ಭಾರತದೆಲ್ಲೆಡೆ ಕಂಡುಬರುವ ನೆಲನೆಲ್ಲಿಯನ್ನು ಕಿರುನೆಲ್ಲಿಯೆಂದೂ ಕರೆಯಲಾಗುತ್ತದೆ. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಳದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಇದು ಬೆಳೆದು ೫ರಿಂದ ೮ ತಿಂಗಳು ಅಯಸ್ಸು ಪಡೆದು ಜನಸಾಮನ್ಯರ ಕಾಯಿಲೆಗಳಿಗೆ ಔಷಧಿಯಾಗಿ ಉಪಯುಕ್ತವಾಗಿದೆ. == ಸಸ್ಯವರ್ಣನೆ == ನೆಲನೆಲ್ಲಿಯ ಎಲೆಗಳು ಚಿಕ್ಕದಾಗಿದ್ದು ನೆಲ್ಲಿಗಿಡದ ಎಲೆಗಳನ್ನೇ ಹೋಲುತ್ತವಾದ್ದರಿಂದ ಮತ್ತು ಹಣ್ಣುಗಳು ಪುಟ್ಟದಾಗಿದ್ದು ಚಿಕ್ಕಚಿಕ್ಕ ಎಲೆಗಳ ಹಿಂಬದಿಯಲ್ಲಿ ಜೋಡಣೆಗೊಂಡಿದ್ದು ನೆಲ್ಲಿಕಾಯಿಯಂತೆ ಕಾಣುತ್ತವಾದ್ದರಿಂದ ಆ ಹೆಸರು ಬಂದಿದೆ. ನೆಲನೆಲ್ಲಿಯು ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದೆ. ಸಣ್ಣ ಮೂಲಿಕೆ ಜಾತಿಗೆ ಸೇರಿದ, ಒಂದು ಅಡಿ ಎತ್ತರ ಬೆಳೆಯುವ ಪುಟ್ಟ ಏಕವಾರ್ಷಿಕ ಸಸ್ಯ. ಕಾಂಡವು ಮೃದುವಾಗಿದ್ದು, ಕೆಂಪು ಮಿಶ್ರಿತ ಹಸಿರು ಬಣ್ಣದಲ್ಲಿದೆ.ಕಾಂಡದ ಮೇಲೆ ಅರ್ಧ ಅಂಗುಲ ಅಂತರದಲ್ಲಿ ಹಸಿರು ಬಣ್ಣದ ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿರುತ್ತವೆ. ಎಲೆ ಕಂಕುಳಲ್ಲಿ ಹಸಿರು ಮಿಶ್ರಿತ ಹಳದಿ ಬಣ್ಣದ ಹೂಗಳು ಕಾಣಿಸಿಕೊಳ್ಳುತ್ತವೆ. ಕಾಯಿ ಹಸಿರು ಬಣ್ಣದ್ದಾಗಿದ್ದು ಸಾಸಿವೆ ಗಾತ್ರದಷ್ಟು ಇರುತ್ತದೆ. == ಮಣ್ಣು == ಈ ಸಸ್ಯವು ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದಾದರೂ, ನೀರು ಬಸಿದು ಹೋಗುವ ಗೋಡು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಲು ಸಾಧ್ಯ. == ಹವಾಗುಣ == ಈ ಸಸ್ಯವು ಉಷ್ಣವಲಯ ಮತ್ತು ಅತಿ ಹೆಚ್ಚಿನ ಮಳೆಯಾಗುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಅತಿ ಒಣಪ್ರದೇಶ ಮತ್ತು ನೀರು ನಿಂತ ಪ್ರದೇಶಗಳು ಈ ಸಸ್ಯಕ್ಕೆ ಲಾಭದಾಯಕವಲ್ಲ. == ತಳಿಗಳು == ನವಕ್ರೀತ್ == ಬೇಸಾಯ ಕ್ರಮಗಳು == ಈ ಸಸ್ಯವನ್ನು ಬೀಜದಿಂದ ವೃದ್ಧಿ ಮಾಡಬಹುದಾಗಿದೆ. ಸಸಿಗಳನ್ನು ಮೊದಲು ಸಸಿನಡಿಗಳಲ್ಲಿ ಬೆಳೆಸಬೇಕು. ಬೀಜವು ಅತಿ ಸಣ್ಣವಾದ್ದರಿಂದ ಬೀಜದೊಂದಿಗೆ ಮರಳು ಬೆರೆಸಿ ಸಸಿನಡಿಯಲ್ಲಿ ಸಮನಾಗಿ ಹರಡಿ ಬಿತ್ತಬಹುದು. ಏಪ್ರಿಲ್ ಕೊನೆಯ ವಾರದವರಗೆ ಬೀಜ ಬಿತ್ತಲು ಸೂಕ್ತ ಸಮಯ. ಸಾಮಾನ್ಯವಾಗಿ ೩೫ರಿಂದ ೪೦ ದಿನಗಳ ಪ್ರಾಯದ ೧೦-೧೫ ಸೆಂ.ಮೀ. ಎತ್ತರದ ಸಸಿಗಳನ್ನು ೧೫×೧೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು . ನಾಟಿ ಮಾಡಿದ ತಕ್ಷಣ ನೀರು ಹಾಯಿಸುವುದರಿಂದ ಸಸಿಗಳು ಬಾಡುವುದು ಅಥವಾ ಬಾಗುವುದು ಅತಿ ಕಡಿಮೆ. == ನೀರಾವರಿ == ಸಾಮಾನ್ಯವಾಗಿ ಮಳೆ ಚೆನ್ನಾಗಿ ಬರುವ ಪ್ರದೇಶದಲ್ಲಿ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೂ ಹವಾಗುಣಕ್ಕೆ ತಕ್ಕಂತೆ ನೀರು ನೀಡಿದಲ್ಲಿ ಉತ್ತಮ ಇಳುವರಿ ಪಡೆಯಲ್ಲು ಸಾಧ್ಯ. == ಕಳೆ ಹತೋಟಿ == ಸಸ್ಯವು ಸಣ್ಣಗಿದ್ದು ಹಾಗೂ ಮೃದುವಾದ್ದರಿಂದ ಕಳೆ ಬೆಳೆಯುವಿಕೆ ಸಹಜ. ಕಳೆಯನ್ನು ೧೫ ದಿವಸಕ್ಕೊಮ್ಮೆ ತೆಗೆದರೆ ಒಳ್ಳೆಯದು. == ಕೀಟ ಮತ್ತು ರೋಗಗಳು == ಎಲೆ ತಿನ್ನುವ ಹುಳು ಮತ್ತು ಕಾಂಡ ಕೀಟಗಳು ಕಂಡುಬರುತ್ತವೆ ಹಾಗೂ ಬೂದು ರೋಗವು ಸಹ ಈ ಸಸ್ಯಕ್ಕೆ ಹಾನಿಯುಂಟುಮಾಡುತ್ತದೆ. ಬೇವಿನ ಹಿಂಡಿಯ ಕಷಾಯವನ್ನು ಸಿಂಪಡಿಸುವುದರಿಂದ ಕೀಟದ ಹಾವಳಿಯನ್ನು ತಡೆಯಬಹುದು. == ಕೊಯ್ಲು ಮತ್ತು ಇಳುವರಿ == ಬೆಳೆಯು ನಾಟಿ ಮಾಡಿದ ನಂತರ ಮೂರು ತಿಂಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಸಸಿಯು ಹಸಿರಿರುವಾಗಲೆ ಕಟಾವು ಮಾಡಬಹುದು. ತಡವಾಗಿ ಕೊಯ್ಲು ಮಾಡಿದಲ್ಲಿ ಗುಣಮಟ್ಟ ಹೆಚ್ಚುತ್ತಾದರೂ ಕಳೆ ಎಲೆ ಉದುರುವುದರಿಂದ ಇಳುವರಿ ಕಡಿಮೆಯಾಗುವ ಸಾದ್ಯತೆ ಹೆಚ್ಚು. ಒಂದು ಚ.ಮೀಟರ್ ಪ್ರದೇಶದಿಂದ ೨೦೦ ಗ್ರಾಂ ಒಣ ಸಸ್ಯದ ಇಳುವರಿಯನ್ನು ಪಡೆಯಬಹುದು. == ರಾಸಾಯನಿಕ ಘಟಕಗಳು == ಫೈಲ್ಲಾಂಥಿನ್ ಮತ್ತು ಹೈಪೋಫೈಲ್ಲಾಂಥಿನ್ ಎಂಬ ಸಸ್ಯಕ್ಷಾರಗಳಿವೆ. == ಔಷಧೀಯ ಗುಣಗಳು == ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ಸಿದ್ಧ ವೈದ್ಯ ಪದ್ಧತಿಯಲ್ಲಿ ನೆಲನೆಲ್ಲಿಯನ್ನು ದಶಕಗಳ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತದೆ. ಯುನಾನಿ ವೈದ್ಯಪದ್ಧತಿಯಲ್ಲಿ ಗಾಯ, ಕಜ್ಜಿ ಮತ್ತು ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಬಳಸಲಾಗುತ್ತದೆ. ಭೇದಿಯಾಗುತ್ತಿದ್ದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೊಂದು ಬಾರಿ ಕುಡಿಯಬೇಕು ಇಲ್ಲವೇ ಹಾಗೆಯೇ ತಿನ್ನಬಹುದು. ಗಾಯಗಳಾಗಿದ್ದಲ್ಲಿ ಈ ಗಿಡವನ್ನು ಬೇರು ಸಹಿತ ಜಜ್ಜಿ ಲೇಪಿಸಬೇಕು. ಚರ್ಮರೋಗಗಳಲ್ಲಿ ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಲೇಪಿಸುವುದರಿಂದ ನವೆ ಕಡಿಮೆಯಾಗುತ್ತದೆ. ನೆಲನೆಲ್ಲಿಯು ಕುಷ್ಠ, ಆಸ್ತಮಾ, ಬಿಕ್ಕಳಿಕೆ ನಿವಾರಣೆಯಲ್ಲಿಯೂ ಉಪಯುಕ್ತ ಔಷಧಿಯಾಗಿದೆ. ಹೊಟ್ಟೆನೋವು: ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದಲ್ಲಿ ನೆಲನೆಲ್ಲಿ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ತುಪ್ಪದಲ್ಲಿ ಹುರಿದ ಇಂಗಿನ ಪುಡಿಯನ್ನು ಒಂದು ಚಿಟಿಕೆ ಬೆರೆಸಿ ಕುಡಿಯಬೇಕು. ಅತಿರಕ್ತಸ್ರಾವ: ಮಾಸಿಕಸ್ರಾವದ ಸಮಯದಲ್ಲಿ ಅತಿರಕ್ತಸ್ರಾವವಾಗುತ್ತಿದ್ದಲ್ಲಿ ನೆಲನೆಲ್ಲಿಯ ಚಟ್ನಿಯನ್ನು ಆಹಾರದಲ್ಲಿ ಸೇವಿಸುವುದಲ್ಲದೇ ನೆಲನೆಲ್ಲಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು. ರೋಗನಿರೋಧಕ ಶಕ್ತಿ: ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕಾಲರ, ಚಿಕುನ್‍ಗುನ್ಯಾ, ಡೆಂಗೆ ಮುಂತಾದ ಕಾಯಿಲೆಗಳು ಹರಡಿದ್ದ ಸಮಯದಲ್ಲಿ ಆರೋಗ್ಯವಂತರು ನೆಲನೆಲ್ಲಿಯ ಕಷಾಯ ಇಲ್ಲವೇ ರಸ ಕುಡಿಯುವುದರಿಂದ ಕಾಯಿಲೆ ಬಾರದಂತೆ ತಡೆಯಬಹುದು. == ಅಡುಗೆ == ನೆಲನೆಲ್ಲಿ ತಂಬುಳಿ ನೆಲನೆಲ್ಲಿ ಪಲ್ಯ ಚಟ್ನಿ == ಇತರ ಭಾಷೆಗಳಲ್ಲಿ == ಸಂಸ್ಕೃತ-ಭೂಮ್ಯಾಮಲಕಿ, ಶಿವಾ, ಬಹುಪತ್ರಾ, ಬಹುಫಲಾ, ಭೂಯಿಆಂವಲಾ, ತಾಮಲಕಿ ಹಿಂದಿ-ಜರಾಮ್ಲ, ಭೂಯಿಆಮಲಾ ಮರಾಠಿ-ಭೂಯಿ ಆಂಬಲಿ, ಭೂಯಿ ಆಂವ್ಲಾ ತಮಿಳು-ಕಿಝಕಾಯ್ ನೆಲ್ಲಿ ತೆಲುಗು-ನೆಲ ಉಸಸೀರಿಕೆ ಮಲಯಾಳಂ-ಕಿಳಾನೆಲ್ಲಿ ವೈಜ್ಞಾನಿಕ ಹೆಸರು- (.&) == ಛಾಯಾಂಕಣ == == ಉಲ್ಲೇಖ ==