ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಎಂಬ ಹಳ್ಳಿಯಲ್ಲಿ ವೀರನಾರಾಯಣ ದೇವಸ್ಥಾನವಿದೆ. ಇದು ಹೊಯ್ಸಳರ ಕಾಲದಲ್ಲಿ ಕಟ್ಟಿಸಲ್ಪಟ್ಟಿದ್ದು. ಹೊಯ್ಸಳರ ರಾಜ ಎರಡನೆ ವೀರ ಬಲ್ಲಾಳನಿಂದ ಕಟ್ಟಿಸಲ್ಪಟ್ಟಿದ್ದು. == ಐತಿಹ್ಯ == ಮಹಾಭಾರತದಲ್ಲಿ ಉಲ್ಲೇಖಿಸಿರುವ ಏಕಚಕ್ರನಗರ ಎಂದರೇ ಇದೇ ಊರು ಎಂದು ಸ್ಥಳಪುರಾಣ ಹೇಳುತ್ತದೆ. ಭೀಮನು ಬಕಾಸುರನ್ನು ಏಕಚಕ್ರನಗರದಲ್ಲಿ ಕೊಂದಿದ್ದಾಗಿ ಮಹಾಭಾರತದಲ್ಲಿ ಉಲ್ಲೇಖಿಸಲ್ಪಟ್ಟಿದೆ. == ಭೌಗೋಳಿಕ == ಬೆಳವಾಡಿಯು ಹಾಸನದಿಂದ ಬೇಲೂರಿಗೆ ಹೋಗುವ ರಸ್ತೆಯಲ್ಲಿ ಸುಮಾರು ಹದಿನೈದು ಕಿ.ಮೀ. ದೂರ ಪ್ರಯಾಣಿಸಿ, ನಂತರ ಸುಮಾರು ಒಂದು ಕಿ.ಮೀ ಎಡಕ್ಕೆ ಪ್ರಯಾಣಿಸಿದರೆ ಸಿಗುತ್ತದೆ. ಜಗದ್ವಿಖ್ಯಾತ ಬೇಲೂರು ಮತ್ತು ಹಳೆಬೀಡು ದೇವಸ್ಥಾನಗಳು ಸಮೀಪದಲ್ಲೇ ಇವೆ. == ಶಿಲ್ಪಕಲೆ == ತ್ರಿಕೂಟ ದೇವಸ್ಥಾನವು ಹೊಯ್ಸಳರ ಚಕ್ರವರ್ತಿ ಎರಡನೆ ವೀರಬಲ್ಲಾಳನಿಂದ ಸುಮಾರು ಕ್ರಿ.ಶ. ೧೨೦೦ ರ ಆಸುಪಾಸಿನಲ್ಲಿ ಕಟ್ಟಲ್ಪಟ್ಟಿತು. ಇದರ ವೈಶಿಷ್ಟ್ಯವಿರುವುದು ಮೂರು ಗರ್ಭಗುಡಿ ಮತ್ತು ಮೂರು ಗೋಪುರಗಳಲ್ಲಿ. ಅದರಿಂದಲೇ ತ್ರಿಕೂಟ ಎಂಬ ಹೆಸರು ಬಂದುದು. ಇದು ಹೊಯ್ಸಳರ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ. ಹೊರಗಿನಿಂದ ನೋಡಲು ತುಂಬ ಸುಂದರವಾಗಿದೆ. ದೇವಸ್ಥಾನವನ್ನು ಕಟ್ಟಲು ಮತ್ತು ಅದರಲ್ಲಿರುವ ಶಿಲ್ಪಗಳನ್ನು ಕೆತ್ತಲು ಬಳಸಿದ್ದು ಬಳಪದ ಶಿಲೆಯನ್ನು. ಹೊಯ್ಸಳರ ಇತರೆ ಖ್ಯಾತ ದೇವಾಲಯಗಳಾದ ಬೇಲೂರಿನ ಚೆನ್ನಕೇಶವ ಮತ್ತು ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಗಳಿಗೆ ಹೋಲಿಸಿದರೆ ಇದು ಕಟ್ಟದ ಸೌಂದರ್ಯಕ್ಕೆ ಹೆಚ್ಚು ಪ್ರಸಿದ್ಧ ಎನ್ನಬಹುದು. ಬೇಲೂರು ಹಳೇಬೀಡುಗಳಲ್ಲಿರುವಂತೆ ಇಲ್ಲಿ ತುಂಬ ಕುಸುರಿ ಕೆಲಸ ಕಂಡುಬರುವುದಿಲ್ಲ. ಇದರಲ್ಲಿ ವೀರನಾರಾಯಣ, ವೇಣುಗೋಪಾಲ ಮತ್ತು ಯೋಗನರಸಿಂಹ ದೇವರುಗಳ ಮೂರ್ತಿಗಳಿವೆ. ಇಲ್ಲಿ ಈಗಲೂ ನಿತ್ಯಪೂಜೆ ನಡೆಯುತ್ತದೆ. == ಚಿತ್ರಗಳು == == ಬಾಹ್ಯ ಸಂಪರ್ಕಗಳು == ಕರ್ನಾಟಕದ ದೇವಸ್ಥಾನಗಳ ಜಾಲತಾಣ ವೀರನಾರಾಯಣ ದೇವಸ್ಥಾನದ ಸುತ್ತಾಟದ ವೀಡಿಯೋ ಸುಭಾಷ್ ಅವರ ಬ್ಲಾಗ್ == ಉಲ್ಲೇಖಗಳು ==