== ಸನ್ನಿವೇಶ == ಬಾಲಿ (ಬಲಿನೀಸ್: ᬩᬮᬶ) ಇಂಡೋನೇಷ್ಯಾ ದೇಶದ ದ್ವೀಪ ಮತ್ತು ಪ್ರಾಂತ್ಯ. ಈ ಪ್ರಾಂತ್ಯವು ಬಾಲಿ ದ್ವೀಪ ಮತ್ತು ನೆರೆಹೊರೆಯ ಕೆಲವು ಸಣ್ಣ ದ್ವೀಪಗಳನ್ನು ಒಳಗೊಂಡಿದೆ, ಅದರಲ್ಲಿ ಮುಖ್ಯವಾದವು ನುಸಾ ಪೆನಿಡಾ, ನುಸಾ ಲೆಂಬೊಂಗನ್, ಮತ್ತು ನುಸಾ ಸಿನೆನನ್. ಬಾಲಿ ದ್ವೀಪ ಪಶ್ಚಿಮದಲ್ಲಿರುವ ಜಾವಾ ಮತ್ತು ಪೂರ್ವದಲ್ಲಿರುವ ಲೊಂಬೊಕ್ ನಡುವೆ ಇದೆ. ಲೆಸ್ಸರ್ ಸುಂದ ದ್ವೀಪಗಳು ಬಾಲಿಯ ಪಶ್ಚಿಮ ತುದಿಯಲ್ಲಿವೆ. ರಾಜಧಾನಿಯಾದ ಡೆನ್ಪಾಸರ್ ಬಾಲಿ ದ್ವೀಪದ ದಕ್ಷಿಣ ಭಾಗದಲ್ಲಿದೆ. === ಜನಸಂಖ್ಯೆ === ೨೦೧೦ರ ಜನಗಣತಿಯಲ್ಲಿ ೩೮೯೦೭೫೭ ಜನಸಂಖ್ಯೆಇದ್ದದ್ದು, ಜನವರಿ ೨೦೧೪ ರ ವೇಳೆಗೆ ೪೨೨೫೦೦೦ ಜನಸಂಖ್ಯೆ ಆಗಿದೆ, ದ್ವೀಪದ ಬಹುತೇಕ ಪ್ರದೇಶ ಇಂಡೋನೇಶಿಯಾದ ಹಿಂದೂ ಅಲ್ಪಸಂಖ್ಯಾತರ ನೆಲೆಯಾಗಿದೆ. ೨೦೧೦ರ ಜನಗಣತಿಯ ಪ್ರಕಾರ, ಬಾಲಿ ಜನಸಂಖ್ಯೆಯಲ್ಲಿ ೮೩.೫%ರಷ್ಟು ಬಲಿನಿಸ್ ಹಿಂದೂ ಧರ್ಮ, ನಂತರ ೧೩.೪% ಮುಸ್ಲಿಮರು, ಕ್ರಿಶ್ಚಿಯನ್ ಧರ್ಮ ೨.೫% ಮತ್ತು ಬೌದ್ಧ ಧರ್ಮ ೦.೫% ದವರಿದ್ದಾರೆ == ಪ್ರವಾಸಿಗಳ ಸ್ವರ್ಗ == ಬಾಲಿ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ, ಇದು 1980 ರ ದಶಕದಿಂದಲೂ ಪ್ರವಾಸಿಗರ ಗಮನಾರ್ಹ ಏರಿಕೆ ಕಂಡಿದೆ. ಪ್ರವಾಸೋದ್ಯಮ-ಸಂಬಂಧಿತ ವ್ಯವಹಾರವು ತನ್ನ ಆರ್ಥಿಕತೆಯ 80% ರಷ್ಟನ್ನು ನೀಡುತ್ತದೆ. ಇದು ಸಾಂಪ್ರದಾಯಿಕ ಮತ್ತು ಆಧುನಿಕ ನೃತ್ಯ, ಶಿಲ್ಪಕಲೆ, ಚಿತ್ರಕಲೆ, ಚರ್ಮ, ಲೋಹದ ಕೆಲಸ ಮತ್ತು ಸಂಗೀತವನ್ನು ಒಳಗೊಂಡಂತೆ ಹೆಚ್ಚು ಅಭಿವೃದ್ಧಿ ಹೊಂದಿದ ಕಲೆಗಳಿಗೆ ಹೆಸರುವಾಸಿಯಾಗಿದೆ. ಇಂಡೋನೇಷಿಯಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತಿವರ್ಷ ಬಾಲಿಯಲ್ಲಿ ನಡೆಸಲಾಗುತ್ತದೆ. ಮಾರ್ಚ್ 2017 ರಲ್ಲಿ, ಟ್ರಿಪ್ ಅಡ್ವೈಸರ್ ತನ್ನ ಪ್ರಯಾಣಿಕರ ಆಯ್ಕೆಯ ಪ್ರಶಸ್ತಿಯಲ್ಲಿ ವಿಶ್ವದ ಅಗ್ರ ಗಮ್ಯಸ್ಥಾನವನ್ನು ಬಾಲಿದ್ವೀಪ ಎಂದು ಹೆಸರಿಸಿತು. ಬಾಲಿ ಕೋರಲ್ (ಹವಳ) ತ್ರಿಕೋಣದ ಭಾಗವಾಗಿದೆ, ಇದು ಸಮುದ್ರ ಜಾತಿಗಳ ಅತಿ ಹೆಚ್ಚು ಜೀವವೈವಿಧ್ಯತೆಯ ಪ್ರದೇಶವಾಗಿದೆ. ಈ ರೀತಿಯಾಗಿ 500 ರೀಫ್ ಕಟ್ಟಡದ (ದಂಡೆ) ಹವಳದ ಜಾತಿಗಳನ್ನು ಕಾಣಬಹುದು. ಹೋಲಿಕೆಯಲ್ಲಿ, ಇಡೀ ಕೆರಿಬಿಯನ್ನಲ್ಲಿರುವುದಕ್ಕಿಂತ ಇದು ಸುಮಾರು 7 ಪಟ್ಟು ಹೆಚ್ಚಾಗಿದೆ. ಇತ್ತೀಚೆಗೆ, ಬಾಲಿ 2011 ಏಷಿಯಾನ್ ಶೃಂಗಸಭೆ, 2013 ಅಪೆಕ್ () ಮತ್ತು ವಿಶ್ವ ಸುಂದರಿ 2013 ರ ಸ್ಪರ್ಧೆಗೆ ಆತಿಥೇಯವಾಗಿತ್ತು. ಬಾಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಸುಬಾಕ್ ನೀರಾವರಿ ವ್ಯವಸ್ಥೆಯನ್ನು ಹೊಂದಿದೆ.[ == ಇತಿಹಾಸ == == ಪವಿತ್ರ ತೀರ್ಥ == ಬಾಲಿಯಲ್ಲಿ ‘ತೀರ್ಥ ಎಂಪುಲ್’ ಎನ್ನುವ ಚಿಲುಮೆಯೊಂದಿದೆ. ಇದರ ನೀರಲ್ಲಿ ಮೀಯುವುದರಿಂದ, ಮೈ–ಮನಗಳ ಜೊತೆಗೆ ಆತ್ಮವೂ ಶುದ್ಧಿಯಾಗುತ್ತದೆ ಎನ್ನುವುದು ಹಿಂದೂ ಜನರ ನಂಬಿಕೆ. ಇದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಬಾಲಿಯನ್ನರ ಮನೋಧರ್ಮಕ್ಕೆ ಅನುಗುಣವಾಗಿರುವ ನಂಬಿಕೆ. ಇಂಡೋನೇಷ್ಯಾದಲ್ಲಿ ‘ದೇವರ ದ್ವೀಪ’ ಎಂದು ಹೆಸರಾದದ್ದು ಬಾಲಿ. ಆ ದೇವರಿಗೂ ಆಕರ್ಷಕ ಎನಿಸುವಷ್ಟು ಚೆಂದದ ದ್ವೀಪ ಎನ್ನುವ ಬಾಲಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ದೇವಾಲಯಗಳೇ! ಬಾಲಿಯಲ್ಲಿ ಆಚರಿಸುವ ಹಿಂದೂಧರ್ಮಕ್ಕೆ ಆಗಮ ತೀರ್ಥ (ಪವಿತ್ರ ನೀರಿನ ಧರ್ಮ) ಎಂದೇ ಕರೆಯುತ್ತಾರೆ. ನೀರಿಲ್ಲದೇ ಅವರಿಲ್ಲ. ದಿನಕ್ಕೆ ಎರಡು ಬಾರಿ ಸ್ನಾನಮಾಡುವರು. ಅದರೊಂದಿಗೆ ಅವರು ಪ್ರತೀ ಆರು ತಿಂಗಳಿಗೊಮ್ಮೆ ದೇಹ ,ಮನಸ್ಸು, ಆತ್ಮ ಮೂರನ್ನೂ ಸ್ವಚ್ಛಗೊಳಿಸುವ ‘ಮೇಲುಕಾಟ್’ ತೀರ್ಥಸ್ನಾನ ಮಾಡುತಾರೆ. ತ್ರಿಹಿತಕರಣ’ ಬಾಲಿಯ ಹಿಂದೂಗಳ ಜೀವನದ ಮುಖ್ಯ ಪದ್ಧತಿ. ಸಮಾಜದ ಜನರು, ಪ್ರಕೃತಿ ಮತ್ತು ದೇವರೊಡನೆ ಶಾಂತಿಯಿಂದ ನಡೆಸುವ ಸಹಜೀವನದಲ್ಲಿ ಹಿತ ಅಡಗಿದೆ ಎಂಬುದು ಇದರ ಅರ್ಥ. ಹಾಗಾಗಿಯೇ ಮನೆಗಳು ಬೇರೆ ಇದ್ದರೂ ಹಬ್ಬ ಸಮಾರಂಭಗಳಲ್ಲಿ ಊರಿಗೆ ಊರೇ ಭಾಗಿಯಾಗುತ್ತದೆ. ಇಡೀ ಹಳ್ಳಿಯೇ ದೊಡ್ಡ ಅವಿಭಕ್ತ ಕುಟುಂಬದಂತೆ! ದೇವರನ್ನು ಕುರಿತು ಭಕ್ತಿಯಿದೆ, ಪ್ರತೀ ಮನೆಯಲ್ಲೂ ದೇಗುಲವಿರುತ್ತದೆ. ಆದರೆ ಒಳಗೆ ಯಾವುದೇ ಮೂರ್ತಿಯಿಲ್ಲ: ದೇವರು, ಹಿರಿಯರು ಶಕ್ತಿ ಸ್ವರೂಪಿಗಳು. ಅವರ ಪೂಜೆಗೆ ದೇವರು, ಹಿರಿಯರ ಆತ್ಮ ಒಲಿದು ಆಗಮಿಸಿ, ಕುಳಿತು, ಹರಸುತ್ತಾರೆ ಎಂಬ ನಂಬಿಕೆಯಿಂದ ಅವರಿಗಾಗಿಯೇ ಪುಟ್ಟ ಜಾಗವನ್ನು ಖಾಲಿ ಇಡಲಾಗುತ್ತದೆ! ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ, ಮಣ್ಣು, ಗಾಳಿ ಜನರಿಗೆ ಶಕ್ತಿ ಸಂಕೇತಗಳು. ಹಿರಿಯರು ಮತ್ತು ದೇವರು ಕೂಡಾ ನಿಸರ್ಗದಲ್ಲಿ ಲೀನವಾಗಿದ್ದಾರೆ. ಹಾಗಾಗಿ ಅವುಗಳ ಮೂಲಕ ಎಲ್ಲೆಲ್ಲೂ ಇದ್ದಾರೆ ಎಂದು ಹೇಳುತ್ತಾರೆ. ಆದ್ದರಿಂದಲೇ ಇಲ್ಲಿ ನೀರು, ಕಲ್ಲು, ಮಣ್ಣು ಎಲ್ಲವೂ ಪವಿತ್ರ. ‘ಮೇಲುಕಾಟ್’ತೀರ್ಥಕ್ಷೇತ್ರ ಬಾಲಿಯ ಜನರು ಸಾವಿರಾರು ವರ್ಷಗಳಿಂದ ಸಂದರ್ಶಿಸುತ್ತಿರುವ ಮುಖ್ಯ ಸ್ಥಳ ‘ತೀರ್ಥ ಎಂಪುಲ್’! ಉಬುಡ್ ಗ್ರಾಮದಿಂದ ಅರ್ಧ ತಾಸಿನ ಹಾದಿಯಲ್ಲಿ ಮನುಕಯಾ ಎಂಬ ಪ್ರಾಂತ್ಯದಲ್ಲಿ ‘ತಂಪಕ್ ಸಿರಿಂಗ್’ ಎಂಬ ಪುಟ್ಟ ಪಟ್ಟಣ. ಇಲ್ಲಿದೆ ಪರಮಪವಿತ್ರ ದೇವಾಲಯ, ತೀರ್ಥ ಎಂಪುಲ್ (ಪವಿತ್ರ ಚಿಲುಮೆ)ಇದೆ. ಇಲ್ಲಿನ ಕೊಳದ ಚಿಲುಮೆಯಿಂದ ಸತತವಾಗಿ ಸಿಹಿನೀರು ಚಿಮ್ಮುತ್ತಿದ್ದು ಅದು ಅಮೃತಕ್ಕೆ ಸಮಾನ–ಪವಿತ್ರ ಎಂದು ಬಾಲಿಯ ಜನ ಪರಿಗಣಿಸುತ್ತಾರೆ. ಈ ನೀರಿನ ವಿಧಿವತ್ತಾದ ಸ್ನಾನ, ಪ್ರೋಕ್ಷಣೆ ಮತ್ತು ಸೇವನೆ ಶುದ್ಧೀಕರಣದ ಪ್ರಮುಖ ಘಟ್ಟ. === ದೇವಾಲಯ === ಈ ದೇವಾಲಯ ಸಂಕೀರ್ಣವನ್ನು ಕ್ರಿ.ಶ 960ರಲ್ಲಿ ವರ್ಮದೇವ ರಾಜವಂಶದ ಆಡಳಿತ ಅವಧಿಯಲ್ಲಿ ಕಟ್ಟಲಾಯಿತು. ಇಲ್ಲಿರುವ ಪವಿತ್ರ ಚಿಲುಮೆಯ ಕುರಿತು ಉಸಾನಾ ಬಾಲಿ ಹಸ್ತಪ್ರತಿಯಲ್ಲಿ ಉಲ್ಲೇಖವಿದೆ. ಬಾಲಿಯ ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಲಾದ ಈ ದೇಗುಲದಲ್ಲಿ ಶಿವ, ವಿಷ್ಣು, ಬ್ರಹ್ಮ, ಇಂದ್ರ ಮತ್ತು ಬಟುರ್ ಪರ್ವತಕ್ಕೆ ಸಂಬಂಧಿಸಿದ ಗೋಪುರಗಳಿವೆ. ದೇವಾಲಯವನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ. ಹೊರಗಿನ ಜಬ ಪುರ, ಮಧ್ಯದ ಜಬ ತೆಂಗಾಹ್ ಮತ್ತು ಒಳಗಿನ ಜೆರೋಆನ್. ಮಧ್ಯದ ಭಾಗದಲ್ಲಿ ಎರಡು ಕೊಳಗಳಿದ್ದು ಮೂರು ದೊಡ್ಡ ಚಿಲುಮೆಗಳಿಂದ ತೀರ್ಥ ಸೂರ್ಯ (ಸೂರ್ಯನ ಚಿಲುಮೆ), ತೀರ್ಥ ಬುಲಾನ್ (ಚಂದ್ರನ ಚಿಲುಮೆ) ಮತ್ತು ತೀರ್ಥ ಬಿಂಟಾಂಗ್ (ನಕ್ಷತ್ರಗಳ ಚಿಲುಮೆ) ಚಿಮ್ಮುವ ನೀರನ್ನು ಮೂವತ್ತು ಕೊಳವೆಗಳ ಮೂಲಕ ಹೊರಬರುವಂತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ನೀರಿಗೆ ಮೂರು ವಿಶೇಷ ಶಕ್ತಿಗಳಿವೆ ಎಂಬ ನಂಬಿಕೆ ಜನರದ್ದು. ತೀರ್ಥ ಗೆರಿಂಗ್: ಕೆಟ್ಟ ಶಕ್ತಿಗಳನ್ನು ದೂರವಿಡಲು, ತೀರ್ಥ ಮೆರ್ಟಾ: ಸಂಪತ್ತು–ಸಮೃದ್ಧಿಗಾಗಿ ಮತ್ತು ತೀರ್ಥ ಸುಧಾಮಾಲಾ: ದೇಹ–ಆತ್ಮವನ್ನು ಶುದ್ಧಿಗೊಳಿಸಲು. ಈ ರೀತಿ ಶುದ್ಧೀಕರಣ ಕ್ರಿಯೆಗೆ ‘ಮೆಲುಕಾಟ್’ ಎನ್ನಲಾಗುತ್ತದೆ. ವಿಶೇಷ ದಿನವಾದ ಹುಣ್ಣಿಮೆಯಂದು ಶುದ್ಧಿ ಕಾರ್ಯಕ್ಕೆ ಜನರು ಕಿಕ್ಕಿರಿದು ಸೇರುತ್ತಾರೆ. ದೇವಾಲಯದ ಅರ್ಚಕರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತದೆ. ವರ್ಷಕ್ಕೊಮ್ಮೆಯಾದರೂ ಬಾಲಿಯ ಜನರು ಇಲ್ಲಿಗೆ ಬಂದು ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿ, ಸ್ನಾನ ಮಾಡಿ, ಪವಿತ್ರ ಜಲವನ್ನು ಬಾಟಲಿಗಳಲ್ಲಿ ತುಂಬಿ ಮನೆಗೆ ಒಯ್ದು ಸಂರಕ್ಷಿಸಿ ಇಡುತ್ತಾರೆ. ಮಗುವಿನ ಜನನದಿಂದ ಹಿಡಿದು ಎಲ್ಲಾ ಶುಭ ಕಾರ್ಯ ಮತ್ತು ಮರಣದ ಸಂಸ್ಕಾರ ನಡೆಯುವಾಗಲೂ ಇಲ್ಲಿಯ ನೀರು ಬಳಕೆಯಾಗುತ್ತದೆ. == ಛಾಯಾಚಿತ್ರಗಳು == == ಉಲ್ಲೇಖಗಳು ==