ನಳಂದ (ಹಿಂದಿ/ಸಂಸ್ಕೃತ/ಪಾಲಿ: ನಾಲಂದ) ಭಾರತ ದೇಶದ ಬಿಹಾರ‌ದಲ್ಲಿದ್ದ ಪ್ರಾಚೀನ ಕಾಲದ ಪ್ರಸಿದ್ಧ ಉನ್ನತ ವ್ಯಾಸಂಗ ಕೇಂದ್ರದ ಹೆಸರು. ನಳಂದ ಪ್ರಾಂತ್ಯವು ಭಾರತದ ರಾಜ್ಯ ಬಿಹಾರ‌ದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗದಲ್ಲಿ ಸುಮಾರು 55 ಮೈಲು ದೂರದಲ್ಲಿದೆ ಮತ್ತು ಕ್ರಿ.ಶ. 427 ರಿಂದ 1197 ವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು. ಇದು "ಇತಿಹಾಸದಲ್ಲಿ ನಮೂದಿತವಾದ ಮೊದಲ ಅತಿ ಶ್ರೇಷ್ಠವಾದ ವಿಶ್ವವಿದ್ಯಾಲಯ" ಎಂದು ಕರೆಯಲ್ಪಟ್ಟಿದೆ. ಕೆಲವು ಕಟ್ಟಡಗಳನ್ನು ಮೌರ್ಯ ವಂಶದ ಚಕ್ರವರ್ತಿ ಅಶೋಕನು ನಿರ್ಮಿಸಿದ್ದಾನೆ. ಗುಪ್ತಾ ಸಾಮ್ರಾಜ್ಯವೂ ಕೆಲವು ಮಠಗಳನ್ನು ನಿರ್ಮಿಸಲು ಪ್ರೋತ್ಸಾಹಿಸಿತು. ಇತಿಹಾಸಜ್ಞರ ಪ್ರಕಾರ, ನಳಂದವು ಗುಪ್ತ ರಾಜ ಶಕ್ರಾದಿತ್ಯ (ಕುಮಾರಗುಪ್ತನೆಂದೂ ಕರೆಯುವರು, ಆಳ್ವಿಕೆ 415-55) ಮತ್ತು ಬೌದ್ಧ ಸಾಮ್ರಾಟರಾದ ಹರ್ಷ ಹಾಗೂ ಪಾಲ ಸಾಮ್ರಾಜ್ಯದ ನಂತರದ ಕೆಲವು ಚಕ್ರವರ್ತಿಗಳ ಕಾಲದಲ್ಲಿ ಪ್ರವರ್ಧಮಾನದಲ್ಲಿತ್ತು. ಅಲ್ಲಿಯ ಸಂಕೀರ್ಣವು ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿತ್ತು ಮತ್ತು ಅದರ ಭಗ್ನಾವಶೇಷವು 14 ಎಕರೆಗಳಷ್ಟು ಸ್ಥಳವನ್ನು ಆಕ್ರಮಿಸಿತ್ತು. ತನ್ನ ಉತ್ತುಂಗ ಸ್ಥಿತಿಯಲ್ಲಿ ಈ ವಿಶ್ವವಿದ್ಯಾಲಯವು ಚೈನಾ, ಗ್ರೀಸ್ ಮತ್ತು ಪರ್ಶಿಯಾದಂತಹ ದೂರದೂರುಗಳ ಪಂಡಿತರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ನಳಂದವು 1193ರಲ್ಲಿ ಬಖ್ತಿಯಾರ್ ಖಿಲ್ಜಿಯ ನೇತೃತ್ವದಲ್ಲಿ ಟರ್ಕಿಯ ಮುಸ್ಲಿಮ್ ಧಾಳಿಕೋರರಿಂದ ದೋಚಲ್ಪಟ್ಟಿತು, ಇದು ಭಾರತದಲ್ಲಿ ಬೌದ್ಧರ ಪ್ರಾಬಲ್ಯದ ಇಳಿಮುಖದ ಮೈಲಿಗಲ್ಲಾಯಿತು. 2006ರಲ್ಲಿ ಸಿಂಗಪೂರ್, ಚೈನಾ, ಭಾರತ, ಜಪಾನ್ ಮತ್ತು ಇತರ ದೇಶಗಳು ಈ ಐತಿಹಾಸಿಕ ಪ್ರಾಂತ್ಯವನ್ನು ನಳಂದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಎಂದು ನವೀಕರಿಸುವ ಮತ್ತು ಪುನರುಜ್ಜೀವನಗೊಳಿಸುವ ಯೋಜನೆಯ ಪ್ರಸ್ತಾಪವನ್ನು ಮುಂದಿಟ್ಟಿತು. ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯವು ಎಷ್ಟು ದೊಡ್ಡದಿತ್ತೆಂದರೆ, ಮೊಘಲರು ಅಲ್ಲಿ ಬೆಂಕಿ ಹಚ್ಚಿದ ಮೂರು ತಿಂಗಳವರೆಗೂ ಆ ಸ್ಥಳವು ಉರಿಯುತ್ತಿತ್ತೆಂದು ವರದಿಯಾಗಿತ್ತು. ಆ ಸ್ಥಳದಿಂದ ಸಂತರನ್ನು ಹೊರಗೆ ಕಳಿಸಿ, ಮಠಗಳನ್ನು ನಾಶಮಾಡಿದ್ದರು. == ವ್ಯುತ್ಪತ್ತಿ == ನಳಂದ ಎಂದರೆ " ನೀಡಿದಷ್ಟೂ ತೃಪ್ತಿಯಿಲ್ಲದ್ದು" ಚೈನಾದ ಯಾತ್ರಾರ್ಥಿ-ಸಂತ ಜುವಾನ್‌ಜಂಗ್‌‍ನು ನಾಲಂದ ಹೆಸರಿಗೆ ಅನೇಕ ವಿವರಣೆಗಳನ್ನು ನೀಡುತ್ತಾನೆ. ಅವುಗಳಲ್ಲಿ ಒಂದು, ಮಾವಿನ ತೋಪಿನಲ್ಲಿದ್ದ ಸರೋವರದಲ್ಲಿ ವಾಸಿಸುತ್ತಿದ್ದ ನಾಗನಿಂದ ಈ ಹೆಸರು ಬಂತೆಂದು ಹೇಳಿದ್ದಾನೆ. ಇನ್ನೊಂದು - ಅವನು ಒಪ್ಪಿದ್ದು - ಏನೆಂದರೆ ಇದು ಶಾಕ್ಯ ಮುನಿ ಬುದ್ಧನ ಒಂದು ಕಾಲದ ರಾಜಧಾನಿಯಾಗಿತ್ತು ಮತ್ತು ಅವನು "ವಿರಾಮವಿಲ್ಲದೆ ಭಿಕ್ಷೆ" ಎಂಬ ಹೆಸರು ನೀಡಿದ್ದನು. ಸಾರಿಪುತ್ತನು ’ನಲಕ’ ಎಂಬ ಗ್ರಾಮದಲ್ಲಿ ಮರಣಹೊಂದಿದನು, ಅದನ್ನೇ ಅನೇಕ ಪಂಡಿತರು ನಳಂದ ಎಂದು ಗುರುತಿಸಿದ್ದರು. 'ನ ಅಲಂ ದ ಇತಿ ನಳಂದಾ' ಎಂದಾಗುತ್ತದೆ. ಅಂದರೆ ವಿದ್ಯಾದಾನದ ವಿಷಯದಲ್ಲಿ ಅಲಂ (ಸಾಕು) ಎಂಬುವುದೇ ಗೊತ್ತಿರದಿದ್ದಂತಹ ಬೃಹತ್ ವಿಶ್ವವಿದ್ಯಾಲಯವಾಗಿತ್ತು ನಳಂದ. == ಇತಿಹಾಸ == === (ಕ್ರಿ.ಪೂ. 500) ಬುದ್ಧನ ಕಾಲದಲ್ಲಿ === ಬುದ್ಧನು ಅನೇಕ ಸಲ ನಳಂದದಲ್ಲಿ ತಂಗಿದ್ದನೆಂದು ಹೇಳಲಾಗಿದೆ. ಅವನು ನಳಂದಕ್ಕೆ ಭೇಟಿ ನೀಡಿದಾಗ ಸಾಮಾನ್ಯವಾಗಿ ಪಾವಾರಿಕಾದ ಮಾವಿನ ತೋಪಿನಲ್ಲಿ ತಂಗುತ್ತಿದ್ದನು, ಮತ್ತು ಅಲ್ಲಿ ಅವನು ಉಪಾಲಿ -ಗಹಪತಿ ಮತ್ತು ದೀಘತಪಸ್ಸೀ, ಕೇವತ್ತ ಮತ್ತು ಅಸಿಬಂಡಕಪುತ್ತನೊಂದಿಗೂ ಅನೇಕ ಸಂಭಾಷಣೆ, ವಿಚಾರವಿನಿಮಯಗಳನ್ನು ನಡೆಸಿದ್ದನು. ಬುದ್ಧನು ಮಗಧದ ಮೂಲಕ ತನ್ನ ಕೊನೆಯ ಪ್ರವಾಸದಲ್ಲಿ ನಾಲಂದವನ್ನು ಸಂದರ್ಶಿಸಿದ್ದನು ಮತ್ತು ಅವನ ಸಾವಿಗೆ ಸ್ವಲ್ಪ ಮೊದಲು ಸರಿಪುತ್ತನು ಬೌದ್ಧ ಧರ್ಮದಲ್ಲಿ ತನಗಿರುವ ಶ್ರದ್ಧೆಯನ್ನು ಸಿಂಹ ಘರ್ಜನೆಯೊಂದಿಗೆ ತಿಳಿಸುತ್ತಾನೆ. ರಾಜಗೃಹದಿಂದ ನಾಲಂದಕ್ಕೆ ಹೋಗುವ ದಾರಿಯು ಅಂಬಲತ್ತಿಕಾದ ಮೂಲಕ ಸಾಗುತ್ತಿತ್ತು. ಮತ್ತು ನಾಲಂದದಿಂದ ಅದು ಪಾತಲಿಗಾಮಕ್ಕೆ ಹೋಗುತ್ತಿತ್ತು. ರಾಜಗೃಹ ಮತ್ತು ನಾಲಂದದ ನಡುವೆ ಬಹಪುಟ್ಟವು ನೆಲೆಗೊಂಡಿತ್ತು. ಕೇವತ್ತ ಸುತ್ತದ ಪ್ರಕಾರ ಬುದ್ಧನ ಕಾಲಕ್ಕಾಗಲೇ ನಾಲಂದವು ಸಾಕಷ್ಟು ಪ್ರಭಾವಶಾಲೀ ಮತ್ತು ಸಮೃದ್ಧಿಯಿಂದ ಕೂಡಿದ ಊರಾಗಿತ್ತು, ಆದರೆ ಮೊದಲು ಹಾಗಿರಲಿಲ್ಲ. ಉನ್ನತ ವ್ಯಾಸಂಗದ ಕೇಂದ್ರವಾದ ನಂತರ ಅದು ಪ್ರಸಿದ್ಧಿ ಹೊಂದಿತು. ಬುದ್ಧನ ಕಾಲದಲ್ಲಿ ಈ ಪ್ರಾಂತ್ಯವು ತೀವ್ರವಾದ ಕ್ಷಾಮಕ್ಕೆ ಬಲಿಯಾಗಿತ್ತೆಂದು ಸಮ್ಯುತ್ತ ನಿಕಾಯದಲ್ಲಿ ದಾಖಲಿಸಲ್ಪಟ್ಟಿದೆ. ಬುದ್ಧನ ಬಲಗೈ ಬಂಟನಂತಿದ್ದ ಶಿಷ್ಯ ಸಾರಿಪುತ್ತ ಇದೇ ನಾಲಂದದಲ್ಲಿ ಜನಿಸಿ ಇಲ್ಲೇ ಕೊನೆಯುಸಿರೆಳೆದನು. ನಾಲಂದವು ಸೊನ್ನಾದಿನ್ನನ ತವರೂರಾಗಿತ್ತು. ಮಹಾವೀರನು ಅನೇಕ ಸಲ ನಾಲಂದದಲ್ಲಿ ವಿರಮಿಸಿದ್ದನೆಂದು ಹೇಳಲಾಗಿದೆ. ಇದು ಖಂಡಿತವಾಗಿ ಜೈನ ಧರ್ಮ ಅನುಯಾಯಿಗಳ ಚಟುವಟಿಕೆಯ ಕೇಂದ್ರವಾಗಿತ್ತು. ಮಹಾವೀರನು ನಳಂದದಲ್ಲಿರುವ ಪಾವಾಪುರಿಯಲ್ಲಿ ಮೋಕ್ಷ ಹೊಂದಿದನೆಂದು ನಂಬಲಾಗಿದೆ (ಜೈನ ಧರ್ಮದ ಒಂದು ಪಂಥದ ಅನುಯಾಯಿಗಳ ಪ್ರಕಾರ ಅವನು ಹತ್ತಿರದ ಗ್ರಾಮವಾದ ಕುಂಡಲಾಪುರದಲ್ಲಿ ಜನಿಸಿದ್ದ). ರಾಜ ಅಶೋಕನು (ಕ್ರಿ.ಶ. 250)ಯಲ್ಲಿ ಸಾರಿಪುತ್ತನ ನೆನಪಿಗಾಗಿ ಒಂದು ಸ್ತೂಪವನ್ನು ಇಲ್ಲಿ ಕಟ್ಟಿಸಿದ್ದನೆಂದು ಹೇಳಲಾಗುತ್ತದೆ. ಟಿಬೆಟಿಯನ್ನರ ಮೂಲದ ಪ್ರಕಾರ ನಾಗಾರ್ಜುನನ ಅಭ್ಯಾಸ ಇಲ್ಲೇ ನಡೆದುದಾಗಿದೆ. === ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಗುಪ್ತರ ಪೂರ್ಣ ವೈಭವದ ಕಾಲ === ನಳಂದ ವಿಶ್ವವಿದ್ಯಾಲಯವು ಗುಪ್ತ ಸಾಮ್ರಾಟ ಕುಮಾರಗುಪ್ತನ ಕಾಲದಲ್ಲಿ ಸ್ಥಾಪಿತವಾಯಿತೆಂದು ಐತಿಹಾಸಿಕ ಅಧ್ಯಯನವು ತಿಳಿಸುತ್ತದೆ. ಆ ಸ್ಥಳದಲ್ಲಿ ಅವನ ಒಂದು ಮುದ್ರೆಯು ದೊರೆತಿದ್ದರಿಂದ ಪ್ರಜ್ಞಾವರ್ಮ ಮತ್ತು ಜುವಾಂಗ್‌ಜಾಂಗ್‌ ಇಬ್ಬರೂ ಅವನನ್ನೇ ಇದರ ಸ್ಥಾಪಕನೆಂದು ಉಲ್ಲೇಖಿಸಿದ್ದಾರೆ. ಇತಿಹಾಸಜ್ಞ ಸುಕುಮಾರ್ ದತ್ತರು ಹೇಳುವಂತೆ, ನಳಂದ ವಿಶ್ವವಿದ್ಯಾಲಯದ ಚರಿತ್ರೆಯು "ಎರಡು ಮುಖ್ಯ ವಿಭಾಗವಾಗಿದೆ--ಮೊದಲನೆಯದಾಗಿ ಗುಪ್ತರ ವಂಶಪಾರಂಪರ್ಯದ ಪ್ರಗತಿಪರ ಸಾಂಸ್ಕೃತಿಕ ಸಂಪ್ರದಾಯದ ಮೇಲೆ ಪ್ರಭಾವ ಬೀರಿದ ಆರರಿಂದ ಒಂಬತ್ತನೆಯ ಶತಮಾನದವರೆಗೆ ಇದರ ಬೆಳವಣಿಗೆ, ಅಭಿವೃದ್ಧಿ ಮತ್ತು ಸೌಕರ್ಯ; ಎರಡನೆಯದಾಗಿ ಒಂಬತ್ತರಿಂದ ಹದಿಮೂರನೇ ಶತಮಾನದವರೆಗಿನ ಕ್ರಮವಾದ ಇಳಿಮುಖ ಸಾಧನೆ ಮತ್ತು ಕೊನೆಗೆ ಸಂಪೂರ್ಣ ವಿಭಜನೆ-ಪೂರ್ವ ಭಾರತದಲ್ಲಿ ಬುದ್ಧರ ತಾಂತ್ರಿಕ ಅಭಿವೃದ್ಧಿಯು ಬಲವಾಗಿದ್ದ ಕಾಲ. ಹ್ಯೂಯೆನ್ ತ್ಸಾಂಗ್ ಕ್ರಿ.ಶ. 629-645 ಐದು ವರ್ಷ ನಳಂದದಲ್ಲಿ ವಿದ್ಯಾರ್ಥಿಯಾಗಿದ್ದ. ಹ್ಯೂಯೆನ್ ತ್ಸಾಂಗ್ ಪ್ರಕಾರ ಚೀನಾ, ಕೊರಿಯಾ, ಟಿಬೆಟ್, ಮಂಗೋಲಿಯಾ, ಜರ್ಮನ್ ದೇಶಗಳಿಂದ ನಳಂದಕ್ಕೆ ವೈದ್ಯಕೀಯ ಕಲಿಯಲು ಆಗಮಿಸುತ್ತಿದ್ದರು. ನಳಂದದಲ್ಲಿ ಪ್ರವೇಶ ದೊರಕುವುದೇ ಕಷ್ಟಕರವಾದ ಪರಿಸ್ಥಿತಿಯಿತ್ತು. ಕ್ರಿ.ಶ. 675-685 ಯಿಜಿಂಗ್ 10 ವರ್ಷ ಇದ್ದುದು ತಿಳಿದುಬರುತ್ತದೆ. === ಪಾಲ ಯುಗದಲ್ಲಿ === ಪಾಲರ ಕಾಲದಲ್ಲಿ ಪುರಾತನ ಬಂಗಾಲ ಮತ್ತು ಮಗಧದಲ್ಲಿ ಅನೇಕ ಮಠಗಳು ಬೆಳೆದವು. ಟಿಬೆಟಿಯನ್ನರ ಮೂಲದ ಪ್ರಕಾರ, ಐದು ಶ್ರೇಷ್ಠ ಮಹಾವಿಹಾರಗಳು ಹೊರಬಂದವು: ವಿಕ್ರಮಶಿಲ, ಆ ಯುಗದ ಸರ್ವ ಶ್ರೇಷ್ಠ ವಿಶ್ವವಿದ್ಯಾಲಯ; ನಳಂದ, ಗತಕಾಲದಲ್ಲಿ ಪ್ರಾಧಾನ್ಯ ಪಡೆದು ಇನ್ನೂ ಹೆಸರುವಾಸಿಯಾಗಿದೆ, ಸೋಮಪುರ, ಓಡಂತಪುರ ಮತ್ತು ಜಗ್ಗದಲ. ಐದು ಮಠಗಳು ಒಂದು ಸಂಪರ್ಕ ವ್ಯವಸ್ಠೆಯನ್ನು ರೂಪುಗೊಳಿಸಿದವು; "ಅವೆಲ್ಲವೂ ರಾಜ್ಯದ ಮೇಲ್ವಿಚಾರಣೆಯಲ್ಲಿದ್ದವು" ಮತ್ತು ಅಲ್ಲಿ "ಅವರಲ್ಲೇ ಒಂದು ಸಹಕಾರ ವ್ಯವಸ್ಥೆ ಇತ್ತು...ಒಂದು ಜಾಲಸಂಪರ್ಕದಲ್ಲಿದ್ದ ಪಾಲರು ಪೂರ್ವ ಭಾರತದಲ್ಲಿ ಬೌದ್ಧರ ವಿವಿಧ ವ್ಯಾಸಂಗ ಪೀಠಗಳು ಅಂತರ ಸಂಬಂಧ ಹೊಂದಿದ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದುದಕ್ಕೆ ಸಾಕ್ಷಿಗಳಿರುವಂತೆ ತೋರುತ್ತದೆ" ಮತ್ತು ಶ್ರೇಷ್ಠ ಪಂಡಿತರು ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಸುಲಭವಾಗಿ ವರ್ಗಾವಣೆ ಹೊಂದುವುದು ಸಾಮಾನ್ಯವಾಗಿತ್ತು. ಪಾಲ ಯುಗದಲ್ಲಿ ನಾಲಂದವು ಮಹೋನ್ನತ ಸ್ಥಾನದಲ್ಲಿದ್ದ ಏಕಮೇವ ಸಂಸ್ಥೆಯಾಗಿತ್ತು, ಬೇರೆಲ್ಲ ಪಾಲ ಸಂಸ್ಥೆಗಳಂತೆ "ಅನೇಕ ಪಾಂಡಿತ್ಯ ಹೊಂದಿದ ಸಂತರು ನಾಲಂದದವರಾಗಿದ್ದು....ಪಾಲರ ಆಶ್ರಯದಲ್ಲಿದ್ದರು". === ಅವನತಿ ಮತ್ತು ಅಂತ್ಯ === ಕೆಲವು ಭಾರತೀಯ ಚರಿತ್ರಕಾರರ ಪ್ರಕಾರ, ಸುಮಾರು 10ನೆಯ ಶತಮಾನದ ಸಮಯದಲ್ಲಿ ನಳಂದ ಮೇಲಿನ ಒತ್ತಡ ಹೆಚ್ಚತೊಡಗಿತು. ಚರಿತ್ರಕಾರ ಪ್ರಕಾಶ್ ಬುದ್ಧ್‌ರ ಪ್ರಕಾರ, ಹಿಂದೂಗಳು ಮಾಡಿದ ಒಂದು ಯಜ್ಞ ಅಗ್ನಿ ಯಾಗವು ಮಹಾಜ್ವಾಲೆಯಾಗಿ ಮಾರ್ಪಟ್ಟು ಅದು ನಳಂದದ ಒಂಬತ್ತು ಮಹಡಿಯ ಗ್ರಂಥಾಲಯವಾದ ರತ್ನಭೋದಿಯನ್ನು ನಾಶಪಡಿಸಿತು. ತಮ್ಮ ಸೋಷಿಯಲ್ ಹಿಸ್ಟರಿ ಆಫ್ ಇಂಡಿಯಾ ದಲ್ಲಿ, ಚರಿತ್ರಕಾರ ಸದಾಶಿವಂ ಹೇಳುತ್ತಾರೆ, "ವಿಶ್ವವಿದ್ಯಾನಿಲಯದ ಬೃಹತ್ತಾದ ಹಸ್ತಪ್ರತಿ ಗ್ರಂಥಾಲಯವನ್ನು ತ್ರಿಥಿಕರು ಜೈನರ ಸಹಾಯದಿಂದ ಅಗ್ನಿಗೆ ಆಹುತಿಮಾಡಿದ್ದರು, ಇದಕ್ಕೆ ಕಾರಣ ಕಲಿಕೆಯ ಭವ್ಯ ಕೇಂದ್ರದ ವಿರುದ್ಧ ಅವರು ಹೊಂದಿದ್ದ ಅಸೂಯೆ ಹೆಚ್ಚಾಗುತ್ತಿದ್ದುದು." 1193ರಲ್ಲಿ, ನಳಂದ ವಿಶ್ವವಿದ್ಯಾನಿಲಯವನ್ನು, ಟರ್ಕಿ ದೇಶಸ್ತ ಇಸ್ಲಾಮ್ ಧರ್ಮದ ಮತಾಂಧ ಬಖ್ತಿಯಾರ್ ಖಿಲ್ಜಿ ಕೊಳ್ಳೆಹೊಡೆದನು; ಈ ಪ್ರಸಂಗವನ್ನು ವಿದ್ವಾಂಸರು ಭಾರತದಲ್ಲಿ ಬೌದ್ಧಮತ ಅವನತಿಯಲ್ಲಿನ ಪ್ರಮುಖ ಹಂತವನ್ನಾಗಿ ಕಂಡರು. ಪರ್ಶಿಯಾದ ಚರಿತ್ರಕಾರ ಮಿನ್‌ಹಾಜ್-ಐ-ಸಿರಜ್, ತಮ್ಮ ಐತಿಹಾಸಿಕ ದಾಖಲೆ ಟಬಾಕ್ವತ್-ಐ-ನಸಿರಿ ಯಲ್ಲಿ, ಬೌದ್ಧಮತವನ್ನು ಕಿತ್ತುಹಾಕಿ ಇಸ್ಲಾಮ್ ಧರ್ಮವನ್ನು ಸ್ಥಾಪಿಸಲು ಖಿಲ್ಜಿ ಮಾಡಿದ ಪ್ರಯತ್ನದಲ್ಲಿ ಸಾವಿರಾರು ಸಂನ್ಯಾಸಿಗಳನ್ನು ಜೀವಂತ ಸುಡಲಾಯಿತು ಮತ್ತು ಸಾವಿರಾರು ಸಂನ್ಯಾಸಿಗಳ ಶಿರಚ್ಛೇದ ಮಾಡಲಾಯಿತು ಎಂದು ವರದಿ ಮಾಡಿದ್ದರು; ಗ್ರಂಥಾಲಯ ಸುಡುವುದು ಹಲವಾರು ತಿಂಗಳವರೆಗೂ ಮುಂದುವರೆಯಿತು ಮತ್ತು "ಉರಿಯುತ್ತಿರುವ ಹಸ್ತಪ್ರತಿಗಳಿಂದ ಬರುವ ಹೊಗೆಯು ಅನೇಕ ದಿನಗಳವರೆಗೂ ಗುಡ್ಡದ ಮೇಲಿನ ದಟ್ಟ ಮುಸುಕಿನಂತೆ ಆವರಿಸಿತ್ತು." ನಳಂದದ ಕೊನೆಯ ಸಿಂಹಾಸನ-ಒಡೆಯ, ಶಾಕ್ಯಶ್ರೀಭದ್ರ, ಕ್ರಿ.ಶ. 1204 ರಲ್ಲಿ ಟಿಬೆಟಿನ ಅನುವಾದಕ ಟ್ರೊಪು ಲೊಟ್ಸವನ (ಖ್ರೊ-ಫು ಲೊ-ತ್ಸ-ಬ ಬ್ಯಾಮ್ಸ್-ಪ ದ್ಪಾಲ್ ) ಆಮಂತ್ರಣದಲ್ಲಿ ಟಿಬೆಟ್‌ಗೆ ಪಲಾಯನ ಮಾಡಿದರು. ಟಿಬೆಟ್‌ನಲ್ಲಿ ಅವರು ಎರಡು ಅಸ್ತಿತ್ವದಲ್ಲಿರುವವುಗಳನ್ನು ಸಂಪೂರ್ಣಗೊಳಿಸಲು ಮುಲಾಸರ್ವಸ್ತಿವಾದಿನ್ ವಂಶಾವಳಿಯ ಶ್ರೇಣೀಕರಣ ವಂಶಾವಳಿಯನ್ನು ಪ್ರಾರಂಭಿಸಿದ್ದರು. 1235ರಲ್ಲಿ ಟಿಬೆಟಿನ ಅನುವಾದಕ ಚಾಂಗ್ ಲೋತ್ಸವಾ (ಚಾಗ್ ಲೊ-ತ್ಸ-ಬ , 1197–1264) ಸ್ಥಳವನ್ನು ಸಂದರ್ಶಿಸಿದಾಗ, ಅವರು ಸುಮಾರು 70 ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ 90 ವರ್ಷ ವಯಸ್ಸಿನ ಬೋಧಕರೊಂದಿಗೆ ಇದು ನಾಶವಾಗಿರುವುದು ಮತ್ತು ಕೊಳ್ಳೆಗೊಳಗಾಗಿರುವುದನ್ನು ಕಂಡರು. ಚಾಂಗ್ ಲೋತ್ಸವಾರ ಸಮಯದಲ್ಲಿ ಟರ್ಕಿ ಸೈನಿಕರು ನಡೆಸಿದ ಅನಿರೀಕ್ಷಿತ ದಾಳಿಯಿಂದ ಉಳಿದ ವಿದ್ಯಾರ್ಥಿಗಳು ಪಲಾಯನವಾಗುವಂತೆ ಮಾಡಿತು. ಇವುಗಳೆಲ್ಲವನ್ನೂ ಹೊರತುಪಡಿಸಿ, "ವರದಿಯಾಗಿರುವಂತೆ ನಳಂದವನ್ನು ಪ್ರೋತ್ಸಾಹಿಸಿದ ಕೊನೆಯ ರಾಜ ಚಗಲರಾಜನಿರುವವರೆಗೆ ಕ್ರಿ.ಶ. 1400 ವರೆಗೂ ದುರ್ಬಲವಾದ ಬೌದ್ಧ ಸಮುದಾಯದ ಅಲ್ಪಾವಶೇಷಗಳು ಭೀತಿಯ ಮಾರ್ಗದಡಿಯಲ್ಲಿ ಕಷ್ಟಪಡುವುದು ಮುಂದುವರೆದಿತ್ತು." ನಳಂದದಲ್ಲಿನ ಮತ್ತು ಉತ್ತರ ಭಾರತದಲ್ಲಿನ ದೇವಸ್ಥಾನಗಳ, ಮಠಗಳ, ಕಲಿಕಾ ಕೇಂದ್ರಗಳ ವಿನಾಶವು ಗಣಿತಶಾಸ್ತ್ರ, ಖಗೋಳ ವಿಜ್ಞಾನ, ರಸವಿದ್ಯೆ, ಮತ್ತು ಶರೀರ ರಚನಾ ಶಾಸ್ತ್ರದಲ್ಲಿನ ಪುರಾತನ ಭಾರತೀಯ ವೈಜ್ಞಾನಿಕ ಕಲ್ಪನೆಯ ಅಳಿವಿಗೆ ಹೊಣೆಯಾಗಿತ್ತು ಎಂದು ಅಹಿರ್ ಪರಿಗಣಿಸುತ್ತಾರೆ. == ಸ್ಥೂಲ ಸಮೀಕ್ಷೆ == ನಳಂದವು ವಸತಿಸೌಕರ್ಯ ಹೊಂದಿದ್ದ ಜಗತ್ತಿನ ಮೊತ್ತಮೊದಲ ವಿಶ್ವವಿದ್ಯಾಲಯವಾಗಿತ್ತು, ಅಂದರೆ ವಿದ್ಯಾರ್ಥಿಗಳಿಗೆ ವಸತಿಗೃಹಗಳಿದ್ದವು. ಇದು ಅತ್ಯಂತ ಪ್ರಸಿದ್ಧವಾದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು. ಇದು ತನ್ನ ಉತ್ತುಂಗ ಸ್ಥಿತಿಯಲ್ಲಿದ್ದಾಗ ಸುಮಾರು 10,000 ವಿದ್ಯಾರ್ಥಿಗಳನ್ನು ಮತ್ತು 2,000 ಅಧ್ಯಾಪಕರನ್ನು ಒಳಗೊಂಡಿತ್ತು. ವಿಶ್ವವಿದ್ಯಾಲಯವನ್ನು ವಾಸ್ತುಶಾಸ್ತ್ರದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ಇದನ್ನು ಒಂದು ಉನ್ನತವಾದ ಗೋಡೆಯಿಂದ ಮತ್ತು ಒಂದು ದ್ವಾರದಿಂದ ಗುರುತಿಸಲಾಗುತ್ತದೆ. ನಳಂದವು ಎಂಟು ಬೇರೆ ಬೇರೆ ಮೋಟು ಗೋಡೆಗಳನ್ನು ಮತ್ತು ಹತ್ತು ದೇವಾಲಯಗಳು, ಅಲ್ಲದೆ ಅನೇಕ ಧ್ಯಾನದ ಹಜಾರಗಳು ಮತ್ತು ಪಾಠದ ಕೋಣೆಗಳನ್ನು ಹೊಂದಿತ್ತು. ಮೈದಾನದಲ್ಲಿ ಸರೋವರಗಳು ಮತ್ತು ಉದ್ಯಾನವನಗಳಿದ್ದವು. ಗ್ರಂಥಾಲಯವು ಒಂಬತ್ತು ಅಂತಸ್ತುಗಳ ಕಟ್ಟಡವಾಗಿತ್ತು. ಅಲ್ಲಿ ಪಠ್ಯಗಳ ಕರಾರುವಾಕ್ಕಾದ ಪ್ರತಿಗಳನ್ನು ಇಡಲಾಗಿತ್ತು. ನಳಂದ ವಿಶ್ವವಿದ್ಯಾಲಯದಲ್ಲಿ ಕಲಿಕೆಯ ಎಲ್ಲ ಕ್ಷೇತ್ರಗಳನ್ನು ಕಲಿಸುವ ವ್ಯವಸ್ಥೆಯಿತ್ತು, ಮತ್ತು ಅದು ಕೊರಿಯ, ಜಪಾನ್, ಚೈನಾ, ಟಿಬೆಟ್, ಇಂಡೊನೇಶಿಯಾ, ಪರ್ಶಿಯ ಮತ್ತು ಟರ್ಕಿಯ ವಿದ್ಯಾರ್ಥಿಗಳು ಮತ್ತು ಪಂಡಿತರನ್ನು ಆಕರ್ಷಿಸಿತ್ತು. ಟ್ಯಾಂಗ್ ವಂಶದ ಚೈನಾ ಯಾತ್ರಿಕ ಜುವಾಂಗ್‌ಜಂಗ್‌ನು 7ನೇ ಶತಮಾನದ ವಿಶ್ವವಿದ್ಯಾಲಯದ ಸ್ಥಿತಿಗತಿಗಳ ಮೇಲೆ ನಿಖರವಾದ ವಿವರಣೆಯನ್ನು ನೀಡಿದ್ದಾನೆ. ಕ್ರಮಬದ್ಧವಾಗಿ ಹೊಂದಿಸಲಾದ ಗೋಪುರಗಳು, ಕ್ರೀಡಾಂಗಣದ ಗಿಡ ಮರಗಳು, ಕಟ್ಟಡಗಳು ಮತ್ತು ದೇವಾಲಯಗಳು ಆಕಾಶದ ಮಂಜಿನಿಂದ ಮೇಲೆ ಹಾರುತ್ತಿರುವಂತೆ ಕಾಣುತ್ತಿತ್ತು, ಆದ್ದರಿಂದ ಸನ್ಯಾಸಿಗಳು ತಮ್ಮ ಕೋಣೆಗಳಿಂದಲೇ " ವಾಯು ಪ್ರಭಾವ ಮತ್ತು ಮೋಡಗಳ ಆಗಮಿಸುವಿಕೆಗೆ ಸಾಕ್ಷಿಯಾಗುತ್ತಿದ್ದರು" ಎಂದು ಜುವಾಂಗ್‌ಜಂಗ್ ವಿವರಿಸಿದ್ದಾನೆ. ಜುವಾಂಗ್‍ಜಂಗ್ ಹೇಳುತ್ತಾನೆ: "ಸಂಪೂರ್ಣವಾಗಿ ಅರಳಿದ ನೀಲಿ ಕಮಲಗಳ ಚೆಲುವಿನಿಂದಾದ ಆಕಾಶ ನೀಲಿ ಬಣ್ಣದ ಸರೋವರದ ಗಾಳಿಯು ಮಠದ ಸುತ್ತ ಪಸರಿಸಿರುತ್ತಿತ್ತು; ಕೆಂಪು ಬಣ್ಣದ ಮನೋಹರವಾದ ಕನಕ ಪುಷ್ಪವು ಅಲ್ಲಲ್ಲೇ ತೂಗಾಡುತ್ತಿರುತ್ತಿದ್ದವು ಮತ್ತು ಹೊರಗಿನ ಮಾವಿನ ತೋಪು ತನ್ನಲ್ಲಿ ವಾಸಮಾಡುವ ಜೀವಿಗಳಿಗೆ ದಟ್ಟವಾದ ಮತ್ತು ರಕ್ಷಣಾತ್ಮಕವಾದ ನೆರಳನ್ನು ನೀಡುತ್ತಿತ್ತು. ಜುವಾಂಗ್‍ಜಂಗ್ ಹೇಳುತ್ತಾನೆ: "ಇಲ್ಲಿ ವಾಸಿಸುವ ಎಲ್ಲ ಸದ್ಗುಣಿಗಳನ್ನು ಔಪಚಾರಿಕವಾಗಿ ಮತ್ತು ಕಟ್ಟುನಿಟ್ಟಾಗಿ ಗಮನಿಸಲಾಗುತ್ತಿತ್ತು. ಆದ್ದರಿಂದ ಏಳುನೂರು ವರ್ಷಗಳ ಮಠಗಳ ಅಸ್ತಿತ್ವದಲ್ಲಿ ಒಬ್ಬ ವ್ಯಕ್ತಿಯೂ ಶಿಸ್ತಿನ ನಿಯಮಗಳನ್ನು ಉಲ್ಲಂಘಿಸಲಿಲ್ಲ. ರಾಜನು ಗೌರವ ಮತ್ತು ಪೂಜ್ಯಭಾವನೆಯ ಕುರುಹಾಗಿ ಇದನ್ನು ಸುರಿಸುತ್ತಿದ್ದನು ಮತ್ತು ಧರ್ಮದ ಸಂರಕ್ಷಣೆಗಾಗಿ ಹತ್ತು ಪಟ್ಟಣಗಳ ಕಂದಾಯವನ್ನು ಗೊತ್ತುಮಾಡಿದ್ದನು." ನಳಂದ ವಿಶ್ವವಿದ್ಯಾಲಯದ ವಿಹಾರಗಳ ಪಾಳು ಸ್ಥಳದಲ್ಲಿ ಧನುಸ್ಸಿನ ಚಿತ್ರವಿರುವ ನೆಲಹಾಸನ್ನು ಕಾಣುತ್ತೇವೆ; ಧನುಸ್ಸು ಗುಪ್ತರ ರಾಜ ಮುದ್ರೆಯ ಚಿಹ್ನೆಯಾಗಿತ್ತು. === ಗ್ರಂಥಾಲಯಗಳು === ಧರ್ಮ ಗಂಜ್ (ನಿಜದ ಪರ್ವತ) ಅಥವಾ ಧರ್ಮಗಂಜಾ (ನಿಜದ ಖಜಾನೆ)ಎಂದು ಕರೆಯಲಾಗುವ ನಳಂದ ಗ್ರಂಥಾಲಯವು ಆ ಕಾಲದಲ್ಲಿ ವಿಶ್ವದಲ್ಲಿಯೇ ಹೆಚ್ಚು ಚಿರಪರಿಚಿತ ಬೌದ್ಧೀಯ ಜ್ಞಾನದ ಖಜಾನೆಯಾಗಿದ್ದ ಅತಿ ದೊಡ್ಡ ಉಗ್ರಾಣವಾಗಿತ್ತು. ಈ ಸಂಗ್ರಹವು ಸಾವಿರಾರು ನೂರುಗಳಷ್ಟು ಸಂಪುಟಗಳನ್ನು ಹೊಂದಿತ್ತು, ಆದ್ದರಿಂದ ಮುಸ್ಲಿಂ ದಾಳಿಕೋರರು ಹತ್ತಿಸಿದ ಬೆಂಕಿಯಿಂದ ತಿಂಗಳುಗಟ್ಟಲೆ ಉರಿದಿತ್ತು. ಗ್ರಂಥಾಲಯವು ಮೂರು ಮುಖ್ಯ ಕಟ್ಟಡಗಳನ್ನು ಒಳಗೊಂಡಿದೆ, ಒಂಭತ್ತು ಮಹಡಿಗಳಷ್ಟು ಎತ್ತರದ್ದಾಗಿದೆ, ರತ್ನಸಾಗರ (ರತ್ನಗಳ ಸಮುದ್ರ), ರತ್ನೊಡಧಿ (ರತ್ನಗಳ ಸಾಗರ), ಮತ್ತು ರತ್ನರಂಜಕ (ರತ್ನಗಳನ್ನು ಸಂತೋಷಗೊಳಿಸುವುದು). === ಪಠ್ಯಕ್ರಮ === ಧರ್ಮ ಸಹಭಾಗಿತ್ವದ (2005) ವಿಶೇಷ ಗುಣಧರ್ಮ ಹೊಂದಿಲ್ಲದ ಲೇಖನದ ಪ್ರಕಾರ, ಮಂಜುಶ್ರೀಮಿತ್ರನ ಕಾಲದ ನಳಂದ ವಿಶ್ವವಿದ್ಯಾನಿಲಯವು ಒಳಗೊಂಡಿದ್ದ ಪಠ್ಯಕ್ರಮ: ...ವಾಸ್ತವವಾಗಿ ಪ್ರಪಂಚದ ಸಂಪೂರ್ಣ ತಿಳುವಳಿಕೆಯು ಆಗ ಲಭ್ಯವಿತ್ತು. ಬೌದ್ಧ ಮತ್ತು ಹಿಂದು, ಪವಿತ್ರವಾದ ಮತ್ತು ಜಾತ್ಯತೀತ, ವಿದೇಶಿ ಮತ್ತು ಸ್ಥಳೀಯ ಹೀಗೆ ಪ್ರತಿಯೊಂದು ಕಲಿಕಾಕ್ಷೇತ್ರದಿಂದಲೂ ಪಾಠಸರಣಿಗಳನ್ನು ಹೊಂದಿತ್ತು. ವಿದ್ಯಾರ್ಥಿಗಳು ವಿಜ್ಞಾನ, ಖಗೋಳ ವಿಜ್ಞಾನ, ವೈದ್ಯಕೀಯ, ಮತ್ತು ತರ್ಕಶಾಸ್ತ್ರವನ್ನು ಅಭ್ಯಸಿಸಲು, ಆಧ್ಯಾತ್ಮಿಕ ಸಿದ್ಧಾಂತ, ತತ್ವಶಾಸ್ತ್ರ, ಸಾಂಖ್ಯ, ಯೋಗ-ಶಾಸ್ತ್ರ, ವೇದ, ಮತ್ತು ಬೌದ್ಧ ಧರ್ಮದ ಪವಿತ್ರ ಗ್ರಂಥಗಳಲ್ಲಿ ತಮ್ಮನ್ನು ತಾವು ಶ್ರದ್ಧಾಯುಕ್ತವಾಗಿ ತೊಡಗಿಸಿಕೊಳ್ಳುತ್ತಿದ್ದರು. ಹಾಗೆಯೇ ಅವರು ವಿದೇಶಿ ತತ್ವಶಾಸ್ತ್ರವನ್ನು ಸಹ ಅಭ್ಯಸಿಸುತ್ತಿದ್ದರು. ಬರ್ಝಿನ್ (2002) ನಳಂದದಲ್ಲಿ ಕಲಿಸಲಾಗುತ್ತಿದ್ದ "ಫೋರ್ ಸಿಸ್ಟಮ್ಸ್ ಆಫ್ ಬುದ್ಧಿಸ್ಟ್ ಟೆನೆಟ್ಸ್" ಅಥವಾ "ಫೋರ್ ಡಾಕ್ಸೊಗ್ರಫೀಸ್" (ಟಿಬೆಟಿಯನ್: ಗ್ರಬ್-ಮ್ತಾ’ ), ವೈಭಾಶಿಕಾ (ಟಿಬೆಟಿಯನ್: ಬೈ-ಬ್ರಾಗ್ ಸ್ಮ್ರಾ-ಬಾ) ಮತ್ತು ಸೌತ್ರಂತಿಕ (ಟಿಬೆಟಿಯನ್:ಸರ್ವಸ್ತಿವಾದದ --) (ಟಿಬೆಟಿಯನ್: - - - ); ಮತ್ತು ಚಿತ್ತಮಾತ್ರ (ಸಂಸ್ಕೃತ: --) ಮತ್ತು ಮಹಾಯಾನದ ಮಾಧ್ಯಮಕದ (ಟಿಬೆಟಿಯನ್: --) ರೂಪರೇಖೆಗಳನ್ನು ವಿವರಿಸುತ್ತಾರೆ: ನಳಂದಗಳಂತಹ, ಭಾರತೀಯ ಮಹಾಯಾನ ಬೌದ್ಧ ಮಠಗಳಲ್ಲಿ, ಸಂನ್ಯಾಸಿಗಳು ಬೌದ್ಧ ತತ್ವಗಳ ನಾಲ್ಕು ಪದ್ಧತಿಗಳನ್ನು ಅಭ್ಯಸಿಸುತ್ತಿದ್ದರು. ವೈಭಾಶಿಕ ಮತ್ತು ಸಾತ್ರಾಂತಿಕ – ಇವೆರಡು – ಹಿನಾಯಾನದೊಳಗಿನ ಸರ್ವಸ್ತಿವಾದ ಪಂಥದ ಉಪವಿಭಾಗಗಳು. ಇತರ ಎರಡು – ವಿತ್ತಮಂತ್ರ ಮತ್ತು ಮಾಧ್ಯಮಕಗಳು – ಮಹಾಯಾನದ ಒಳಗಿನ ಉಪವಿಭಾಗಗಳು. === ಬೌದ್ಧಮತದ ಮೇಲೆ ಪ್ರಭಾವ === ಟಿಬೆಟ್ ಬೌದ್ಧಮತವನ್ನು ರಚಿಸಿದ ಬೃಹತ್ ಭಾಗವು (ಅದರ ಮಹಾಯಾನ ಮತ್ತು ವಜ್ರಾಯನ ಸಂಪ್ರದಾಯಗಳೆರಡನ್ನೂ) ಕೊನೆಯ ಅವಧಿಯ (9ನೆಯ–12ನೆಯ ಶತಮಾನ) ನಳಂದ ಅಧ್ಯಾಪಕರು ಮತ್ತು ಸಂಪ್ರದಾಯಗಳಿಂದ ಉದ್ಭವಿಸಿವೆ. ವಿದ್ವಾಂಸ ಧರ್ಮಕೀರ್ತಿ (ಸು. 7ನೆಯ ಶತಮಾನ), ಭಾರತೀಯ ಆಧ್ಯಾತ್ಮಿಕ ತರ್ಕದ ಬೌದ್ಧ ಸಂಸ್ಥಾಪಕರಲ್ಲಿ ಒಬ್ಬರು, ಹಾಗು ನಳಂದದಲ್ಲಿ ಬೋಧಿಸಲಾದ, ಬೌದ್ಧ ಅಣುವಾದದ ಪ್ರಾಥಮಿಕ ತಾತ್ವಿಕ ಸಿದ್ಧಾಂತಿಗಳಲ್ಲಿ (ಅಮೂರ್ತವಾದದ ತತ್ವವಿಚಾರಗಳಲ್ಲಿ ಪರಿಣತರು) ಒಬ್ಬರು. ವಿಯಟ್ನಂ, ಚೈನಾ, ಕೊರಿಯಾ ಮತ್ತು ಜಪಾನಿನಲ್ಲಿ ಅನುಸರಿಸಲಾಗುವ ಮಹಾಯಾನದಂತಹ, ಬೌದ್ಧಮತದ ಇತರ ರೂಪಗಳು ಈ ಪುರಾತನ ವಿಶ್ವವಿದ್ಯಾನಿಲಯದಲ್ಲಿ ಏಳಿಗೆ ಹೊಂದಿತು. ಚೈನಾದ ಸಂದರ್ಶಕ ಹ್ವೈ-ಲಿ ಪ್ರಕಾರ, ಅದರ ಮಹಾಯಾನ ಸಿದ್ಧಾಂತದ ಮೇಲಿನ ಪ್ರಾಧಾನ್ಯಕ್ಕಾಗಿ, ನಳಂದವನ್ನು ಕೆಲವು ಥೆರವಾದಿಗಳು ಗೌರವಕ್ಕೆ ಅರ್ಹವಲ್ಲವೆಂದು ಪರಿಗಣಿಸಿದರು. ಅವರು ರಾಜ ಹರ್ಷವರ್ಧನನನ್ನು ಅವನ ಒಡಿಶಾ ಭೇಟಿಯ ಸಮಯದಲ್ಲಿ ನಳಂದವನ್ನು ಬೆಂಬಲಿಸಿದ್ದಕ್ಕಾಗಿ ಛೀಮಾರಿ ಹಾಕಿದ್ದ ವರದಿಯಾಗಿತ್ತು. ಅಲ್ಲಿ ಕಲಿಸುತ್ತಿದ್ದ "ಸ್ಕೈ-ಫ್ಲವರ್" ತತ್ವಶಾಸ್ತ್ರವನ್ನು ಅವರು ಅಣಕಿಸುತ್ತಿದ್ದರು ಮತ್ತು ಅವನು ಕಾಪಾಲಿಕ ದೇವಸ್ಥಾನವನ್ನೂ ಪ್ರೋತ್ಸಾಹಿಸಬಹುದು ಎಂಬುದನ್ನು ಸೂಚಿಸಿದ್ದರು. == ಭಗ್ನಾವಶೇಷಗಳು == ಅನೇಕ ಸಂಖ್ಯೆಯ ಭಗ್ನಾವಶೇಷಗಳು ಅಸ್ತಿತ್ವದಲ್ಲಿವೆ. ಹತ್ತಿರದಲ್ಲಿ ಸೂರ್ಯ ಮಂದಿರ ಎಂಬ ಹಿಂದೂ ದೇವಾಲಯವಿದೆ. ಪ್ರಸಿದ್ಧ ಮತ್ತು ಅಗೆದು ತೆಗೆದ ಭಗ್ನಾವಶೇಷಗಳು ಸುಮಾರು 150,000 ಚದರ ಮೀಟರುಗಳಷ್ಟು ಆವರಿಸಿವೆ. ಆದರೆ ನಳಂದಾದ ವ್ಯಾಪ್ತಿಯ ಬಗ್ಗೆ ಕ್ಸ್ವಾಂಝಾಂಗ್‍ನ ಕಥನವನ್ನು ಪ್ರಸ್ತುತ ಉತ್ಖನನಗಳೊಂದಿಗೆ ಪರಸ್ಪರ ಸಂಬಂಧಿಸಿದರೆ, ಬಹುತೇಕ 90% ನಷ್ಟನ್ನು ಉತ್ಖನನ ಮಾಡಿಲ್ಲ. ನಲಂದಾ ಹೆಚ್ಚುಕಾಲ ಉಳಿಯಲಿಲ್ಲ. ಈಗಿನ ಹತ್ತಿರದ ವಾಸಸ್ಥಳವು ಬರ್‌ಗಾಂವ್ ಎಂದು ಕರೆಯಲ್ಪಡುವ ಗ್ರಾಮ. 1951ರಲ್ಲಿ, ಪಾಲಿ (ಥೇರವಾದಿ) ಬೌದ್ಧ ಅಧ್ಯಯನಕ್ಕಾಗಿ ಆಧುನಿಕ ಕೇಂದ್ರವನ್ನು ಭಿಕ್ಷು ಜಗದೀಶ್ ಕಶ್ಯಪ್, ನವ ನಳಂದ ಮಹಾವಿಹಾರದ ಹತ್ತಿರ ಸ್ಥಾಪಿಸಿದರು. ಈಗ, ಈ ಸಂಸ್ಥೆಯು ಸಂಪೂರ್ಣ ಪ್ರಾಂತದ ಉಪಗ್ರಹ ಚಿತ್ರಣದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ನಡೆಸುತ್ತಿದೆ. ನಳಂದ ಮ್ಯೂಸಿಯಂ (ಸಂಗ್ರಹಾಲಯ) ಅನೇಕ ಸಂಖ್ಯೆಯ ಹಸ್ತಪ್ರತಿಗಳನ್ನು ಹೊಂದಿದೆ, ಮತ್ತು ಅಗೆದುತೆಗೆದ ವಸ್ತುಗಳ ಅನೇಕ ಉದಾಹರಣೆಗಳನ್ನು ತೋರಿಸುತ್ತದೆ. ಭಾರತದ ಮೊದಲ ಬಹುಮಾಧ್ಯಮ (ಗಣಕಯಂತ್ರದ) ಸಂಗ್ರಹಾಲಯವನ್ನು 2009-01-27 ವೇಬ್ಯಾಕ್ ಮೆಷಿನ್ ನಲ್ಲಿ. 26 ಜನವರಿ 2008ರಂದು ತೆರೆಯಲಾಯಿತು, ಇದು ಶೇಖರ್ ಸುಮನ್ ನಿರೂಪಿಸಿದ 3D ಚಲನೆಯ ರೇಖಾಚಿತ್ರ ರಚನಾಕ್ರಮವನ್ನು ಉಪಯೋಗಿಸಿ ನಳಂದ ಇತಿಹಾಸವನ್ನು ರಚಿಸುತ್ತದೆ. ಇದಲ್ಲದೆ ಬಹುಮಾಧ್ಯಮ ಸಂಗ್ರಹಾಲಯದಲ್ಲಿ ಇನ್ನೂ ನಾಲ್ಕು ವಿಭಾಗಗಳಿವೆ: ಭೌಗೋಳಿಕ ನೋಟ, ಐತಿಹಾಸಿಕ ನೋಟ, ನಳಂದ ಹಾಲ್ ಮತ್ತು ನಳಂದದ ಪುನರುಜ್ಜೀವನ. == ಪುನರುಜ್ಜೀವನದ ಯೋಜನೆಗಳು == 9 ಡಿಸೆಂಬರ್ 2006ರಂದು, ನ್ಯೂ ಯಾರ್ಕ್ ಟೈಮ್ಸ್ ಪುರಾತನ ಸ್ಥಳದ ಹತ್ತಿರ ನಳಂದ ವಿಶ್ವವಿದ್ಯಾನಿಲಯವನ್ನು ಪುನರುಜ್ಜೀವನ ಗೊಳಿಸುವ ಕಾರ್ಯಗಳಿಗೆ $1 ಬಿಲಿಯನ್ ವೆಚ್ಚದ ಯೋಜನೆಯ ವಿವರಣೆಯನ್ನು ನೀಡಿತ್ತು. ಸಿಂಗಪೂರ್ ಮುಂದಾಳತ್ವದ ಮತ್ತು ಚೈನಾ, ಭಾರತ, ಜಪಾನ್ ಮತ್ತು ಇತರ ರಾಷ್ಟ್ರಗಳನ್ನು ಒಳಗೊಂಡ ಒಂದು ಒಕ್ಕೂಟವು ಹೊಸ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲು $500 ಮಿಲಿಯನ್ ಮತ್ತು ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಮತ್ತೊಂದು $500 ಮಿಲಿಯನ್ ಸಂಗ್ರಹಿಸುವ ಪ್ರಯತ್ನ ಮಾಡುತ್ತದೆ. 28 ಮೇ 2007ರಂದು, ಮೆರಿನ್ಯೂಸ್, ಪುನರೂರ್ಜಿತವಾದ ವಿಶ್ವವಿದ್ಯಾನಿಲಯದ ದಾಖಲಾತಿಯು ಇದರ ಮೊದಲ ವರ್ಷದಲ್ಲಿ 1,137 ಇರುತ್ತದೆ ಮತ್ತು ಐದನೆಯ ವರ್ಷದ ವೇಳೆಗೆ ಇದು 4,530ಕ್ಕೆ ಏರುತ್ತದೆ ಎಂದು ವರದಿ ಮಾಡಿತ್ತು. 'ಎರಡನೆಯ ಹಂತದಲ್ಲಿ', ದಾಖಲಾತಿಯು 5,812ಕ್ಕೆ ತಲುಪುತ್ತದೆ. 12 ಜೂನ್ 2007ರಂದು, ನ್ಯೂಸ್ ಪೋಸ್ಟ್ ಇಂಡಿಯಾ, "ಬಿಹಾರ್‌ನಲ್ಲಿ ನಳಂದದಲ್ಲಿ ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಜಪಾನ್ ಬಂಡವಾಳ ಹಾಕುತ್ತದೆ" ಎಂಬುದನ್ನು ಜಪಾನ್ ರಾಯಬಾರಿ ನೊರೊ ಮೊಟೊಯಸು ಹೇಳಿದ್ದರು ಎಂದು ವರದಿ ಮಾಡಿತ್ತು. "ಪ್ರಸ್ತಾಪಿಸಿದ ವಿಶ್ವವಿದ್ಯಾನಿಲಯವು ನಳಂದದಲ್ಲಿನ ಪುರಾತನ ಕಲಿಕಾ ಸ್ಥಾನದಂತೆ, ಸಂಪೂರ್ಣವಾಗಿ ವಾಸಸ್ಥಳವಾಗಿರುತ್ತದೆ ಎಂಬುದನ್ನು ವರದಿ ಒಳಗೊಂಡಿತ್ತು. ಯೋಜನೆಯ ಮೊದಲನೇ ಹಂತದಲ್ಲಿ, ಸುಮಾರು 46 ವಿದೇಶಿ ಬೋಧಕ ಸದಸ್ಯರನ್ನು ಮತ್ತು ಸುಮಾರು 400 ಭಾರತೀಯ ಅಧ್ಯಾಪಕರನ್ನು ಹೊಂದಿದ ಏಳು ಶಾಲೆಗಳು ಅಭಿವೃದ್ಧಿ ಹೊಂದಲಿವೆ." ... "ವಿಶ್ವವಿದ್ಯಾನಿಲಯವು ಇತರ ವಿಷಯಗಳೊಂದಿಗೆ ವಿಜ್ಞಾನ, ತತ್ವಶಾಸ್ತ್ರ ಮತ್ತು ಆಧ್ಯಾತ್ಮವಾದ ಪಾಠಸರಣಿಗಳನ್ನು ಬೋಧಿಸಲಿದೆ. ಪ್ರಸಿದ್ಧ ಅಂತರರಾಷ್ಟ್ರೀಯ ಪಂಡಿತರು ಇದರ ಕುಲಾಧಿಪತಿಗಳು." 15 ಆಗಸ್ಟ್ 2007ರಂದು, ದಿ ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿಯ ಪ್ರಕಾರ, ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್, ಪುನರೂರ್ಜಿತಗೊಳಿಸಿದ ನಳಂದ ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯವನ್ನು ಸೆಪ್ಟೆಂಬರ್ 2007ರಲ್ಲಿ ಸೇರಿಕೊಳ್ಳುವ ಪ್ರಸ್ತಾಪನೆಯನ್ನು ಸಮ್ಮತಿಸಿದರು." ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಪ್ರಕಾರ, ವಿಶ್ವವಿದ್ಯಾನಿಲಯದ ಸ್ಥಾಪನೆಯು 2009ನೆಯ ಇಸವಿಯಲ್ಲಿ ಆಗಬಹುದು ಮತ್ತು ಮೊದಲ ಬೋಧನಾ ತರಗತಿಗಳು ಅಂದಿನಿಂದ ಕೆಲವೇ ವರ್ಷಗಳಲ್ಲಿ ಪ್ರಾರಂಭವಾಗಬಹುದು ಎಂದು 5 ಮೇ 2008ರಂದು ಎನ್‌ಡಿಟಿವಿ ವರದಿ ಮಾಡಿತ್ತು. ನಳಂದ ಮಾರ್ಗದರ್ಶಿ ಗುಂಪಿನ ಮುಖಂಡ ಸೇನ್, ಇದರ ಬಗೆಗಿನ ಅಂತಿಮ ವರದಿಯನ್ನು ಡಿಸೆಂಬರ್ 2008ರಲ್ಲಿ ಈಸ್ಟ್ ಏಷಿಯಾ ಸಮ್ಮಿಟ್‍ಗೆ ಸಲ್ಲಿಸುವುದಾಗಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು. ಆತಿಥೇಯ ರಾಷ್ಟ್ರ ಭಾರತ ಮತ್ತು ಪೂರ್ವ ಏಷಿಯಾ ದೇಶಗಳ ಒಕ್ಕೂಟವು ಮುಂದಿನ ನಳಂದ ಯೋಜನೆಗಳನ್ನು ಚರ್ಚಿಸಲು ನ್ಯೂ ಯಾರ್ಕ್‌ನಲ್ಲಿ ಭೇಟಿಯಾಗಲಿದೆ ಎಂದು 11 ಮೇ 2008ರಂದು, ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಈ ಕೆಳಗೆ ಸೂಚಿಸಿದ ಶಾಲೆಗಳೊಂದಿಗೆ, ನಳಂದ ಬೃಹತ್ತಾದ ಸ್ನಾತಕೋತ್ತರ ಪದವಿ ಸಂಶೋಧನಾ ವಿಶ್ವವಿದ್ಯಾನಿಲಯವಾಗುತ್ತದೆ ಎಂದು ತೀರ್ಮಾನಿಸಲಾಯಿತು: ಸ್ಕೂಲ್ ಆಫ್ ಬುದ್ಧಿಸ್ಟ್ ಸ್ಟಡೀಸ್, ತತ್ವಶಾಸ್ತ್ರ, ಮತ್ತು ತುಲನಾತ್ಮಕ ಧರ್ಮ; ಸ್ಕೂಲ್ ಆಫ್ ಹಿಸ್ಟೋರಿಕಲ್ ಸ್ಟಡೀಸ್; ಸ್ಕೂಲ್ ಆಫ್ ಇಂಟೆರ್ನ್ಯಾಷನಲ್ ರಿಲೇಷನ್ಸ್ ಆಂಡ್ ಪೀಸ್; ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೆಜ್‌ಮೆಂಟ್ ಆಂಡ್ ಡೆವಲಫ್‌ಮೆಂಟ್; ಸ್ಕೂಲ್ ಆಫ್ ಲ್ಯಾಂಗ್ವೇಜೆಸ್ ಆಂಡ್ ಲಿಟೆರೇಚರ್; ಮತ್ತು, ಸ್ಕೂಲ್ ಆಫ್ ಎಕೊಲಜಿ ಆಂಡ್ ಎನ್ವಿರಾನ್‌ಮೆಂಟಲ್ ಸ್ಟಡೀಸ್. ಶಾಲೆಯ ಧ್ಯೇಯವು "ಏಷಿಯ ಸಮುದಾಯದ ಪರಿಕಲ್ಪನೆಯನ್ನು ಸುಧಾರಿಸುವ ಗುರಿ...ಮತ್ತು ಹಳೆ ಸಂಬಂಧಗಳ ಮರುಶೋಧನೆ." ಆವರಣವನ್ನು ಭಾರತದ ಜಾಗತಿಕ ಮಹತ್ವಾಕಾಂಕ್ಷೆಗಳ ಸಂಕೇತವಾಗಿ ಮರುನಿರ್ಮಿಸಲು ನವ ದೆಹಲಿ ಸಂಸತ್ತು ವಿಧೇಯಕವನ್ನು ಸಮ್ಮತಿಸಿತು ಎಂದು 13 ಸೆಪ್ಟೆಂಬರ್ 2010ರಂದು, ಜಕಾರ್ತಾ ಗ್ಲೋಬ್ ವರದಿ ಮಾಡಿತ್ತು. == ಚಿತ್ರ ಸಂಪುಟ == == ಉಲ್ಲೇಖಗಳು == == ಹೆಚ್ಚಿನ ಓದಿಗಾಗಿ == , . (2008-03-01). ": (15 25)". . 25 (5). == ಬಾಹ್ಯ ಕೊಂಡಿಗಳು == ವರ್ಲ್ಡ್ ಹೆರಿಟೇಜ್ ವಿಕಿಟ್ರಾವೆಲ್ ನಲ್ಲಿ ನಳಂದ ಪ್ರವಾಸ ಕೈಪಿಡಿ (ಆಂಗ್ಲ) ಪುರಾತನ ವೈಭವದ ಕಟ್ಟಡ ನಳಂದದ ಮೂಲ ಹಸ್ತಪ್ರತಿಗಳು ನವ ನಳಂದ ಮಹಾವಿಹಾರ, ಬಿಹಾರ ರಾಜ್ಯ, ಭಾರತ 2005-05-26 ವೇಬ್ಯಾಕ್ ಮೆಷಿನ್ ನಲ್ಲಿ. ನಳಂದಕ್ಕೆ ಸಂಪರ್ಕ ಹೊಂದಿದಂತಹ ಹಳ್ಳಿಗಳು 2012-10-06 ವೇಬ್ಯಾಕ್ ಮೆಷಿನ್ ನಲ್ಲಿ. ನಳಂದ ಜಿಲ್ಲೆಯ ಅಧಿಕೃತ ವೆಬ್‌ಸೈಟ್