ಬಿ.ಹನುಮಂತಾಚಾರ್.(ಮಾರ್ಚ್ ೨೨,೧೯೨೨ - ೧೯೮೭) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟರು ಮತ್ತು ಯೂನಿವಾಕ್ಸ್ ವಾದನ ಮತ್ತು ಸಂಗೀತ ನಿರ್ದೇಶನಕ್ಕೆ ಹೆಸರಾದವರು. ಇವರು ತಮ್ಮ ವಿಶಿಷ್ಟವಾದ ಮಾತಿನ ಧಾಟಿ ಹಾಗೂ ಉತ್ತರ ಕರ್ನಾಟಕದ ಭಾಷಾಶೈಲಿಯಿಂದ ಜನಪ್ರಿಯರಾಗಿದ್ದಾರೆ. == ಜೀವನ == ಬಳ್ಳಾರಿಯಲ್ಲಿ ಜನಿಸಿ,ಬಾಲ್ಯದಲ್ಲೇ ರಂಗಭೂಮಿಯ ನಂಟು ಅಂಟಿಸಿಕೊಂಡ ಹನುಮಂತಾಚಾರ್, ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ಹಾಸ್ಯನಟರಾಗಿ ಹೆಸರು ಮಾಡಿದರು.ಇವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ ದೇವ ಕನ್ನಿಕಾ. == ಇವರ ಅಭಿನಯದ ಕೆಲವು ಕನ್ನಡ ಚಿತ್ರಗಳು == ಗುಣಸಾಗರಿ ಭಕ್ತ ವಿಜಯ ವಿಜಯನಗರದ ವೀರಪುತ್ರ ಕಿತ್ತೂರು ಚೆನ್ನಮ್ಮ ಮಕ್ಕಳ ರಾಜ್ಯ ಭಕ್ತ ಕನಕದಾಸ ಸ್ವಪ್ನ ಮನಸ್ಸಿನಂತೆ ಮಾಂಗಲ್ಯ ಮಹಾ ಪ್ರಚಂಡರು ಪ್ರೇಮ ಮತ್ಸರ - ಕೊನೆಯ ಚಿತ್ರ. == "ಯೂನಿವಾಕ್ಸ್" ಎಂಬ ವಾದ್ಯ == ಯೂನಿವಾಕ್ಸ್ - ಒಂದು ವಿಶಿಷ್ಟ ವಾದ್ಯ.ಒಂದೇ ವಾದ್ಯದಲ್ಲಿ ೮-೧೦ ಬಗೆಯ ವಾದ್ಯಗಳ ಧ್ವನಿಯನ್ನು ಹೊರಹೊಮ್ಮಿಸುವುದು ಇದರ ವೈಶಿಷ್ಟ್ಯ.ಇದು ೬೦ರ ದಶಕದ ಹಿಂದಿ ಚಲನಚಿತ್ರ್ಗಗಳಲ್ಲಿ ಜನಪ್ರಿಯವಾಗಿತ್ತು.ಈ ವಾದ್ಯ ಕನ್ನಡಕ್ಕೂ ಬರಬೇಕು ಎಂದು ಹಂಬಲಿಸಿದವರು ಹನುಮಂತಾಚಾರ್.ಮುಂಬಯಿಗೆ ತೆರಳಿ,ಆಸಕ್ತಿ ವಹಿಸಿ ,ಕಲಿತು,ಸುಮಾರು ೭೦ಕ್ಕೂ ಹೆಚ್ಚು ಕನ್ನಡ ಚಲನಚಿತ್ರ್ಗಗಳಲ್ಲಿ ಈ ವಾದ್ಯ ಬಳಕೆ ಮಾಡಿದರು. == ಸಂಗೀತ ಆಚಾರ್ಯನಾಗಿ == ಹನುಮಂತಾಚಾರ್ ಹಾಸ್ಯನಟನಾಗಿ ಮಾತ್ರವಲ್ಲ,ಯೂನಿವಾಕ್ಸ್ ಎಂಬ ವಾದ್ಯವನ್ನು ಚಿತ್ರಸಂಗೀತದಲ್ಲಿ ಬಳಸಿ,ಜನಪ್ರಿಯರಾಗಿದ್ದಾರೆ.ಭಕ್ತ ಕನಕದಾಸ - ಈ ವಾದ್ಯವನ್ನು ಬಳಸಿದ ಕನ್ನಡದ ಮೊದಲನೆಯ ಚಿತ್ರ.ಈ ಚಿತ್ರದ 'ಈತನೀಗ ವಾಸುದೇವನು..' - ಎಂಬ ಹಾಡು ಈ ವಾದ್ಯದ ನೆರವಿನಿಂದ ಹೆಚ್ಚು ಸುಶ್ರಾವ್ಯವಾಗಿ ಮೂಡಿ ಬಂದಿದೆ. ಮುಂದೆ ಹನುಮಂತಾಚಾರ್ಯರು ಈ ವಾದ್ಯದ ಮೂಲಕ ನಾಡಿನಾದ್ಯಂತ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಸಹಾ ನಡೆಸಿ ಪ್ರಖ್ಯಾತರಾದರು. ಮುಂದೆ ಕ್ಯಾಸೆಟ್ ಯುಗದಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿನ ಅನೇಕ ಭಕ್ತಿ ಗೀತೆಗಳ ಸಂಗೀತ ನಿರ್ದೇಶಕರಾಗಿ ನೂರಾರು ಭಕ್ತಿಗೀತೆಗಳ ಕ್ಯಾಸೆಟ್ಟುಗಳನ್ನು ಹೊರತಂದರು. ಈ ನಿಟ್ಟಿನಲ್ಲಿ ಡಾ. ರಾಜಕುಮಾರ್ ಅವರ ಬಹಳಷ್ಟು ಭಕ್ತಿಗೀತೆಗಳನ್ನು ಹನುಮಂತಾಚಾರ್ಯರು ನಿರ್ದೇಶಿಸಿದ್ದರು. == ವಿದಾಯ == ಈ ಮಹಾನ್ ಕಲಾವಿದ ಸಂಗೀತಜ್ಞ ಬಿ. ಹನುಮಂತಾಚಾರ್ ಅವರು ೧೯೮೭ರ ವರ್ಷದಲ್ಲಿ ಈ ಲೋಕವನ್ನಗಲಿದರು.