ಪಂಡರೀಬಾಯಿ (೧೯೩೦ - ೨೯ ಜನವರಿ ೨೦೦೩) ಅವರು ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿಯಾಗಿದ್ದರು. ಇವರು ಹೆಚ್ಚಾಗಿ ೧೯೫೦, ೧೯೬೦ ಮತ್ತು ೧೯೭೦ ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ಇವರನ್ನು ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಎಂದು ಪರಿಗಣಿಸಲಾಗಿದೆ. ರಾಜಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್ ಮುಂತಾದ ದಿಗ್ಗಜರಿಗೆ ಇವರು ನಾಯಕಿಯಾಗಿ ಮತ್ತು ತಾಯಿಯಾಗಿಯೂ ನಟಿಸಿದ್ದಾರೆ. ರಾಜಕುಮಾರ್ ಅವರ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪ ಮತ್ತು ಶಿವಾಜಿಯವರ ಚೊಚ್ಚಲ ಚಿತ್ರ ಪರಾಶಕ್ತಿಯಲ್ಲಿ ಅವರು ನಾಯಕಿಯಾಗಿದ್ದರು. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಸುಮಾರು ೧,೦೦೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬಾಯಿಯವರಿಗೆ ತಮಿಳುನಾಡು ಸರ್ಕಾರ ಕಲೈಮಾಮಣಿ ಎಂಬ ಗೌರವವನ್ನು ನೀಡಿದೆ. ಇವರು ಸುಮಾರು ೬೦ ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. == ವೃತ್ತಿ ಜೀವನ == ೧೯೪೩ ರಲ್ಲಿ ವಾಣಿ ಎಂಬ ಕನ್ನಡ ಚಿತ್ರದ ಮೂಲಕ ಇವರು ಚಿತ್ರರಂಗವನ್ನು ಪ್ರವೇಶಿಸಿದರು. ಇವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ೧೯೫೩ ರಲ್ಲಿ ತೆರೆಕಂಡ ಹೊನ್ನಪ್ಪ ಭಾಗವತರ್ ನಾಯಕತ್ವದ ಗುಣ ಸಾಗರಿ ಎಂಬ ಚಿತ್ರ. ಆದರೆ ಅವರ ವೃತ್ತಿ ಜೀವನಕ್ಕೆ ತಿರುವು ಕೊಟ್ಟ ಚಿತ್ರ ೧೯೫೪ ರಲ್ಲಿ ತೆರೆಕಂಡ ಎಚ್.ಎಲ್.ಎನ್.ಸಿಂಹ ನಿರ್ದೇಶನದ ಬೇಡರ ಕಣ್ಣಪ್ಪ. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರ ಮೊದಲ ಚಿತ್ರವಾದ ಬೇಡರ ಕಣ್ಣಪ್ಪ ಚಿತ್ರದಲ್ಲಿ ಪಂಡರೀಬಾಯಿಯವರು ರಾಜ್ ಕುಮಾರ್‌ಗೆ ನಾಯಕಿಯಾಗಿ ನಟಿಸಿದರು. ಇದಾದ ನಂತರ ಪಂಡರೀಬಾಯಿ ಹಲವಾರು ಚಿತ್ರಗಳಲ್ಲಿ ರಾಜ್‌ರೊಂದಿಗೆ ನಾಯಕಿಯಾಗಿ ನಟಿಸಿದರು.ಶ್ರೀಕೃಷ್ಣ ಚೈತನ್ಯ ಸಭಾ ಎಂಬ ರಂಗಭೂಮಿ ಬಳಗವನ್ನು ಕಟ್ಟಿದ ಪಂಡರೀಬಾಯಿಯವರು ಊರೂರು ಅಲೆದು ನಾಟಕಗಳನ್ನೂ ಮಾಡಿದ್ದರು. ರಾಯರ ಸೊಸೆ ಅನುರಾಧಾ ಮುಂತಾದ ಕನ್ನಡ ಸಿನಿಮಾಗಳನ್ನು ಪಾಂಡುರಂಗ ಪ್ರೊಡಕ್ಷನ್ಸ್ ಎಂಬ ಬ್ಯಾನರಿನ ಅಡಿಯಲ್ಲಿ ಇವರೇ ಸ್ವತಃ ನಿರ್ಮಿಸಿದ್ದರು ಕೂಡಾ. ನಂತರ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ ಪಂಡರೀಬಾಯಿಯವರು, ತಮಿಳಿನ ತಮ್ಮ ಸಮಕಾಲೀನ ನಟರೊಂದಿಗೆ ನಟಿಸಿದರು. ತಮಿಳಿನ ಮೇರು ನಟ ಶಿವಾಜಿ ಗಣೇಶನ್ರವರ ಮೊದಲ ಚಿತ್ರದಲ್ಲೂ ಪಂಡರೀಬಾಯಿಯವರೇ ನಾಯಕಿಯಾಗಿದ್ದರು. ತಮ್ಮ ೫೦ ನೇ ವಯಸ್ಸಿನಲ್ಲಿ ಪಿ.ಹೆಚ್.ರಾಮ ರಾವ್ ಎಂಬವರನ್ನು ವಿವಾಹವಾಗಿದ್ದರು. ಕನ್ನಡ, ತಮಿಳು, ತುಳು, ಕೊಂಕಣಿ, ತೆಲುಗು ಹಾಗೂ ಹಿಂದಿ ಭಾಷೆಗಳೂ ಸೇರಿದಂತೆ ಸುಮಾರು ೫೦೦ ಚಿತ್ರಗಳಲ್ಲಿ ಇವರು ಅಭಿನಯಿಸಿದ್ದರು. ಹಿಂದಿಯಲ್ಲಿ ವೈಜಯಂತಿ ಮಾಲಾ ಬಾಲಿಯವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಬಾಹರ್ ಎಂಬ ಚಿತ್ರದಲ್ಲಿ ಪಂಡರೀಬಾಯಿಯವರು ನಟಿಸಿದ್ದರು. ಚಿತ್ರರಂಗದಲ್ಲಿ ತಾಯಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು ಮನೆತನ ಎಂಬ ಕನ್ನಡ ದೈನಂದಿನ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. == ನಿಧನ == ಪಂಡರೀಬಾಯಿಯವರು ೧೯೯೪ರಲ್ಲಿ ರಸ್ತೆ ಅಪಘಾತವೊಂದರಲ್ಲಿ ತಮ್ಮ ಎಡಗೈಯನ್ನು ಕಳೆದುಕೊಂಡಿದ್ದರು. ಪಾಂಡುರಂಗನ ಭಕ್ತೆಯಾಗಿದ್ದ ಪಂಡರೀಬಾಯಿಯವರು ಚೆನ್ನೈನಲ್ಲಿ ಪಾಂಡುರಂಗನ ದೇಗುಲವನ್ನು ಕಟ್ಟಿಸಿದ್ದರು. ತಮ್ಮ ಕೊನೆಗಾಲದಲ್ಲಿ ಅನಾರೋಗ್ಯದಿಂದ ಬಳಲಿದ ಪಂಡರೀಬಾಯಿಯವರು ತಮ್ಮ ೭೩ ನೇ ವಯಸ್ಸಿನಲ್ಲಿ (ಜನವರಿ ೨೯, ೨೦೦೩) ಚೆನ್ನೈನಲ್ಲಿ ನಿಧನರಾದರು. == ಪಂಡರೀಬಾಯಿ ಅಭಿನಯದ ಪ್ರಮುಖ ಕನ್ನಡ ಚಿತ್ರಗಳು == == ಪ್ರಶಸ್ತಿಗಳು == ಪೌರಾಣಿಕ ನಟಿಯನ್ನು ಗೌರವಿಸಲು ಕರ್ನಾಟಕ ರಾಜ್ಯದ ೧೦ನೇ ತರಗತಿಯ ಕನ್ನಡ ಭಾಷೆಯ ಪಠ್ಯಪುಸ್ತಕದಲ್ಲಿ "ಗುಣಸಾಗರಿ ಪಂಡರಿ ಬಾಯಿ" ಎಂಬ ಪಾಠವನ್ನು ಸೇರಿಸಲಾಗಿದೆ. ೨೦೦೧ - ಜೀವಮಾನ ಸಾಧನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ. ೧೯೬೮-೬೯ - "ನಮ್ಮ ಮಕ್ಕಳು", "ಬೆಳ್ಳಿ ಮೋಡ" ಚಿತ್ರಗಳ ಅಭಿನಯಕ್ಕಾಗಿ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ. ೧೯೯೪-೯೫ - ಸಿನಿಮಾ ರಂಗದ ಶ್ರೇಷ್ಠ ಸಾಧನೆಗಾಗಿ ಪ್ರತಿಷ್ಠಿತ ಡಾ.ರಾಜ್ ಕುಮಾರ್ ಪ್ರಶಸ್ತಿ. ೧೯೬೮-೬೯ - ಅತ್ಯುತ್ತಮ ಪೋಷಕ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ನಮ್ಮ ಮಕ್ಕಳು ೧೯೬೫ ರಲ್ಲಿ ಸತ್ಯ ಹರಿಶ್ಚಂದ್ರ ಚಿತ್ರದ ಚಂದ್ರಮತಿ ಪಾತ್ರದ ನಟನೆಗಾಗಿ ರಾಷ್ಟ್ರೀಯ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಯವರಿಂದ ಪಡೆದರು. ೧೯೬೫- ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ == ಬಾಹ್ಯ ಕೊಂಡಿ == ಐ‌ಎಂ‌ಡಿಬಿಯಲ್ಲಿ ಪಂಡರೀಬಾಯಿ ಪಂಡರಿ ಬಾಯಿಯ ಬಗ್ಗೆ ಟಿಟ್‌ಬಿಟ್‌ಗಳ ಪಾಟ್‌ಪೌರಿ == ಉಲ್ಲೇಖಗಳು ==