ಬಿಂದುಮಾಲಿನಿ ನಾರಾಯಣಸ್ವಾಮಿ (೨೦ ನವೆಂಬರ್, ೧೯೮೧), ಬಿಂದುಮಾಲಿನಿ ಎಂದೇ ಗುರುತಿಸಿಕೊಂಡಿರುವ ಭಾರತೀಯ ಗಾಯಕಿ, ಸಂಗೀತ ಸಂಯೋಜಕಿ, ಗ್ರಾಫಿಕ್ ವಿನ್ಯಾಸಕಿ ಮತ್ತು ರಂಗಕರ್ಮಿ. ತಾವೇ ಸಯೋಜಿಸಿ, ಹಾಡಿದ ನಾತಿಚರಾಮಿ ಚಿತ್ರದ "ಮಾಯಾವಿ ಮನವೇ" ಹಾಡಿಗೆ, ೨೦೧೯ರ ೬೬ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ "ಅತ್ತ್ಯುತ್ತಮ ಹಿನ್ನೆಲೆಗಾಯಕಿ" ಪುರಸ್ಕಾರ ಪಡೆದ ಬಿಂದುಮಾಲಿನಿ, ಆ ಮೂಲಕ ಕನ್ನಡದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಹಿನ್ನೆಲೆಗಾಯಕಿ ಎನಿಸಿದ್ದಾರೆ. == ಆರಂಭಿಕ ಜೀವನ == ಹುಟ್ಟು ನವೆಂಬರ್ ೨೦, ೧೯೮೧ರಲ್ಲಿ ಚೆನ್ನೈನ ಸಂಗೀತ ಪರಂಪರೆಯ ಕುಟುಂಬವೊಂದರಲ್ಲಿ ಬಿಂದುಮಾಲಿನಿ ಹುಟ್ಟಿದರು. ತಂದೆ ನಾರಾಯಣಸ್ವಾಮಿ. ತಾಯಿ ವಿಶಾಲಾಕ್ಷಿ, ಕರ್ನಾಟಕ ಸಂಗೀತ ಗಾಯಕಿ ಮತ್ತು ಆಕಾಶವಾಣಿ ಕಲಾವಿದರಾಗಿದ್ದರು. 'ಜಲತರಂಗ' ವಾದ್ಯಪ್ರವೀಣರಾಗಿದ್ದ ಸೀತಾ ದೊರೈಸ್ವಾಮಿ ಬಿಂದು ಅವರ ಅಜ್ಜಿ. ಶಿಕ್ಷಣ ಚೆನ್ನೈನ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾಶಿಕ್ಷಣ ಪೂರೈಸಿದ ಬಿಂದುಮಾಲಿನಿ, ಮದ್ರಾಸ್ ವಿಶ್ವವಿದ್ಯಾಲಯದಿಂದ ಲಲಿತಕಲಾ ಪದವಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಪದವಿಗಳನ್ನು ಪಡೆದರು. 'ದೃಶ್ಯ ಸಂವಹನ' (ವಿಶುವಲ್ ಕಮ್ಯುನಿಕೇಶನ್) ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ ಅವರು ಗ್ರಾಫಿಕ್ ವಿನ್ಯಾಸ ಸ್ನಾತಕೋತ್ತರ ಪದವಿಯನ್ನು ಅಹಮದಾಬಾದಿನ 'ರಾಷ್ಟ್ರೀಯ ವಿನ್ಯಾಸ ಸಂಸ್ಥೆ'ಯಿಂದ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್) ೨೦೦೮ರಲ್ಲಿ ಪಡೆದುಕೊಂಡರು. == ಸಂಗೀತ ಕ್ಷೇತ್ರದಲ್ಲಿ == ಸಂಗೀತಾಭ್ಯಾಸ ಬಿಂದುಮಾಲಿನಿಯವರ ಸಂಗೀತ ಕಲಿಕೆ ಭಾರತೀಯ ಶಾಸ್ತ್ರೀಯ ಸಂಗೀತ ಪ್ರಕಾರಗಳಾದ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತಗಳೆರಡಲ್ಲೂ ನಡೆಯಿತು. ಸಂಗೀತಾಭ್ಯಾಸವನ್ನು ಗುರುಗಳಾದ ಕಿರಣವಲ್ಲಿ, ಮಂಗಳಾ ಶಂಕರ್ ಮುಂತಾದವರಿಂದ ಮೊದಲ್ಗೊಂಡು 'ಗ್ವಾಲಿಯರ್ ಘರಾನಾ' ಶೈಲಿಯ ಹೆಸರಾಂತ ಗಾಯಕ, ಪದ್ಮಭೂಷಣ ಉಸ್ತಾದ್ ಅಬ್ದುಲ್ ರಶೀದ್ ಖಾನರ ಬಳಿ ಕಲಿತ ಬಿಂದುಮಾಲಿನಿ, ಉತ್ತರಾದಿ ಮತ್ತು ದಕ್ಷಿಣಾದಿ ಶೈಲಿಗಳೆರಡರಲ್ಲೂ ಪರಿಣತಿ ಪಡೆದ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬಿಂದುಮಾಲಿನಿ ಗಾಯಕಿಯಾಗಿ ಹಾಡಿದ ಮೊದಲ ಚಿತ್ರ, ಕನ್ನಡದ ‛ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮಕಾವ್ಯಂ’ (೨೦೧೨). ಈ ಚಿತ್ರದ "ಒಲವೆಂಬ ನದಿಯಾಗಿ ನೀನು" ಎಂಬ ಹಾಡನ್ನು ಹರಿಶ್ಚಂದ್ರ ಅವರೊಂದಿಗೆ ಹಾಡಿದ್ದರು. ಬಳಿಕ ತಮಿಳಿನ ‛ಕುತ್ರಂ ಕಡಿದಾಳ್’ (೨೦೧೫), ‛ಅರುವಿ’ (೨೦೧೬) ಚಿತ್ರಗಳಲ್ಲಿ ಹಾಡಿದರು. ಬಿಂದುಮಾಲಿನಿ ಸಂಗೀತ ನೀಡಿದ ಮೊದಲ ಚಿತ್ರ, ತಮಿಳು ಭಾಷೆಯ ‛ಅರುವಿ’ (೨೦೧೬). ವೇದಾಂತ್ ಭಾರದ್ವಾಜ್ ಅವರೊಂದಿಗೆ ಸೇರಿ ಸಂಯೋಜಿಸಿದ ಈ ಚಿತ್ರದ ಬಹುಪಾಲು ಹಾಡುಗಳನ್ನೂ ಬಿಂದು ಅವರೇ ಹಾಡಿದ್ದಾರೆ. ೨೦೧೮ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ ನಾತಿಚರಾಮಿ ಬಿಂದುಮಾಲಿನಿ ಅವರಿಗೆ ರಾಷ್ಟ್ರವ್ಯಾಪಿ ಹೆಸರು ತಂದಿತು. ಸಂಗೀತ ಸಂಯೋಜನೆ ಮತ್ತು ಹಿನ್ನೆಲೆಗಾಯನಗಳೆರಡನ್ನೂ ನಿರ್ವಹಿಸಿದ ಅವರ "ಮನವೇ ಮಾಯಾವಿ ಮನವೇ" ಹಾಡಿಗೆ ರಾಷ್ಟ್ರ ಪ್ರಶಸ್ತಿ ಪ್ರಕಟವಾಯಿತು. ಹಿನ್ನೆಲೆಗಾಯಕಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕಿಯಾದರು ಬಿಂದುಮಾಲಿನಿ. ಈ ಹಿಂದೆ ಎಸ್.ಜಾನಕಿ ಮತ್ತು ವಾಣಿ ಜಯರಾಂ ಅವರ ಕನ್ನಡ ಹಾಡುಗಳು ಸ್ಪರ್ಧಾಕಣದಲ್ಲಿದ್ದರೂ ಅಂತಿಮವಾಗಿ ಸಾಧ್ಯವಾಗಿರಲಿಲ್ಲ. == ವೈವಾಹಿಕ ಜೀವನ == ‛ಸ್ವರಾತ್ಮ’ ಬ್ಯಾಂಡ್ ಮೂಲಕ ಹೆಸರಾದ ಗಾಯಕ, ಕವಿ, ಪ್ರಯೋಗಶೀಲ ರಂಗಕರ್ಮಿ ವಾಸು ದೀಕ್ಷಿತ್ ಅವರನ್ನು ಬಿಂದುಮಾಲಿನಿ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. == ಪ್ರಶಸ್ತಿಗಳು == ೨೦೧೯ - ಅತ್ತ್ಯುತ್ತಮ ಹಿನ್ನೆಲೆಗಾಯಕಿ ರಾಷ್ಟ್ರ ಪ್ರಶಸ್ತಿ - " ಮಾಯಾವಿ ಮನವೇ " - ನಾತಿಚರಾಮಿ ೨೦೧೮ - ಅತ್ಯುತ್ತಮ ಹಿನ್ನೆಲೆಗಾಯಕಿ ಫಿಲಂಫೇರ್ ಪ್ರಶಸ್ತಿ - "ಭಾವಲೋಕದ ಭ್ರಮೆಯ" - ನಾತಿಚರಾಮಿ == ಹಾಡುಗಳ ಪಟ್ಟಿ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಬಿಂದುಮಾಲಿನಿ ಐ ಎಮ್ ಡಿ ಬಿನಲ್ಲಿ