ಬದರೀನಾಥ್‌‌ ಎಂಬುದು ಭಾರತದ ಉತ್ತರಾಖಂಡ ರಾಜ್ಯದ ಛಾಮೊಲಿ ಜಿಲ್ಲೆಯ ಒಂದು ನಗರ ಪಂಚಾಯತ್‌ ಪ್ರದೇಶ ಹಾಗೂ ಹಿಂದೂಗಳ ಪವಿತ್ರ ಪಟ್ಟಣವಾಗಿದೆ. ಭಾರತದ ನಾಲ್ಕು/ಛಾರ್‌ ಧಾಮ ತೀರ್ಥಯಾತ್ರೆಯ ನಾಲ್ಕು ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯವುಳ್ಳ ಕ್ಷೇತ್ರವಾಗಿದೆ. == ಭೂಗೋಳಶಾಸ್ತ್ರ == ಬದರೀನಾಥ್‌‌ ಭೂಗೋಳೀಯವಾಗಿ 30.73° 79.48°﻿ / 30.73; 79.48 ಸ್ಥಳದಲ್ಲಿದೆ. ಇದು ಸರಾಸರಿ 3,415 ಮೀಟರ್‌ಗಳಷ್ಟು (11,204 ಅಡಿಗಳು) ಎತ್ತರದಲ್ಲಿದೆ. ಅಲಕ್‌ನಂದಾ ನದಿ ದಡದಲ್ಲಿರುವ ಗರ್ಹ್‌ವಾಲ್‌ ಪರ್ವತ ಪ್ರದೇಶದಲ್ಲಿದೆ. ನರ ಮತ್ತು ನಾರಾಯಣ ಪರ್ವತ ಶ್ರೇಣಿಗಳ ಮಧ್ಯದಲ್ಲಿ ಹಾಗೂ ನೀಲಕಂಠ ಶಿಖರದ (6,560m) ಹಿಂಭಾಗದಲ್ಲಿದೆ. ಬದರೀನಾಥ್‌‌ ಋಷಿಕೇಶ/ಹೃಷಿಕೇಶ/ರಿಷಿಕೇಶದ ಉತ್ತರ ದಿಕ್ಕಿನಲ್ಲಿ 301 ದೂರದಲ್ಲಿದೆ. (ಕೇದಾರನಾಥದ ಬಳಿಯ) ಗೌರಿಕುಂಡದಿಂದ ರಸ್ತೆ ಮಾರ್ಗವಾಗಿ ಬದರೀನಾಥ್‌ 233 ದೂರದಲ್ಲಿದೆ == ಮಹತ್ವ == ಒಂಬತ್ತನೆಯ ಶತಮಾನದಲ್ಲಿ ಬದರೀನಾಥ್‌‌ ಕ್ಷೇತ್ರವನ್ನು ಆದಿ ಶಂಕರರು ಪ್ರಮುಖ ತೀರ್ಥಕ್ಷೇತ್ರವಾಗಿ ಸಂಸ್ಥಾಪಿಸಿದರು. ಇತ್ತೀಚಿನ ವರ್ಷಗಳಲ್ಲಿ ಇದರ ಜನಪ್ರಿಯತೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿದ್ದು, 1961ರಲ್ಲಿ 90,676ರಷ್ಟಿದ್ದ ತೀರ್ಥಯಾತ್ರಿಗಳ ಸಂಖ್ಯೆ 2006ರ ಋತುವಿನಲ್ಲಿ, ಅಂದಾಜು 600,000ಕ್ಕೆ ಮುಟ್ಟಿದೆ. ಬದರೀನಾಥ್‌‌ನಲ್ಲಿರುವ ದೇವಾಲಯವು ವೈಷ್ಣವರಿಗೂ ಕೂಡ ಪವಿತ್ರ ತೀರ್ಥಕ್ಷೇತ್ರವಾಗಿದೆ. ಸನಾತನ ಗ್ರಂಥಗಳು ಹಾಗೂ ಪುರಾಣ ಪುಣ್ಯಕಥೆಗಳಲ್ಲಿ ಬದರೀನಾಥ್‌‌ ಕ್ಷೇತ್ರವನ್ನು ಸಾವಿರಾರು ವರ್ಷಗಳಿಂದಿರುವ ಪವಿತ್ರ ಕ್ಷೇತ್ರವೆಂದು ಪ್ರಸ್ತಾಪಿಸಲಾಗಿದೆ. ಭಾಗವತ ಪುರಾಣದ ಪ್ರಕಾರ, "ಅಲ್ಲಿ ಬದರೀ ಕಾಶ್ರಮದಲ್ಲಿ ದೇವಪ್ರಮುಖ ದೈವವಾದ (ವಿಷ್ಣು), ನರ ಹಾಗೂ ನಾರಾಯಣರೆಂಬ ಇಬ್ಬರು ಮುನಿಗಳ ತನ್ನ ಅವತಾರದಲ್ಲಿ, ಸಕಲ ಜೀವಿಗಳ ಉದ್ಧಾರದ ಉದ್ದೇಶದಿಂದ ಅನಾದಿ ಕಾಲದಿಂದ ಮಹಾತಪಸ್ಸನ್ನು ಆಚರಿಸುತ್ತಿದ್ದಾರೆ." (ಭಾಗವತ ಪುರಾಣ 3.4.22) ಬದರೀ ‌‌ ಎಂಬುದು ಆ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುವ ಬೀಜರಹಿತ ಫಲ, ಹಾಗೂ ನಾಥ್ ಎಂದರೆ "ಇದರ ದೇವರು". ಸೇವಿಸುವುದಕ್ಕೆ ಅರ್ಹವಾದ ಬೀಜರಹಿತ ಭಾರತದ ಬೋರೆಹಣ್ಣಿನ ಮರಕ್ಕೆ, ಸಹಾ ಸಂಸ್ಕೃತದಲ್ಲಿ ಬದರಿ ಎಂದು ಕರೆಯುತ್ತಾರೆ. ಕೆಲ ಧರ್ಮಗ್ರಂಥಗಳಲ್ಲಿ ಕೂಡಾ ಬೋರೆಹಣ್ಣಿನ ಮರಗಳು ಬದರೀನಾಥ್‌‌ನಲ್ಲಿ ಪುಷ್ಕಳವಾಗಿ ಬೆಳೆಯುತ್ತವೆ ಎಂಬುದನ್ನು ದಾಖಲಿಸಲಾಗಿದೆ. == ಬದರೀನಾಥ್‌‌ ದೇವಾಲಯ == ಬದರೀನಾಥ್‌‌ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ದಂತಕಥೆಯೊಂದರ ಪ್ರಕಾರ ಶಂಕರರು ಅಲಕ್‌ನಂದಾ ನದಿಯಲ್ಲಿ ಬದರೀನಾರಾಯಣ ದೇವರ ಸಾಲಿಗ್ರಾಮದಿಂದ ನಿರ್ಮಿಸಲ್ಪಟ್ಟ ಕೃಷ್ಣ ಶಿಲಾ ಮೂರ್ತಿಯನ್ನು ಕಂಡರು. ಅವರು ಮೂಲವಾಗಿ ಅದನ್ನು ತಪ್ತ್‌ ಕುಂಡ್‌ ಎಂದು ಕರೆಯಲ್ಪಡುವ ಬಿಸಿನೀರಿನ ಚಿಲುಮೆಯ ಬಳಿಯಿದ್ದ ಗುಹೆಯಲ್ಲಿ ಗುಡಿಯನ್ನು ಸ್ಥಾಪಿಸಿದರು. ಹದಿನಾರನೆಯ ಶತಮಾನದಲ್ಲಿ, ಗರ್ಹ್‌ವಾಲ್‌ನ ರಾಜರು ಮೂರ್ತಿಯನ್ನು ಪ್ರಸ್ತುತ ದೇವಾಲಯಕ್ಕೆ ಸ್ಥಳಾಂತರಿಸಿದರು. ದೇವಾಲಯವು ಹಳೆಯದಾದ ಕಾರಣ ಹಾಗೂ ಹಿಮಕುಸಿತದಿಂದ ಆಗುತ್ತಿದ್ದ ಹಾನಿಗಳಿಂದಾಗಿ ಅನೇಕ ಪ್ರಮುಖ ಪುನರುಜ್ಜೀವನ ಕಾಮಗಾರಿಗಳನ್ನು ಮಾಡಲಾಗಿದೆ. 17ನೇ ಶತಮಾನದಲ್ಲಿ, ದೇವಾಲಯವನ್ನು ಗರ್ಹ್‌ವಾಲ್‌ನ ರಾಜರುಗಳು ವಿಸ್ತರಿಸಿದರು. 1803ರಲ್ಲಿ ಹಿಮಾಲಯದಲ್ಲಿ ಸಂಭವಿಸಿದ ಪ್ರಮುಖ ಭೂಕಂಪದಲ್ಲಿ ಗಮನಾರ್ಹ ಪ್ರಮಾಣದ ಹಾನಿಯಾದ ಕಾರಣ ಜೈಪುರದ ರಾಜರು ಅದನ್ನು ಪುನರ್ನಿಮಾಣ ಮಾಡಿದರು. ಮೇಲ್ಭಾಗದಲ್ಲಿ ಸಣ್ಣ ಗುಮ್ಮಟ ಹಾಗೂ ಸ್ವರ್ಣಲೇಪಿತ ಛಾವಣಿಯನ್ನು ಹೊಂದಿರುವ ದೇವಾಲಯವು ಸರಿಸುಮಾರು 50 (15 ) ಎತ್ತರವಿದೆ. ದೇವಾಲಯದ ಮುಂಭಾಗವನ್ನು ಕಲ್ಲಿನಿಂದ ಕಟ್ಟಲಾಗಿದ್ದು ಕಮಾನಿರುವ ಕಿಟಕಿಗಳನ್ನು ಹೊಂದಿದೆ. ಅಗಲವಾದ ಮೆಟ್ಟಿಲಸಾಲು ಎತ್ತರದಲ್ಲಿರುವ ಕಮಾನನ್ನು ಹೊಂದಿರುವ ಪ್ರಮುಖ ಪ್ರವೇಶದ್ವಾರದೆಡೆಗೆ ಕರೆದೊಯ್ಯುತ್ತದೆ. ಇಲ್ಲಿನ ವಾಸ್ತುಕಲೆಯು ಬೌದ್ಧ ದೇವಾಲಯಗಳಲ್ಲಿ ಸಾಮಾನ್ಯವಾಗಿರುವ ಚಿತ್ರಾಲಂಕೃತ ಮುಂಭಾಗದೊಂದಿಗೆ ಬೌದ್ಧವಿಹಾರಗಳನ್ನು (ದೇವಾಲಯ ) ಹೋಲುತ್ತದೆ. ಸ್ವಲ್ಪ ಒಳಭಾಗದಲ್ಲಿ ಕಂಬಗಳನ್ನು ಹೊಂದಿರುವ ವಿಶಾಲವಾದ ಕೋಣೆಯಾದ ಮಂಟಪವಿದೆ, ಅಲ್ಲಿಂದ ಮುಖ್ಯ ಪೂಜಾಸ್ಥಳವಾದ ಗರ್ಭಗೃಹಕ್ಕೆ ದಾರಿಯಿದೆ. ಮಂಟಪದ ಗೋಡೆಗಳು ಹಾಗೂ ಕಂಬಗಳು ಸಂಕೀರ್ಣ ಕೆತ್ತನೆಗಳನ್ನು ಹೊಂದಿವೆ. == ಚರಿತ್ರೆ ಮತ್ತು ದಂತಕತೆಗಳು == ಬದರೀನಾಥ್‌‌ ಪ್ರದೇಶವನ್ನು ಬದರಿ ಅಥವಾ ಬದರಿಕಾಶ್ರಮ (बदरिकाश्रम) ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರಸ್ತಾಪಿಸಲಾಗುತ್ತದೆ. ಈ ಸ್ಥಳವು ವಿಷ್ಣುವಿನ ಸಾನಿಧ್ಯದಿಂದ ಪವಿತ್ರವಾಗಿದ್ದು, ನಿರ್ದಿಷ್ಟವಾಗಿ ನರ-ನಾರಾಯಣರೆಂಬ ವಿಷ್ಣುವಿನ ದ್ವಿರೂಪ ವಿಶೇಷ ಮಹತ್ವದ್ದಾಗಿದೆ. ಆದ್ದರಿಂದ, ಮಹಾಭಾರತದಲ್ಲಿ, ಶಿವನು, ಅರ್ಜುನನನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆ, "ನೀನು ಹಿಂದಿನ ಜನ್ಮದಲ್ಲಿ ನರನ ರೂಪದಲ್ಲಿದ್ದು, ನಿನ್ನ ಸಂಗಡಿಗನಾಗಿ ನಾರಾಯಣನನ್ನು ಹೊಂದಿದ್ದು ಅಸಂಖ್ಯಾತ ವರ್ಷಗಳ ಕಾಲ ಬದರಿಯಲ್ಲಿ ಘೋರ ತಪಸ್ಸನ್ನು ಆಚರಿಸಿದ್ದೆ." ದಂತಕಥೆಯೊಂದರ ಪ್ರಕಾರ ದೇವತೆ ಗಂಗಾಳನ್ನು ಮನುಕುಲವನ್ನು ಉದ್ಧರಿಸಲೆಂದು ಭೂಮಿಗೆ ಅವರೋಹಿಸಲು ಕೋರಿಕೊಂಡ ಸಮಯದಲ್ಲಿ ಭೂಮಿಯು ಆಕೆಯ ಅವರೋಹಣದ ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರಲಿಲ್ಲ. ಆದ್ದರಿಂದ ಬೃಹತ್‌ ಗಂಗಾ ವಾಹಿನಿಯು ಹನ್ನೆರಡು ಪವಿತ್ರ ವಾಹಿನಿಗಳಾಗಿ ವಿಭಜನೆಯಾಯಿತು, ಅಲಕ್‌ನಂದಾ ಅವುಗಳಲ್ಲಿ ಒಂದು. ಬದರೀನಾಥ್‌ ಕ್ಷೇತ್ರವನ್ನು ಸುತ್ತುವರೆದಿರುವ ಪರ್ವತಗಳನ್ನು ಮಹಾಭಾರತದಲ್ಲಿ ಪ್ರಸ್ತಾಪಿಸಲಾಗಿದೆ, ಪಾಂಡವರು ಪಶ್ಚಿಮ ಗರ್ಹ್‌ವಾಲ್‌ನಲ್ಲಿರುವ 'ಸ್ವರ್ಗಕ್ಕೆ ಏರುವುದು' ಎಂಬರ್ಥ ಬರುವ ಹೆಸರಿನ ಸ್ವರ್ಗಾರೋಹಿಣಿ ಶಿಖರವನ್ನು ಏರುವಾಗ ಪ್ರಪಾತದಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡರು ಎಂಬ ಭಾಗದಲ್ಲಿ ಇದರ ಪ್ರಸ್ತಾಪವಿದೆ. ಸ್ಥಳೀಯ ದಂತಕಥೆಯ ಪ್ರಕಾರ ಪಾಂಡವರು ಸ್ವರ್ಗಕ್ಕೆ (ಸ್ವರ್ಗ) ಹೋಗುವಾಗ ದಾರಿಯಲ್ಲಿ ಬದರೀನಾಥ್‌‌ ಹಾಗೂ ಅಲ್ಲಿಂದ ಉತ್ತರಕ್ಕೆ 4 ದೂರದಲ್ಲಿರುವ ಮನಾ ಪಟ್ಟಣದ ಮೂಲಕ ಸಾಗಿದರು. ದಂತಕಥೆಗಳ ಪ್ರಕಾರ ವ್ಯಾಸರು, ಮಹಾಭಾರತವನ್ನು ಬರೆದ ಗುಹೆ ಕೂಡಾ ಮನಾದಲ್ಲಿ ಇದೆ. ಪದ್ಮ ಪುರಾಣದಲ್ಲಿ ಬದರೀನಾಥ್‌‌ನ ಸುತ್ತಮುತ್ತಲಿನ ಪ್ರದೇಶವನ್ನು ಸಮೃದ್ಧ ಪಾರಮಾರ್ಥಿಕ ನಿಕ್ಷೇಪವನ್ನು ಹೊಂದಿರುವ ಸ್ಥಳ ಎಂದು ಕೊಂಡಾಡಲಾಗಿದೆ. == ತೀರ್ಥಯಾತ್ರೆ == ಭಾರತ-ಚೀನಾ (ಟಿಬೆಟ್‌) ಗಡಿರೇಖೆಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ದೂರವಿರುವ, ಬದರೀನಾಥ್‌‌ ಸಾಮಾನ್ಯವಾಗಿ ಛಾರ್‌ ಧಾಮ್‌ ಯಾತ್ರೆಯಲ್ಲಿ ಹಿಂದಿನ ಕ್ಷೇತ್ರವಾದ ಕೇದಾರನಾಥದಿಂದ, ಅಥವಾ ಆ ಬಯಲು ಪ್ರದೇಶದ ಪ್ರಮುಖ ವಾಸಸ್ಥಳಗಳಿಂದ ಸಾಮಾನ್ಯವಾಗಿ ಎರಡು ಇಡೀ ದಿನಗಳ ಪ್ರಯಾಣವಾಗಿರುತ್ತದೆ. ಪ್ರಮುಖ ಸಿಖ್ಖರ ತೀರ್ಥಯಾತ್ರಾ ಕ್ಷೇತ್ರವಾಗಿರುವ, ಹೇಮ್‌ಕುಂಡ್‌ ಸಾಹಿಬ್‌, ಬದರೀನಾಥ್‌ಗೆ ಹೋಗುವ ಮಾರ್ಗದಲ್ಲೇ ಇರುವುದರಿಂದ‌, ವಿಶೇಷತಃ ಬೇಸಿಗೆಯ ತೀರ್ಥಯಾತ್ರೆ ಋತುವಿನಲ್ಲಿ ಮಾರ್ಗವು ವಿಪರೀತ ಜನನಿಬಿಡತೆಯನ್ನು ಹೊಂದಿರುತ್ತದೆ. ದೇವಾಲಯ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳು ಗಣನೀಯ ಪ್ರಮಾಣದಲ್ಲಿ ರಸ್ತೆ ಮಾರ್ಗಗಳನ್ನು ಹೊಂದಿವೆ. ಬದರೀನಾಥ್‌‌ಗೆ ಭೇಟಿ ನೀಡಬಹುದಾದ ಸೂಕ್ತ ಸಮಯವೆಂದರೆ ಜೂನ್‌ ಹಾಗೂ ಸೆಪ್ಟೆಂಬರ್‌ಗಳ ನಡುವಿನ ಅವಧಿ. ವರ್ಷಾದ್ಯಂತವೂ ಬೆಚ್ಚನೆಯ ಉಡುಪುಗಳು ಇಲ್ಲಿಗೆ ಸೂಕ್ತವಾಗಿರುತ್ತವೆ. ಆದಿ ಶಂಕರರಿಂದ ಸ್ಥಾಪಿಸಲ್ಪಟ್ಟ ಉತ್ತರದ ಮಠವು ಹತ್ತಿರದಲ್ಲಿರುವ ಜ್ಯೋತಿರ್ಮಠದಲ್ಲಿದೆ. ಈ ಪ್ರದೇಶದಲ್ಲಿ ಬರುವ ಇತರೆ ಕ್ಷೇತ್ರಗಳೆಂದರೆ ಹರಿದ್ವಾರ ಮತ್ತು ಋಷಿಕೇಶ/ಹೃಷಿಕೇಶ/ರಿಷಿಕೇಶ. == ಸಾರಿಗೆ == ಅತಿ ಸಮೀಪದ ವಿಮಾನನಿಲ್ದಾಣವೆಂದರೆ ಡೆಹ್ರಾಡೂನ್‌ನ, (317 ) ಸಮೀಪದಲ್ಲಿರುವ ಜಾಲಿ ಗ್ರಾಂಟ್‌‌ ವಿಮಾನನಿಲ್ದಾಣ. ಅತಿ ಸಮೀಪದ ರೈಲು ನಿಲ್ದಾಣಗಳೆಂದರೆ ಅನುಕ್ರಮವಾಗಿ ಹರಿದ್ವಾರ (310 ) ಹಾಗೂ ಋಷಿಕೇಶ/ಹೃಷಿಕೇಶ/ರಿಷಿಕೇಶ(297 ) ಮತ್ತು ಕೋಟದ್ವಾರ, (327 )ಗಳು. ನವದೆಹಲಿ, ಹರಿದ್ವಾರ ಮತ್ತು ಋಷಿಕೇಶ/ಹೃಷಿಕೇಶ/ರಿಷಿಕೇಶಗಳಿಂದ ಬದರೀನಾಥ್‌ ಕ್ಷೇತ್ರಕ್ಕೆ ನಿಯತಕಾಲಿಕ ಬಸ್‌ ಸಾರಿಗೆ ವ್ಯವಸ್ಥೆಯಿದೆ. ರಸ್ತೆಗಳು ವಿಪರೀತ ಕಿರಿದಾದ ಕಾರಣ, ಯಾತ್ರಿಗಳು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಚಲಿಸಬಲ್ಲ ವಾಹನಗಳಲ್ಲಿ ಸಂಚರಿಸುವುದು ಸುರಕ್ಷಿತ. ಇತ್ತೀಚಿನವರೆಗೆ ಯಾತ್ರಿಗಳು ಇಲ್ಲಿ ತಾವೇ ವಾಹನ ಚಲಾಯಿಸುವ ಹಾಗಿರಲಿಲ್ಲ, ಆದರೆ ಈಗ ದೇವಾಲಯದ ಮುಂಭಾಗದವರೆಗೆ ವಾಹನವನ್ನು ಚಲಾಯಿಸಿಕೊಂಡು ಬರಬಹುದು. == ಜನಸಾಂದ್ರತೆ == 2001 ಭಾರತದ ಜನಗಣತಿಯ, ಪ್ರಕಾರ ಬದರೀನಾಥ್‌‌ 841ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಒಟ್ಟು ಜನಸಂಖ್ಯೆಯಲ್ಲಿ 65% ಪುರುಷರೂ ಮತ್ತು 35% ಮಹಿಳೆಯರೂ ಇದ್ದಾರೆ. ಬದರೀನಾಥ್‌‌ ಕ್ಷೇತ್ರವು ಸರಾಸರಿ 85%ರಷ್ಟು ಸಾಕ್ಷರತೆ ದರ ಹೊಂದಿದ್ದು, ಇದು ರಾಷ್ಟ್ರೀಯ ಸರಾಸರಿಯಾದ 59.5%ಕ್ಕಿಂತ ಅಧಿಕವಾಗಿದೆ; 92%ರಷ್ಟು ಪುರುಷರು ಹಾಗೂ 72%ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ. ಜನಸಂಖ್ಯೆಯ 9%ರಷ್ಟು ಜನ 6 ವರ್ಷದೊಳಗಿನ ವಯಸ್ಸಿನವರು. == ಟಿಪ್ಪಣಿಗಳು == == ಇವನ್ನೂ ಗಮನಿಸಿ == ಬದರೀ ನಾರಾಯಣ ದೇವಾಲಯ == ಹೊರಗಿನ ಕೊಂಡಿಗಳು == ಛಾರ್‌ ಧಾಮ್‌, ಉತ್ತರಾಖಂಡ್‌ ಸರ್ಕಾರದ ಅಧಿಕೃತ ಜಾಲತಾಣ 2009-08-28 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತದ ಬದರೀನಾಥ್‌‌ಗೆ ಜಾಲತಾಣ - ಬದರೀನಾಥ್‌‌ ಮಾಹಿತಿ ಬದರೀನಾಥ್‌‌ ಚಿತ್ರಸಂಪುಟ 2010-03-17 ವೇಬ್ಯಾಕ್ ಮೆಷಿನ್ ನಲ್ಲಿ. ಛಾಯಾಚಿತ್ರಗಳು ಹಾಗೂ ಇತಿಹಾಸ 2013-04-08 ವೇಬ್ಯಾಕ್ ಮೆಷಿನ್ ನಲ್ಲಿ. ಬದರೀನಾಥ್‌‌ ಪ್ರವಾಸೀ ಕೈಪಿಡಿ ಬದರೀನಾಥ್‌‌ನ ಚಿತ್ರಸಂಪುಟಗಳು, 345 ಛಾಯಾಚಿತ್ರಗಳು, 1280x960 ವಿಕಿಟ್ರಾವೆಲ್ ನಲ್ಲಿ ಬದರೀನಾಥ್‌‌ ಪ್ರವಾಸ ಕೈಪಿಡಿ (ಆಂಗ್ಲ)