಕಲ್ಲು ಮತ್ತು ಶಾಸನಗಳಿವೆ. == ಆರೋಗ್ಯ ರಕ್ಷಣೆ == ಗುವಾಹಟಿ ನ್ಯೂರೋಲಾಜಿಕಲ್ ರಿಸರ್ಚ್ ಸೆಂಟರ್ (ಜಿಎನ್ಆರ್‌ಸಿ) ಆಸ್ಪತ್ರೆಗಳು, ದಿಸ್ಪುರ್ ಆಸ್ಪತ್ರೆ, ದಿಸ್ಪುರ್ ಪಾಲಿಕ್ಲಿನಿಕ್ ಮತ್ತು ಆಸ್ಪತ್ರೆ ಮತ್ತು ಕ್ಯಾಪಿಟಲ್ ಸ್ಟೇಟ್ ಡಿಸ್ಪೆನ್ಸರಿ ಸೇರಿದಂತೆ ಅನೇಕ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ದಿಸ್ಪುರ್ ನೆಲೆಯಾಗಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==