ನಕುಲ ಮಹಾಭಾರತದಲ್ಲಿ ಪಾಂಡವರಲ್ಲಿ ನಾಲ್ಕನೆಯವ. ಮಾದ್ರಿ ದೇವಿಗೆ ಅಶ್ವಿನಿ ದೇವತೆಗಳ ವರಪ್ರಸಾದದಲ್ಲಿ ಅವಳಿ ಮಕ್ಕಳಾಗಿ ಜನಿಸಿದವ. ಸಹದೇವ ಇವನ ತಮ್ಮ. == ಜನನ ಮತ್ತು ಆರಂಭಿಕ ವರ್ಷಗಳು == ಕಿಂದಮ ಋಷಿಯ ಶಾಪದಿಂದಾಗಿ ಪಾಂಡುವಿಗೆ ಮಕ್ಕಳನ್ನು ಪಡೆಯುವುದು ಸಾಧ್ಯವಾಗದ್ದರಿಂದ, ದುರ್ವಾಸ ಮಹರ್ಷಿಗಳು ಕೊಟ್ಟ ವರವನ್ನು ಬಳಸಿ ಕುಂತಿಯು ಮೂರು ಮಕ್ಕಳನ್ನು ಪಡೆಯುತ್ತಾಳೆ. ಕುಂತಿಯು ಈ ವರವನ್ನು ಪಾಂಡುವಿನ ಎರಡನೇಯ ಹೆಂಡತಿಯಾದ ಮಾದ್ರಿಯ ಜೊತೆ ಹಂಚಿಕೊಳ್ಳುತ್ತಾಳೆ. ಮಾದ್ರಿಗೆ ಅಶ್ವಿನಿ ಕುಮಾರರ ವರಪ್ರಸಾದವಾಗಿ ನಕುಲ ಮತ್ತು ಸಹದೇವರು ಹುಟ್ಟುತ್ತಾರೆ. ನಕುಲನು ಕುರುವಂಶದ ಅತ್ಯಂತ ಸುಂದರ ವ್ಯಕ್ತಿಯಾಗಿದ್ದನು. ಬಾಲ್ಯದಲ್ಲಿ ನಕುಲನು ಕತ್ತಿವರಸೆ ಮತ್ತು ಚಾಕು ಎಸೆಯುವ ವಿದ್ಯೆಯನ್ನು ತನ್ನ ತಂದೆ ಪಾಂಡು ಮತ್ತು ಶತಶೃಂಗ ಆಶ್ರಮದಲ್ಲಿ ಶುಕಮುನಿಯ ಬಳಿ ಕಲಿತನು. ಪಾಂಡು ಅವನ ಹೆಂಡತಿ ಮಾದ್ರಿಯೊಂದಿಗೆ ಸೇರಲು ಪ್ರಯತ್ನಿಸಿದಾಗ ಕಿಂದಮರ ಶಾಪದಿಂದಾಗಿ ಸತ್ತುಹೋದನು. ಅನಂತರ ಮಾದ್ರಿಯು ಪಾಂಡುವಿನ ಚಿತೆಗೆ ಹಾರಿ ಸಹಗಮನವಾದಳು. ಆದ್ದರಿಂದ ನಕುಲ ಮತ್ತು ಸಹದೇವ ಇಬ್ಬರೂ ತಮ್ಮ ಪೋಷಕರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಳ್ಳುತ್ತಾರೆ. ಇಬ್ಬರನ್ನೂ ಕುಂತಿ ತನ್ನ ಮಕ್ಕಳ ಹಾಗೆಯೇ ಸಾಕುತ್ತಾಳೆ. ನಕುಲ ತನ್ನ ಸಹೋದರರೊಂದಿಗೆ ಹಸ್ತಿನಾಪುರಕ್ಕೆ ಹೋಗಿ ನೆಲೆಸಿ, ದ್ರೋಣ ಮತ್ತು ಕೃಪಾಚಾರ್ಯರಿಂದ ಶಸ್ತ್ರಾಸ್ತ್ರಗಳ ವಿದ್ಯೆಯನ್ನು ಪಡೆದನು. ನಕುಲನು ವಿಶೇಷವಾಗಿ ಕತ್ತಿವರಸೆ ಮತ್ತು ಕುದುರೆ ಸವಾರಿಯಲ್ಲಿ ನಿಪುಣನಾಗಿದ್ದನು. == ಕೌಶಲ್ಯಗಳು == ಕುದುರೆ ಆರೈಕೆ : ನಕುಲನಿಗೆ ಕುದುರೆಗಳ ಸಂತಾನೋತ್ಪತ್ತಿ ಮತ್ತು ತರಬೇತಿಯ ಬಗ್ಗೆ ಆಳವಾದ ಜ್ಞಾನ​ ಹೊಂದಿದ್ದನು ಎಂದು ಮಹಾಭಾರತದಲ್ಲಿ ಕೃಷ್ಣನು ನರಕಾಸುರನನ್ನು ಸಂಹರಿಸಿದ ನಂತರ ಹೇಳಿದ್ದು ದಾಖಲಾಗಿದೆ. ವಿರಾಟನ ಜೊತೆಗಿನ ಒಂದು ಸಂಭಾಷೆಣೆಯಲ್ಲಿ ನಕುಲನು ಕುದುರೆಗಳಿಗೆ ಬರುವ ಎಲ್ಲಾ ರೋಗಗಳನ್ನು ಗುಣಪದಿಸುವ ಜ್ಞಾನ​ ಹೊಂದಿರುವುದಾಗಿ ಹೇಳುತ್ತಾನೆ. ನಕುಲನು ಒಬ್ಬ ಸಮರ್ಥ ರಥದ ಸಾರಥಿಯೂ ಹೌದು. ಆಯುರ್ವೇದ : ವೈದ್ಯರಾದ ಅಶ್ವಿನಿ ಕುಮಾರರ ಮಗನಾದ ನಕುಲನು ಆಯುರ್ವೇದ ಪರಿಣತನಾಗಿದ್ದನು. ಕತ್ತಿವರಸೆ : ನಕುಲನಿಗೆ ಚೆನ್ನಾಗಿ ಕತ್ತಿವರಸೆ ಗೊತ್ತಿದ್ದು, ಅವನ ಕೌಶಲ್ಯವನ್ನು ಕುರುಕ್ಷೇತ್ರ ಯುದ್ಧದ ಹದಿನೆಂಟನೇ ದಿನದಂದು ಕರ್ಣನ ಪುತ್ರರನ್ನು ಸಾಯಿಸುವ ಮೂಲಕ ತೋರಿಸುತ್ತಾನೆ.