ಬಿ.ಎಸ್. ಚಂದ್ರಶೇಖರ( 28-2-1934) ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಅನೇಕ ಕಡೆ ಕೆಲಸ ಮಾಡಿ ಕೊನೆಯ 20 ವರ್ಷ ಸಾಗರದಲ್ಲಿ ಸಾಮಾಜಿಕ ಕಾರ್ಯಗಳ ಹೊಣೆಗಳನ್ನು ಹೊತ್ತು ಸೇವೆ ಮಾಡುತ್ತಿದ್ದಾರೆ. ಕುತೂಹಲಕ್ಕಾಗಿ 2008 ರಲ್ಲಿ ಕಂಪ್ಯೂಟರ್ ಕೊಂಡ ಇವರು ತಮ್ಮ ಏಳು ವರ್ಷದ ಮೊಮ್ಮಗನಿಂದ ಅದನ್ನು ಚಾಲೂ ಮಾಡುವುದನ್ನು ಕಲಿತು, ಒಂದು ತಿಂಗಳು ಅದರಲ್ಲಿ ಪ್ರಾಥಮಿಕ ತರಬೇತಿ ಪಡೆದು ( ) ಇಂಟರ್`ನೆಟ್ ಸೌಲಭ್ಯ ದೊರಕಿದ ನಂತರ ‘ಸಹಾಯ’ ವಿಭಾಗ ನೋಡಿ ವಿಕಿಪೀಡಿಯಾಕ್ಕೆ ಸದಸ್ಯರಾಗಿ, ಅದಕ್ಕೆ ವೈವಿಧ್ಯಮಯ ಲೇಖನಗಳನ್ನು ತುಂಬುವ ಕೆಲಸ ಮಾಡಿದ್ದಾರೆ. == ಜನನ, ಜೀವನ == ಬಿ.ಎಸ್. ಚಂದ್ರಶೇಖರ ಹುಟ್ಟಿದ್ದು 28-2-1934ರಲ್ಲಿ. ತಂದೆ ಬಿ. ಸೂರ್ಯನಾರಾಯಣ ಭಟ್ ಮತ್ತು ತಾಯಿ ಶ್ರೀಮತಿ ಸರಸತ್ವಮ್ಮ. ಇವರು ಸಾಗರದಲ್ಲಿಯೇ ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಸಿ ನಂತರ ಬಿ.ಎ, ಬಿ.ಎಡ್. ಪದವಿ ಪಡೆದು, ಬೇರೆ ಬೇರೆ ಕಡೆ ಸೇವೆ ಸಲ್ಲಿಸಿ ಸಾಗರಕ್ಕೆ ಬಂದು, 1970-80 ರ ದಶಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ನಂತರ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಶಿಕ್ಷಕರ ಸಂಘಟನೆಯಲ್ಲಿ ತೊಡಗಿದರು. ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕರಾಗಿ ಆನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುತ್ತಾರೆ. ಇವರಿಗೆ ಮೂರುಜನ ಹೆಣ್ಣು ಮಕ್ಕಳು. ಶ್ರೀಯುತ ಬಿ.ಎಸ್. ಚಂದ್ರಶೇಖರ ರವರು ದಿ.೨೫ ಮೇ ೨೦೨೧ ರಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು. == ಸಾಹಿತ್ಯ ಸೇವೆ == ಸಾಗರದ ಮಲೆನಾಡು ಗಮಕ ಕಲಾ ಸಂಘದಲ್ಲಿ 1982 ರಿಂದಲೂ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದು 1993 ರಿಂದ 2007 ರ ವರೆಗೂ ಆ ಸಂಘದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿರುತ್ತಾರೆ. ಸಾಗರದ ಜನತೆಗೂ, ಸಾಗರದ ಬೇರೆ ಬೇರೆ ಬಡಾವಣೆಗಳಲ್ಲಿ ಮತ್ತು ಸಾಗರದ ಗ್ರಾಮಾಂತರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಇತರರ ಸಹಯೋಗದೊಡನೆ, ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳನ್ನು ಏರ್ಪಡಿಸುವ ಗದುಗಿನ ಭಾರತ / ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮೊದಲಾದ ಕನ್ನಡದ ಪ್ರಾಚೀನ ಕಾವ್ಯಗಳನ್ನು ಜನರಿಗೆ ತಲುಪಿಸಿರುತ್ತಾರೆ. ಪ್ರಸ್ತುತವಾಗಿ ಇವರು ಸಾಗರದ ಗಮಕ ಸಂಘದ ಕೋಶಾಧ್ಯಕ್ಷರು. == ಇತರ ಸೇವೆ == ಇವರು ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ಐದು ವರ್ಷ ಸಂಘದ ಸಂಘಟನೆ ಮಾಡಿದರು. ಸಾಗರದ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಆ ಸಂಘವನ್ನು ಲಾಭಕರ ಸಂಘವಾಗಿ ಪರಿವರ್ತಿಸಿದರು. ಸಾಗರ ತಾಲ್ಲೂಕಿನ ಸ್ಕೌಟ್ ಮತ್ತ ಗೈಡ್ಸ್ ಸಂಸ್ಥೆಯ ಕಾರ್ಯ‍ದರ್ಶಿಯಾಗಿ ಜೊತೆಯವರ ಸಹಕಾರದೊಂದಿಗೆ ತಾಲ್ಲೂಕಿನಲ್ಲಿ ಉತ್ತಮ ಸ್ಕೌಟ್ ಗೈಡ್ ಚಳುವಳಿಯನ್ನು ಸಂಘಟಿಸಿ ಅನೇಕರಿಗೆ ತರಬೇತಿ ಕೊಟ್ಟು ಭಾರತದ ಅಧ್ಯಕ್ಷರ ಬ್ಯಾಡ್ಜ್ ಪಡೆಯುವಂತೆ ಮಾಡಿದರು; ತಾಲ್ಲೂಕು ಮಟ್ಟದ ಸ್ಕೌಟ್ ಮತ್ತು ಗೈಡ್ಜ್ ಸಮ್ಮೇಳನಗಳನ್ನು ನಡೆಸಿದರು. ಈಗ 2011-12 ರಿಂದ ಕನ್ನಡ ವಿಕಿಪೀಡಿಯಾಕ್ಕೆ ಅದರ ಸದಸ್ಯರಾಗಿ ಮಾಹಿತಿಗಳುಳ್ಳ ಲೇಖನಗಳನ್ನೂ ತುಂಬುತ್ತಿದ್ದಾರೆ. == ಉಲ್ಲೇಖಗಳು == == ಬಾಹ್ಯಕೊಂಡಿಗಳು ==