ಮನೆಯಲ್ಲಿ 'ಬಾಬಾ ಸಾಹಬ ಅಹಮದ್ ಸಾಹಬ ಸನದಿ' (೧೯೩೩.ಆಗಸ್ಟ್.೧೮-೨೦೧೯.ಮಾರ್ಚ್,೩೧) ಎಂಬ ತೊಟ್ಟಿಲ ಹೆಸರಿನ ಖ್ಯಾತ ಕವಿ, ಸಾಹಿತಿ 'ಬಿ.ಎ ಸನದಿ', ಒಳ್ಳೆಯ ವಾಗ್ಮಿ,, ಅನುವಾದಕಾರ, ಮಕ್ಕಳ ಸಾಹಿತ್ಯದಲ್ಲಿ ನಿಷ್ಣಾತರು. ನಾಟಕ ರಚನಾಕಾರ, ಹಾಗೂ ನಿರ್ದೇಶಕರು. ಅವರು ಮುಂಬಯಿ ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಪಾದಾರ್ಪಣೆ ಮಾಡಿದ ಕಾಲದಲ್ಲಿ ಕನ್ನಡ ರೇಡಿಯೋ ನಾಟಕಗಳು ಉಪನ್ಯಾಸಗಳು ಸರಸ ಸಂಭಾಷಣೆಗಳು ಯಕ್ಷಗಾನ ಆಟಗಳು,ಕರ್ನಾಟಕದಿಂದ ಮುಂಬಯಿಗೆ ಆಗಮಿಸುತ್ತಿದ್ದ ಸುಪ್ರಸಿದ್ಧ ಕವಿಗಳ ಜೊತೆ ಸಂವಾದ ಸಂದರ್ಶನಗಳು 'ಮುಂಬಯಿ ಆಕಾಶವಾಣಿ'ಯಲ್ಲಿ ತಪ್ಪದೆ ಆಯೋಜಿಸಲ್ಪಡುತ್ತಿದ್ದವು. == ೭೦ ರ ದಶಕ == ಎಪ್ಪತ್ತರ ದಶಕ ಮುಂಬಯಿನ ಕನ್ನಡಿಗರ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಪರ್ವಕಾಲ. ಆ ದಶಕದಲ್ಲೇ ಹೊರನಾಡುಕನ್ನಡಿಗರ ಸೃಜನಶೀಲ ಶ್ರೇಷ್ಠ ಕವಿಗಳು ನಾಟಕಕಾರರು, ಕಾದಂಬರಿಗಾರರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಕಾಲ. ಅವರಲ್ಲಿ ಪ್ರಮುಖರು, ಹಿರಿಯ ಕವಿಗಲಾಗಿದ್ದ ವ್ಯಾಸರಾಯ ಬಲ್ಲಾಳರು, ಯಶವಂತ ಚಿತ್ತಾಲರು, ಅರವಿಂದ ನಾಡಕರ್ಣಿ,ಮತ್ತು ಯುವ ಕವಿ, ಜಯಂತ ಕಾಯ್ಕಿಣಿ ಮೊದಲಾದವರು. ಕನ್ನ ಡ ನಾಟಕ ರಂಗದಲ್ಲಿ ತಮ್ಮ ಅನುಪಮ ಕೊಡುಗೆ ಕೊಟ್ಟ,ವರಲ್ಲಿ, ಟಿ.ಪಿ.ಕೈಲಾಸಂ, ವಿ. ಕೆ. ಮೂರ್ತಿ , ಸದಾನಂದ ಸುವರ್ಣ, ಮುಂತಾದವರು ಪ್ರಮುಖರು. ಮೈಸೂರ್ ಅಸೋಸಿಯೇಷನ್, ಮುಂಬಯಿ ನ ಕಲಾವಿದರು ಇದಕ್ಕಿಂತಾ ಮೊದಲೇ ಆಗಾಗ ಕನ್ನಡ ನಾಟಕಗಳನ್ನು 'ರವೀಂದ್ರ ನಾಟ್ಯಮಂದಿರ' ಮೊದಲಾದ ರಂಗ ಮಂಚಗಳಲ್ಲಿ ಪ್ರದರ್ಶಿಸುತ್ತಿದ್ದರು. ಆಕಾಶವಾಣಿಯ ಕನ್ನಡ ಕಾರ್ಯಕ್ರಮದ ರುವಾರಿಯಾಗಿದ್ದ ಸನದಿಯವರು ಅಂದಿನ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಆಹ್ವಾನಿಸಿ, ಮುಂಬಯಿನ ಕಲಾರಸಿಕರಿಗೆ ಪರಿಚಯಿಸುತ್ತಿದ್ದರು. ಎಮ್. ಎನ್. ರಾಮಚಂದ್ರ ರಾವ್, ಸುಬ್ಬ ನರಸಿಂಹ ಕೆ.ವಿ. ವಾಮನ್ ಸದಾನಂದ ಸುವರ್ಣ, ದೇವದಾಸ್ ಮೇಗರವಳ್ಳಿ ಬಲ್ಲಾಳ್, ಕಿಶೋರಿ ಬಲ್ಲಾಳ್, ಕುಂದಾ ರಿಗೇ, ಮೊದಲಾದ ಕಲಾವಿದರು. ಸನದಿಯವರೇ ರಚಿಸಿ ನಿರ್ದೇಶಿಸಿ ಪ್ರಸಾರಮಾಡಿದ 'ಗಂಡ ಹೆಂಡತಿ' ರೇಡಿಯೋ ನಾಟಕ, ಬಹಳ ಹೆಸರುವಾಸಿಯಾಯಿತು. ಡಾ ವ್ಯಾಸರಾವ್ ನಿಂಜೂರ್ ರಚಿಸಿದ 'ಪ್ರೇಮಾಂತರಿಕ್ಷ' ವೆಂಬ ಅಂತರಿಕ್ಷದಲ್ಲಿ ನಡೆಯುವ ಪ್ರೇಮ ಸಲ್ಲಾಪ ಕಥಾನಕ ವಿಭಿನ್ನ ವಾಗಿತ್ತು. ಹೀಗೆ ಪ್ರಯೋಗಾತ್ಮಕವಾಗಿ ರೂಪಿಸಿದ 'ಬಾನುಲಿ ನಾಟಕ 'ಬಹಳ ಜನಪ್ರಿಯವಾಯಿತು. == ಆಕಾಶವಾಣಿಯಲ್ಲಿ ಯಕ್ಷಗಾನ ಕಾರ್ಯಕ್ರಮ == ಆಕಾಶವಾಣಿಯಲ್ಲಿ ಯಕ್ಷಗಾನಕ್ಕೆ ಒಂದು ಸ್ಥಾನ ಕಲ್ಪಿಸಿಕೊಟ್ಟ ಶ್ರೇಯಸ್ಸು ಬಿ.ಎ.ಸನದಿಯವರದು. ವಾರದ ಒಂದು ದಿನ ಅರ್ಧ ಗಂಟೆಯ ಕಾರ್ಯಕ್ರಮವನ್ನು ಬಿತ್ತರಿಸುತ್ತಿದ್ದ ಕಾರ್ಯಕ್ರಮವನ್ನು ಕೇಳಲು ತುಳು ಕನ್ನಡಿಗರು, ಕನ್ನಡಿಗರು, ಅತಿ ಆಸಕ್ತಿಯಿಂದ ಕಾದಿರುತ್ತಿದ್ದರು. ಮುಂಬಯಿನ ಕೋಟೆ ಪ್ರದೇಶದಲ್ಲಿ ತಮ್ಮ ಉದ್ಯಮವನ್ನು ನಡೆಸುತ್ತಿದ್ದ ಎಮ್. ಎಸ್. ಕೋಟ್ಯಾನ್ ಮುಖಂಡತ್ವದಲ್ಲಿ ಹವ್ಯಾಸಿಕಲಾವಿದರು ನಡೆಸಿಕೊಡುತ್ತಿದ್ದರು. == ಕರ್ನಾಟಕ ಸಂಘದಲ್ಲಿ == ಬಿ.ಎ.ಸನದಿಯವರು, ಮುಂಬಯಿನ ಮಹೀಮ್ ನಲ್ಲಿದ್ದ ಪ್ರತಿಷ್ಟಿತ 'ಕರ್ನಾಟಕ ಸಂಘ'ಕ್ಕೆ ಸದಸ್ಯರಾದರು. ಸೆಕ್ರೆಟರಿ, ಎ.ಎಸ್.ಕೆ.ರಾವ್, ಮತ್ತು ಸಂಘದ ಅಧ್ಯಕ್ಷ, ವರದರಾಜ ಆದ್ಯರ ಆಗ್ರಹದ ಮೇರೆಗೆ ಕಾರ್ಯಕಾರಿ ಸಮಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮುಂದುವರೆದರು. ಸುಮಾರು ೮ ವರ್ಷ ಕಾರ್ಯಾಧ್ಯಕ್ಷರಾಗಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿದರು. ಆ ಸಮಯದಲ್ಲಿ ಅವರ ಜೊತೆ ಸಹಕರಿಸಿದ ಮಹಾನಿಯರೆಂದರೆ, ವ್ಯಾಸರಾಯ ಬಲ್ಲಾಳ್ ಮತ್ತು ವ್ಯಾಸರಾಯ ನಿಂಜೂರ್, ಮೊದಲಾದವರು. ಸನದಿಯವರು, ಚತುರ ಸಂಘಟಕಕಾರ, ಒಳ್ಳೆಯ ಮಾತುಗಾರ, ಮತ್ತು ಎಲ್ಲರಜೊತೆ ಸ್ನೇಹದಿಂದ ವರ್ತಿಸುವ ಸ್ವಭಾವದವರು. ಸಂಘದಲ್ಲಿ ತಾವಿದ್ದ ಸಮಯದಲ್ಲಿ ಪ್ರಗತಿಪರ ಯೋಜನೆಗಳನ್ನು ಹುಟ್ಟುಹಾಕಿ ಅವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಸನ್ ೨೦೧೩ ಮುಂಬಯಿನಿಂದ ನಿರ್ಗಮಿಸಿ ಕುಮುಟಾಕ್ಕೆ ಹೋಗುವ ವರೆಗೂ ಸಂಘದ 'ವಿಶ್ವಸ್ತ ಮಂಡಳಿಯ ಸದಸ್ಯ'ರಾಗಿ ದುಡಿದರು. ಕಾವ್ಯ ರಚನೆ, ಅವರ ಹೃದಯಕ್ಕೆ ಅತಿ ಹತ್ತಿರವಾಗಿತ್ತು. ಅತ್ಯಂತ ಪ್ರಿಯ ವ್ಯವಸಾಯವಾಗಿತ್ತು. ಅನುವಾದ, ವ್ಯಕ್ತಿ ಚಿತ್ರ, ಶಿಶುಸಾಹಿತ್ಯ, ಕಥೆ, ವಿಮರ್ಶೆಗಳಲ್ಲೂ ಅವರು ಕೈಯಾಡಿಸಿದ್ದಾರೆ. == ಮರಾಠಿ ಕನ್ನಡ ನಾಟಕಗಳ ಯಶಸ್ವಿ ಪ್ರಯೋಗ == ಮರಾಠಿ ಸಾಹಿತ್ಯದ ಒಂದು ಜನಪ್ರಿಯ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಮುಂಬಯಿಯ ಕಲಾರಸಿಕರಿಗೆ ಪ್ರಸ್ತುತಪಡಿಸುವ ಕಾರ್ಯಕ್ರಮವನ್ನು 'ಮುಂಬಯಿಯ ಕನ್ನಡ ಕಲಾ ಕೆಂದ್ರ' ಹಮ್ಮಿಕೊಂಡಿತ್ತು. 'ಶಿಮುಂಜೆ ಪರಾರಿ'ಯವರು, ನಾಟಕದ ರೂಪಾಂತರದ ಜವಾಬ್ದಾರಿಯನ್ನು ಹೊತ್ತಿದ್ದರು. ನಾಟಕವನ್ನು 'ಸದಾನಂದ ಸುವರ್ಣ', ನಿರ್ದೇಶಿಸಿದ್ದರು. ಆದರೆ ಅದರಲ್ಲಿದ್ದ ೨ ಸುಂದರ ಮರಾಠಿ ಕವಿತೆಗಳನ್ನು ಕವಿಯೊಬ್ಬರು ಅನುವಾದಿಸಿದರೆ ಉತ್ತಮವೆಂಬ ಅಭಿಪ್ರಾಯವವನ್ನು ಕೆಲವು ಕಲಾವಿದರು ವ್ಯಕ್ತಪಡಿಸಿದರು. ಸನದಿಯವರು ಆ ಗುರುತರ ಜವಾಬ್ದಾರಿಯನ್ನು ಸುಂದರವಾಗಿ ನಿಭಾಯಿಸಿದರು. ರಮೇಶ್ ನಾಡಕರ್ಣಿ ಅದಕ್ಕೆ ರಾಗ ಸಂಯೋಜನೆ ಮಾಡಿದ್ದರು. ಕವನಗಳನ್ನು ಕೇಳಿದ ಕುಸುಮಾಗ್ರಜರು ತಮ್ಮ ಪ್ರಶಂಸೆಯನ್ನು ಸಭೆಯ ಮುಂದೆ ಮುಕ್ತ ಕಂಠದಿಂದ ವ್ಯಕ್ತಪಡಿಸಿದ್ದರು. ಮುಂಬಯಿ ರಂಗ ಭೂಮಿಯಲ್ಲಿ ಸನದಿಯವರು ಬರೆದು ಪ್ರಸ್ತುತಪಡಿಸಿದ ನಾಟಕಗಳು 'ಬಂದೆಯ ಬಾ ರಾಯ', ಮತ್ತು 'ನೀಲಾಂಬಿಕಾ' ದಲ್ಲಿ ಶ್ರೀಪತಿ ಬಲ್ಲಾಳ್, ಮತ್ತು ಕಿಶೋರಿ ಬಲ್ಲಾಳ್ ಅಭಿನಯಿಸಿದ್ದರು. ಈ ನಾಟಕ ಪ್ರಯೋಗವನ್ನು ಭಾರತದ ಮಾಜಿ ಉಪರಾಷ್ಟ್ರಪತಿ ಬಿ. ಡಿ. ಜ಼ತ್ತಿಯವರು ನೋಡಿ ಆನಂದಿಸಿದರು. ಅದನ್ನು ಮನಸಾರೆ ಮೆಚ್ಚಿದ ಜತ್ತಿಯವರು, ನಾಟಕವನ್ನು ಮರಾಠಿಗೆ ಅನುವಾದಿಸಲು ಸೂಚಿಸಿದರು. == ಜನನ, ಶಿಕ್ಷಣ ಹಾಗು ಉದ್ಯೋಗ == ಬಿ.ಎ.ಸನದಿ ಯವರು ೧೯೩೩ ಅಗಸ್ಟ್, ೧೮ ರಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹುಟ್ಟೂರು ಶಿಂದೊಳ್ಳಿಯಲ್ಲಿ. ಮಾಧ್ಯಮಿಕ ಶಿಕ್ಷಣವನ್ನು ಬೆಳಗಾವಿಯ ಜಿ.ಎ.ಹೈಸ್ಕೂಲ್, ಎಸ್.ಎಸ್.ಎಲ್.ಸಿ-೧೯೫೦ ಹಾಗು ಬಿ.ಏ. ವ್ಯಾಸಂಗವನ್ನು ಲಿಂಗರಾಜ ಕಾಲೇಜ್ ಕರ್ನಾಟಕ ವಿಶ್ವ ವಿದ್ಯಾಲಯ-೧೯೫೪ ಗಳಲ್ಲಿ ಪೂರೈಸಿದ ಸನದಿಯವರು ಸನ್. ೧೯೫೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದ ಅರ್ಥಶಾಸ್ತ್ರ ಪದವಿ ಪಡೆದು, ಬೆಡಕೀಹಾಳ್-ಶಮನೇವಾಡಿ ಹೊಸ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಸನ್. ೧೯೫೬ರಲ್ಲಿ ಬೆಳಗಾವಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿತರಬೇತಿ ಪಡೆದರು. ಸನ್. ೧೯೫೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದ ಬಿ.ಎಡ್. ಪದವಿ ಪಡೆದರು. ಅದೇ ವರ್ಷ ಕರ್ನಾಟಕ ಸರಕಾರ ದ ಸಮಾಜ ವಿಕಾಸ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿ ಎಂದು ಆಯ್ಕೆಯಾಗಿ ಅಥಣಿ ತಾಲೂಕಿನಲ್ಲಿ ಸರಕಾರಿ ಸೇವೆಯನ್ನು ಆರಂಭಿಸಿದರು. ಸನ್. ೧೯೬೨ ರಲ್ಲಿ ರಾಜ್ಯ ಸರಕಾರದ ವಾರ್ತಾ ಇಲಾಖೆಯಲ್ಲಿ ಹೊಸದಾಗಿ ಆರಂಭಿಸಿದ ಪಂಚಾಯತಿ ರಾಜ್ಯ ಪತ್ರಿಕೆಯ ಸಹಾಯಕ ಸಂಪಾದಕರೆಂದು ನಿಯುಕ್ತಿಗೊಂಡು ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನ ಸೌಧದಲ್ಲಿ ಸೇವೆ ಸಲ್ಲಿಸಿದರು. ಸನ್. ೧೯೬೪ ರಲ್ಲಿ ರಾಜ್ಯ ಸರಕಾರದಿಂದ ಭಾರತ ಸರಕಾರ ದ ವಾರ್ತಾ ಇಲಾಖೆ ಗೆ ಬಡತಿಯ ಮೇಲೆ ವರ್ಗಾವಣೆ ಹೊಂದಿ ಕಲಬುರ್ಗಿ ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿಯಾದರು. ಸನ್. ೧೯೬೯ ರಲ್ಲಿ ಪಶ್ಚಿಮ ವಲಯದ ಪ್ರದರ್ಶನಾಧಿಕಾರಿಯಾಗಿ ಬಡತಿ ಪಡೆದು ಅಹಮದಾಬಾದ್ ಗೆ ತೆರಳಿದರು. ಸನ್. ೧೯೭೨ ರಲ್ಲಿ ಶಿವಾಜಿ ವಿಶ್ವವಿದ್ಯಾಲಯ ದಿಂದ ಕನ್ನಡ ಹಾಗು ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭಾರತ ಸರಕಾರದ ಪ್ರದರ್ಶನ ವಿಭಾಗದಿಂದ ಮುಂಬಯಿ ಆಕಾಶವಾಣಿಗೆ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಯಾಗಿ ವರ್ಗಾವಣೆಯಾಗಿ ಬಂದರು. ಜೊತೆಗೆ ಕನ್ನಡ ಕಾರ್ಯಕ್ರಮಗಳ ಪ್ರಸಾರದ ನಿರ್ವಹಣೆ ಮಾಡುತ್ತಿದ್ದರು ಹಾಗು ಮಹಾರಾಷ್ಟ್ರ ರಾಜ್ಯದ ಅಂತರ್ ಮಾಧ್ಯಮ ಸಂಯೋಜನಾ ಸಮಿತಿಯ ಸದಸ್ಯರಾಗಿದ್ದರು. ಸನ್. ೧೯೯೧ ರಲ್ಲಿ ಆಕಾಶವಾಣಿ ಸೇವೆಯಿಂದ ನಿವೃತ್ತರಾದರು. == ಪರಿವಾರ == ಬಿ. ಎ. ಸನದಿಯವರ ತಂದೆಯವರ ಹೆಸರು 'ಅಹಮದ್‌ ಸಾಹೇಬ', ತಾಯಿ 'ಆಯಿಶಾಬಿ'. ಮಗ 'ನಿಸಾರ', ಮಗಳು 'ಆಯೆಶಾ', ತಮ್ಮ ತಮ್ಮ ಕುಟುಂಬಗಳೊಡನೆ ಅಮೆರಿಕಾ ಹಾಗೂ ಕೆನಡಾದಲ್ಲಿದ್ದಾರೆ. ಶಿಕ್ಷಕರಾಗಿದ್ದ ಸನದಿಯವರು ಇದುವರೆಗೆ ಒಟ್ಟು ಹದಿನೆಂಟು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕಾವ್ಯಯಾನ ಕನ್ನಡ ಕಾವ್ಯಲೋಕದಲ್ಲಿ ಸದ್ದುಗದ್ದಲವಿಲ್ಲದೆ ನಡೆದ ಕಾಲುದಾರಿಯ ಪಯಣದಂತಿದೆ. ಇಲ್ಲಿ ಹಲವು ತಂಗುದಾಣಗಳಿವೆ, ಅರವಂಟಿಗೆಗಳಿವೆ. ಅಲ್ಲಲ್ಲಿ ಜೊತೆಗೆ ನಡೆದ ಜೀವ ಜಂಗಮ ಸಹವಾಸಿಗಳಿದ್ದಾರೆ. ಕಾಲುದಾರಿಗೆ ಅಡ್ಡಬರುವ ರಾಜಮಾರ್ಗಗಳಿವೆ. ಅಲ್ಲಿನ ಗದ್ದಲದ ನಡುವೆಯೂ ಈ ಕವಿ ತನ್ನ ದನಿಯ ಅನನ್ಯತೆಯನ್ನು ಕಾಯ್ದು ಕೊಂಡಿದ್ದಾರೆ. ಎಲ್ಲ ಸವಾಲುಗಳನ್ನು ಸ್ವಾನುಭವದ ಅಸ್ಮಿತೆಯಲ್ಲಿ ತನ್ನದಾಗಿಸಿಕೊಂಡು ನುಡಿಗೊಟ್ಟಿದ್ದಾರೆ. ಸನದಿಯವರು ಕನ್ನಡದ ಮೆಲುದನಿಯ ಕವಿ. ಪ್ರಚಾರ ಪ್ರಿಯರಲ್ಲ. ತಮ್ಮದೇ ಮಾತನ್ನು ಎಲ್ಲರು ಒಪ್ಪಬೇಕೆಂಬುದು ಅವರ ಮತವಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು. ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂದು ದಾರಿಯುದ್ದಕ್ಕೂ ನಡೆಯುತ್ತಾ ಜೀವನ ಸಾಗಿಸುತ್ತಿರುವವರು. == ಸಾಹಿತ್ಯಕ ಹಾಗೂ ಸಾಮಾಜಿಕ ಚಟುವಟಿಕೆಗಳು == ಸನ್. ೧೯೪೯ರಲ್ಲಿ, ಸನದಿಯವರ ಪ್ರಥಮ ಕವನ ಜಯ ಕರ್ನಾಟಕ ವು ನವಯುಗ ಪತ್ರಿಕೆಯಲ್ಲಿ ಪ್ರಕಟವಾಯಿತು. ಸನದಿಯವರು, ೧೬ ವರ್ಷದವರಿದ್ದಾಗ ಅವರು ರಚಿಸಿದ, ಪತಿವ್ರತಾ ಪ್ರಭಾವ ನಾಟಕ ವನ್ನು ಅವರ ಹುಟ್ಟಿದೂರು, ಸಿಂದೊಳ್ಳಿ ಯಲ್ಲಿ ಆಡಲಾಯಿತು. ಸನ್. ೧೯೫೨ರಲ್ಲಿ ಸನದಿಯವರು ಲಿಂಗರಾಜ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ, ಬರಹಗಾರರ ಬಳಗ'ದ ಕಾರ್ಯದರ್ಶಿ, ಹಾಗೂ ಬೆಳಗಾವಿಯ ಯುವಕ ಕಲಾ ಕಲಾವೃಂದ ದ ಕಾರ್ಯದರ್ಶಿ ಮತ್ತು ಶೋಭಾ ಗ್ರಂಥಮಾಲೆ ಯ ಸಂಚಾಲಕರಾಗಿದ್ದರು. ಸನ್. ೧೯೫೫ ರಲ್ಲಿ ಶಮನೇವಾಡಿಯಲ್ಲಿ ಸ್ಥಳೀಯ ಐವರು ಕವಿಗಳನ್ನು ಸೇರಿಸಿಕೊಂಡು ಸ್ನೇಹ ಪ್ರಕಾಶನ ವನ್ನು ಪ್ರಾರಂಭಿಸಿ ಐದಳ ಮಲ್ಲಿಗೆ ಯನ್ನು ಪ್ರಕಟಿಸಿದರು. ಮುಂದೆ ಅದೇ ಪ್ರಕಾಶನದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೇ ಆ ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯಮಾಡಿದರು. ಸನ್. ೧೯೫೬ ರಲ್ಲಿ ದಿ.ಎಸ್.ಡಿ.ಇಂಚಲರ ಜೊತೆಗೂಡಿ ಚೇತನ ಪ್ರಕಾಶನ ವನ್ನು ಆರಂಭಿಸಿದರು. ಕರ್ನಾಟಕ ಏಕೀಕರಣ ದಿನೋತ್ಸವದ ಅಂಗವಾಗಿ ವಿಜಯ ದುಂದುಭಿ ಎಂಬ ಪ್ರಾತಿನಿಧಿನಿಕ ಕವನ ಸಂಕಲನವನ್ನು ಪ್ರಕಟಿಸಿದರು. ಸನ್. ೧೯೬೨ ರಲ್ಲಿ ಬೆಳಗಾವಿಯ ವಿಕಾಸ ಪತ್ರಿಕೆಯ ಸಹಾಯಕ ಸಂಪಾದಕತ್ವ ನಿರ್ವಹಿಸಿದರು. ೧೯೬೫ ರಲ್ಲಿ ಕಲಬುರ್ಗಿ ಯಲ್ಲಿ ನೃಪತುಂಗ ಪ್ರಕಾಶನ ಆರಂಭಿಸಿದರು. ಸನ್. ೧೯೮೧ ರಲ್ಲಿ ಮಹಾರಾಷ್ಟ್ರ ಸರಕಾರದ ಕನ್ನಡ ಪಠ್ಯಪುಸ್ತಕ ಸಮಿತಿ ಯ ಸದಸ್ಯರಾಗಿ ೬ ವರ್ಷ ಸೇವೆ ಸಲ್ಲಿಸಿದರು. ಸನ್. ೧೯೮೫ ರಲ್ಲಿ ಮಲೇಶಿಯಾದ ರಾಜಧಾನಿ ಕೌಲಾಲಂಪುರ ದಲ್ಲಿ ನಡೆದ ಏಶಿಯಾ ಪೆಸಿಫಿಕ್ ಪ್ರದೇಶದ ಪ್ರಾತಿನಿಧಿಕ ಪ್ರಸಾರ ಕಮ್ಮಟ ದಲ್ಲಿ ಅಖಿಲ ಭಾರತ ಆಕಾಶವಾಣಿ ಯ ಪ್ರತಿನಿಧಿಯಾಗಿ ಪಾಲ್ಗೊಂಡರು. ಸನ್. ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಯ ಸದಸ್ಯರೆಂದು ನೇಮಕಗೊಂಡರು. ಸನ್. ೧೯೯೪ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಗತಿ ಪರಿಶೀಲನಾ ಸಮಿತಿಯ ಸದಸ್ಯರಾದರು. ಸನ್. ಮುಂಬಯಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ, ಹಾಗೂ ಟ್ರಸ್ಟಿಯಾಗಿ ೨೦೦೩ ರ ವರೆಗೆ ಮುಂಬಯಿನಲ್ಲಿ ಕನ್ನಡದ ಕೈಂಕರ್ಯದಲ್ಲಿ ತೊಡಗಿದ್ದು, ತಮ್ಮ ಇಳಿವಯಸ್ಸಿನ ದಿನಗಳನ್ನು ಕಳೆಯಲು, ಕರಾವಳಿಯ ಕುಮಟಾ ಪಟ್ಟಣಕ್ಕೆ ಬಂದು ನೆಲೆಯೂರಿದ್ದಾರೆ. ಜಿಲ್ಲಾ ಮತ್ತು ಅಖಿ;ಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಟಿಗಳ ಉದ್ಘಾಟಕರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ. ಕೆನಡಾದ ಟೊರಾಂಟೋನಗರದ ಕನ್ನಡ ಸಂಘದ ಕವಿಸಮ್ಮೆಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು. ೨೦೧೧ ರ ಏಪ್ರಿಲ್ ಒಂದೇ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿದ್ದರು. ಯು.ಎ.ಇ ; ಸಿಂಗಾಪುರ ; ಮಲೇಶಿಯಾ, ಅಮೆರಿಕಾ ಮತ್ತು ಕೆನಡಾ ದೇಶಗಳಲ್ಲಿ ಸಂಚರಿಸಿಬಂದಿದ್ದಾರೆ. == ಪ್ರಶಸ್ತಿ, ಪುರಸ್ಕಾರಗಳು == ಸನ್. ೧೯೬೨ ರಲ್ಲಿ, ತಾಜ್ ಮಹಲ್ (ಕವನಸಂಗ್ರಹ) ಕ್ಕೆ, ರಾಜ್ಯ ಸರಕಾರದ ಪ್ರಶಸ್ತಿ ಸನ್. ೧೯೬೭ ರಲ್ಲಿ, ಪ್ರತಿಬಿಂಬ (ಕವನ ಸಂಗ್ರಹ) ಕ್ಕೆ, ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸನ್. ೧೯೬೯ ರಲ್ಲಿ, ಧ್ರುವಬಿಂದು (ಕವನ ಸಂಗ್ರಹ) ಕ್ಕೆ, ಭಾರತ ಸರಕಾರದ ಪ್ರಶಸ್ತಿ ಸನ್.೧೯೮೪ ರಲ್ಲಿ, ಇಲ್ಲಿ ಸಲ್ಲುವರು (ವಚನ ವಿಮರ್ಶೆ) ಗೆ, ಕಾವ್ಯಾನಂದ ಪುರಸ್ಕಾರ ಹಾಗು ಇಳಕಲ್ಲದ ಚಿತ್ತರಗಿ ಸಂಸ್ಥಾನ ಮಠ ದ ವೀರಶೈವ ಸಾಹಿತ್ಯ ಪ್ರಶಸ್ತಿ ಸನ್. ೧೯೯೫ರಲ್ಲಿ ೧೯೯೨ ರಲ್ಲಿ, ಸಮಗ್ರ ಸಾಹಿತ್ಯ ಕ್ಕೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮಗ್ರ ಸಾಹಿತ್ಯ ; ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಹಾಗು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸನ್. ೧೯೯೧ ರಲ್ಲಿ ದೆಹಲಿ ಕನ್ನಡಿಗ ಪರವಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ. ಡಾ . ಗೌರೀಶ ಕಾಯ್ಕಿಣಿ ಯವರಿಂದ 'ಮಾನವ್ಯ ಕವಿ' ಎಂದು ಬಿರುದಾಂಕಿತರಾದರು. ಮುಂಬಯಿ ನ ಶ್ರೀ ನಾರಾಯಣ ಗುರು ಪ್ರಶಸ್ತಿ, ಗೋರುರು ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ. ಭೂಸನೂರ ಮಠ ಪ್ರತಿಷ್ಠಾನ ಪ್ರಶಸ್ತಿ . ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್. ಸಿರಿಗನ್ನಡ ಗೌರವ ಪ್ರಶಸ್ತಿ. ಸಾಧನ ಶಿಖರ ಪ್ರಶಸ್ತಿ.(೨೦೧೪) 2015ನೇ ಸಾಲಿನ ‘ಪಂಪ ಪ್ರಶಸ್ತಿ’೩ == ನಿಧನ == ಸನದಿಯವರು ೩೧, ಮಾರ್ಚ್, ೨೦೧೯ ರ ರವಿವಾರದ ಬೆಳಿಗ್ಯೆ ಕುಮಟಾದ ತಮ್ಮಸ್ವಗೃಹದಲ್ಲಿ ನಿಧನರಾದರು. ಬಹಳ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕ == ಉಭಯ ಕುಶಲೋಪರಿ-ಬಿ.ಎ.ಎಸ್.ಅವರೊಂದಿಗೆ ಪಟ್ಟಾಂಗ-ಶ್ರೀಧರ ಬಳಗಾರ,ಹುಣ್ಣಿಮೆ ಹರಿಸಿದ ಬೆಳದಿಂಗಳ ದಾರಿ ಹಿಡಿದು,ಪ್ರಜಾವಾಣಿ,೦೬-೦೩-೨೦೧೬ 2016-03-22 ವೇಬ್ಯಾಕ್ ಮೆಷಿನ್ ನಲ್ಲಿ. ಮುಂಬೈ ಕಂಡ ಅಪರೂಪದ ಸಾಹಿತಿ, ಮಾನವ್ಯ ಕವಿ ಡಾ.ಬಿ.ಎ.ಸನದಿ-ಡಾ.ಜಿ.ವಿ.ಕುಲಕರ್ಣಿ, ಕರ್ನಾಟಕ ಮಲ್ಲ, ೨೦, ಏಪ್ರಿಲ್,೨೦೧೯,ಪು.೬ 2019-04-21 ವೇಬ್ಯಾಕ್ ಮೆಷಿನ್ ನಲ್ಲಿ.